Tag: ಅಮೇಥಿ

  • ರಾಹುಲ್ ಗಾಂಧಿ ಮುಂದಿನ ಬಾರಿ ನೆರೆಯ ದೇಶಗಳಿಂದ ಸ್ಪರ್ಧಿಸಬೇಕು: ಪಿಯೂಷ್ ಗೋಯಲ್

    ರಾಹುಲ್ ಗಾಂಧಿ ಮುಂದಿನ ಬಾರಿ ನೆರೆಯ ದೇಶಗಳಿಂದ ಸ್ಪರ್ಧಿಸಬೇಕು: ಪಿಯೂಷ್ ಗೋಯಲ್

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಂದಿನ ಚುನಾವಣೆಯ ವೇಳೆ ನೆರೆಯ ರಾಷ್ಟ್ರಗಳಿಂದ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪಿಯುಷ್ ಗೋಯಲ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಈ ಬಾರಿ ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ಅಮೇಥಿ ಹಾಗೂ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸೋಲುತ್ತಾರೆ. ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿಯವರು ರಾಹುಲ್ ಗಾಂಧಿ ಅವರನ್ನು ಸೋಲಿಸುತ್ತಾರೆ. ಹೀಗಾಗಿ ಅವರು ಮುಂದಿನ ಚುನಾವಣೆಗಾಗಿ ಪಕ್ಕದ ದೇಶದಲ್ಲಿ ಯಾವುದಾದರೂ ಕ್ಷೇತ್ರವನ್ನು ಹುಡುಕಿಕೊಳ್ಳಬೇಕು ಎಂದು ಲೇವಡಿ ಮಾಡಿದ್ದಾರೆ. ಇದನ್ನು ಓದಿ: ರಾಹುಲ್ ಗಾಂಧಿ ಪೌರತ್ವದ ವಿವಾದ? ನಾಮಪತ್ರ ಪರಿಶೀಲನೆ ಮುಂದೂಡಿದ ಆಯೋಗ

    ರಾಹುಲ್ ಗಾಂಧಿ ಅವರಿಗೆ ಎಡಪಕ್ಷಗಳ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಹೀಗಾಗಿ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಡಪಕ್ಷದ (ಸಿಪಿಐ) ಅಭ್ಯರ್ಥಿ ವಿರುದ್ಧ ಸೋಲುತ್ತಾರೆ ಎಂದರು.

    ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹಾಗೂ ರಾಹುಲ್ ಗಾಂಧಿ ಜೊತೆಯಾಗಿ ನಿಂತಿರುವ ಕೆಲವು ಫೋಟೋಗಳನ್ನು ನೋಡಿದ್ದೇನೆ. ಅಮೇಥಿಯಲ್ಲಿ ಸೋಲಿನ ಭಯ ಕಾಡಿದ್ದರಿಂದ ವಯನಾಡುಗೆ ಹೋದರು. ಅಲ್ಲಿ ಸಿಪಿಐ ವಿರುದ್ಧ ಮಾತನಾಡದೇ, ಟೀಕೆ ಮಾಡದೇ ಹೆದರಿದ್ದಾರೆ ಎಂದು ವ್ಯಂಗ್ಯವಾಡಿದರು.

    ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರಿಗೆ ಭೋಪಾಲ್ ಟಿಕೆಟ್ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚೌಹಾನ್ ಹೇಳಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪಿಯುಷ್ ಗೋಯಲ್ ಅವರು, ಪೃಥ್ವಿರಾಜ್ ಚೌಹಾನ್ ಅವರೇ ಮೊದಲು ಕ್ಷಮೆ ಕೇಳಬೇಕು. ಅವರು ಹಿಂದೂಗಳನ್ನು ಉಗ್ರರು ಎಂದು ಹೇಳಿಕೆ ನೀಡಿ, ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದು ತಿರುಗೇಟು ನೀಡಿದರು.

  • ರಾಹುಲ್ ಗಾಂಧಿ ಪೌರತ್ವದ ವಿವಾದ? ನಾಮಪತ್ರ ಪರಿಶೀಲನೆ ಮುಂದೂಡಿದ ಆಯೋಗ

    ರಾಹುಲ್ ಗಾಂಧಿ ಪೌರತ್ವದ ವಿವಾದ? ನಾಮಪತ್ರ ಪರಿಶೀಲನೆ ಮುಂದೂಡಿದ ಆಯೋಗ

    ನವದೆಹಲಿ: ಅಮೇಥಿ ಚುನಾವಣಾ ಅಧಿಕಾರಿ ರಾಮ್ ಮನೋಹರ್ ಮಿಶ್ರಾ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಮಪತ್ರ ಪರಿಶೀಲನೆ ದಿನಾಂಕವನ್ನು ಏಪ್ರಿಲ್ 22ಕ್ಕೆ ಮುಂದೂಡಿದ್ದಾರೆ.

    ಪಕ್ಷೇತರ ಅಭ್ಯರ್ಥಿ ದ್ರುವ ಲಾಲ್ ಎಂಬವರು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ದಾಖಲೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದ್ರುವ್ ಲಾಲ್ ಪರ ವಕೀಲ ರವಿ ಪ್ರಕಾಶ್ ಅವರು, ರಾಹುಲ್ ನಾಮಪತ್ರದ ದಾಖಲೆಗಳಲ್ಲಿ ಕೆಲ ಮೂಲಭೂತ ಪ್ರಶ್ನೆಗಳು ಉದ್ಭವವಾಗಿದೆ ಎಂದಿದ್ದಾರೆ.

    ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ಚುನಾವಣಾಯಲ್ಲಿ ಸ್ಪರ್ಧೆಗೆ ಅವಕಾವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

    ರಾಹುಲ್ ಗಾಂಧಿ ಅವರು ಯಾವ ಆಧಾರದ ಮೇಲೆ ಬ್ರಿಟಿಷ್ ಪ್ರಜೆ ಆಗಿದ್ದಾರೆ? ಈಗ ಭಾರತೀಯ ಪೌರತ್ವ ಹೇಗೆ ಪಡೆಕೊಂಡಿದ್ದಾರೆ? ಈ ಬಗ್ಗೆ ಸ್ಪಷ್ಟತೆ ಬೇಕು ಎಂಬುವುದು ರವಿ ಪ್ರಕಾಶ್ ಅವರ ಮನವಿ ಆಗಿದೆ. ಅಲ್ಲದೇ 2003-09 ವರೆಗಿನ ಅವಧಿಯಲ್ಲಿ ಯುಕೆ ಕಂಪನಿ ಬಗೆಗಿನ ಆದಾಯದ ಬಗ್ಗೆ ಚುನಾವಣಾ ನಾಮಪತ್ರದಲ್ಲಿ ಮಾಹಿತಿ ನೀಡಿಲ್ಲ ಎಂದು ದೂರಿದ್ದಾರೆ.

    ಇದೇ ವೇಳೆ ರಾಹುಲ್ ಗಾಂಧಿ ಅವರ ಶೈಕ್ಷಣಿಕ ಪ್ರಮಾಣ ಪತ್ರದ ಬಗ್ಗೆಯೂ ಸಂದೇಹವನ್ನು ವ್ಯಕ್ತಪಡಿಸಿದ್ದು, ಪ್ರಮಾಣ ಪತ್ರದಲ್ಲಿ ರಾಹುಲ್ ವಿಂಚಿ ಎಂಬ ಹೆಸರಿದ್ದು, ರಾಹುಲ್ ಗಾಂಧಿ ಎಂದು ನಮೂದಿಸಿಲ್ಲ. ರಾಹುಲ್ ವಿಂಚಿ, ಗಾಂಧಿ ಇಬ್ಬರು ಒಬ್ಬರೇ ಎಂಬುವುದು ಸ್ಪಷ್ಟವಾಗಬೇಕು ಎಂದಿದ್ದಾರೆ. ರಾಹುಲ್ ಗಾಂಧಿ ಅವರ ಸ್ವಕ್ಷೇತ್ರ ಅಮೇಥಿಯಾಗಿದ್ದು, ಮೇ 6 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಮೇ 23ಕ್ಕೆ ಫಲಿತಾಂಶ ಲಭ್ಯವಾಗಲಿದೆ.

  • ರಾಹುಲ್ ತಲೆಯ ಮೇಲೆ ಬಿದ್ದಿದ್ದು ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಲೈಟ್!

    ರಾಹುಲ್ ತಲೆಯ ಮೇಲೆ ಬಿದ್ದಿದ್ದು ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಲೈಟ್!

    – ಅಮೇಥಿ ರ್ಯಾಲಿ ಮೇಲೆ ಭದ್ರತಾ ಲೋಪ – ಕಾಂಗ್ರೆಸ್ ಆರೋಪ
    – ಕಾಂಗ್ರೆಸ್ಸಿನಿಂದ ಯಾವುದೇ ಪತ್ರ ಬಂದಿಲ್ಲ
    – ಮಾಧ್ಯಮಗಳ ವರದಿ ಆಧಾರಿಸಿ ಗೃಹ ಸಚಿವಾಲಯದಿಂದ ಸ್ಪಷ್ಟನೆ

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಅಪಾಯವಿದ್ದು, ರ್ಯಾಲಿ ವೇಳೆ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ಬರೆದ ಪತ್ರಕ್ಕೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

    ರಾಹುಲ್ ಗಾಂಧಿಗೆ ನೀಡಲಾದ ಭದ್ರತೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ನಮಗೆ ಕಾಂಗ್ರೆಸ್ಸಿನಿಂದ ಯಾವುದೇ ಪತ್ರ ಬಂದಿಲ್ಲ. ಆದರೂ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿ ಬಳಿಕ ಮಾತನಾಡುತ್ತಿದ್ದ ಸಂದರ್ಭದಲ್ಲಿ 7 ಬಾರಿ ಅವರ ಮೇಲೆ ಲೇಸರ್ ಗ್ರೀನ್ ಲೈಟ್ ಬಿದ್ದಿದೆ ಎಂದು ವರದಿಯಾಗಿದೆ. ಆದರೆ ಈ ಲೇಸರ್ ಲೈಟ್ ಎಐಸಿಸಿಯ ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಕ್ಯಾಮೆರಾದ ಬೆಳಕು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

    ಕಾಂಗ್ರೆಸ್ ಮಾಡಿದ ಆರೋಪದಂತೆ ರಕ್ಷಣೆ ನೀಡುವಲ್ಲಿ ಯಾವುದೇ ರೀತಿಯ ಲೋಪ ಆಗಿಲ್ಲ. ಸೂಕ್ತ ವ್ಯವಸ್ಥೆಗಳನ್ನೇ ಸಿದ್ಧಪಡಿಸಿಕೊಂಡೇ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿತ್ತು. ವಿಡಿಯೋವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ವೇಳೆ ಅದು ಮೊಬೈಲ್ ಕ್ಯಾಮೆರಾ ಬೆಳಕು ಎಂಬುವುದು ತಿಳಿದು ಬಂದಿದೆ. ಎಐಸಿಸಿ ಛಾಯಾಗ್ರಾಹಕ ಮೊಬೈಲ್ ಫೋನ್ ಬಳಿಸಿ ಶೂಟ್ ನಡೆಸುತ್ತಿದ್ದದ್ದು ಖಚಿತವಾಗಿದ್ದು ವಿಶೇಷ ರಕ್ಷಣಾ ಪಡೆಯ ನಿರ್ದೇಶಕರು ಕೂಡ ಈ ವಿಚಾರವನ್ನು ತಿಳಿಸಿದ್ದಾರೆ ಸಚಿವಾಲಯ ಸ್ಪಷ್ಟನೆ ನೀಡಿದೆ.

    ಕಾಂಗ್ರೆಸ್ ಪತ್ರದಲ್ಲಿ ಏನಿತ್ತು?
    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಅಪಾಯವಿದ್ದು, ರ್ಯಾಲಿ ವೇಳೆ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ವರದಿಯಾಗಿತ್ತು.

