Tag: ಅರವಿಂದ್ ಲಿಂಬಾವಳಿ

  • ಮತ್ತೆ 4 ದಿನ ಕೋಲಾರ ಕಂಪ್ಲೀಟ್ ಲಾಕ್‍ಡೌನ್: ಅರವಿಂದ್ ಲಿಂಬಾವಳಿ

    ಮತ್ತೆ 4 ದಿನ ಕೋಲಾರ ಕಂಪ್ಲೀಟ್ ಲಾಕ್‍ಡೌನ್: ಅರವಿಂದ್ ಲಿಂಬಾವಳಿ

    – ಜಿಲ್ಲೆಯ 826 ಗ್ರಾಮಗಳು ಕೊರೊನಾ ಮುಕ್ತ

    ಕೋಲಾರ: ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ನಾಲ್ಕು ದಿನಗಳ ಕಾಲ ಕಂಪ್ಲೀಟ್ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಈ ಹಿಂದೆ ಮಾಡಿದ್ದ ಕಠಿಣ ಲಾಕ್‍ಡೌನ್ ನಿಂದ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ತೀವ್ರ ಕಡಿಮೆಯಾಗಿದೆ. ಹಾಗಾಗಿ ಜಿಲ್ಲೆಯ ಜನರಲ್ಲಿ ಕ್ಷಮೆಯಾಚಿಸುತ್ತಾ ಕೋಲಾರದಲ್ಲಿ ಮತ್ತೆ ಕಂಪ್ಲೀಟ್ ಲಾಕ್‍ಡೌನ್ ಮಾಡಲು ತೀರ್ಮಾನ ಮಾಡಲಾಗಿದೆ ಕೋಲಾರದಲ್ಲಿ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ರು.

    ಕೋಲಾರದ ಜಿಲ್ಲಾ ಅರೋಗ್ಯಾಧಿಕಾರಿಗಳ ಕಚೇರಿ ಬಳಿ ಆಕ್ಸಿಜನ್ ಬಸ್ ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಲಿಂಬಾವಳಿ, ನಾಲ್ಕು ದಿನದ ಕಂಪ್ಲೀಟ್ ಲಾಕ್‍ಡೌನ್‍ಗೆ ಜನರ ಉತ್ತಮ ಸ್ಪಂದನೆ ಸಿಕ್ಕಿದೆ. ಇದರಿಂದ ಸೋಂಕಿನ ಪ್ರಮಾಣ ಕಡಿಮೆಯಾಗಿದೆ.

    ತಜ್ಞರ ಸಭೆಯಲ್ಲೆ ಮತ್ತೆ ಲಾಕ್‍ಡೌನ್ ಮಾಡುವ ಕುರಿತು ಪ್ರಸ್ತಾಪಗಳು ಬಂದಿವೆ. ಹಾಗಾಗಿ ಮತ್ತೆ ನಾಲ್ಕು ದಿನ ಲಾಕ್‍ಡೌನ್ ಮಾಡಲು ತೀರ್ಮಾನ ಮಾಡಲಾಗಿದೆ. ಇದು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳ ಅಪೇಕ್ಷೆ ಸಹ ಇದಾಗಿದೆ. ಸೇನೆಗೆ ಸಂಬಂಧಿಸಿದ ಕೈಗಾರಿಕೆಗಳು ಹಾಗೂ ಎಪಿಎಂಸಿಗಳಿಗೆ ಮಾತ್ರ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಅವಕಾಶ ನೀಡಲಾಗುವುದು, ಉಳಿದಂತೆ ಎಲ್ಲವೂ ಸಂಪೂರ್ಣ ಲಾಕ್ ಡೌನ್ ಆಗಲಿದೆ ಎಂದ್ರು.

    826 ಗ್ರಾಮಗಳು ಕೊರೊನಾ ಮುಕ್ತ:
    ಕೋಲಾರ ಜಿಲ್ಲೆಯ 1853 ಗ್ರಾಮಗಳಲ್ಲಿ 826 ಗ್ರಾಮಗಳು ಕೊರೊನಾ ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒಂದು ತಿಂಗಳ ಒಳಗಾಗಿ ಒಂದು ಸೋಂಕಿನ ಪ್ರಕರಣ ಇಲ್ಲದಂತೆ ಕಾಪಾಡಿಕೊಂಡ ಪಂಚಾಯತಗಳಿಗೆ ಕೊರೊನಾ ಮುಕ್ತ ಗ್ರಾಮ ಪಂಚಾಯತಿ ಮಾಡಲು ಶ್ರಮಿಸಿದವರಿಗೆ ಪ್ರೋತ್ಸಾಹ ಧನ ನೀಡಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಲಾಗಿದೆ. ಅದರಂತೆ ನೂರರಷ್ಟು ವ್ಯಾಕ್ಸಿನ್ ಮಾಡುವ ಗ್ರಾಮ ಪಂಚಾಯತಗಳಿಗೂ ಪ್ರೋತ್ಸಾಹ ಧನ ಹಾಗೂ ಪ್ರಶಂಸಾ ಪತ್ರ ನೀಡಲು ಜಿಲ್ಲಾಡಳಿತ ನಿರ್ಧಾರ ಮಾಡಲಾಗಿದೆ.

    ಇನ್ನೂ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗದಂತೆ ಸರ್ಕಾರವನ್ನ ಮನವಿ ಮಾಡಿದ್ದು ಅದರಂತೆ ಕುವೈತ್ ಸರ್ಕಾರ ನೀಡುತ್ತಿರುವ ಆಕ್ಸಿಜನ್ ನಲ್ಲಿ 20 ಟನ್ ಆಕ್ಸಿಜನ್‍ನ್ನು ಕೋಲಾರಕ್ಕೆ ನೀಡಲು ಸರ್ಕಾರ ತೀರ್ಮಾನಿಸಿದೆ. ನಮ್ಮ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನ ಅರ್ಪಿಸುತ್ತೇನೆ ಎಂದು ಹೇಳಿದ್ರು. ಇನ್ನೂ ಆಕ್ಸಿಜನ್ ಬ್ಯಾಂಕ್ ಉದ್ಘಾಟನೆಗೂ ಮುನ್ನ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲೆಯ ಕೊರೊನಾ ಸೋಂಕು ತಡೆಗಟ್ಟುವ ಕುರಿತು ಅರವಿಂದ್ ಲಿಂಬಾವಳಿ ಮಾಹಿತಿ ಸಂಗ್ರಹಿಸಿದ್ರು.

