Tag: ಅಶ್ವತ್ಥ ನಾರಾಯಾಣ

  • ನಗರದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 100 ಬೆಡ್ ಆಸ್ಪತ್ರೆ: 4 ಅಸೆಂಬ್ಲಿ ಕ್ಷೇತ್ರಕ್ಕೊಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ

    ನಗರದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 100 ಬೆಡ್ ಆಸ್ಪತ್ರೆ: 4 ಅಸೆಂಬ್ಲಿ ಕ್ಷೇತ್ರಕ್ಕೊಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ

    – 15 ದಿನದಲ್ಲಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದ ಡಿಸಿಎಂ
    – ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ/ಎಲ್ಲೆಡೆ ತಾಂತ್ರಿಕ ಸುಧಾರಣೆ

    ಬೆಂಗಳೂರು: ನಗರದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ 100 ಬೆಡ್‍ಗಳ ಸುಸಜ್ಜಿತ ಆಸ್ಪತ್ರೆ ಹಾಗೂ 4 ವಿಧಾನಸಭೆ ಕ್ಷೇತ್ರಕ್ಕೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಜನೆಯ ‘ಕ್ರಿಯಾ ಯೋಜನೆ’ಯನ್ನು 15 ದಿನದೊಳಗೆ ಸಿದ್ಧಪಡಿಸಿ ಸಲ್ಲಿಸುವಂತೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿನೆ ನೀಡಿದರು.

    ಈ ಸಂಬಂಧ ಬೆಂಗಳೂರಿನಲ್ಲಿ ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ಇತರೆ ಅಧಿಕಾರಿಗಳ ಜತೆ ಮಾತಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

    ಎಲ್ಲೆಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಬಹುದು, ಯಾವ ಯಾವ ಕ್ಷೇತ್ರಕ್ಕೆ ಅಗತ್ಯವಿದೆ? ಎಲ್ಲೆಲ್ಲಿ ಸ್ಥಳ ಲಭ್ಯವಿದೆ? ಎಲ್ಲೆಲ್ಲಿ ಭೂಮಿಯನ್ನು ಹೊಸದಾಗಿ ಪಡೆದುಕೊಳ್ಳಬೇಕಿದೆ? ಒಟ್ಟಾರೆ ಎಷ್ಟು ವೆಚ್ಚ ಆಗಲಿದೆ? ಆಡಳಿತ ಮತ್ತು ಕಾನೂನಾತ್ಮಕವಾಗಿ ಸರ್ಕಾರ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದರು ಡಿಸಿಎಂ.

    ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಆದಷ್ಟು ಬೇಗ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ಇನ್ನಷ್ಟು ಸುಧಾರಣಾ ಕ್ರಮ:
    ಈಗ ಎಲ್ಲವೂ ಅನ್‍ಲಾಕ್ ಆಗುತ್ತಿದೆ. ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. 1.50 ಕೋಟಿ ಜನಸಂಖ್ಯೆ ಇರುವ ನಗರ ಬೆಂಗಳೂರು. ಅಲ್ಲದೆ, 50 ಲಕ್ಷ ಜನರು ನಿತ್ಯ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಗರದ ಆರೋಗ್ಯ ಮೂಲಭೂತ ಸೌಲಭ್ಯಗಳನ್ನು ಸುಧಾರಿಸುವ ಸಂಬಂಧ ಸರಕಾರ ಕ್ರಮ ವಹಿಸಿದೆ ಎಂದರು ಡಿಸಿಎಂ.