    ಕಾಂಗ್ರೆಸ್ ಬರೆದಿರುವ ಪತ್ರದಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ 7 ಬಾರಿ ಅವರ ಮೇಲೆ ಲೇಸರ್ ಗ್ರೀನ್ ಲೈಟ್ ಬಿದ್ದಿದೆ ಎಂದು ಉಲ್ಲೇಖಿಸಿತ್ತು. ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ರಾಹುಲ್ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ತಿಳಿಸಿತ್ತು.

    ಲೇಸರ್ ಗ್ರೀನ್ ಲೈಟ್ ರಾಹುಲ್ ಗಾಂಧಿ ಅವರ ತಲೆ ಮೇಲೆ ಸುಮಾರು 7 ಬಾರಿ ಅತಿ ಕಡಿಮೆ ಅವಧಿಯಲ್ಲಿ ಬಿದ್ದಿರುವುದು ದೃಢವಾಗಿದೆ. ಅಲ್ಲದೇ ದೇವಾಲಯದ ಭೇಟಿ ಸಂದರ್ಭದಲ್ಲಿ ಅವರ ಎಡಭಾಗದ ತಲೆ ಮೇಲೆ 2 ಬಾರಿ ಲೇಸರ್ ಬೆಳಕು ಕಾಣಿಸಿತ್ತು ಎಂದು ವಿವರಿಸಲಾಗಿದೆ. ಈ ಪತ್ರದಲ್ಲಿ ಅಹ್ಮದ್ ಪಟೇಲ್, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಹಿ ಇತ್ತು.

  • ವಿಶೇಷ ಪೂಜೆ ಬಳಿಕ ನಾಮಪತ್ರ ಸಲ್ಲಿಸಿದ ಸ್ಮೃತಿ  ಇರಾನಿ

    ವಿಶೇಷ ಪೂಜೆ ಬಳಿಕ ನಾಮಪತ್ರ ಸಲ್ಲಿಸಿದ ಸ್ಮೃತಿ ಇರಾನಿ

    ಲಕ್ನೋ: ಸಚಿವೆ, ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಇಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

    ಸ್ಮೃತಿ ಇರಾನಿ ಅವರು ಪತಿ ಜುಬಿನ್ ಇರಾನಿ ಜೊತೆಗೆ ಪೂಜೆ ಸಲ್ಲಿಸಿದರು. ಬಳಿಕ ಅಮೇಥಿ ನಗರದಲ್ಲಿ ರೋಡ್ ಶೋ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸ್ಥಳೀಯ ಬಿಜೆಪಿ ಶಾಸಕರು, ಮುಖಂಡರು, ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು. ಸಾವಿರಾರು ಜನರು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಮೃತಿ ಇರಾನಿ ಪರ ಘೋಷಣೆ ಕೂಗಿದರು.

    ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸ್ಮೃತಿ ಇರಾನಿ ಅವರು, ಈ ಭಾಗದ ಜನರ ಸೇವೆ ಮಾಡಲು ಹೆಚ್ಚಿನ ಆಕಾಂಕ್ಷೆ ಹೊಂದಿದ್ದೇನೆ. ಹೀಗಾಗಿ ಮತದಾರರು ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ. ದೇಶದ ಜನರ ಆಶೀರ್ವಾದದಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮತ್ತೆ ಸ್ಪರ್ಧೆಗೆ ಇಳಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಪಕ್ಷದ ನಿರ್ಧಾರವಾಗಿದೆ. ಈ ಬಾರಿ ಅಮೇಥಿ ಕ್ಷೇತ್ರದಲ್ಲಿ ಪ್ರತಿಯೊಬ್ಬ ಕಾರ್ಯಕರು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಭಾರೀ ಪೈಪೋಟಿ ನಡೆಯಲಿದೆ ಎಂದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಥಿ ಕ್ಷೇತ್ರದಿಂದ ಮೂರು ಬಾರಿ ಜಯಗಳಿಸಿದ್ದಾರೆ. ಅವರು ಕೂಡ ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರಿಗೆ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಹೋದರಿ ಪ್ರಿಯಾಂಕ ಗಾಂಧಿ ಸಾಥ್ ನೀಡಿದ್ದರು.

    2014ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ, ರಾಹುಲ್ ಗಾಂಧಿ ವಿರುದ್ಧ ಸುಮಾರು 1 ಲಕ್ಷ ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಆದರೆ ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆ. ಇತ್ತ ಅಮೇಥಿ ಲೋಕಸಭಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಮೃತಿ ಇರಾನಿ ಅವರು ಈ ಬಾರಿ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹೀಗಾಗಿ ರಾಹುಲ್ ಗಾಂಧಿ ಅವರು ಅಮೇಥಿ ಜೊತೆಗೆ ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ ಎನ್ನುವ ವಿಚಾರ ಚರ್ಚೆಯಾಗುತ್ತಿದೆ.

  • ಅಮೇಥಿ ಜೊತೆ ಕೇರಳದ ವಯನಾಡಿನಲ್ಲೂ ರಾಹುಲ್ ಸ್ಪರ್ಧೆ ಅಧಿಕೃತ

    ಅಮೇಥಿ ಜೊತೆ ಕೇರಳದ ವಯನಾಡಿನಲ್ಲೂ ರಾಹುಲ್ ಸ್ಪರ್ಧೆ ಅಧಿಕೃತ

    ನವದೆಹಲಿ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುವುದು ಖಚಿತವಾಗಿದೆ.

    ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆಂಟನಿ, ಉತ್ತರ ಪ್ರದೇಶದ ಅಮೇಥಿ ಜೊತೆ ಕೇರಳದ ವಯನಾಡ್ ಕ್ಷೇತ್ರದಿಂದ ರಾಹುಲ್ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದರು.

    ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆಯ ಉದ್ದೇಶದಿಂದ ಕಾಂಗ್ರೆಸ್ ನಾಯಕರಾದ ರಣ್‍ದೀಪ್ ಸುರ್ಜೆವಾಲಾ ಸಮ್ಮುಖದಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳ ಮೇಲಿನ ಮಲತಾಯಿ ಧೋರಣೆಯ ವಿರುದ್ಧ ಧ್ವನಿ ಎತ್ತಲು ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿಸಿದರು.