  • ಶೀಘ್ರದಲ್ಲೇ ನಾಡಗೀತೆಗೆ ಕತ್ತರಿ – ಅರವಿಂದ ಲಿಂಬಾವಳಿ

    ಶೀಘ್ರದಲ್ಲೇ ನಾಡಗೀತೆಗೆ ಕತ್ತರಿ – ಅರವಿಂದ ಲಿಂಬಾವಳಿ

    ಗದಗ: ನಾಡಗೀತೆ ಬಹಳ ಸುದೀರ್ಘವಾಗಿ ಇರುವುದರಿಂದಾಗಿ ಪುನರ್ ಪರಿಶೀಲನೆ ಮಾಡಿ ಶೀಘ್ರದಲ್ಲೇ ನಾಡಗೀತೆ ಕಡಿತಕ್ಕೆ ಚಿಂತನೆ ನಡೆದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡ ಹಾಗೂ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅರವಿಂದ್ ಲಿಂಬಾವಳಿ, ನಾಡಗೀತೆಗೆ ಶೀಘ್ರದಲ್ಲೆ ಕತ್ತರಿ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಸಾಹಿತಿಗಳು ಮತ್ತು ತಜ್ಞರ ಸಭೆ ಕರೆದು ಶೀಘ್ರ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

    ನಾಡಗೀತೆ ದೊಡ್ಡದಾಗಿರುವುದರಿಂದ ಹಿರಿಯ ವಯಸ್ಕರು ನಿಂತುಕೊಳ್ಳಲು ಕಷ್ಟ ಆಗುತ್ತಿದೆ. ಹಾಗಾಗಿ ಈ ಹಿಂದೆಯೂ ನಾಡಗೀತೆಯ ಕಡಿತ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಕಡಿಮೆ ಅವಧಿಯಲ್ಲಿ ಸಂಪೂರ್ಣ ನಾಡಗೀತೆ ಹಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದರು.

    ಕೊರೊನಾ ಮತ್ತೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿ, ಕೊರೊನಾದಿಂದ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೆ ಮುಂದೂಡಿಕೆಗೆ ಚಿಂತನೆ ಮಾಡಲಾಗಿದೆ. ಮಾರ್ಚ್ 9 ರಂದು ಸಮ್ಮೇಳನ ಬಗ್ಗೆ ಪೂರ್ವಭಾವಿ ಸಭೆ ಮಾಡಬೇಕಿತ್ತು. ಆದರೆ ನಿನ್ನೆ ಕರ್ನಾಟಕ ಸರ್ಕಾರ 500 ಕ್ಕಿಂತ ಹೆಚ್ಚು ಜನ ಸೇರಬಾರದೆಂದು ಹೊಸ ಆದೇಶ ಹೊರಡಿಸಿರುವುದರಿಂದಾಗಿ ಸಾಹಿತ್ಯ ಸಮ್ಮೇಳನ ಮುಂದೂಡಿಕೆ ಬಗ್ಗೆ ನಾನು ಚಿಂತನೆ ಮಾಡುತ್ತಿದ್ದೇನೆ. ಸಹಜವಾಗಿ ಸರ್ಕಾರ ಜನರ ಬಗ್ಗೆ ಕಾಳಜಿ ಇರುವುದರಿಂದ ಹೊಸ ನೀತಿ ರೂಪಿಸುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಇದರ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ತಿಳಿಸಿದರು.

    ಈ ಮೊದಲು ಸಚಿವರು ಬೆಂಕಿಗಾಹುತಿಯಾದ ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡ ಹಾಗೂ ಗಣಿಗಾರಿಕೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು.

    ಸಚಿವರೊಂದಿಗೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

  • 2023ಕ್ಕೆ ನಾವು ಏನು ಅಂತ ತೋರಿಸ್ತೇವೆ: ರೇವಣ್ಣ

    2023ಕ್ಕೆ ನಾವು ಏನು ಅಂತ ತೋರಿಸ್ತೇವೆ: ರೇವಣ್ಣ

    – ಅರವಿಂದ್ ಲಿಂಬಾವಳಿ ಥರ್ಡ್ ಕ್ಲಾಸ್

    ಹಾಸನ: ಬಿಜೆಪಿ ಉಪಾಧ್ಯಕ್ಷ ಇದಾನಲ್ಲ ಅವನು ಥರ್ಡ್ ಕ್ಲಾಸ್. ಆತ ಬಿಜೆಪಿ ಉಪಾಧ್ಯಕ್ಷ ಆಗಲಿಕ್ಕೆ ಅನ್ ಫಿಟ್ ಎಂದು ಅರವಿಂದಲಿಂಬಾವಳಿ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಜೆಡಿಎಸ್ ಮತ್ತು ಬಿಜೆಪಿ ವಿಲೀನ ಆಗುವ ಪ್ರಶ್ನೆಯೇ ಇಲ್ಲ. ದೇವೇಗೌಡರು ಬದುಕಿರುವವರೆಗೆ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ. ರಾಷ್ಟ್ರೀಯ ಪಕ್ಷಕ್ಕೆ ಹೀಗೆ ಹೇಳಿಕೆ ಶೋಭೆ ತರುವಂತಹದ್ದಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿವೆ ಹೊರತು ಬೇರೆ ಇನ್ಯಾವುದಕ್ಕೂ ಅಲ್ಲ. ಇಂತಹ ಹೇಳಿಕೆಗಳಿಂದ ಜೆಡಿಎಸ್ ಹೆದರುವುದಿಲ್ಲ ಎಂದರು.

