Tag: ಅಹಮದಾಬಾದ್‌ ವಿಮಾನ ದುರಂತ

  • ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೋಕರ್ಣದಲ್ಲಿ ಪಿತೃಕಾರ್ಯ

    ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೋಕರ್ಣದಲ್ಲಿ ಪಿತೃಕಾರ್ಯ

    ಕಾರವಾರ: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 171 (Air India Crash) ದುರಂತಕ್ಕೀಡಾಗಿ 260 ಮಂದಿ ಮೃತಪಟ್ಟಿದ್ದರು. ಮೃತರ ಆತ್ಮಕ್ಕೆ ಶಾಂತಿಗಾಗಿ ಪಿತೃ ಪಕ್ಷ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ (Gokarna) ಮೃತರ ಪಿತೃಕಾರ್ಯ (Pitru Karya) ನೆರವೇರಿಸಲಾಯಿತು.

    ಜೂನ್ 12 ರಂದು ದುರಂತ ಸಂಭವಿಸಿ 260 ಜನ ಮೃತಪಟ್ಟಿದ್ದರು. ಇದರಲ್ಲಿ ಭಾರತ ಹಾಗೂ ಲಂಡನ್ ಪ್ರಜೆಗಳು ಸಹ ಅಸುನೀಗಿದ್ದರು. ಈ ಘಟನೆ ನಡೆದು ನಾಲ್ಕು ತಿಂಗಳ ನಂತರ ಮೃತರ ಆತ್ಮಕ್ಕೆ ಶಾಂತಿಗಾಗಿ ಪಿತೃ ಪಕ್ಷ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ಮೃತರ ಪಿತೃಕಾರ್ಯ ನೆರವೇರಿಸಲಾಗಿದೆ. ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

    ಪಿತೃಕಾರ್ಯಕ್ಕೆ ಪ್ರಾಮುಖ್ಯತೆ ಹೊಂದಿರುವ ಗೋಕರ್ಣದಲ್ಲಿ ಮೃತರ ಕುಟುಂಬದವರು ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮಾಡಿ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಬೇಡಿಕೊಳ್ಳುವುದು ಸಂಪ್ರದಾಯ. ದೇಶ ವಿದೇಶದಿಂದಲೂ ಪಿತೃಪಕ್ಷದ ಸಂದರ್ಭದಲ್ಲಿ ಗೋಕರ್ಣಕ್ಕೆ ಬಂದು ಪಿತೃಕಾರ್ಯ ನಡೆಸಿ, ಇಲ್ಲಿಯೇ ಅಸ್ತಿ ವಿಸರ್ಜಿಸುತ್ತಾರೆ. ಹೀಗಾಗಿ, ಮಹಾಬಲೇಶ್ವರ ದೇವಸ್ಥಾನ ಕಾಶಿಯಷ್ಟೇ ಪ್ರಾಮುಖ್ಯತೆ ಹೊಂದಿದೆ.

    ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಪುಣ್ಯಾಶ್ರಮದಲ್ಲಿ ಅಹಮದಾಬಾದ್ ವಿಮಾನ ದುರಂತ (Ahmedabad Plane Crash) ಮಡಿದ 260 ಜನರ ಪಿತೃಕಾರ್ಯ ನಡೆಸಲಾಗಿದೆ. ದೇಶದಲ್ಲಿ ನಡೆದ ದೊಡ್ಡ ದುರಂತದ ಸಾಲಿಗೆ ಈ ವಿಮಾನ ದುರಂತ ಸೇರಿಹೋಗಿತ್ತು. ಹೀಗಾಗಿ ದುರಂತದಲ್ಲಿ ಮಡಿದ ಪ್ರತಿಯೊಬ್ಬರ ಹೆಸರನ್ನೂ ಸಹ ಪಡೆದು ಅವರ ಹೆಸರಲ್ಲಿ ಎಳ್ಳು-ನೀರಿನ ಅರ್ಗೆ ಸಮರ್ಪಿಸಿ ಪಿಂಡ ಪ್ರದಾನವನ್ನು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ರಾಜು ಅಡಿಯವರು ತಮ್ಮ ಪುಣ್ಯಾಶ್ರಮದಲ್ಲಿ ನೆರವೇರಿಸಿದರು. ಇದನ್ನೂ ಓದಿ: Photo Gallery: ಅಹಮದಾಬಾದ್‌ನಲ್ಲಿ ವಿಮಾನ ದುರಂತ ನಡೆದ ಸ್ಥಳಕ್ಕೆ ಮೋದಿ ಭೇಟಿ