    ರಾಹುಲ್ ಗಾಂಧಿಯವರ ಸ್ಪರ್ಧೆ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಥಿಯ ಜನರು ನಿಮ್ಮನ್ನು ತಿರಸ್ಕರಿಸಿದ್ದು, ಇಲ್ಲಿಯ ಸಿಂಹಾಸನ ಖಾಲಿ ಮಾಡಿ ಎಂದು ಭಾಗ್ ರಾಹುಲ್ ಭಾಗ್ ಎಂದು ವ್ಯಂಗ್ಯ ಮಾಡಿದ್ದರು. ಸ್ಮೃತಿ ಇರಾನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎ.ಕೆ.ಆಂಟನಿ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮತ್ತು ವಾರಣಾಸಿ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದರು. ಹಾಗಾದ್ರೆ ಅಂದು ಮೋದಿ ಅವರಿಗೆ ಗುಜರಾತಿನಲ್ಲಿ ಸೋಲಿನ ಭೀತಿ ಕಾಣಿಸಿತ್ತಾ? ಎರಡು ಕ್ಷೇತ್ರಗಳಲ್ಲಿ ಗೆಲುವಿನ ಬಳಿಕ ಗುಜರಾತ್ ಕ್ಷೇತ್ರವನ್ನು ತೊರೆದರು. ಸ್ಮೃತಿ  ಇರಾನಿ ಅವರನ್ನು ದೆಹಲಿಯ ಚಾಂದಿನಿ ಚೌಕ್ ಮತ್ತು ಅಮೇಥಿಯ ಕ್ಷೇತ್ರದ ಜನರು ತಿರಸ್ಕರಿಸಿದ್ದಾರೆ. ಇದೀಗ ಮತ್ತೊಮ್ಮೆ ಸ್ಮೃತಿ  ಇರಾನಿ ಸೋಲು ಕಾಣಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿ ಗೆಲವು ಕಾಣುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಹುಲ್ ಗಾಂಧಿ ಮಾರ್ಚ್ ನಲ್ಲಿ ಕೇರಳಕ್ಕೆ ಭೇಟಿ ನೀಡಿದ್ದಾಗ ಬೇಡಿಕೆ ಇಟ್ಟಿದ್ದೆವು. ಇತ್ತ ಕಾಂಗ್ರೆಸ್‍ನ ವಯನಾಡು ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿದ್ದು, ಅವರು ಕೂಡ ರಾಹುಲ್ ಗಾಂಧಿ ಅವರ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದರು ಎಂದು ಕೇರಳದ ಕಾಂಗ್ರೆಸ್ ಮುಖಂಡ ಚೆನ್ನಿತಾಲಾ ಹೇಳಿದ್ದರು.

    ಅಮೇಥಿ ನನ್ನ ಕರ್ಮಭೂಮಿ. ನಾನು ಎಂದೆಂದಿಗೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ರಾಹುಲ್ ಗಾಂಧಿ ಯಾವಾಗಲೂ ಹೇಳುತ್ತಾರೆ. ಕೇರಳದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ವಯನಾಡು ಕ್ಷೇತ್ರದಿಂದ ಸ್ಪರ್ಧಿಸುಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ರಾಹುಲ್ ಗಾಂಧಿ ಅವರು ಸಕಾರಾತ್ಮಕವಾಗಿ ಪರಿಗಣಿಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದರು.

    ಕೇರಳದ ಕಾಂಗ್ರೆಸ್ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್ ಚಾಂಡಿ ಹಾಗೂ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲಾ ಅವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿದ್ದರು.

  • ರಾಹುಲ್ ಗಾಂಧಿಗೆ ಸೋಲಿನ ಭಯ? – ಅಮೇಥಿ ಜೊತೆ ಕರ್ನಾಟಕದಿಂದ ಸ್ಪರ್ಧೆಗೆ ಒಲವು

    ರಾಹುಲ್ ಗಾಂಧಿಗೆ ಸೋಲಿನ ಭಯ? – ಅಮೇಥಿ ಜೊತೆ ಕರ್ನಾಟಕದಿಂದ ಸ್ಪರ್ಧೆಗೆ ಒಲವು

    ಬೆಂಗಳೂರು: ಲೋಕಸಭಾ ಚುನಾವಣೆ ಸಮರಕ್ಕೆ ದಿನ ಗಣನೆ ಆರಂಭವಾಗುತ್ತಿದಂತೆ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸೋಲಿನ ಭಯ ಕಾಡುತ್ತಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

    ಹೌದು, ರಾಹುಲ್ ಗಾಂಧಿ ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ. ಈ ಸುದ್ದಿಗೆ ಪೂರಕ ಎಂಬಂತೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚಾಮರಾಜನಗರದಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ರಾಜ್ಯದಿಂದ ಸ್ಪರ್ಧಿಸಬೇಕು ಎಂದು ಹೇಳಿಕೆ ನೀಡಿದ್ದರಿಂದ ಈ ಪ್ರಶ್ನೆ ಸೃಷ್ಟಿಯಾಗಿದೆ.

    ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ 2004ರಿಂದ ರಾಹುಲ್ ಗಾಂಧಿ ಅವರು ಸತತ ಮೂರು ಬಾರಿ ಆಯ್ಕೆ ಆಗಿದ್ದಾರೆ. ಆದರೆ ಈ ಬಾರಿ ವಿರೋಧಿ ಅಲೆ ಜಾಸ್ತಿ ಆಗಿದ್ದು ಈ ಬಾರಿ ಇಲ್ಲಿ ಕಠಿಣ ಸ್ಪರ್ಧೆ ನಡೆಯಲಿದೆ ಎಂದು ಈ ಹಿಂದೆಯೇ ಇಲ್ಲಿ ಸಮೀಕ್ಷೆ ನಡೆಸಿದ್ದ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿತ್ತು. ಹೀಗಾಗಿ ಈ ಬಾರಿ ರಾಹುಲ್ ಗಾಂಧಿ ಎರಡು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದು ಅಮೇಥಿಯಾದರೆ ಇನ್ನೊಂದು ಯಾವ ಕ್ಷೇತ್ರ ಎನ್ನುವ ಪ್ರಶ್ನೆಗೆ ಪೂರಕ ಎಂಬಂತೆ ಕೈ ನಾಯಕರು ಕರ್ನಾಟಕದಿಂದಲೇ ಸ್ಪರ್ಧಿಸಿ ಎಂದು ಆಹ್ವಾನ ಕೊಟ್ಟಿದ್ದು ಈಗ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಈ ಮೂಲಕ ರಾಹುಲ್ ಗಾಂಧಿ ಅವರಿಗೆ ಅಮೇಥಿ ಸೇಫ್ ಅಲ್ವಾ ಎಂಬ ಅನುಮಾನ ಮೂಡುವಂತೆ ಮಾಡಿದೆ.

    ಈಗಾಗಲೇ ರಾಹುಲ್ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧೆ ಮಾಡುವುದು ಖಚಿತವಾಗಿದ್ದು, ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಮೃತಿ ಇರಾನಿ ಅವರು ಭಾರೀ ಪೈಪೋಟಿ ನೀಡಿದ್ದರು. ಆದರೂ ರಾಹುಲ್ ಗೆದ್ದು ಬೀಗಿದ್ದರು. ಈ ಬಾರಿಯೂ ಬಿಜೆಪಿ ಅಂತಹದ್ದೇ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

    ಅಂತರ ಎಷ್ಟಿತ್ತು?
    2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ 4,08,651 ಮತಗಳನ್ನು ಪಡೆದಿದ್ದರೆ, ಸ್ಮೃತಿ ಇರಾನಿ ಅವರು 3,00,748 ಮತಗಳನ್ನು ಪಡೆದಿದ್ದರು. ಆ ಮೂಲಕ ರಾಹುಲ್ 1,07,903 ಮತಗಳ ಅಂತರದಿಂದ ಜಯ ಪಡೆದಿದ್ದರು. 2009 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ 4,64,195 ಮತಗಳನ್ನು ಪಡೆದಿದ್ದರೆ ಬಿಎಸ್‍ಪಿಯ ಆಶಿಶ್ ಶುಕ್ಲಾ 93,997 ಮತಗಳನ್ನು ಪಡೆದಿದ್ದರು. ಈ ಮೂಲಕ ರಾಹುಲ್ 3,70,198 ಮತಗಳ ಅಂತರದಿಂದ ಪ್ರಚಂಡವಾಗಿ ಜಯಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 37,570 ಮತಗಳು ಬಿದ್ದಿತ್ತು. ಆದರೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಸ್ಮೃತಿ ಇರಾನಿ 3 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಅಚ್ಚರಿ ಮೂಡಿಸಿದ್ದರು.

    ಈ ಬಾರಿ ಕಷ್ಟ ಯಾಕೆ?
    ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಲು ಪಣತೊಟ್ಟಿರುವ ಸ್ಮೃತಿ ಇರಾನಿ ಅವರು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅಲ್ಲದೇ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಅಮೇಥಿಯ ಎಕೆ 203 ರೈಫಲ್ ತಯಾರಿಕಾ ಕಾರ್ಖಾನೆಗೆ ಶಂಕು ಸ್ಥಾಪನೆಯನ್ನು ಪ್ರಧಾನಿ ಮೋದಿ ಅವರು ನೆರವೇರಿಸಿದ್ದರು. ಈ ವೇಳೆ ಉಗ್ರ ಧಮನಕ್ಕೆ ಮೇಡ್ ಇನ್ ಅಮೇಥಿ ರೈಫಲ್ ಯೋಧರಿಗೆ ಬಲ ನೀಡಲಿದೆ. ಇಷ್ಟು ದಿನ ಒಂದು ಕುಟುಂಬದಿಂದ ಗುರುತಿಸಿಕೊಳ್ಳುತ್ತಿದ್ದ ಈ ಕ್ಷೇತ್ರ ಇನ್ನು ರೈಫಲ್ ಹೆಸರಿನಲ್ಲಿ ಗುರುತಿಸಿಕೊಳ್ಳಲಿದೆ. ಇದೂವರೆಗೆ ನಾವು ಅಮೇಥಿ ಗೆದ್ದಿಲ್ಲ. ಆದರೆ ಈಗ ನಾವು ಜನರ ಹೃದಯ ಗೆದ್ದಿದ್ದೇವೆ ಎಂದು ಮೋದಿ ಭಾಷಣದಲ್ಲಿ ಪ್ರಸ್ತಾಪಿಸಿ ಚುನಾವಣಾ ರಣ ಕಹಳೆ ಮೊಳಗಿಸಿದ್ದರು. 2017ರ ವಿಧಾನಸಭಾ ಚುನಾವಣೆಯಲ್ಲಿ ಅಮೇಥೀ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. 3 ಬಿಜೆಪಿ ಗೆದ್ದಿದ್ದರೆ ಒಂದು ಕ್ಷೇತ್ರವನ್ನು ಎಸ್‍ಪಿ ಗೆದ್ದುಕೊಂಡಿತ್ತು.