    ಜನವರಿಯ ನಂತರ ಪಕ್ಷ ಎಂದರೇನು ಎಂದು ತೋರಿಸುತ್ತೇವೆ. ಕುಮಾರಸ್ವಾಮಿ ಮತ್ತು ದೇವೇಗೌಡರ ಜೊತೆ ಮಾತನಾಡಿದ್ದೇನೆ. ಯಾವುದೇ ಸರ್ಕಾರ ಬಂದರೂ ದೇವೇಗೌಡರ ಕುಟುಂಬಕ್ಕೆ ಕಿರುಕುಳ ನೀಡೋದು ಹೊಸತೇನಲ್ಲ. ಆದರೆ ನಾವು ಸರ್ಕಾರಕ್ಕೆ ತೊಂದರೆ ಯಾಕೆ ಕೊಡಬೇಕೆಂದು ಸುಮ್ಮನಾಗಿದ್ದೆವು ಅಷ್ಟೆ. 2023ಕ್ಕೆ ನಾವು ಏನು ಅಂತ ತೋರಿಸುತ್ತೇವೆ. ಹೆದರಿಕೊಂಡು ಎಲ್ಲಿಗೂ ಹೋಗುವುದಿಲ್ಲ. ನಮ್ಮ ಕಾರ್ಯಕರ್ತರು ಇನ್ನೂ ರಾಜ್ಯದಲ್ಲಿದ್ದಾರೆ. ದ್ವೇಷದ ರಾಜಕಾರಣದಿಂದ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸಲಿದ್ದಾರೆ ಎಂದರು.

  • ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರಿಗೆ ಲಿಂಬಾವಳಿ ಕಾವಲು?

    ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರಿಗೆ ಲಿಂಬಾವಳಿ ಕಾವಲು?

    ಬೆಂಗಳೂರು: ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿರುವ 10 ಜನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿ ಇರಿಸಲಾಗಿದ್ದು, ಅವರ ಜವಾಬ್ದಾರಿಯನ್ನು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ವಹಿಸಿಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಆಪರೇಷನ್ ಕಮಲಕ್ಕೆ ಒಳಗಾಗಿ ಬಂಡಾಯ ಎದ್ದಿರುವ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಹೇಳಿದ್ದು, ಬಂಡಾಯ ಶಮನ ಮಾಡುವ ಯತ್ನ ನಡೆಸುತ್ತಿದ್ದಾರೆ. ಜೊತೆಗೆ ಬಿಜೆಪಿಯ ರೆಬೆಲ್ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಕಮಲ್‍ನಾಥ್ ಸರ್ಕಾರ ಮಾಡುತ್ತಿದೆ. ಇದನ್ನೂ ಓದಿ: ಆಪರೇಷನ್ ಮಧ್ಯಪ್ರದೇಶಕ್ಕೆ ಕರ್ನಾಟಕವೇ ಹೆಡ್ ಆಫೀಸ್

    ಬೆಂಗಳೂರಿನ ಸರ್ಜಾಪುರ ರಸ್ತೆಯ ಓಕ್‍ವುಡ್ ಹೋಟೆಲ್‍ನಲ್ಲಿ ಮಧ್ಯಪ್ರದೇಶದ ಸುಮಾರು 10 ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಇರಿಸಿದೆ ಎಂದು ಹೇಳಲಾಗುತ್ತಿದೆ. ಇವರ ಜವಾಬ್ದಾರಿಯನ್ನು ಅರವಿಂದ ಲಿಂಬಾವಳಿ ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್‍ನ ದಿನೇಶ್ ಗುಂಡೂರಾವ್ ಅವರು ಮಾತ್ರ ಬೆಂಗಳೂರಿಗೆ ಬಂದಿದ್ದ ಶಾಸಕರು ಭೋಪಾಲ್‍ಗೆ ವಾಪಸ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

    ಮಧ್ಯಪ್ರದೇಶದ ಕಾಂಗ್ರೆಸ್‍ನ ರೆಬಲ್ ಶಾಸಕ ಹರ್ದೀಪ್ ಸಿಂಗ್ ನಿನ್ನೆಯಷ್ಟೇ ಪತ್ರದ ಮೂಲಕ ಸ್ಪೀಕರ್ ಪ್ರಜಾಪತಿ ಅವರಿಗೆ ಪತ್ರದ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. ‘ಎರಡನೇ ಬಾರಿ ಜನರಿಂದ ಆಯ್ಕೆಯಾದರೂ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ಪ್ರತಿಯೊಬ್ಬ ಸಚಿವರೂ ತಾವು ಭ್ರಷ್ಟಾಚಾರದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಹರ್ದೀಪ್ ಸಿಂಗ್ ಪತ್ರದಲ್ಲಿ ತಿಳಿಸಿದ್ದರು.

  • ಗರ್ಭದಲ್ಲಿರೋ ಕಂದಮ್ಮನಿಗೂ ಕಾಡ್ತಿದೆ ‘ಗುಂಡಿಭೂತ’ದ ಭಯ

    ಗರ್ಭದಲ್ಲಿರೋ ಕಂದಮ್ಮನಿಗೂ ಕಾಡ್ತಿದೆ ‘ಗುಂಡಿಭೂತ’ದ ಭಯ

    – ಗುಂಡಿಗೆ ಹೆದರಿ ಮನೆಯಲ್ಲಿ ಕೂತ ಗರ್ಭಿಣಿ

    ಬೆಂಗಳೂರು: ಸಿಲಿಕಾನ್ ಸಿಟಿಯ ದೊಡ್ಡನಕುಂದಿಯ ಕುಂದೇನಹಳ್ಳಿ ರಸ್ತೆಯಲ್ಲಿ ಯಮರೂಪಿ ಗುಂಡಿಗಳು ಗರ್ಭಿಣಿಯರನ್ನು ರಸ್ತೆಗೆ ಬಾರದಂತೆ ಹೆದರಿಸಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಗರ್ಭಪಾತವಾಗುವುದು ಎಂದು ವೈದ್ಯರ ಎಚ್ಚರಿಕೆ ನೀಡಿದ್ದಾರೆ.