    ಗೋಕರ್ಣದ ಪುಣ್ಯಾಶ್ರಮದಲ್ಲಿ ಮಹಾಬಲೇಶ್ವರ ದೇವಾಲಯದ ಮುಖ್ಯ ಅರ್ಚಕ ರಾಜುಗೋಪಾಲ ಅಡಿ ಅವರ ನೇತೃತ್ವದಲ್ಲಿ 30 ಜನ ಪುರೋಹಿತರೊಂದಿಗೆ ಈ ಪಿತೃಕಾರ್ಯವನ್ನು ಕೈಗೊಳ್ಳಲಾಯಿತು. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ದಿವಂಗತ ವಿಜಯ್ ರೂಪಾನಿ ಅವರಿಂದ ಹಿಡಿದು ಲಂಡನ್‌ನ ಮೃತ ಪ್ರಜೆಗಳಿಗೂ ಇಲ್ಲಿ ಪಿತೃಕಾರ್ಯ ನಡೆಸಲಾಯಿತು. ಎರಡು ದಿನದ ಈ ಕಾರ್ಯದಲ್ಲಿ ವಿಘ್ನ ನಿವಾರಕ ಗಣಪತಿಯ ಪೂಜೆ ನಡೆಸಿ, ನಾರಾಯಣ, ಈಶ್ವರನ ನೆನೆದು ನಾರಾಯಣ ಬಲಿ, ದಶ ಪಿಂಡ ಪ್ರದಾನ ಮಾಡಲಾಯ್ತು. ನಂತರ ಗೋದಾನ, ವಸ್ತ್ರದಾನ ಮಾಡಲಾಗಿದ್ದು, ಇಂದು ನೂರಾರು ಜನರಿಗೆ ಮೃತರ ಹೆಸರಿನಲ್ಲಿ ಅನ್ನ ಸಂತರ್ಪಣೆ ಕಾರ್ಯ ಸಹ ಕೈಗೊಳ್ಳಲಾಗಿದೆ.

    ಈ ಕಾರ್ಯವನ್ನು ಮುಂದೆ ದೇಶದಲ್ಲಿ ಈರೀತಿಯ ಘಟನೆ ನಡೆಯದಿರಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರೆಯಬೇಕು ಎಂಬ ಉದ್ದೇಶದಿಂದ ಮಾಡಲಾಗಿದೆ. ಪಿತೃಮಾಸದ ಈ ಸಂದರ್ಭದಲ್ಲಿ ಪುಣ್ಯಾಶ್ರಮದ ಮಹಾಬಲೇಶ್ವರ ದೇವಾಲಯದ ಮುಖ್ಯ ಅರ್ಚಕ ರಾಜು ಗೋಪಾಲ ಅಡಿ ಅವರಿಂದ ಪಿತೃಕಾರ್ಯ ನೆರವೇರಿಸಲಾಗಿದೆ.

  • Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್‌ಬಾಕ್ಸ್‌’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್‌ ಆಕ್ಸಿಡೆಂಟ್‌ಗಳಲ್ಲಿ ಏಕೆ ಮುಖ್ಯ?

    Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್‌ಬಾಕ್ಸ್‌’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್‌ ಆಕ್ಸಿಡೆಂಟ್‌ಗಳಲ್ಲಿ ಏಕೆ ಮುಖ್ಯ?

    – ಬ್ಲ್ಯಾಕ್‌ಬಾಕ್ಸ್‌ ಕಿತ್ತಳೆ ಬಣ್ಣದಲ್ಲಿರುತ್ತೆ ಯಾಕೆ?
    – ನದಿ, ಸಮುದ್ರದಲ್ಲಿ ಬಿದ್ದರೆ ಸಿಗುತ್ತಾ?

    ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂ.12 ರಂದು ಸಂಭವಿಸಿದ ಏರ್‌ ಇಂಡಿಯಾ ಬೋಯಿಂಗ್‌ 787 ಡ್ರೀಮ್‌ಲೈನರ್‌ ವಿಮಾನ ಅಪಘಾತವು (Ahmedabad Plane Crash) ಇಡೀ ಜಗತ್ತನ್ನು ಬೆಚ್ಚಿಬೀಳಿಸಿತು. ಭೀಕರ ಅಪಘಾತಕ್ಕೆ 270 ಮಂದಿ ಬಲಿಯಾದರು. ಈ ಘೋರ ವಿಮಾನ ದುರಂತದ ಬಳಿಕ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ‘ಬ್ಲ್ಯಾಕ್‌ಬಾಕ್ಸ್’ (Blackbox).‌ ಹುಡುಕಾಟದಲ್ಲಿದ್ದ 2 ಕಪ್ಪು ಪೆಟ್ಟಿಗೆಗಳು ಕೊನೆಗೂ ಸಿಕ್ಕಿವೆ. ಈಗ ಎಲ್ಲರ ಚಿತ್ತವೂ ಆ ಬಾಕ್ಸ್‌ಗಳ ಕಡೆ ನೆಟ್ಟಿದೆ.