    ಕೈ ನಾಯಕರು ಹೇಳಿದ್ದು ಏನು?
    ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ರಾಹುಲ್ ಗಾಂಧಿಯವರು ಕೇವಲ ಉತ್ತರ ಭಾರತದಿಂದ ಮಾತ್ರ ಸ್ಪರ್ಧೆ ಮಾಡುವುದಲ್ಲ. ದಕ್ಷಿಣ ಭಾರತದಿಂದಲೂ ಸ್ಪರ್ಧೆ ಮಾಡಲಿ. ಅದರಲ್ಲೂ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿ. ಈ ಹಿಂದೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ನಾವು ಆಯ್ಕೆ ಮಾಡಿದ್ದೇವು. ಈಗ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿ ಪ್ರಧಾನ ಮಂತ್ರಿಯನ್ನಾಗಿ ಮಾಡೋಣ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಮೇಡ್ ಇನ್ ಅಮೇಥಿ’ ಎಕೆ203 ರೈಫಲ್ – ಉಗ್ರ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ: ಪ್ರಧಾನಿ ಮೋದಿ

    ‘ಮೇಡ್ ಇನ್ ಅಮೇಥಿ’ ಎಕೆ203 ರೈಫಲ್ – ಉಗ್ರ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ: ಪ್ರಧಾನಿ ಮೋದಿ

    ಅಮೇಥಿ: ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಘರ್ಜಿಸಿದ್ದು, ಇನ್ನು ಮುಂದೇ ಅಮೇಥಿ ಒಂದು ಕುಟುಂಬ ಬದಲು ‘ಮೇಡ್ ಇನ್ ಅಮೇಥಿ ಎಕೆ-203’ ಹೆಸರನಿಂದ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಅಮೇಥಿಯ ಸಮಾವೇಶದಲ್ಲಿ ಮಾತನಾಡಿದ ಅವರು, ರಷ್ಯಾದ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ಕಲಾಶ್ನಿಕೋವ್ ರೈಫಲ್ಸ್ ಘಟಕದಲ್ಲಿ ಅತ್ಯಾಧುನಿಕ ಎಕೆ-203 ರೈಫಲ್‍ಗಳನ್ನು ಉತ್ಪಾದಿಸಲಾಗುತ್ತಿದೆ. ಈ ಘಟಕ ಭಯೋತ್ಪಾದಕರು ಮತ್ತು ಮಾವೋವಾದಿಗಳ ವಿರುದ್ಧ ಹೋರಾಡಲು ನಮ್ಮ ಯೋಧರಿಗೆ ಹೊಸ ಶಕ್ತಿ ನೀಡುತ್ತದೆ ಎಂದು ಹೇಳಿದರು.

    ಇತ್ತ ಇಂದು ಕೂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ನಡುವಿನ ರಫೇಲ್ ವಾರ್ ಮುಂದುವರಿಯಿತು. ಉತ್ತರ ಪ್ರದೇಶದ ರಾಹುಲ್ ಸ್ವಕ್ಷೇತ್ರ ಅಮೇಥಿಯ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ ನಡೆಸಿದರು. ಅಲ್ಲದೇ ಉಗ್ರರ ಧಮನಕ್ಕೆ ಮೇಡ್ ಇನ್ ಅಮೇಥಿ ನಮ್ಮ ಯೋಧರಿಗೆ ಬಲ ನೀಡಲಿದೆ ಎಂದು ಟಾಂಗ್ ಕೊಟ್ಟರು.

    ಅಮೇಥಿಯಲ್ಲಿ ಕಾರ್ಖಾನೆ ಸ್ಥಾಪನೆ ಮಾಡಲು 2007ರಲ್ಲೆ ಶಂಕು ಸ್ಥಾಪನೆ ಮಾಡಿ 2010 ರಲ್ಲಿ ಕಾರ್ಯಾಣೆಯ ಕಾಮಗಾರಿ ಆರಂಭವಾಗಲಿದೆ ಎಂದಿದ್ದರು. ಆದರೆ ಅಂದು ಇಲ್ಲಿ ಯಾವ ಶಸ್ತ್ರಸ್ತ್ರಗಳನ್ನು ಉತ್ಪಾದನೆ ಮಾಡಬೇಕೆಂದು ಅಂದಿನ ಸರ್ಕಾರ ನಿರ್ಧಾರ ಮಾಡಿಯೇ ಇರಲಿಲ್ಲ ಎಂದು ಮೋದಿ ಆರೋಪಿಸಿದರು. ಇದೇ ವೇಳೆ ಕಾರ್ಖಾನೆ ಸ್ಥಾಪನೆ ಮಾಡಲು ಸಹಕಾರ ನೀಡಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಅವರ ಕಾರ್ಯವನ್ನು ಮೆಚ್ಚಿ ಕೃತಜ್ಞನೆ ಸಲ್ಲಿಸಿದರು.

    7.62-39 ಎಂಎಂ ಕ್ಯಾಲಿಬರ್ ಎಕೆ-204 ಗನ್ ಗಳು ಎಕೆ-47 ಸರಣಿಯ ಅತ್ಯಾಧುನಿಕ ತಲೆಮಾರಿನ ಅಸ್ತ್ರಗಳಾಗಿವೆ. 7.50 ಲಕ್ಷ ಎಕೆ-203 ರೈಫಲ್ ಗಳ ಉತ್ಪಾದನೆಗೆ ರಷ್ಯಾ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಬಂದೂಕುಗಳನ್ನು ಭೂ ಸೇನೆ ಯೋಧರಿಗೆ ನೀಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 15 ವರ್ಷದಲ್ಲಿ ಅಮೇಥಿ ಸಿಂಗಾಪುರ ಆಗುತ್ತೆ: ರಾಹುಲ್ ಗಾಂಧಿ