    ಮಗು ಪ್ರತಿ ತಾಯಿ ಕನಸು. ಮಗುವಿಗೆ ಕೊಂಚ ನೋವಾದರು ತಾಯಿ ಜೀವ ಸಹಿಸಲ್ಲ. ಅದರಲ್ಲೂ ಹೊಟ್ಟೆಯಲ್ಲಿರುವ ಮಗುವನ್ನ ತಾಯಿ ಕಣ್ಣಿನ ರೆಪ್ಪೆಯಂತೆ ಕಾಯ್ತಾಳೆ. ಹೀಗಿರುವಾಗ ಮಾರತಹಳ್ಳಿ ಸಮೀಪದ ದೊಡ್ಡನೆಕುಂದಿ ವಾರ್ಡ್‍ನ ಕುಂದೇನಹಳ್ಳಿ ಗೇಟ್ ಬಳಿ ರಸ್ತೆಯಲ್ಲಿ ಓಡಾಡಿದರೆ ನಿಮ್ಮ ಮಗು ಶಾಶ್ವತವಾಗಿ ಕಣ್ಣು ಬಿಡಲ್ಲ ಎಂದು ವೈದ್ಯರು ಬ್ಯಾಂಕ್ ಉದ್ಯೋಗಿ ಕಲ್ಯಾಣಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಗರ್ಭದಲ್ಲಿರೋ ಕಂದಮ್ಮನಿಗಾಗಿ ತಾಯಿ ಈಗ ಈ ರಸ್ತೆಯಲ್ಲಿ ಓಡಾಡುವುದನ್ನೇ ಬಿಟ್ಟು ಮನೆಯಲ್ಲಿಯೇ ಇದ್ದಾರೆ. ಇದನ್ನೂ ಓದಿ:ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳ ಪ್ರಾಣ ಹೋಯ್ತು – ಸಿಟಿ ರವಿಗೆ ಜನಸಾಮಾನ್ಯರ ತರಾಟೆ

    ಕಲ್ಯಾಣಿ ಅವರು ಸದ್ಯ 7 ತಿಂಗಳ ಗರ್ಭಿಣಿ. ಇವರಿಗೆ 2 ತಿಂಗಳು ಇರುವಾಗ ಈ ರಸ್ತೆಯಲ್ಲಿ ಓಡಾಡಿದ್ದರು. ಸಂಚರಿಸುವಾಗ ಗುಂಡಿಯಲ್ಲಿ ವಾಹನ ಇಳಿದಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ವೈದ್ಯರ ಬಳಿ ಹೋದಾಗ ಇಂಥ ಗುಂಡಿಯಲ್ಲಿ ವಾಹನ ಇಳಿಸಿದ್ದರಿಂದಲೇ ಈ ಅನಾಹುತವಾಗಿದೆ. ಮಗುವಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಅಂತ ಕೈಚೆಲ್ಲಿದ್ದರು. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರಿಂದ ಮಗು ಬದುಕಿದೆ. ಅಂದಿನಿಂದ ಈ ರಸ್ತೆಯಲ್ಲಿ ಕಲ್ಯಾಣಿ ಅವರು ಓಡಾಡೋದನ್ನೇ ಬಿಟ್ಟಿದ್ದಾರೆ. ಇದನ್ನೂ ಓದಿ:ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್

    ಈ ರಸ್ತೆಯಲ್ಲಿ 2 ಸಾವಿರ ಅರ್ಪಾರ್ಟ್ ಮೆಂಟ್ ನಿವಾಸಿಗಳಿದ್ದು, 2 ಖಾಸಗಿ ಶಾಲೆಗಳಿವೆ. ಈ ರಸ್ತೆಗೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ಆದರೆ ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ, ಕಾರ್ಪೋರೇಟರ್ ಶ್ವೇತಾ ವಿಜಯಕುಮಾರ್ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲದೆ ಈ ರಸ್ತೆಯ ಒಂದು ಭಾಗ ಖಾಸಗಿಯವರಿಗೆ ಸೇರಿರುವುದರಿಂದ ಈ ರೀತಿ ರಸ್ತೆ ಸರಿಪಡಿಸಲು ಬಿಬಿಎಂಪಿ ವಿಳಂಬನೀತಿ ಮಾಡುತ್ತಿದೆ ಅನ್ನೋದು ಸ್ಥಳೀಯರ ಆಕ್ರೋಶವಾಗಿದೆ. ಇದನ್ನೂ ಓದಿ: ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು

    ಖಾಸಗಿ ಹಾಗೂ ಸರ್ಕಾರಿ ಸಿಬ್ಬಂದಿಯ ಕಿತ್ತಾಟದ ಮಧ್ಯೆ ಜನ ಈ ಗುಂಡಿಗೆ ಭಯಬಿದ್ದು ಬದುಕು ಸಾಗಿಸುವಂತಾಗಿದೆ. ಹೊಟ್ಟೆಯೊಳಗಿನ ಕಂದಮ್ಮನಿಗೆ ಯಮನಂತೆ ಕಾಡುವ ಈ ಗುಂಡಿಗೆ ಬಿಬಿಎಂಪಿ ಇನ್ನಾದರೂ ಮುಕ್ತಿ ಕೊಡುತ್ತಾ ನೋಡಬೇಕಿದೆ.

  • ನಿಗದಿತ ಅವಧಿಯಲ್ಲಿ ಉಪಚುನಾವಣೆ ನಡೆದ್ರೆ ಬಿಜೆಪಿಯವರೇ ಅಭ್ಯರ್ಥಿಗಳು: ಅರವಿಂದ್ ಲಿಂಬಾವಳಿ

    ನಿಗದಿತ ಅವಧಿಯಲ್ಲಿ ಉಪಚುನಾವಣೆ ನಡೆದ್ರೆ ಬಿಜೆಪಿಯವರೇ ಅಭ್ಯರ್ಥಿಗಳು: ಅರವಿಂದ್ ಲಿಂಬಾವಳಿ

    – ಕೋರ್ ಕಮಿಟಿ ಸಭೆ ಬಳಿಕ ಮಾಜಿ ಸಚಿವರ ಹೇಳಿಕೆ
    – ಅನರ್ಹರಿಗೆ ಶಾಕ್ ಕೊಟ್ಟ ‘ಕಮಲ ಪಡೆ’

    ಬೆಂಗಳೂರು: ನಿಗದಿತ ಅವಧಿಯಲ್ಲಿ ಉಪ ಚುನಾವಣೆ ನಡೆದರೆ ಬಿಜೆಪಿಯವರೇ ಅಭ್ಯರ್ಥಿಗಳಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.