    ಅಷ್ಟಕ್ಕೂ ಏನಿದು ಬ್ಲ್ಯಾಕ್‌ಬಾಕ್ಸ್?‌ ವಿಮಾನಗಳಿಗೆ ಇದು ಏಕೆ ಮುಖ್ಯ? ಇವುಗಳ ಪ್ರಾಮುಖ್ಯತೆ ಏನು? ಅಹಮದಾಬಾದ್‌ ಏರ್‌ ಇಂಡಿಯಾ ದುರಂತದ ಹೊತ್ತಲ್ಲಿ ಇದರ ಬಗ್ಗೆ ಚರ್ಚೆ ಯಾಕೆ? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಇಲ್ಲಿದೆ ನೋಡಿ ವಿವರ. ಇದನ್ನೂ ಓದಿ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ಏನಿದು ಬ್ಲ್ಯಾಕ್‌ಬಾಕ್ಸ್‌?
    ಬ್ಲ್ಯಾಕ್‌ಬಾಕ್ಸ್‌ ಎಂದರೆ, ವಿಮಾನ ಹಾರಾಟ ಸಂದರ್ಭದಲ್ಲಿನ ರೆಕಾರ್ಡರ್‌. ವಿಮಾನದಲ್ಲಿ ಫ್ಲೈಟ್‌ ಡೇಟಾ ರೆಕಾರ್ಡರ್‌ ಮತ್ತು ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌ ಎಂಬ ಸಾಧನಗಳಿರುತ್ತವೆ. ಇದು ಕಿತ್ತಳೆ ಬಣ್ಣದಲ್ಲಿರುತ್ತದೆ.

    ಫ್ಲೈಟ್ ಡೇಟಾ ರೆಕಾರ್ಡರ್
    ಅಪಘಾತಕ್ಕೂ ಮೊದಲು ವಿಮಾನದ ವೇಗ, ಎತ್ತರ, ಎಂಜಿನ್ ಕಾರ್ಯಕ್ಷಮತೆ, ಮಾರ್ಗನಕ್ಷೆ ಮತ್ತು ಹಾರಾಟ ನಿಯಂತ್ರಣ ಚಲನೆ ಸೇರಿದಂತೆ ಎಲ್ಲಾ ತಾಂತ್ರಿಕ ವಿವರವನ್ನು ಈ ಸಾಧನ ದಾಖಲಿಸುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ 1 ಗಂಟೆ ಹಾಗೂ 260 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು.

    ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್
    ಇದು ಪೈಲಟ್‌ಗಳ ನಡುವಿನ ಸಂಭಾಷಣೆಗಳು, ಅಲಾರಾಂಗಳು ಮತ್ತು ಸುತ್ತುವರಿದ ಶಬ್ದಗಳನ್ನು ಒಳಗೊಂಡಂತೆ ಕಾಕ್‌ಪಿಟ್‌ನಿಂದ ಆಡಿಯೊವನ್ನು ರೆಕಾರ್ಡ್ ಮಾಡುತ್ತದೆ. ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದಲ್ಲಿನ ಧ್ವನಿಯನ್ನು ದಾಖಲಿಸುತ್ತದೆ.

    ಬ್ಲ್ಯಾಕ್‌ಬಾಕ್ಸ್‌ ಪರಿಚಯಿಸಿದ್ದು ಯಾವಾಗ?
    1950 ರ ದಶಕದ ಆರಂಭದಲ್ಲಿ ಬ್ಲ್ಯಾಕ್‌ಬಾಕ್ಸ್‌ ಪರಿಚಯಿಸಲಾಯಿತು.

    ಪರಿಚಯಿಸಿದ್ದು ಯಾರು?
    ರೆಕಾರ್ಡ್ ಮಾಡುವ ಸಾಧ್ಯತೆಯ ಬಗ್ಗೆ ಡೇವಿಡ್ ವಾರೆನ್‌ಗೆ ಇದ್ದ ಆಸಕ್ತಿಯೇ ವಿಶ್ವದ ಮೊದಲ ಫ್ಲೈಟ್ ರೆಕಾರ್ಡರ್ ಅಥವಾ ‘ಬ್ಲ್ಯಾಕ್‌ಬಾಕ್ಸ್’ ಆವಿಷ್ಕಾರಕ್ಕೆ ಕಾರಣವಾಯಿತು. ಡೇವಿಡ್ ವಾರೆನ್ ಮೆಲ್ಬೋರ್ನ್‌ನಲ್ಲಿರುವ ಏರೋನಾಟಿಕಲ್ ರಿಸರ್ಚ್ ಲ್ಯಾಬೊರೇಟರಿ (ARL)ಯಲ್ಲಿ ಸಂಶೋಧನಾ ವಿಜ್ಞಾನಿಯಾಗಿದ್ದರು.