    15 ವರ್ಷದಲ್ಲಿ ಅಮೇಥಿ ಸಿಂಗಾಪುರ ಆಗುತ್ತೆ: ರಾಹುಲ್ ಗಾಂಧಿ

    ಅಮೇಥಿ: ಇದೀಗ ಜನರು ಸಿಂಗಾಪುರ, ಕ್ಯಾಲಿಫೋರ್ನಿಯ ಕುರಿತು ಮಾತನಾಡುತ್ತಿದ್ದಂತೆಯೇ, ಇನ್ನು 10-15 ವರ್ಷಗಳಲ್ಲಿ ಅಮೇಥಿ ಬಗ್ಗೆ ಕೂಡ ಮಾತನಾಡುವಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಬಹಳಷ್ಟು ಹೊಸ ಪ್ರಾಜೆಕ್ಟ್ ಗಳನ್ನು ಅಮೇಥಿಯಿಂದ ಹೊರಗೆ ತೆಗೆದುಕೊಂಡು ಹೋಗಿದೆ. ಐಐಟಿ, ಮೆಗಾ ಫುಡ್ ಪಾರ್ಕ್, ಪೇಪರ್ ಮಿಲ್ ಅನ್ನು ಅಮೇಥಿಗೆ ತರಲು ಬಹಳ ಪ್ರಯತ್ನ ಪಟ್ಟಿದ್ದೆ. ಬಂದಿದ್ದರೆ ಬಹಳ ಮಂದಿ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಅಮೇಥಿಯ ಯುವಕರ ದೃಷ್ಟಿಯಿಂದ ಹೊಸ ಯೋಜನೆಗಳನ್ನು ತರಲು ಮತ್ತೊಮ್ಮೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಯುವಕರು ಉದ್ಯೋಗಸ್ಥರಾಗುವುದರ ಮೂಲಕ ದೇಶ ಅಭಿವೃದ್ಧಿಯನ್ನು ಕಾಣಬೇಕಿದೆ. ನೆಹರು, ವಾಜಪೇಯಿ ಅವರು ಭವಿಷ್ಯದ ಕುರಿತು ಮಾತನಾಡುತ್ತಿದ್ದರು. ಆದರೆ ಈಗಿನ ಪ್ರಧಾನಿಗಳು ಹಿಂದಿನ ವಿಚಾರವನ್ನು ಮಾತನಾಡಿ ದ್ವೇಷವನ್ನು ಹರಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    2009ರ ಲೋಕಸಭಾ ಚುನಾವಣೆಯಲ್ಲಿ 3.7 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ರಾಹುಲ್ ಗಾಂಧಿಯವರು, 2014ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ವಿರುದ್ಧ 1.07 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.

  • ಅಮೇಥಿ ಕ್ಷೇತ್ರಕ್ಕೆ ರೈಲು ಬಂದ ಕಥೆ ಹೇಳಿದ ಸ್ಮೃತಿ ಇರಾನಿ!

    ಅಮೇಥಿ ಕ್ಷೇತ್ರಕ್ಕೆ ರೈಲು ಬಂದ ಕಥೆ ಹೇಳಿದ ಸ್ಮೃತಿ ಇರಾನಿ!

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಮೇಥಿ ಕ್ಷೇತ್ರಕ್ಕೆ ರೈಲು ಬಂದಿದ್ದು ಹೇಗೆ ಎನ್ನುವುದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವೆ  ಸ್ಮೃತಿ ಇರಾನಿ ಹೇಳಿದ್ದಾರೆ.

    ಬೊಮ್ಮನಹಳ್ಳಿಯಲ್ಲಿ ಆಯೋಜನೆಗೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೇಥಿಯ ಬಿಜೆಪಿ ಕಚೇರಿಗೆ ಹಿರಿಯ ವ್ಯಕ್ತಿಯೊಬ್ಬರು ಮಗನ ಜೊತೆ ಬಂದಿದ್ದರು. ಈ ವೇಳೆ ಅವರ ಜೊತೆ ಮಾತನಾಡುತ್ತಿದ್ದಾಗ ಅವರು ಅಮೇಥಿ ಕ್ಷೇತ್ರಕ್ಕೆ ಬಂದ ರೈಲಿನ ಕಥೆಯನ್ನು ತಿಳಿಸಿದರು ಎಂದರು.

    “ನಾನು ನನ್ನ ತಂದೆ ಜೊತೆ ನೆಹರು ಭಾಷಣ ಕೇಳಲು ಹೋಗಿದ್ದೆ. ಭಾಷಣದಲ್ಲಿ ಮಾತನಾಡಿದ ನೆಹರು, ಅಮೇಥಿಗೆ ರೈಲು ಸಂಪರ್ಕ ಕೊಡಿಸುತ್ತೇನೆ. ನನಗೆ ಮತ ನೀಡಿ ಎಂದು ಜನರಲ್ಲಿ ಕೇಳಿಕೊಂಡರು. ತಂದೆ ಅವರಿಗೆ ಮತ ಹಾಕಿ ಗೆಲ್ಲಿಸಿದರು. ರೈಲು ಮಾತ್ರ ಬರಲಿಲ್ಲ. ನಂತರ ನನಗೆ ಮದುವೆ ಆಯಿತು. ಚುನಾವಣೆ ವೇಳೆ ಇಂದಿರಾ ಗಾಂಧಿ ಕೂಡ ಅದನ್ನೇ ಹೇಳಿ, ಚುನಾವಣೆಯಲ್ಲಿ ಗೆದ್ದರು. ಆದರೆ ರೈಲು ಮಾತ್ರ ಬರಲೇ ಇಲ್ಲ. ರಾಜೀವ್ ಗಾಂಧಿ ಅದೇ ಮಾತನ್ನು ಮುಂದುವರಿಸಿದರು. ಈಗ ರಾಹುಲ್ ಕೂಡ ಅದನ್ನೇ ಹೇಳುತ್ತಿದ್ದಾರೆ” ಎಂದು ಹಿರಿಯ ವ್ಯಕ್ತಿ ನನ್ನಲ್ಲಿ ವಿಚಾರ ಹೇಳಿದರು ಎಂದು ಸ್ಮೃತಿ ಇರಾನಿ ತಿಳಿಸಿದರು.

    ಆ ರೈಲು ಯೋಜನೆಯ ಆರಂಭಿಸಲು ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕಾಯಿತು. ಕಾಂಗ್ರೆಸ್ ನಾಯಕರು ರೈಲು ಹೆಸರಿನಲ್ಲಿ ಮತ ಹಾಕಿಸಿಕೊಂಡರೇ ವಿನಃ ಕೆಲಸ ಮಾಡಲಿಲ್ಲ. ಇದು ಕಾಂಗ್ರೆಸ್ ಆಡಳಿತ ವ್ಯವಸ್ಥೆ ಎಂದು ಹೇಳುವ ಮೂಲಕ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್, ಶಾಸಕ ಸತೀಶ್ ರೆಡ್ಡಿ, ಚಿತ್ರ ನಟಿ ತಾರಾ ಭಾಗಿಯಾಗಿದ್ದರು.

    2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ವಿರುದ್ಧ 1,07,903 ಮತಗಳ ಅಂತರದಿಂದ ಜಯಗಳಿಸಿದ್ದರು. ರಾಹುಲ್ ಗಾಂಧಿ 4,08,651 ಮತಗಳನ್ನು ಪಡೆದಿದ್ದರೆ, ಸ್ಮೃತಿ ಇರಾನಿ 3,00,748 ಮತಗಳನ್ನು ಪಡೆದಿದ್ದರು.

  • ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟರೆ 6 ತಿಂಗಳಲ್ಲಿ ದೇಶದ ಸಮಸ್ಯೆಗೆ ಪರಿಹಾರ: ರಾಹುಲ್ ಗಾಂಧಿ

    ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟರೆ 6 ತಿಂಗಳಲ್ಲಿ ದೇಶದ ಸಮಸ್ಯೆಗೆ ಪರಿಹಾರ: ರಾಹುಲ್ ಗಾಂಧಿ

    ಅಮೇಥಿ: ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು ಉದ್ಯೋಗ ಸೃಷ್ಟಿ ಮಾಡುವುದು ಬಿಟ್ಟು ಸಭೆಗಳಲ್ಲಿ ಕೇವಲ ಅಭಿವೃದ್ಧಿ ಮಾತುಗಳನ್ನಾಡಿ ತಾಳ್ಮೆ ಪರೀಕ್ಷೆ ಮಾಡಬೇಡಿ. ಸಮಯ ವ್ಯರ್ಥಮಾಡದೇ ನಿರುದ್ಯೋಗ ನಿರ್ಮೂಲನೆ ಮಾಡಿ ಉದ್ಯೋಗ ಕಲ್ಪಿಸಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶದ ಅಮೇಥಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಇತ್ತೀಚೆಗೆ ರಾಷ್ಟ್ರದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ಪ್ರಧಾನಿ ಮೋದಿ ಕೈಯಲ್ಲಿ ನಿಭಾಯಿಸುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಒಂದು ವೇಳೆ ಕುರ್ಚಿಯಿಂದ ಕೆಳಗಿಳಿದು ನಮಗೆ ಅಧಿಕಾರವನ್ನು ಹಸ್ತಾಂತರ ಮಾಡಿದರೆ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಕೇವಲ ಆರು ತಿಂಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುತ್ತದೆ. ಅಲ್ಲದೇ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಸುಮಾರು 16 ನಿಮಿಷಗಳ ಕಾಲ ಭಾಷಣ ಮಾಡಿದ ರಾಹುಲ್, ದೇಶದಲ್ಲಿ ಉದ್ಯೋಗ ಪ್ರಮಾಣ ಕ್ಷೀಣಿಸುತ್ತಿದೆ. ದೇಶದಲ್ಲಿ ಪ್ರತಿ ದಿನ 30 ಸಾವಿರ ಭಾರತೀಯರು ಉದ್ಯೋಗ ಹುಡುಕುತ್ತಿದ್ದಾರೆ. ಅದರಲ್ಲಿ ಕೇವಲ 400 ಜನರಿಗೆ ಮಾತ್ರ ಕೆಲಸ ಸಿಗುತ್ತಿದೆ. ಅದೇ ನೆರೆಯ ಚೀನಾ ಸರ್ಕಾರ ದಿನಕ್ಕೆ 50 ಸಾವಿರ ಜನರಿಗೆ ಉದ್ಯೋಗ ನೀಡುತ್ತಿದೆ. ಉದ್ಯೋಗ ಸೃಷ್ಟಿಯಲ್ಲಿ ಎನ್‍ಡಿಎ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಚುನಾವಣೆಯಲ್ಲಿ ಗೆಲ್ಲಲು ಮೋದಿ ಏನೆಲ್ಲಾ ಭರವಸೆಗಳನ್ನು ನೀಡಿದರು. ಆದರೆ ಇದುವರೆಗೂ ಒಂದು ಯೋಜನೆಯೂ ಸರಿಯಾದ ರೀತಿಯಲ್ಲಿ ಅನುಷ್ಟಾನವಾಗಿಲ್ಲ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್‍ಅಪ್ ನಂತಹ ಅಭಿವೃದ್ಧಿ ಕಾರ್ಯಗಳು ಜಾರಿಯಾದರೂ ಸಹ ನಿರುದ್ಯೋಗ ಮಾತ್ರ ನಿವಾರಣೆಯಾಗುತ್ತಿಲ್ಲ. ದೇಶದ ಶಕ್ತಿಯಾದ ಯುವಜನತೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ನೆಲಕ್ಕಚ್ಚುವಂತೆ ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದರು.

    ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತನಾಡಿ, ಪ್ರಧಾನಿ ಮೋದಿ ಸ್ವಚ್ಛ ಭಾರತ ಅಭಿಯಾನದ ಭ್ರಮೆಯಿಂದ ಹೊರ ಬರಬೇಕು. ಪ್ರತಿಯೊಬ್ಬರೂ ಕೈಯಲ್ಲಿ ಪೊರಕೆ ಹಿಡಿದರೆ ಸ್ವಚ್ಛ ಆದಾಗೆ ಆಗುತ್ತದೆ. ಅಲ್ಲದೇ ಪ್ರಧಾನಿ ಮೋದಿಯ ವಿಚಿತ್ರ ಯೋಜನೆಗಳ ಅನುಷ್ಟಾನ ಹಾಗೂ ಕೆಲಸದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈಗಲಾದರು ಜನಪರ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಸಲಹೆ ನೀಡಿದರು.

     

    ದೇಶದ ಜನರ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಪಡೆಯದೇ ಯೋಜನೆಗಳ ಅನುಷ್ಟಾನವಾಗುತ್ತಿದೆ. ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಆಹಾರ ಭದ್ರತೆ ಹಾಗೂ ಭೂಸ್ವಾಧೀನ ಮಸೂದೆಗಳಿಂದ ದೇಶಕ್ಕೆ ಒಳ್ಳೆದಾಗುತ್ತಿದೆ ಎಂದರು.