    ಅನರ್ಹ ಶಾಸಕರಿಗೆ ಉಪ ಚುನಾವಣೆಯ ಟಿಕೆಟ್ ನೀಡುವ ವಿಚಾರವಾಗಿ ಪಕ್ಷದೊಳಗೆ ವಿರೋಧ ಎದ್ದಿದೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಮನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ತುರ್ತು ಕೋರ್ ಕಮಿಟಿ ಸಭೆ ಕರೆದ್ದರು. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಆರ್.ಅಶೋಕ್, ಸಿ.ಟಿ.ರವಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು.

    ಸಭೆಯ ಬಳಿಕ ಮಾತನಾಡಿದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರವಿಂದ್ ಲಿಂಬಾವಳಿ, ಉಪ ಚುನಾವಣೆ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿದೆ. ನಮ್ಮ ಸಂಘಟನೆಯಿಂದ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಅನರ್ಹ ಶಾಸಕರ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಅವರ ಪರ ವಕೀಲರು ಚುನಾವಣೆ ಮುಂದೂಡುವಂತೆ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಉಪ ಚುನಾವಣೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಪಕ್ಷ ಬಂದಿಲ್ಲ ಎಂದು ತಿಳಿಸಿದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ ವಿರೋಧದ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಈಗಾಗಲೇ ಕೋರ್ಟಿನಲ್ಲಿ ಉಪ ಚುನಾವಣೆ ಮುಂದೂಡಲು ಮನವಿ ಮಾಡಿದ್ದಾರೆ. ಹಾಗಾಗಿ ನಾವು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡಿಲ್ಲ. ಒಂದು ವೇಳೆ ನಿಗದಿತ ಸಮಯದಲ್ಲಿ ಚುನಾವಣೆ ಬಂದರೆ ನಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

    ಉಪ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸನ್ನದ್ಧಗೊಳಿಸಲು ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ದಕ್ಷಿಣ ಕರ್ನಾಟಕದ ಉಪ ಚುನಾವಣಾ ಕ್ಷೇತ್ರಗಳ ಕಾರ್ಯಕರ್ತರ ಸಭೆ ನಡೆಸಲಾಗುತ್ತದೆ. ಬಳಿಕ ಸೆಪ್ಟೆಂಬರ್ 29ರಂದು ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಕ್ಷೇತ್ರಗಳ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಈ ವಿಚಾರವನ್ನು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

  • ಆಪರೇಷನ್ ಕಮಲದ ಕ್ಯಾಪ್ಟನ್ ಚೇಂಜ್- ಸಿದ್ಧವಾಗ್ತಿದೆಯಾ ಹೊಸ ಟೀಂ?

    ಆಪರೇಷನ್ ಕಮಲದ ಕ್ಯಾಪ್ಟನ್ ಚೇಂಜ್- ಸಿದ್ಧವಾಗ್ತಿದೆಯಾ ಹೊಸ ಟೀಂ?

    ಬೆಂಗಳೂರು: ಕಳೆದ ಒಂದು ವರ್ಷದಿಂದ ಆಪರೇಷನ್ ಕಮಲದ ಮಾತುಗಳು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿವೆ. ಇಷ್ಟು ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲೇ ಆಪರೇಷನ್ ಕಮಲ ನಡೆಯುತ್ತಿದೆ ಎನ್ನಲಾಗಿತ್ತು. ಯಡಿಯೂರಪ್ಪನವರು ಆಪರೇಷನ್ ಕಮಲದಲ್ಲಿ ಹಿನ್ನಡೆ ಕಾಣುತ್ತಿರುವ ಪರಿಣಾಮ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೊಸ ಕ್ಯಾಪ್ಟನ್ ನೇಮಕಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ರಾಜ್ಯ ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿವೆ.

    ಯಾರು ಹೊಸ ಕ್ಯಾಪ್ಟನ್?
    ಶಾಸಕ ಅರವಿಂದ್ ಲಿಂಬಾವಳಿ ಅವರನ್ನ ಆಪರೇಷನ್ ಕಮಲದ ನಾಯಕರನ್ನಾಗಿ ಮಾಡಲು ಅಮಿತ್ ಶಾ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟಿಯಲ್ಲಿಯೂ ಅರವಿಂದ್ ಲಿಂಬಾವಳಿ ಅವರ ಹೆಸರು ಮುಂಚೂಣಿಯಲ್ಲಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿರುವ ಅರವಿಂದ್ ಲಿಂಬಾವಳಿ ಅವರು ಆಪರೇಷನ್ ಕಮಲದ ಕುರಿತು ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಮತ್ತು ವಿಪಕ್ಷ ನಾಯಕರಾಗಿ ಬಿ.ಎಸ್.ಯಡಿಯೂರಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಬದಲಾವಣೆಯ ಕುರಿತು ಮಾತುಗಳು ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಅರವಿಂದ್ ಲಿಂಬಾವಳಿ ಅವರ ಹೆಸರನ್ನು ಯಡಿಯೂರಪ್ಪ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಡಿಸಿಎಂ ಆರ್ ಅಶೋಕ್ ಮತ್ತು ಶಾಸಕ ಸಿ.ಟಿ ರವಿ ಅವರ ಹೆಸರನ್ನು ಆರ್‍ಎಸ್‍ಎಸ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್ ಸಂತೋಷ್ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