    1953: ಜನರಲ್ ಮಿಲ್ಸ್ ಮೊದಲ FDR (ಫ್ಲೈಟ್‌ ಡೇಟಾ ರೆಕಾರ್ಡರ್) ಅನ್ನು ಲಾಕ್‌ಹೀಡ್ ಏರ್‌ಕ್ರಾಫ್ಟ್ ಕಂಪನಿಗೆ ಮಾರಾಟ ಮಾಡಿದರು. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

    1954: ಆಸ್ಟ್ರೇಲಿಯಾದ ಡೇವಿಡ್ ರೊನಾಲ್ಡ್ ಡಿ ಮೇ ವಾರೆನ್ ವಿಮಾನ ಅಪಘಾತವನ್ನು ತನಿಖೆ ಮಾಡುವಾಗ ವಿಶ್ವದ ಮೊದಲ ಎಫ್‌ಡಿಆರ್ ಅನ್ನು ಕಂಡುಹಿಡಿದರು. 1953 ರಲ್ಲಿ, ಜೆಟ್ ಇಂಧನ ತಜ್ಞ ವಾರೆನ್, ವಿಶ್ವದ ಮೊದಲ ವಾಣಿಜ್ಯ ಜೆಟ್ ವಿಮಾನವಾದ ಡಿ ಹ್ಯಾವಿಲ್ಯಾಂಡ್ ಕಾಮೆಟ್ ಅಪಘಾತನಗಳನ್ನು ವಿಶ್ಲೇಷಿಸುವ ವಿಶೇಷ ತಂಡದ ಭಾಗವಾಗಿ ಕೆಲಸ ಮಾಡುತ್ತಿದ್ದರು. ತರುವಾಯ, ವಿಮಾನ ಅಪಘಾತಗಳ ವಿಶ್ಲೇಷಣೆಯಲ್ಲಿ ರೆಕಾರ್ಡಿಂಗ್‌ಗಳು ಸಹಾಯಕವಾಗುವಂತೆ ಅವರು ಎಫ್‌ಡಿಆರ್ ಅನ್ನು ಕಂಡುಹಿಡಿದರು.

    ಬ್ಲ್ಯಾಕ್‌ಬಾಕ್ಸ್‌ಗೆ ಕಿತ್ತಳೆ ಬಣ್ಣ ಯಾಕೆ?
    ಅಪಘಾತದ ಸ್ಥಳಗಳಲ್ಲಿ ಸುಲಭವಾಗಿ ಪತ್ತೆಹಚ್ಚಲು FDR ಗಳನ್ನು ಪ್ರಕಾಶಮಾನವಾದ ಕಿತ್ತಳೆ ಅಥವಾ ಹಳದಿ ಬಣ್ಣದಿಂದ ರೂಪಿಸಲಾಗಿದೆ.

    FDR ಮತ್ತು CVR ಹೇಗೆ ಕೆಲಸ ಮಾಡುತ್ತವೆ?
    FDR ಮತ್ತು CVR ಎರಡೂ ಸಾಧನಗಳು ಯಾವಾಗಲೂ ಹಾರಾಟದ ಸಮಯದಲ್ಲಿ ಡೇಟಾವನ್ನು ಸಂಗ್ರಹಿಸುತ್ತವೆ. FDR ತಾಂತ್ರಿಕ ಮತ್ತು ಕಾರ್ಯಕ್ಷಮತೆಯ ಮೆಟ್ರಿಕ್‌ಗಳನ್ನು ದಾಖಲಿಸುತ್ತದೆ, ಆದರೆ CVR ಕಾಕ್‌ಪಿಟ್ ಒಳಗೆ ಧ್ವನಿಯನ್ನು ದಾಖಲಿಸುತ್ತದೆ. ಅಪಘಾತದ ಸಂದರ್ಭದಲ್ಲಿ, ಅಪಘಾತಕ್ಕೆ ಕಾರಣವಾಗುವ ಕ್ಷಣಗಳಲ್ಲಿ ಯಾಂತ್ರಿಕವಾಗಿ ಮತ್ತು ಸಿಬ್ಬಂದಿ ನಡುವಿನ ಸಂಭಾಷಣೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಇದು ನೆರವಾಗುತ್ತದೆ.

    ವಿಮಾನದಲ್ಲಿ ಎಲ್ಲಿ ಇಡುತ್ತಾರೆ?
    5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಭದ್ರತೆಯ ದೃಷ್ಟಿಯಿಂದ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಸಮುದ್ರದಲ್ಲಿ ಬಿದ್ದರೆ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಇದು ಹೊಂದಿದೆ. ತೀವ್ರ ಶಾಖ, ಶೀತವನ್ನೂ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಹಿಂಭಾಗದಲ್ಲಿ ಯಾಕೆ?
    ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.

    ಬ್ಲ್ಯಾಕ್‌ಬಾಕ್ಸ್‌ ರೂಪಿಸಿದ್ದೇಕೆ?
    1953-54ರ ಅವಧಿಯಲ್ಲಿ ವಿಮಾನ ಅಪಘಾತಗಳು ಹೆಚ್ಚುತ್ತಿತ್ತು. ಯಾಕೆ ಈ ಅಪಘಾತಗಳು ಸಂಭವಿಸುತ್ತಿವೆ ಎಂಬುದನ್ನು ಪತ್ತೆಹಚ್ಚಲು ಮತ್ತು ಮುಂದೆ ಅಪಘಾತಗಳನ್ನು ತಪ್ಪಿಸಲು ಬ್ಲ್ಯಾಕ್‌ಬಾಕ್ಸ್‌ ರೂಪಿಸಲಾಯಿತು.

    1953ರ ವಿಮಾನ ದುರಂತ
    1953ರ ಮೇ 2 ರಂದು BOAC ಫ್ಲೈಟ್ 783, ಗುಡುಗು ಸಹಿತ ತೀವ್ರ ಮಳೆಯ ನಡುವೆ 43 ಪ್ರಯಾಣಿಕರು ಮತ್ತು ಸಿಬ್ಬಂದಿ ಹೊತ್ತು ಕೋಲ್ಕತ್ತಾದಿಂದ ದೆಹಲಿಗೆ ಹೊರಟಿತು. ಟೇಕ್ ಆಫ್ ಆದ ಆರು ನಿಮಿಷಗಳ ನಂತರ 7,500 ಅಡಿ ಎತ್ತರಕ್ಕೆ ಏರುವಾಗ ವಿಮಾನದಲ್ಲಿಯೇ ಬಿರುಕು ಬಿಟ್ಟು ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು. ಇದನ್ನೂ ಓದಿ: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?

    ವಿರೋಧ
    ಆರಂಭದಲ್ಲಿ ಬ್ಲ್ಯಾಕ್‌ಬಾಕ್ಸ್ ಕಲ್ಪನೆಗೆ ಪ್ರತಿರೋಧ ವ್ಯಕ್ತವಾಗಿತ್ತು. ಸಿಬ್ಬಂದಿಯ ಮೇಲೆ ಕಣ್ಣಿಡಲು ಅದರಲ್ಲಿನ ರೆಕಾರ್ಡರ್‌ಗಳನ್ನು ಬಳಸಲಾಗುವುದು ಎಂದು ಪೈಲಟ್‌ಗಳು ದೂರಿದ್ದರು. ಆದಾಗ್ಯೂ, 1956 ರ ಹೊತ್ತಿಗೆ ವಾರೆನ್ ARL ಫ್ಲೈಟ್ ಮೆಮೊರಿ ಯುನಿಟ್ ಎಂಬ ಹೆಸರಿನ ಒಂದು ಮೂಲಮಾದರಿಯನ್ನು ರಚಿಸಿದರು. ಇದು ನಾಲ್ಕು ಗಂಟೆಗಳವರೆಗೆ ಧ್ವನಿ ಮತ್ತು ವಿಮಾನ ಹಾರಾಟದ ಸಂದರ್ಭದಲ್ಲಿನ ಡೇಟಾವನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿತು.

    ಮೊದಲು ಅಳವಡಿಸಿಕೊಂಡ ದೇಶ ಯಾವುದು?
    1963 ರಲ್ಲಿ ಎರಡು ಭೀಕರ ವಿಮಾನ ಅಪಘಾತಗಳು ಸಂಭವಿಸಿದವು. ಆಗ ಆಸ್ಟ್ರೇಲಿಯಾ ವಿಮಾನಗಳಲ್ಲಿ ಫ್ಲೈಟ್ ರೆಕಾರ್ಡರ್‌ಗಳನ್ನು ಕಡ್ಡಾಯ ಮಾಡಿತು. ಕಾನೂನಾತ್ಮಕವಾಗಿ ಅದನ್ನು ಕಡ್ಡಾಯಗೊಳಿಸಿದ ಮೊದಲು ದೇಶವಾಗಿ ಹೊರಹೊಮ್ಮಿತು. ಕಡ್ಡಾಯ ಕಾನೂನು ಅವಶ್ಯಕತೆಯನ್ನಾಗಿ ಮಾಡಿದ ಮೊದಲ ದೇಶವಾಯಿತು.

    ನದಿ, ಸಮುದ್ರದಲ್ಲಿ ಬಿದ್ದರೆ ಪತ್ತೆ ಹೇಗೆ?
    ವಿಮಾನಗಳು ಜಲಮೂಲಗಳಲ್ಲಿ ಪತನಗೊಂಡ ಪ್ರಕರಣಗಳು ನಡೆದಿವೆ. ಕಪ್ಪು ಪೆಟ್ಟಿಗೆಗಳು ನೀರಿನ ಅಡಿಯಲ್ಲಿ ಇರುವ ಸಂದರ್ಭಗಳಲ್ಲಿ ಪತ್ತೆಹಚ್ಚಲು, ಅವುಗಳಿಗೆ 30 ದಿನಗಳವರೆಗೆ ಅಲ್ಟ್ರಾಸೌಂಡ್ ಸಂಕೇತಗಳನ್ನು ಕಳುಹಿಸುವ ಬೀಕನ್ ಅಳವಡಿಸಲಾಗಿರುತ್ತದೆ.

  • ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

    ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

    – 2022 ರಲ್ಲಿ ಮದುವೆಯಾಗಿತ್ತು ಈ ಜೋಡಿ

    ಗಾಂಧೀನಗರ: ಅಹಮದಾಬಾದ್‌ನಲ್ಲಿ (Ahmedabad) ಗುರುವಾರ ಸಂಭವಿಸಿದ ಏರ್‌ ಇಂಡಿಯಾ (Air India) ಭೀಕರ ಅವಘಡದಲ್ಲಿ, ಮದುವೆಯಾಗಿದ್ದ ಗೇ ಜೋಡಿಯು ದುರಂತ ಸಾವು ಕಂಡಿದೆ.

    ಜಾಮಿ ಮೀಕ್ (45) ಮತ್ತು ಫಿಯಾಂಗಲ್ ಗ್ರೀನ್ ಲಾ (39) ಇಬ್ಬರೂ ಗೇ ಜೋಡಿ.‌ ಲಂಡನ್-ಬ್ರಿಟನ್‌ನ ವಾಕ್ಸ್ ಹಾಲ್‌ನವರಾಗಿದ್ದ ಸಲಿಂಗಿ ಜೋಡಿ 2022ರಲ್ಲಿ ಮದುವೆಯಾಗಿದ್ದರು (Same Sex Marriage). ಇದನ್ನೂ ಓದಿ: ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

    ಜಾಮಿ ಮೀಕ್ ಎಂಬಾತ ವೆಲ್ನೆಸ್ ಫೌಂಡ್ರಿಯ ಸಂಸ್ಥಾಪಕ. ಇವರಿಬ್ಬರೂ ಯೋಗ ತರಬೇತಿ, ಆಧ್ಯಾತ್ಮಿಕ ತರಬೇತಿ ನೀಡುತ್ತಿದ್ದರು. ಭಾರತ ಪ್ರವಾಸಕ್ಕೆ ಬಂದಿದ್ದರು. ಘಟನೆ ಹಿಂದಿನ‌ ದಿನ ರಾತ್ರಿ ಅತ್ಯದ್ಭುತ ಎಂದು ಬಣ್ಣಿಸಿ ವೀಡಿಯೋ ಮಾಡಿದ್ದರು.

    ಭಾರತ ಪ್ರವಾಸ ಮುಗಿಸಿ ಹೊರಟಾಗ ಖುಷಿಯಲ್ಲಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದ ಗೇಟ್‌ನಲ್ಲಿ ಕುಳಿತು ಇವರು ಮಾಡಿದ್ದ ಕೊನೆಯ ವೀಡಿಯೋ ವೈರಲ್ ಆಗಿತ್ತು. ವೀಡಿಯೋದಲ್ಲಿ ಭಾರತದ ಪ್ರವಾಸದ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಅಪಘಾತದಲ್ಲಿ ಬದುಕುಳಿದರು. ವಿಮಾನವು ಹಾಸ್ಟೆಲ್‌ವೊಂದಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತು. ಪರಿಣಾಮವಾಗಿ ಪ್ರಯಾಣಿಕರು ಸೇರಿದಂತೆ 274 ಮಂದಿ ಮೃತಪಟ್ಟಿದ್ದಾರೆ.

  • ವಿಮಾನ ದುರಂತ – ಮದುವೆಯಾದ ಎರಡೇ ದಿನಕ್ಕೆ ಮಸಣ ಸೇರಿದ ಭವಿಕ್

    ವಿಮಾನ ದುರಂತ – ಮದುವೆಯಾದ ಎರಡೇ ದಿನಕ್ಕೆ ಮಸಣ ಸೇರಿದ ಭವಿಕ್

    – ಏರ್‌ಪೋರ್ಟ್‌ಗೆ ಬಂದು ಪತಿಯನ್ನು ಬೀಳ್ಕೊಟ್ಟಿದ್ದ ಪತ್ನಿ

    ಗಾಂಧಿನಗರ: ಏರ್ ಇಂಡಿಯಾ ವಿಮಾನ ದುರಂತದಲ್ಲಿ (Air India Plane Crash) ನವವರವೊಬ್ಬ ಮದುವೆಯಾದ ಎರಡೇ ದಿನಕ್ಕೆ ಮಸಣ ಸೇರಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

    ಗುಜರಾತ್‌ನ (Gujarat) ವಡೋದರಾದ ಭವಿಕ್ ಮಹೇಶ್ವರಿ (26) ವಿಮಾನ ದುರಂತದಲ್ಲಿ ಬದುಕು ಅಂತ್ಯಗೊಳಿಸಿದ್ದಾರೆ. ಇದನ್ನೂ ಓದಿ: ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

    ಕೆಲ ವರ್ಷಗಳಿಂದ ಲಂಡನ್‌ನಲ್ಲಿಯೇ ವಾಸವಾಗಿದ್ದ ಭವಿಕ್ ಮಹೇಶ್ವರಿ (Bhavik Maheshwari) ಜೂನ್ 10ರಂದು ರಿಜಿಸ್ಟರ್ ಮದುವೆ ಆಗಿದ್ದರು. ಮುಂದಿನ ಬಾರಿ ಲಂಡನ್‌ನಿಂದ (London) ವಾಪಸ್ ಬಂದಾಗ ಸಂಭ್ರಮಾಚರಣೆಗೆ ನಿರ್ಧರಿಸಿದ್ದರು. ಭವಿಕ್, ಪ್ರತಿ ವರ್ಷ 15 ದಿನ ರಜೆ ಹಾಕಿ ಊರಿಗೆ ಬರುತ್ತಿದ್ದರು. ಈ ಬಾರಿಯೂ ಭವಿಕ್ ಊರಿಗೆ ಬಂದಿದ್ದರು. ಈ ವೇಳೆ ಮನೆಯವರು ಮದುವೆಯಾಗಿಯೇ ಹೋಗು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಮನೆಯವರ ಒತ್ತಾಯಕ್ಕೆ ಮಣಿದು ಭವಿಕ್, 2 ದಿನ ಮುನ್ನ ಸರಳವಾಗಿ ಮದುವೆಯಾಗಿದ್ದರು. ಭವಿಕ್, ಲಂಡನ್‌ಗೆ ತೆರಳಿದ ಮೇಲೆ ಪತ್ನಿಗೆ ವೀಸಾ ರೆಡಿ ಮಾಡಿ ಪತ್ನಿಯನ್ನು ಕರೆಸಿಕೊಳ್ಳಲು ಸಿದ್ಧರಾಗಿದ್ದರು. ಏರ್‌ಪೋರ್ಟ್ಗೆ ಬಂದು ಭವಿಕ್‌ರನ್ನು ಪತ್ನಿ ಬೀಳ್ಕೊಟ್ಟಿದ್ದರು. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ಪತ್ನಿ ವಾಪಸ್ ಮನೆ ತಲುಪುವ ಮುನ್ನವೇ ಪತಿಯ ಸಾವಿನ ಸುದ್ದಿ ಕೇಳಿಬಂದಿದ್ದು, ಭವಿಕ್ ಪತ್ನಿ ಹಾಗೂ ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ. ವಿಧಿಯ ಕ್ರೂರ ಆಟಕ್ಕೆ ಆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭವಿಕ್ ದುರಂತ ಅಂತ್ಯಕಂಡಿದ್ದಾರೆ.

  • Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    – ‘ವಿಮಾನ ಮೇಲಕ್ಕೆ ಏರುತ್ತಿಲ್ಲ..’; ಕೊನೆ 5 ಸೆಕೆಂಡ್‌ಗಳ ಆಡಿಯೋ

    ಗಾಂಧೀನಗರ: ಅಹಮದಾಬಾದ್‌ನಲ್ಲಿ ವಿಮಾನ ದುರಂತದ (Ahmedabad Plane Crash) ಕೊನೆ ಕ್ಷಣಗಳಲ್ಲಿ ಏರ್ ಇಂಡಿಯಾ ಪೈಲಟ್ ಸುಮಿತ್ ಸಭರ್ವಾಲ್ (Sumeet Sabharwal) ಅವರು ಎಟಿಸಿಗೆ (ATC) ನೀಡಿದ ಕೊನೆ ಸಂದೇಶದ ಆಡಿಯೋ ಲಭ್ಯವಾಗಿದೆ. ಕೇವಲ 5 ಸೆಕೆಂಡ್‌ಗಳ ಆಡಿಯೋ ಸಿಕ್ಕಿದೆ.