    ಪ್ರತೀ ವಾರ್ಡ್ ನಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು. ಈಗಾಗಲೇ ಕೆಲವೆಡೆ ಸಣ್ಣ ಪ್ರಮಾಣದ ಆರೋಗ್ಯ ಕೇಂದ್ರಗಳಿದ್ದು, ಅವುಗಳನ್ನು ಮೇಲ್ದರ್ಜೆಗೇರಿಸಲಾಗುವುದು ಹಾಗೂ ಕಿರಿದಾದ ಜಾಗದಲ್ಲಿರುವ ಕೇಂದ್ರಗಳನ್ನು ವಿಶಾಲ ಜಾಗಕ್ಕೆ ಶಿಫ್ಟ್ ಮಾಡಲಾಗುವುದು. ಸೂಕ್ತ ಮೂಲಸೌಕರ್ಯ, ಸಿಬ್ಬಂದಿ ನೇಮಕ ಮಾಡುವುದರ ಜತೆಗೆ, ಎಲ್ಲೆಡೆ ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದರು ಉಪ ಮುಖ್ಯಮಂತ್ರಿ.

    ತಾಂತ್ರಿಕವಾಗಿಯೂ ಆರೋಗ್ಯ ಕೇಂದ್ರಗಳಲ್ಲಿ ಸುಧಾರಣೆಗಳನ್ನು ಮಾಡಲಾಗುವುದು. ಎಲೆಕ್ಟ್ರಾನಿಕ್ ಮೆಡಿಕಲ್ ದಾಖಲೆಗಳಿರಬೇಕು. ಎಲ್ಲ ಮಾಹಿತಿ ಜತೆಗೆ ಡ್ಯಾಶ್‍ಬೋರ್ಡ್ ಕಡ್ಡಾಯವಾಗಿ ಇರಬೇಕು. ಡಯಾಗ್ನಾಸ್ಟಿಕ್ ಕೇಂದ್ರಗಳ ನೆಟ್‍ವರ್ಕ್ ಆಗಿ ವರದಿಗಳೆಲ್ಲ ಕ್ಲೌಡ್‍ನಲ್ಲಿ ಲಭ್ಯ ಇರಬೇಕು. ಹೀಗೆ ಸಮಗ್ರ ಮಾಹಿತಿ ಇದ್ದರೆ ಮುಂದಿನ ಕೋವಿಡ್ ಸ್ಥಿತಿ ಎದುರಿಸುವುದು ಸುಲಭ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    ಟ್ರಾಯಾಜಿಂಗ್ ಹೆಚ್ಚಳ:
    ಅನ್‍ಲಾಕ್ ಆಗುತ್ತಿದ್ದಂತೆಲ್ಲ ಹೊರಗಿನಿಂದ ಹೆಚ್ಚು ಜನ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾರೆ. ಇವರೆಲ್ಲರನ್ನೂ ಪರೀಕ್ಷೆ ಮಾಡುವಂತೆ ಸೂಚಿಸಲಾಗಿದೆ. ದಿನಕ್ಕೆ ಕೊನೆಪಕ್ಷ 75,000 ರಾಪಿಡ್, ಆರ್ ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುವುದು. ಪೂಲಿಂಗ್ ಟೆಸ್ಟ್ ಕೂಡ ಮಾಡುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಯೇ, ಈಗಾಗಲೇ ನೇಮಕ ಮಾಡಿಕೊಂಡಿರುವ ಸಿಬ್ಬಂದಿಯಲ್ಲಿ ಒಬ್ಬರನ್ನೂ ಕೆಲಸದಿಂದ ತೆಗೆಯಬಾರದು ಎಂದು ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಪರೀಕ್ಷೆಗಳ ಬಗ್ಗೆ ಮೈಮರೆಯುವಂತಿಲ್ಲ. ಮತ್ತೆ ಸೋಂಕು ಯಾವಾಗ ಬೇಕಾದರೂ ಹೆಚ್ಚಾಗಬಹುದು. ಎಲ್ಲ ಮುನ್ನಚ್ಚರಿಕೆ ವಹಿಸಬೇಕೆಂದು ಬಿಬಿಎಂಪಿಗೆ ತಿಳಿಸಲಾಗಿದೆ ಎಂದರು ಅವರು.

    ಮಾರ್ಗಸೂಚಿ ಮೇಲೆ ನಿಗಾ
    ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿ, ಮುಂಗಟ್ಟು, ಮಾಲ್ ಹಾಗೂ ಕಚೇರಿಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ. ಅದರ ಮೇಲೆ ನಿಗಾ ಇಡಲಾಗುವುದು. ಒಂದು ವೇಳೆ ಎಲ್ಲೇ ಆದರೂ ಎಸ್‍ಒಪಿ ಪಾಲನೆ ಆಗದಿದ್ದರೆ ಒಂದು ಫೊಟೋ ತೆಗೆದು ಬಿಬಿಎಂಪಿಗೆ ವಾಟ್ಸಾಪ್ ಮಾಡಿದರೆ, ಅದರ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಇದು ಖಾಸಗಿ ಸಂಸ್ಥೆಗಳ ಕಚೇರಿಗಳಿಗೂ ಅನ್ವಯ ಆಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ತಿಂಗಳೊಳಗೆ 80% ಜನರಿಗೆ ಲಸಿಕೆ
    ಬೆಂಗಳೂರಿನಲ್ಲಿ ಈಗಾಗಲೇ 45 ವರ್ಷ ಮೇಲ್ಪಟ್ಟ 65% ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಕೆಲ ಕ್ಷೇತ್ರಗಳಲ್ಲಿ 95%ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಕಡಿಮೆ ಇರುವ ಕಡೆ ಹೆಚ್ಚೆಚ್ಚು ಲಸಿಕೀಕರಣ ಮಾಡುವಂತೆ ಸೂಚಿಸಲಾಗಿದೆ. ಈ ತಿಂಗಳೊಳಗೆ ಈ ವಯಸ್ಸಿನ 80% ಜನರಿಗೆ ಲಸಿಕೆ ಕೊಡುವ ಕೆಲಸ ಮುಗಿಯಬೇಕು ಎಂದು ತಿಳಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ, ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

  • ಡಾ.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ 25,000 ಲಸಿಕೆ -ಡಿಸಿಎಂ

    ಡಾ.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ 25,000 ಲಸಿಕೆ -ಡಿಸಿಎಂ

    ಬೆಂಗಳೂರು: ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಡಾ.ಅಶ್ವತ್ಥನಾರಾಯಣ್ ಫೌಂಡೇಶನ್ ವತಿಯಿಂದ ಇದುವರೆಗೂ 15,000 ಲಸಿಕೆ ನೀಡಲಾಗಿದ್ದು, ಇನ್ನು ಕೆಲ ದಿನದಲ್ಲೇ 10,000 ಲಸಿಕೆ ಕೊಡಲಾಗುವುದು ಎಂದು ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

    ಮಲ್ಲೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನದ ನಿಮಿತ್ತ ಸೋಮವಾರದಂದು ಶ್ರೀರಾಮಪುರದ ಬಿಬಿಎಂಪಿ ಶಾಲೆಯ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡಿರು.

    ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಪ್ರತಿ ಸ್ಲಮ್‍ನಲ್ಲಿಯೂ ಜನರ ಮನೆಗಳ ಸಮೀಪವೇ ಲಸಿಕೆ ನೀಡುವ ಕೆಲಸ ಆಗುತ್ತಿದೆ. ಬೀದಿಬದಿ ವ್ಯಾಪಾರಿಗೂ, ಸ್ಲಂ ನಿವಾಸಿಗಳು, ಸೆಕ್ಯುರಿಟಿ ಗಾರ್ಡ್, ಆಟೋ ಚಾಲಕರು ಸೇರಿದಂತೆ ಬಿಪಿಎಲ್ ಕಾರ್ಡ್ ಉಳ್ಳ ಎಲ್ಲರನ್ನು ಹುಡುಕಿ- ಹುಡುಕಿ ಲಸಿಕೆ ನೀಡಲಾಗುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಹಗಲಿರುಳೂ ಕೆಲಸ ಮಾಡುತ್ತಿದ್ದಾರೆ ಎಂದರು.

    ಈಗಾಗಲೇ ಸರ್ಕಾರದಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇನ್ನು 18 ವರ್ಷ ಮೇಲ್ಪಟ್ಟವರಿಗೆ ಶೀಘ್ರವೇ ಲಸಿಕೆ ಅಭಿಯಾನ ಪ್ರಾರಂಭ ಮಾಡಲಾಗುವುದು ಎಂದ ಅವರು, ಜತೆಗೆ, ನಮ್ಮ ಬಿಬಿಎಂಪಿ ವತಿಯಿಂದ ಆದ್ಯತಾ ವಲಯದ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಮಲ್ಲೇಶ್ವರ ಮಾತ್ರವಲ್ಲದೆ, ಇಡೀ ನಗರದಲ್ಲಿ ಈ ಕೆಲಸ ವೇಗವಾಗಿ ನಡೆಯುತ್ತಿದೆ. ಸದ್ಯದ ಅಂಕಿ-ಅಂಶದ ಪ್ರಕಾರ ಬೆಂಗಳೂರಿಲ್ಲಿ 30- 35% ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದರು ಡಿಸಿಎಂ.

    18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಕ್ಕೆ ಮೊದಲು ಲಸಿಕೆ ಅಭಿಯಾನಕ್ಕಾಗಿಯೇ ರಾಜ್ಯ ಸರಕಾರ ಪ್ರತ್ಯೇಕ ಆಪ್ ಸಿದ್ಧತೆ ಮಾಡುತ್ತಿದೆ. ಹೊಸ ಹಾಗೂ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ ಆಪ್ ಸಿದ್ಧಪಡಿಸಲಾಗುತ್ತಿದೆ. ಅದು ಶೀಘ್ರವೇ ಬಳಕೆ ಲಭ್ಯವಾಗಲಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    18 ವರ್ಷ ಮೇಲ್ಪಟ್ಟವರಿಕೆ ವ್ಯಾಕ್ಸಿನೇಷನ್ ಶುರುವಾದ ಮೇಲೆ ಲಸಿಕೆಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಲಿದೆ. ಅದಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದ ಡಿಸಿಎಂ, ಆಪ್ ಬಂದ ಮೇಲೆ ಆಯಾ ಪ್ರದೇಶದವರು ಆಯಾ ಪ್ರದೇಶದಲ್ಲೇ ಲಸಿಕೆ ಪಡೆಯಬೇಕು. ಅದಕ್ಕೆ ಬೇಕಾದ ಎಲ್ಲ ಪ್ರೊಗ್ರಾಮಿಂಗ್ ಆಪ್‍ನಲ್ಲಿ ಮಾಡಲಾಗಿದೆ ಎಂದರು ಡಿಸಿಎಂ.

    ಉಪ ಮುಖ್ಯಮಂತ್ರಿಗಳು ಸೋಮವಾರ ವ್ಯಾಕ್ಸಿನೇಷನ್ ನಡೆದ ಶ್ರೀರಾಂಪುರ ಬಿಬಿಎಂಪಿ ಶಾಲೆ ಸೇರಿದಂತೆ ಸುಬ್ರಹ್ಮಣ್ಯ ನಗರದ ಬಾಲಾಜಿ ಸಮುದಾಯ ಭವನ ಹಾಗೂ ಮಲ್ಲೇಶ್ವರದ 7ನೇ ಮುಖ್ಯ ರಸ್ತೆಯಲ್ಲಿರುವ ದೇಶಪಾಂಡೆ ಭವನದ ಲಸಿಕೆ ಶಿಬಿರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • 80 ಆಮ್ಲಜನಕ ಸಾಂದ್ರಕಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಿದ ಗಿವ್ ಇಂಡಿಯಾ

    80 ಆಮ್ಲಜನಕ ಸಾಂದ್ರಕಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಿದ ಗಿವ್ ಇಂಡಿಯಾ

    – 2,000 ಸಾಂದ್ರಕ ಕೊಡುವ ಭರವಸೆ
    – ಯಲಹಂಕದಲ್ಲಿ ಬೋಯಿಂಗ್‍ನಿಂದ 450 ಬೆಡ್ ಆಕ್ಸಿಜನ್ ಘಟಕ

    ಬೆಂಗಳೂರು: ಗಿವ್ ಇಂಡಿಯಾ ಸಂಸ್ಥೆಯು ಜಿಕೆವಿಕೆ ಕ್ಯಾಂಪಸ್ಸಿನಲ್ಲಿರುವ ಕೋವಿಡ್ ಕೇರ್ ಸೆಂಟರ್‍ಗೆ 80 ಆಮ್ಲಜನಕ ಸಾಂದ್ರಕ (oxygen concentrator) ಗಳನ್ನು ಶನಿವಾರ ಹಸ್ತಾಂತರ ಮಾಡಿದೆ.

    ಸಂಸ್ಥೆಯ ಸಿಇಒ ಅಥುತ್ ಸಟೇಜಾ ಅವರು ಆಮ್ಲಜನಕ ಸಾಂದ್ರಕಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಜಿಕೆವಿಕೆ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಹಸ್ತಾಂತರ ಮಾಡಿದರು.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಮುಂದಿನ ದಿನಗಳಲ್ಲಿ ಗಿವ್ ಇಂಡಿಯಾ ಸಂಸ್ಥೆ ಇನ್ನೂ 2000 ಆಮ್ಲಜನಕ ಸಾಂದ್ರಕಗಳನ್ನು ನೀಡಲಿದೆ. ಅವುಗಳನ್ನು ರಾಜ್ಯಾದ್ಯಂತ ಸ್ಥಾಪನೆ ಮಾಡಲಾಗುವ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಅಳವಡಿಸಲಾಗುವುದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಖಾಸಗಿ ಕ್ಷೇತ್ರವೂ ಹೆಗಲು ಕೊಡುತ್ತಿರುವುದು ಅತ್ಯಂತ ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಗಿವ್ ಇಂಡಿಯಾದ ಕೊಡುಗೆ ಸ್ಮರಣೀಯವಾಗಿದೆ. ಜಿಕೆವಿಕೆಯ ಕೋವಿಡ್ ಕೇರ್ ಸೆಂಟರ್ ಅತ್ಯುತ್ತಮವಾಗಿದ್ದು, ಯಾರೇ ಸೋಂಕಿತರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯಬಹುದಾಗಿದೆ. ಇಲ್ಲಿಗೆ ಬಂದವರಿಗೆ ನಿಸ್ಸಂಶಯವಾಗಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂದು ಹೇಳಿದರು.

    ಬೋಯಿಂಗ್‍ನಿಂದ 450 ಬೆಡ್:
    ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆಸಿದ ಮಾತುಕತೆ ಫಲವಾಗಿ ಯಲಹಂಕ ಭಾಗದಲ್ಲಿ 200 ಆಕ್ಸಿಜನ್ ಬೆಡ್‍ಗಳ ಚಿಕಿತ್ಸಾ ಘಟಕವನ್ನು ಬೋಯಿಂಗ್ ಸಂಸ್ಥೆ ಸ್ಥಾಪಿಸಿದ್ದು, ಅದು ಲೋಕಾರ್ಪಣೆಗೆ ಸಿದ್ಧವಾಗಿದೆ. ಇನ್ನೂ 250 ಬೆಡ್‍ಗಳನ್ನು ಮಾಡಿಕೊಡಲು ಅದೇ ಸಂಸ್ಥೆ ಮುಂದೆ ಬಂದಿದೆ. ಅದು ಕೂಡ ಬೇಗ ಕಾರ್ಯಾರಂಭ ಆಗಲಿದೆ ಎಂದು ಡಾ.ಅಶ್ವತ್ಥನಾರಾಯಣ ಅವರು ಮಾಧ್ಯಮಗಳಿಗೆ ತಿಳಿಸಿದರು.

    ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಕರಕುಶಲ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಸಿಎಸ್‍ಆರ್ ಸಲಹೆಗಾರ ಕೆ.ವಿ.ಮಹೇಶ್, ಯಲಹಂಕ ವಲಯದ ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.