  • ದಕ್ಷಿಣ ಕರ್ನಾಟಕದ ಮತದಾನ ದಿನವೇ ರಾಜ್ಯದಲ್ಲಿ ಪ್ರಧಾನಿ ಮೋದಿ ರ‍್ಯಾಲಿ

    ದಕ್ಷಿಣ ಕರ್ನಾಟಕದ ಮತದಾನ ದಿನವೇ ರಾಜ್ಯದಲ್ಲಿ ಪ್ರಧಾನಿ ಮೋದಿ ರ‍್ಯಾಲಿ

    ಬೆಂಗಳೂರು: ದಕ್ಷಿಣ ಕರ್ನಾಟಕದ ಮತದಾನ ದಿನವೇ ಪ್ರಧಾನಿ ನರೇಂದ್ರ ಮೋದಿ ಉತ್ತರ ಕರ್ನಾಟಕದಲ್ಲಿ ರ‍್ಯಾಲಿ ನಡೆಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾನ ಏಪ್ರಿಲ್ 18ರಂದು ನಡೆಯಲಿದೆ. ಅದೇ ದಿನವೇ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಎರಡು ಕಡೆಗಳಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಈ ಮೂಲಕ ರಾಜ್ಯದ 6 ಕಡೆಗಳಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

    ಎಲ್ಲೆಲ್ಲಿ ಮೋದಿ ರ‍್ಯಾಲಿ?:
    ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 8ರಂದು ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗ, 3ಕ್ಕೆ ಮೈಸೂರಿನ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಏಪ್ರಿಲ್ 13ರಂದು ಬೆಳಗ್ಗೆ ಮಂಗಳೂರು, ಸಂಜೆ ಬೆಂಗಳೂರಿನಲ್ಲಿ ಮೋದಿ ಸಮಾವೇಶ ನಡೆಯಲಿದೆ. ದಕ್ಷಿಣ ಕರ್ನಾಟಕದ ಮತದಾನದ ದಿನವಾದ ಏಪ್ರಿಲ್ 18ರಂದು ಬೆಳಗ್ಗೆ ಚಿಕ್ಕೋಡಿ, ಮಧ್ಯಾಹ್ನ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ.

    ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೂಡ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಏಪ್ರಿಲ್ 10, 12, 17 ಮತ್ತು 20 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ಮೂಲಕ ದಾವಣಗೆರೆ, ಹಾಸನ, ತುಮಕೂರು, ಕೋಲಾರ, ಕಲಬುರಗಿ, ವಿಜಯಪುರ, ಧಾರವಾಡ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಾರೆ ಎಂದು ತಿಳಿಸಿದರು.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಗರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾನಗರಗಳಲ್ಲಿ ಮೇಯರ್ ಇನ್ ಕೌನ್ಸಿಲ್ ಹೇಗೆ ಅಕೌಂಟಿಬಿಲಿಟಿ ಇರಬೇಕು ಅಂತ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಬಿಬಿಎಂಪಿ ಡಿವೈಡ್ ಮಾಡೋದಕ್ಕೆ ನಮ್ಮ ವಿರೋಧವಿತ್ತು. ಆದರೆ ಮೇಯರ್ ಇನ್ ಕೌನ್ಸಿಲ್‍ಗೆ ನಾವು ಬೆಂಬಲ ನೀಡಿದ್ದೇವು. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಯಾಕೆ ಕಾರ್ಯಗತಕ್ಕೆ ತರಲಿಲ್ಲ. ಸುಳ್ಳು ಹೇಳಿಕೆಗಳನ್ನು ರಾಹುಲ್ ಗಾಂಧಿ ಅವರು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.

    ಕಾಂಗ್ರೆಸ್‍ನವರು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಡೈರಿ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ನಮ್ಮ ಪಕ್ಷ ಅಭಿವೃದ್ಧಿ ವಿಚಾರಗಳ ಮೇಲೆ ನಾವು ಪ್ರಚಾರ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್‍ನವರು ಸುಳ್ಳು ಆರೋಪಗಳಿಂದ ಮತದಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ರಾಹುಲ್ ಗಾಂಧಿ ಸಲಹೆ ಪಡೆದು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ತಿದ್ದುಪಡಿ ಮಾಡುವ ಸಾಧ್ಯತೆ ಇದೆ. ಕೇಂದ್ರ ಬಿಜೆಪಿ ಸರ್ಕಾರವು ರೈತರ ಖಾತೆಗೆ ವಾರ್ಷಿಕವಾಗಿ 6 ಸಾವಿರ ರೂ. ಹಾಕುತ್ತಿದೆ. ಆದರೆ ಕಾಂಗ್ರೆಸ್‍ನವರು ಈಗ 72 ಸಾವಿರ ರೂ. ಪಾವತಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

    ನಾನು ಈಗಾಗಲೇ ಗೆದ್ದಿದ್ದೇನೆ. ಯಾರ ಪ್ರಚಾರವೂ ಅಗತ್ಯವಿಲ್ಲ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿರಲು ಸಾಧ್ಯವಿಲ್ಲ. ಆದರೂ ಯುವಕ, ಅತಿ ಉತ್ಸಾಹದಿಂದ ಹಾಗೇನಾದರೂ ಹೇಳಿದ್ದರೆ ಕರೆದು ಬುದ್ಧಿ ಹೇಳುತ್ತೇವೆ ಎಂದು ಅರವಿಂದ್ ಲಿಂಬಾವಳಿ ತಿಳಿಸಿದರು.