    ‘ಮೇಡೇ… ಒತ್ತಡವಿಲ್ಲ, ಶಕ್ತಿ ಕಳೆದುಕೊಳ್ಳುತ್ತಿದೆ, ಮೇಲೇರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸಭರ್ವಾಲ್ ಅವರು ಎಟಿಸಿಗೆ ಕೊನೆಯ ಸಂದೇಶದಲ್ಲಿ ತಿಳಿಸಿದ್ದಾರೆ. ಇದಾದ ಕೆಲವು ಸೆಕೆಂಡುಗಳ ನಂತರ, ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಯಿತು. ಇದನ್ನೂ ಓದಿ: Mayday ಅಂದ್ರೆ ವಿಮಾನ ತುಂಬಾ ಡೆಂಜರ್‌ನಲ್ಲಿದ್ದಂತೆ – ದುರಂತದ ಬಗ್ಗೆ ಯುವ ಮಹಿಳಾ ಪೈಲಟ್ ಹೇಳಿದ್ದೇನು?

    ವಿಮಾನವು 625 ಅಡಿ ಎತ್ತರವನ್ನು ತಲುಪಿದ ಸ್ವಲ್ಪ ಸಮಯದ ನಂತರ ನಿಮಿಷಕ್ಕೆ -475 ಅಡಿ ವೇಗದಲ್ಲಿ ಹಠಾತ್ ಇಳಿಯಲು ಪ್ರಾರಂಭಿಸಿತು. ತಕ್ಷಣವೇ ಪೈಲಟ್ ಸುಮೀತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ವಾಯು ಸಂಚಾರ ನಿಯಂತ್ರಣ (ಎಟಿಸಿ)ಗೆ ‘ಮೇಡೇ’ ಸಂದೇಶ ನೀಡಿದ್ದರು. ಇದರ ಬೆನ್ನಲ್ಲೇ ಎಟಿಸಿ ಮಾಡಿದ ಎಲ್ಲಾ ಕರೆಗಳಿಗೆ ಪೈಟಲ್‌ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

    ಮೇಡೇ ಎಂದರೆ ವಿಮಾನ ತುಂಬಾ ಡೇಂಜರ್‌ನಲ್ಲಿದೆ ಎಂದರ್ಥ. ಜೀವಕ್ಕೆ ಅಪಾಯವಿದೆ ಎಂದು ತುರ್ತು ಪರಿಸ್ಥಿತಿಯನ್ನು ಸೂಚಿಸಲು ವಾಯುಯಾನ ಮತ್ತು ಸಮುದ್ರ ಸಂವಹನದಲ್ಲಿ ಬಳಸಲಾಗುವ ಅತ್ಯುನ್ನತ ಮಟ್ಟದ ರೇಡಿಯೋ ಸಂಕೇತವಾಗಿದೆ. ಇದು ತಕ್ಷಣದ ಸಹಾಯದ ಅಗತ್ಯವಿದೆ ಎಂದು ಸೂಚಿಸುತ್ತದೆ. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

    ‘ಮೇಡೇ’ ಎಂಬ ಪದವು ಫ್ರೆಂಚ್ ಪದ ‘ಮೈಡರ್’ನಿಂದ ಬಂದಿದೆ. ‘ನನಗೆ ಸಹಾಯ ಮಾಡಿ’ ಎಂಬುದು ಇದರ ಅರ್ಥ. ತುರ್ತು ಸಂದರ್ಭಗಳಲ್ಲಿ ಸ್ಪಷ್ಟ ಸಂವಹನ ಖಚಿತಪಡಿಸಿಕೊಳ್ಳಲು ಲಂಡನ್‌ನ ಕ್ರಾಯ್ಡನ್ ವಿಮಾನ ನಿಲ್ದಾಣದಲ್ಲಿ ರೇಡಿಯೋ ಅಧಿಕಾರಿಯಾಗಿದ್ದ ಫ್ರೆಡೆರಿಕ್ ಸ್ಟಾನ್ಲಿ ಮಾಕ್‌ಫೋರ್ಡ್ 1920 ರ ದಶಕದ ಆರಂಭದಲ್ಲಿ ಇದನ್ನು ಪರಿಚಯಿಸಿದರು. ನಂತರ ಈ ಪದವು ಪೈಲಟ್‌ಗಳು ಮತ್ತು ನಾವಿಕರಿಗೆ ಅಂತರರಾಷ್ಟ್ರೀಯ ರೇಡಿಯೋ ಸಂವಹನದ ಪ್ರಮಾಣಿತ ಭಾಗವಾಯಿತು. 1927 ರಲ್ಲಿ ಮೋರ್ಸ್ ಕೋಡ್ ಸಿಗ್ನಲ್ “SOS” ಜೊತೆಗೆ ಅಧಿಕೃತವಾಗಿ ಅಳವಡಿಸಿಕೊಳ್ಳಲಾಯಿತು.