  • ಮಂಡ್ಯದಲ್ಲಿ ಸರ್ಕಾರದ ದುರುಪಯೋಗ ಹೆಚ್ಚಾಗ್ತಿದೆ – ಆಯೋಗಕ್ಕೆ ಸುಮಲತಾ ದೂರು

    ಮಂಡ್ಯದಲ್ಲಿ ಸರ್ಕಾರದ ದುರುಪಯೋಗ ಹೆಚ್ಚಾಗ್ತಿದೆ – ಆಯೋಗಕ್ಕೆ ಸುಮಲತಾ ದೂರು

    ಬೆಂಗಳೂರು: ಮಂಡ್ಯದಲ್ಲಿ ಸರ್ಕಾರದ ದುರುಪಯೋಗ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

    ಪಾರದರ್ಶಕ ಚುನಾವಣೆಗೆ ಆಯೋಗ ಹೆಚ್ಚಿನ ಅಧಿಕಾರಿಗಳನ್ನು ಹಾಕಬೇಕು. ಬೆದರಿಕೆಯ ಹೇಳಿಕೆಗಳು ಹೆಚ್ಚಾಗುತ್ತಿವೆ. ಇದರಿಂದ ಪ್ರಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಎಂದು ಹೇಳಿ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಯಾವುದೇ ಬೆಂಬಲಿಗರಿಲ್ಲದೆ ಸಂಬಂಧಿಯೊಬ್ಬರ ಜತೆ ಬಂದು ಸುಮಲತಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸುಮಲತಾ ಅಂಬರೀಶ್‍ಗೆ ಭದ್ರತೆ ಕೊಡಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‍ಗೆ ಟ್ವೀಟ್ ಮೂಲಕ ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಮನವಿ ಮಾಡಿಕೊಂಡಿದ್ದಾರೆ. ಲಿಂಬಾವಳಿ ಅವರ ಟ್ವೀಟ್ ಅನ್ನು ಸುಮಲತಾ ಅವರು ಮೆಚ್ಚಿ ಲೈಕ್ ಮಾಡಿದ್ದಾರೆ.

    ರಾಜನಾಥ್ ಸಿಂಗ್ ಅವರೇ ದಯಮಾಡಿ ಸುಮಲತಾ, ಯಶ್ ಹಾಗೂ ದರ್ಶನ್ ಅವರಿಗೆ ಭದ್ರತೆ ನೀಡಿ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಾಜಕೀಯ ಸರ್ವಾಧಿಕಾರ ಆಡಳಿತ ಮಾಡುತ್ತಿದೆ. ಜನರ ಸಂವಿಧಾನಾತ್ಮತ ಹಕ್ಕುಗಳು ಅಪಾಯದಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಹಲವು ಬಿಜೆಪಿ ನಾಯಕರು ಹಾಗೂ ಸುಮಲತಾ ಬೆಂಬಲಿಗರು ರೀ-ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

  • ಯುಪಿಎ ಸರ್ಕಾರ ಉಗ್ರರಿಗೆ ಬಿರಿಯಾನಿ ಕಳುಹಿಸಿಕೊಟ್ಟಿತ್ತು: ಅರವಿಂದ ಲಿಂಬಾವಳಿ

    ಯುಪಿಎ ಸರ್ಕಾರ ಉಗ್ರರಿಗೆ ಬಿರಿಯಾನಿ ಕಳುಹಿಸಿಕೊಟ್ಟಿತ್ತು: ಅರವಿಂದ ಲಿಂಬಾವಳಿ

    – ಏಕವಚನದಲ್ಲಿ ಮಾತನಾಡಿದ್ದ ಸಿಎಂಗೆ ಆರ್.ಅಶೋಕ್ ತಿರುಗೇಟು

    ಬೆಂಗಳೂರು: ಕಾಶ್ಮೀರದ ಹಜರತ್ ಬಾಲ್ ದರ್ಗಾದಲ್ಲಿ ಉಗ್ರರು ಅಡಗಿಕೊಂಡಿದ್ದಾಗ ಅಂದಿನ ಯುಪಿಎ ಸರ್ಕಾರ ಉಗ್ರರಿಗೆ ಬಿರಿಯಾನಿ ಕಳುಹಿಸಿಕೊಟ್ಟಿತ್ತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಯುಪಿಎ ಕಾಶ್ಮೀರದ ಪ್ರತ್ಯೇಕವಾದಿ ನಾಯಕರಿಗೆ ಗನ್ ಮ್ಯಾನ್‍ಗಳಿಂದ ಭದ್ರತೆ ಒದಗಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕವಾದಿ ನಾಯಕರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದಿದ್ದಾರೆ. ಅಷ್ಟೇ ಅಲ್ಲದೇ ಉಗ್ರರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

    ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಜನರನ್ನು ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವು ಅಕ್ರಮ ಬಾಂಗ್ಲಾ ವಲಸಿಗರಿಗೆ ಚುನಾವಣಾ ಗುರುತಿನ ಚೀಟಿ ಕೊಟ್ಟು, ಮತದಾರ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ ಎಂದು ದೂರಿದರು.

    ಬಿಜೆಪಿ ಮುಖಂಡ ಆರ್.ಅಶೋಕ್ ಅವರು ಮಾತನಾಡಿ, ಸಿಎಂ ಕುಮಾರಸ್ವಾಮಿ ಅವರು ಮಂಡಿಸಿರುವ ಎರಡು ಬಜೆಟ್‍ಗಳು ಹಾಸನ ಜಿಲ್ಲೆಯ ಹೊಳೆನರಸೀಪುರದ ಸುತ್ತಲೇ ಗಿರಗಿಟ್ಲೆ ಹೊಡೆಯುತ್ತಿವೆ. ಕರ್ನಾಟಕ ಅಂದ್ರೆ ರಾಮನಗರ ಮತ್ತು ಹೊಳೆನರಸೀಪುರ ಮಾತ್ರ ಎಂದೇ ಸಿಎಂ ಭಾವಿಸಿದ್ದಾರೆ. ತಾವು ಅಧಿಕಾರಕ್ಕೆ ಬರಲು ರಾಜ್ಯದ ಕಾರಣರಲ್ಲ. ನಮ್ಮ ತಂದೆ ಎಚ್.ಡಿ.ದೇವೇಗೌಡ ಅವರು ಮಾಡಿದ ಪೂಜೆ-ಪುನಸ್ಕಾರ, ಮಾಟ-ಮಂತ್ರಗಳೇ ಕಾರಣವೆಂದು ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್ ಹಿರಿಯ ಮುಖಂಡ ಶರದ್ ಪವಾರ್ ಅವರ ಮೊಮ್ಮಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ. ಹೀಗಾಗಿ ಅವರು ಚುನಾವಣಾ ಕಣದಿಂದಲೇ ಹಿಂದೆ ಸರಿದರು. ಇಂತಹ ಆಲೋಚನೆ ದೇವೇಗೌಡ ಅವರಿಗೆ ಬರಲೇ ಇಲ್ಲ. ದೇವೇಗೌಡರ ಕುಟುಂಬ ಕಣ್ಣೀರಿಗೆ ಬ್ರಾಂಡ್ ಆಗಿದೆ. ದೇವೇಗೌಡ ಅವರು ಮಕ್ಕಳು, ಮೊಮ್ಮಕ್ಕಳ ವಿಷಯಕ್ಕೆ ಮಾತ್ರ ಕಣ್ಣೀರು ಹರಿಸುತ್ತಾರೆ. ಆದರೆ ಬೇರೆಯವರ ನೋವಿಗೆ ಯಾಕೆ ಅಳುವುದಿಲ್ಲ ಎಂದು ಕಿಡಿಕಾರಿದರು.

    ನಮ್ಮ ಕ್ಯಾಪ್ಟನ್, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಫಿಕ್ಸ್ ಆಗಿದೆ. ಆದರೆ ಪ್ರತಿಪಕ್ಷಗಳಿಂದ ಪ್ರಧಾನಿ ಅಭ್ಯರ್ಥಿ ಯಾರು? ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಬಿಎಸ್‍ಪಿ ನಾಯಕಿ ಮಾಯಾವತಿ ಇಲ್ಲವೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಅಭ್ಯರ್ಥಿಯೇ? ಇದೇ ತಮ್ಮ ಕೊನೆಯ ಚುನಾವಣೆ ಎಂದು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿರುವ ದೇವೇಗೌಡ ಅವರೇ? ಎಂದು ಮಹಾಮೈತ್ರಿ ನಾಯಕರನ್ನು ಆರ್.ಅಶೋಕ್ ಕುಟುಕಿದರು.

    ಏಕವಚನದಲ್ಲಿಯೇ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ ಆರ್.ಅಶೋಕ್ ಅವರು, ನಾವು ಕುಮಾರಸ್ವಾಮಿ ಅವರಿಂದ ಪಾಠ ಕಲಿಯಬೇಕಿಲ್ಲ. ಮೈತ್ರಿ ಸರ್ಕಾರ ಇದ್ದು ಸತ್ತಂತಾಗಿದೆ. ಆತ್ಮಹತ್ಯೆಗೆ ಶರಣಾಗಿದ್ದ ಮಂಡ್ಯ, ಕೋಲಾರ ರೈತರ ಮನೆಗೆ ನಾವು ಮೊದಲು ಹೋಗಿದ್ದವು. ಮೃತ ರೈತರಿಗೆ ಸಾಂತ್ವನ ಹೇಳಿದ ಬಂದ ಬಳಿಕ ಸಿಎಂ ಕುಮಾರಸ್ವಾಮಿ ಹೋಗಿ ಬಂದರು. ಸಿಎಂಗೆ ಅಧಿಕಾರದ ಮದವಿದೆ. ಹೀಗಾಗಿ ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ತಿರುಗೇಟು ನೀಡಿದರು.

    ಬೆಂಗಳೂರು ಲೋಕಸಭಾ ಕ್ಷೇತ್ರಕ್ಕೆ ದೇವೇಗೌಡ ಅವರು ಯಾಕೆ ಬರುತ್ತಾರೆ ಎಂದು ಆಶ್ಚರ್ಯವಾಗುತ್ತಿದೆ. ಬಿಜೆಪಿ ಸರ್ಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಯೋಜನೆ ನೀಡಿದೆ. ಆದರೆ ಎಚ್.ಡಿ.ದೇವೇಗೌಡ ಅವರು ಬೆಂಗಳೂರಿಗೆ ಏನೂ ಮಾಡಿಲ್ಲ. ಹೀಗಾಗಿ ಬೆಂಗಳೂರಿನ ಮೂರಕ್ಕೆ ಮೂರೂ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಇದರಿಂದಾಗಿ ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲ್ಲವೆಂದು ಅನಿಸುತ್ತದೆ ಎಂದು ಹೇಳಿದರು.

    ಮಂಡ್ಯ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬೇಸರ ತಂದಿದೆ. ಜೆಡಿಎಸ್‍ಗೆ ಒಬ್ಬ ಸ್ಥಳೀಯ ಕಾರ್ಯಕರ್ತ ಸಿಗಲಿಲ್ವಾ ಎನ್ನುವಂತಾಗಿದೆ. ಮತ್ತೊಂದೆಡೆ ಸುಮಲತಾ ಅವರು ಜನರ ಅಭಿಪ್ರಾಯದ ಮೇಲೆ ಸ್ಪರ್ಧೆ ಮಾಡುತ್ತಿದ್ದಾರೆ. ಕಾವೇರಿ ನೀರಿಗಾಗಿ ಅಂಬರೀಶ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುಮಲತಾ ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ. ಈ ಕುರಿತು ಅವರ ಜೊತೆಗೆ ನಾನು ಚರ್ಚೆ ಮಾಡಿದ್ದೇನೆ. ಅಷ್ಟೇ ಅಲ್ಲದೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಜೊತೆಗೆ ಚರ್ಚೆ ಮಾಡಿ, ನಮ್ಮ ಪಕ್ಷದ ನಿರ್ಧಾರ ಪ್ರಕಟಿಸುತ್ತದೆ ಎಂದರು.

    ಹಾಸನ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಅಯ್ಕೆ ವಿಚಾರವಾಗಿ ಮಾತನಾಡಿದ ಆರ್.ಅಶೋಕ ಅವರು, ಮಾಜಿ ಸಚಿವ ಎ.ಮಂಜು ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಸ್ಥಳೀಯರಿಗೆ ಕೊಡಬೇಕು ಎಂಬ ಆಗ್ರಹವೂ ಇದೆ. ಈ ಸಂಬಂಧ ಎರಡು ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv