Tag: ಅಮೂಲ್ಯ ಲಿಯೋನಾ

  • ಇಮ್ರಾನ್ ಪಾಷಾ ಕಡೆಯ ಆಯೋಜಕರೇ ನನ್ನ ಕರೆದಿದ್ರು: ಅಮೂಲ್ಯ ಲಿಯೋನಾ

    ಇಮ್ರಾನ್ ಪಾಷಾ ಕಡೆಯ ಆಯೋಜಕರೇ ನನ್ನ ಕರೆದಿದ್ರು: ಅಮೂಲ್ಯ ಲಿಯೋನಾ

    ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ತನಿಖೆ ವೇಳೆ ಅಸಲಿ ವಿಚಾರವನ್ನ ಅಮೂಲ್ಯ ಲಿಯೋನಾ ಬಿಚ್ಚಿಟ್ಟಿದ್ದಾಳೆ.

    ಆಯೋಜಕರು ಕರಿಯದೇ ನಾನು ಹೇಗೆ ಕಾರ್ಯಕ್ರಮಕ್ಕೆ ಬರಲು ಆಗುತ್ತೆ? ನನ್ನನ್ನ ಸಿಎಎ ಕುರಿತಾದ ಸಭೆ ಇದೆ ಎಂದು ಆಹ್ವಾನಿಸಲಾಗಿತ್ತು. ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ ಅವರ ಕಡೆಯವರೊಬ್ಬರು ಕರೆದಿದ್ದರು. ಹಾಗೆಯೇ ನನಗೆ ಭಾಷಣ ಮಾಡಲೂ ಕೂಡ ಅನುಮತಿ ಕೊಟ್ಟಿದ್ದರು. ನಾನು ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿದ್ದೆ. ಈ ಹಿಂದೆ ಈ ರೀತಿಯ ಸಭೆಗಳಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದೆ. ನಾನು ಪಾಕ್ ಜಿಂದಾಬಾದ್ ಅಂತ ಹೇಳುವಾಗ ಆಯೋಜಕರು ಮೈಕ್ ಕಸಿದುಕೊಂಡರು. ಆದರೆ ನನಗೆ ಸಂಪೂರ್ಣ ಭಾಷಣ ಮಾಡಲು ಅವಕಾಶ ಕೊಟ್ಟಿಲ್ಲ. ಅವಕಾಶ ಕೊಟ್ಟಿದ್ದರೆ ನಾನು ಬೇರೆ ಏನೋ ಹೇಳುತ್ತಿದ್ದೆ, ಆಗ ಎಲ್ಲರಿಗೂ ಅರ್ಥವಾಗ್ತಿತ್ತು ಎಂದು ಅಮೂಲ್ಯ ತನಿಖೆ ವೇಳೆ ಹೇಳಿಕೊಂಡಿದ್ದಾಳೆ.

    ನಾನು ಭಾಷಣ ಮಾಡುವಾಗ ಮೈಕ್ ಕಸಿದುಕೊಂಡು ನನ್ನನ್ನು ಅರ್ಧಕ್ಕೆ ತಡೆಗಟ್ಟಿದ್ದರಿಂದ ಈ ರೀತಿ ಇಶ್ಯೂ ಕ್ರಿಯೇಟ್ ಆಗಿದೆ. ಹೀಗೆ ಅಸಲಿ ವಿಚಾರವನ್ನು ಬಾಯ್ಬಿಟ್ಟಿರುವ ಅಮೂಲ್ಯ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಸದ್ಯ ಆಕೆಯ ಹೇಳಿಕೆ ಆಧರಿಸಿ ಆಯೋಜಕರ ತೀವ್ರ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

    ನಾಲ್ಕು ದಿನಗಳ ಕಾಲ ಅಮೂಲ್ಯಳನ್ನು ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಶನಿವಾರ ಕೋರಮಂಗಲದ ನ್ಯಾಯಾಧೀಶರ ಮನೆಗೆ ಆಕೆಯನ್ನು ಹಾಜರುಪಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಮಾರ್ಚ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು.

    ಪಾಕ್ ಪರ ಘೋಷಣೆ ಕೂಗಿದ ನಂತರ 14 ದಿನಗಳ ಕಾಲ ಅಮೂಲ್ಯಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಮೂಲ್ಯಳ ಹೆಚ್ಚಿನ ವಿಚಾರಣೆ ಅವಶ್ಯಕತೆ ಇದ್ದ ಕಾರಣ ಎಸ್‍ಐಟಿ ತಂಡ ರಚನೆಯಾಗಿ, ನ್ಯಾಯಾಂಗ ಬಂಧನದಲ್ಲಿದ್ದ ಅಮೂಲ್ಯಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪೊಲೀಸ್ ಕಸ್ಟಡಿ ವೇಳೆ ಕೆಲವೊಂದು ಸ್ಫೋಟಕ ಮಾಹಿತಿಗಳು ಲಭ್ಯವಾಗಿದ್ದು, ವಿವಿಧ ತಂಡಗಳ ತನಿಖಾಧಿಕಾಗಳು ಬೇರೆ ಬೇರೆ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದಾರೆ.

    ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸಿದ ಪೊಲೀಸರು, ಶನಿವಾರ ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾರ್ಚ್ 5ರಂದು ಮತ್ತೆ ತನಿಖೆಗೆ ಅಮೂಲ್ಯ ಅಗತ್ಯಬಿದ್ದರೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

  • ಅಮೂಲ್ಯ ಲಿಯೋನಾ ಇನ್ನೂ ಕಣ್ಣೇ ಬಿಟ್ಟಿಲ್ಲ: ಸೋಮಣ್ಣ

    ಅಮೂಲ್ಯ ಲಿಯೋನಾ ಇನ್ನೂ ಕಣ್ಣೇ ಬಿಟ್ಟಿಲ್ಲ: ಸೋಮಣ್ಣ

    ಕೊಪ್ಪಳ: ಪಾಕಿಸ್ತಾನ ಜಿಂದಾಬಾದ್ ಎಂದು ದೇಶದ್ರೋಹದ ಘೋಷಣೆ ಕೂಗಿರುವ ಅಮೂಲ್ಯ ಲಿಯೋನಾ ಅವಳಿನ್ನೂ ಕಣ್ಣೇ ಬಿಟ್ಟಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯಾರೋ ಹೇಳಿಕೊಟ್ಟಿದ್ದಾರೆ. ಅದನ್ನು ಅವಳು ಹೇಳಿದ್ದಾಳೆ. ಇದು ಬಯಲಾಗಲಿದೆ. ಇದರ ಹಿಂದೆ ಷಡ್ಯಂತ್ರ ಮಾಡುವವರ ವಿರುದ್ಧ ತನಿಖೆ ಆರಂಭವಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಕೆಲವರು ಇನ್ನೊಬ್ಬರನ್ನು ತೃಪ್ತಿಪಡಿಸಲು ಹೇಳುತ್ತಿರಬಹುದು. ಇಂತಹ ಹೇಳಿಕೆ ನೀಡುವವರು ಈ ದೇಶದಲ್ಲಿ ಇರಲು ಅರ್ಹತೆ ಕಳೆದುಕೊಂಡಿದ್ದು, ಈ ದೇಶದಲ್ಲಿರಲು ಅವರು ನಾಲಾಯಕ್ ಎಂದು ಕಿಡಿಕಾರಿದರು.

    ಗೌರವಸ್ಥರು ಈ ದೇಶದ ಭಾವನೆ ಅರ್ಥ ಮಾಡಿಕೊಂಡವರು ಈ ರೀತಿ ಮಾತನಾಡೋದಿಲ್ಲ. ಇಂತಹ ಹೇಳಿಕೆ ನೀಡೋರು ಅಲ್ಲಿಯೇ ಹೋಗಲಿ. ಈ ದೇಶದ ಭಾವನೆ ಅರ್ಥ ಮಾಡಿಕೊಂಡು ಗೌರವದಿಂದ ಬದುಕಬೇಕು. ಇಲ್ಲದಿದ್ದರೆ ಜನ ಬಡಿಗೆ ತೆಗೆದುಕೊಳ್ತಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿ ಅಮೂಲ್ಯ ಲಿಯೋನಾ ಯಾರು?

    ಇದೇ ವೇಳೆ ಅಮೂಲ್ಯ ಲಿಯೋನಾಳನ್ನು ಮಾತನಾಡಲು ಬಿಡಬೇಕಿತ್ತು ಎಂದು ಡಿಕೆಶಿ ಹೇಳಿರುವ ವಿಷಯದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಡಿ.ಕೆ ಶಿವಕುಮಾರ್ ಗಂಟೆಗೊಮ್ಮೆ ಬಣ್ಣ ಬದಲಾಯಿಸುತ್ತಾರೆ. ಡಿಕೆಶಿ ಮಾತನಾಡಿದ್ದು ಗೊತ್ತಿಲ್ಲ. ಯಾರೇ ಮಾತಾನಡಲಿ. ಇದು ತಪ್ಪು ಎಂದರು.

    ಅಮೂಲ್ಯ ಲಿಯೋನಾ ಹೇಳಿದ್ದೇನು?
    ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲೇ ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯ ಲಿಯೋನಾ ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಕೂಗಿದ್ದು, ಸದ್ಯ ಜೈಲುಪಾಲಾಗಿದ್ದಾಳೆ. ಇದನ್ನೂ ಓದಿ: ನಂಗೆ ಚಿಕನ್ ಪಾಪ್ ಕಾರ್ನ್ ಬೇಕು, ಚಿತ್ರಾನ್ನ ಉಪ್ಪಿಟ್ಟು ಬೇಡ: ಅಮೂಲ್ಯ ಬೇಡಿಕೆ

  • ಅಮೂಲ್ಯ, ಆರ್ದ್ರಾ ವಾಟ್ಸಪ್ ಗ್ರೂಪ್‍ನಲ್ಲಿ ಗೌಪ್ಯ ಚರ್ಚೆ – ಎಸ್‍ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

    ಅಮೂಲ್ಯ, ಆರ್ದ್ರಾ ವಾಟ್ಸಪ್ ಗ್ರೂಪ್‍ನಲ್ಲಿ ಗೌಪ್ಯ ಚರ್ಚೆ – ಎಸ್‍ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

    ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‍ಐಟಿ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

    ಪಾಕ್ ಪ್ರೇಮಿ ಅಮೂಲ್ಯ ಸೇರಿದಂತೆ ಕೆಲ ವಿದ್ಯಾರ್ಥಿಗಳು ಬೆಂಗಳೂರು ಸ್ಟೂಡೆಂಟ್ ಫೆಡರೇಶನ್(ಬಿಎಸ್‍ಎಫ್) ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರು. ಸಿಎಎ, ಎನ್‌ಆರ್‌ಸಿ ಸೇರಿದಂತೆ ಕೆಲ ಹಿಂದೂ ವಿರೋಧಿ ವಿಚಾರಗಳಿಗೆ ಹೇಗೆ ಪ್ರತಿಭಟನೆಯ ರೂಪುರೇಷಗಳು ಇರಬೇಕು ಅನ್ನೋದನ್ನ ಈ ಗ್ರೂಪ್‍ನಲ್ಲಿ ಚರ್ಚೆ ಮಾಡುತ್ತಿದ್ದರು. ನೂರಾರು ಎಡಪಂಥೀಯ ವ್ಯಕ್ತಿಗಳು, ವಿದ್ಯಾರ್ಥಿಗಳು ಈ ಗ್ರೂಪ್‍ನಲ್ಲಿದ್ದರು.

    ಈ ಗ್ರೂಪ್ ಹೊರತುಪಡಿಸಿ ಅಮೂಲ್ಯ, ಆರ್ದ್ರಾ ಸೇರಿದಂತೆ ಕೆಲವೇ ಸಮಾನ ಮನಸ್ಕರು ಸೇರಿಕೊಂಡು ಯಂಗ್ ಇಂಡಿಯಾ ಅನ್ನೋ ಮತ್ತೊಂದು ವಾಟ್ಸಪ್ ಗ್ರೂಪ್ ಮಾಡ್ಕೊಂಡಿದ್ದರು. ಯಂಗ್ ಇಂಡಿಯಾ ಗ್ರೂಪ್‍ನಲ್ಲಿ ಆಯ್ದ ಕೆಲವರಿಗಷ್ಟೇ ಅವಕಾಶವಿದ್ದು, ಪ್ರತಿಭಟನೆಗಳು, ಸಭೆ ಸಮಾರಂಭಗಳ ಬಗ್ಗೆ ಗೌಪ್ಯ ಮಾಹಿತಿಗಳನ್ನು ಇದರಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

    ಸದ್ಯ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ತಂಡ ಆರೋಪಿಗಳ ಬಳಿ ಸೋಷಿಯಲ್ ಮೀಡಿಯಾದ ಪೋಸ್ಟ್ ಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಯಂಗ್ ಇಂಡಿಯಾ ವಾಟ್ಸಪ್ ಗ್ರೂಪ್‍ನಲ್ಲಿ ಯಾರೆಲ್ಲಾ ಸದಸ್ಯರು ಇದ್ದಾರೋ, ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ತಿರ್ಮಾನ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ವಿಚಾರಣೆ ವೇಳೆ ಕಾರ್ಪೋರೇಟರ್ ಇಮ್ರಾನ್ ಪಾಷ ಆಯೋಜನೆ ಮಾಡಿದ್ದ ಎರಡು ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸರೋದಾಗಿ ಅಮೂಲ್ಯ ಹೇಳಿಕೊಂಡಿದ್ದಾಳೆ. ಸದ್ಯ ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು, ಹಂತ ಹಂತವಾಗಿ ವಿವಿಧ ಪೊಲೀಸರ ತಂಡಗಳು ಅಮೂಲ್ಯ, ಆರ್ದ್ರಾಳನ್ನು ವಿಚಾರಣೆ ನಡೆಸಲಿದ್ದಾರೆ.

  • ಬಿಜೆಪಿ ಆರ್‌ಎಸ್‌ಎಸ್‌ ಮಾತು ಮೀರುತ್ತಿದೆಯೋ, ಮಾತು ಕೇಳದೆ ಸರ್ಕಾರ ನಡೆಸಲು ತೀರ್ಮಾಸಿದೆಯೋ- ಪ್ರಜ್ವಲ್ ವ್ಯಂಗ್ಯ

    ಬಿಜೆಪಿ ಆರ್‌ಎಸ್‌ಎಸ್‌ ಮಾತು ಮೀರುತ್ತಿದೆಯೋ, ಮಾತು ಕೇಳದೆ ಸರ್ಕಾರ ನಡೆಸಲು ತೀರ್ಮಾಸಿದೆಯೋ- ಪ್ರಜ್ವಲ್ ವ್ಯಂಗ್ಯ

    ಹಾಸನ: ಆರ್‌ಎಸ್‌ಎಸ್‌ ಮಾತು ಮೀರಿ ಬಿಜೆಪಿ ನಡೆಯುತ್ತಿದೆಯೋ ಅಥವಾ ಆರ್‌ಎಸ್‌ಎಸ್‌ ಮಾತು ಕೇಳದೆ ಸರ್ಕಾರ ನಡೆಸುವ ತೀರ್ಮಾನವನ್ನು ಬಿಜೆಪಿ ತೆಗೆದುಕೊಂಡಿದೆಯೋ ಗೊತ್ತಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾ ಹಾಗೂ ಗೋವಾ ರೀತಿ ನಮ್ಮ ರಾಜ್ಯದಲ್ಲೂ ಕ್ಯಾಸಿನೋ ಪ್ರಾರಂಭಿಸಬೇಕು ಹಾಗೂ ನೀರಾ ಜಾರಿಗೆ ತರುವ ಉದ್ದೇಶವನ್ನು ವ್ಯಕ್ತಪಡಿಸಿದ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.

    ಮಂತ್ರಿ ಒಂದು ಹೇಳಿಕೆ ಕೊಡೋದು ಮತ್ತು ಆ ಪಕ್ಷಕ್ಕೆ ಬೆಂಬಲ ಕೊಡುತ್ತ ಬಂದಿರುವ ಸಂಘಟನೆಯ ಚಿಂತನೆ ಎರಡೂ ಸರಿ ಹೊಂದುತ್ತಿಲ್ಲ ಎಂಬುದು ನನ್ನ ಭಾವನೆ. ಒಂದು ಕಡೆ ಪ್ರಚಾರ ಮಾಡೋದೆ ಬೇರೆ. ಯೋಜನೆ ತರುತ್ತಿರೋದೆ ಬೇರೆಯಾಗಿದೆ. ಯಾವುದೇ ಯೋಜನೆ ತರುವಾಗ ಜನರಿಗೆ, ಬಡವರಿಗೆ ಅನ್ಯಾಯ ಆಗುತ್ತದೆಯೇ ಎಂಬುದರ ಚಿಂತನೆ ಮಾಡಬೇಕು. ಆರ್‌ಎಸ್‌ಎಸ್‌ ಇದನ್ನೆಲ್ಲ ವಿರೋಧಿಸುವ ಸಂಘಟನೆಯಾಗಿದೆ. ಆದರೆ ಆರ್‌ಎಸ್‌ಎಸ್‌ನ ಮಾತು ಮೀರಿ ಬಿಜೆಪಿ ಯೋಜನೆ ಜಾರಿಗೆ ತರುತ್ತಿದೆ. ಅಂದರೆ ವಿಶೇಷತನ ಇದೆ ಅನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಕಠಿಣ ಶಿಕ್ಷೆಯಾಗಲಿ
    ಪಾಕಿಸ್ತಾನದ ಪರ ಜೈಕಾರ ಕೂಗಿದವರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಯಾರೇ ಒಬ್ಬ ವ್ಯಕ್ತಿ ಅನ್ನದ ಋಣ, ಭೂಮಿ ಋಣವನ್ನು ಭಾರತ ಮಾತೆಗೆ ಸಲ್ಲಿಸಬೇಕು. ಸರ್ಕಾರ ತಂದಿರುವ ನಿಯಮ ಇಷ್ಟ ಇಲ್ಲ ಎಂದರೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಯಾರೂ ಬೇಡ ಅನ್ನಲ್ಲ. ಆದರೆ ನಮ್ಮನ್ನು ಸಾಕಿ, ಸಲಹಿ ದೊಡ್ಡಮಟ್ಟಕ್ಕೆ ಬದುಕುತ್ತಿರುವುದಕ್ಕೆ ಕಾರಣವಾದ ದೇಶಕ್ಕೆ ಅವಮಾನ ಮಾಡಬಾರದು. ವೇದಿಕೆ ಮೇಲೆ ಪ್ರಚಾರಕ್ಕಾಗಿ ಮಾತನಾಡುವವರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಈ ಬಗ್ಗೆ ಸೂಕ್ತ ತನಿಖೆ ಮಾಡಿ, ಅವಳು ನಿಜವಾಗಿಯೂ ಪಾಕಿಸ್ಥಾನಕ್ಕೆ ಜೈಕಾರ ಹಾಕಿದ್ದೇ ಆಗಿದ್ದಲ್ಲಿ ತಕ್ಕ ಶಿಕ್ಷೆ ಆಗಬೇಕು. ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ದೇಶಕ್ಕೆ ಅಗೌರವ ತರುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

  • ಸಿಎಎ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ: ಶೋಭಾ ಕರಂದ್ಲಾಜೆ

    ಸಿಎಎ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ: ಶೋಭಾ ಕರಂದ್ಲಾಜೆ

    ಉಡುಪಿ: ಪಾಕ್ ಪರ ಪ್ರಗತಿಪರ ಹೋರಾಟಗಾರ್ತಿ ಅಮೂಲ್ಯ ಲಿಯೋನಾ ಘೋಷಣೆ ಕೂಗಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಆಕ್ರೋಶ ವ್ಯಕ್ತಪಡಿಸಿದರು. ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಅಮೂಲ್ಯ ಪರ ಹೇಳಿಕೆ ನೀಡಿರುವ ಡಿಕೆ ಶಿವಕುಮಾರ್ ಅವರ ತನಿಖೆ ಕೂಡ ಆಗಬೇಕು. ಡಿಕೆ ಶಿವಕುಮಾರ್ ಅವರಿಗೂ ಅಮೂಲ್ಯಗೂ ಇರುವ ಸಂಬಂಧ ಏನು? ಅಮೂಲ್ಯ ಭಾಷಣ ಕಾಂಗ್ರೆಸಿಗರಿಗೆ ಗೊತ್ತಿತ್ತಾ ಎಂದು ಪ್ರಶ್ನಿಸಿದರು. ಸಿಎಎ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ಏನು? ಸ್ಪಷ್ಟಪಡಿಸಿ ಎಂದರು.

    ಅಮೂಲ್ಯ ತಂದೆಗೆ ನಕ್ಸಲ್ ನಂಟು ಇದೆ. ಅವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು. ವಾಜಿ ನಕ್ಸಲ್ ಮುಖಂಡ ಸಿರಿಮನೆ ನಾಗರಾಜ್ ಆಪ್ತ ಎಂದರು. ಬೆಂಗಳೂರಲ್ಲಿ ಎರೆಡೆರಡು ಘೋಷಣೆಗಳು ಪೂರ್ವನಿಯೋಜಿತವಾಗಿಯೇ ಬಂದಿದೆ. ಆಹ್ವಾನಿಸದೆ ಅಮೂಲ್ಯ ವೇದಿಕೆಗೆ ಹೇಗೆ ಬಂದಳು? ಮೈಕಿನಲ್ಲಿ ಹೇಗೆ ಮಾತನಾಡಿದಳು? ಆಯೋಜಕರೂ ಇದರಲ್ಲಿ ಶಾಮೀಲಿದ್ದಾರೆ. ಅವರನ್ನೂ ತನಿಖೆ ಮಾಡಬೇಕು ಎಂದರು.

    ಕಾಂಗ್ರೆಸ್ ದೇಶ ವಿರೋಧಿ ನಿಲುವು ತಾಳುತ್ತಿದ್ಯಾ? ಮೋದಿ ವಿರೋಧಿಸುವ ಬರದಲ್ಲಿ ಕಾಂಗ್ರೆಸ್ ದೇಶದ ವಿರುದ್ಧ ಮಾತನಾಡುತ್ತಿದ್ಯಾ? ವೇದಿಕೆಯಲ್ಲಿ ಗುರುವಾರ ಸಂಸದ ಓವೈಸಿ ಕೂಡ ಇದ್ದರು. ಭಾರತದ ಜೊತೆ ಅವರು ಯಾವತ್ತೂ ಗುರುತಿಸಿಕೊಂಡೇ ಇಲ್ಲ. ಇದೀಗ ದೇಶ ಪ್ರೇಮದ ಮಾತುಗಳನ್ನಾಡಿದ್ರೆ ಜನ ನಂಬಲ್ಲ ಎಂದರು.

  • ಅಮೂಲ್ಯ ಲಿಯೋನಾಳನ್ನ ಭಯೋತ್ಪಾದಕಿ ಎಂದು ಘೋಷಿಸಿ, ಗಲ್ಲು ಶಿಕ್ಷೆ ವಿಧಿಸಿ- ಟ್ವಿಟ್ಟರ್‌ನಲ್ಲಿ ನಂ.1 ಟ್ರೆಂಡಿಂಗ್

    ಅಮೂಲ್ಯ ಲಿಯೋನಾಳನ್ನ ಭಯೋತ್ಪಾದಕಿ ಎಂದು ಘೋಷಿಸಿ, ಗಲ್ಲು ಶಿಕ್ಷೆ ವಿಧಿಸಿ- ಟ್ವಿಟ್ಟರ್‌ನಲ್ಲಿ ನಂ.1 ಟ್ರೆಂಡಿಂಗ್

    ನವದೆಹಲಿ: ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದ ಅಮೂಲ್ಯಳನ್ನ ಭಯೋತ್ಪಾದಕಿ ಎಂದು ಘೋಷಿಸಲಿ. ಸುಪ್ರೀಂಕೋರ್ಟ್ ಗಲ್ಕು ಶಿಕ್ಷೆ ವಿಧಿಸಿಲಿ ಎನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.

    ಅಮೂಲ್ಯ ಹೇಳಿಕೆಗೆ ನಿನ್ನೆ ಸಂಜೆಯಿಂದ ವ್ಯಾಪಕ ಟೀಕೆ ಕೇಳಿ ಬಂದಿದ್ದು ಇಂದು ಟ್ವಿಟರ್ ಇಂಡಿಯಾದಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ. ರಾಷ್ಟ್ರ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು ಅಮೂಲ್ಯ ಹೇಳಿಕೆ ಪರ-ವಿರೋಧ ಚರ್ಚೆ ಗೆ ಟ್ವಿಟ್ಟರ್ ವೇದಿಕೆಯಾಗಿದೆ.

    ಹ್ಯಾಶ್ ಖಾತೆಯೊಂದರ ಹೆಸರಿನಲ್ಲಿ ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬರು ಹುತ್ಮಾತ ಸೈನಿಕರೊಬ್ಬರ ಪುತ್ರಿ ರೋಧಿಸುವ ವಿಡಿಯೋ ಹಾಕಿರುವ ಅಮೂಲ್ಯ ಹೇಳಿಕೆ ಕೇಳಿ ಆ ಪುತ್ರಿಗೆ ಏನಿಸಬಹುದು ಎಂದು ಪ್ರಶ್ನಿಸಿದ್ದಾರೆ. ದೇಶ ವಿರೋಧಿ ಘೋಷಣೆ ಕೂಗುವರನ್ನ ಭಯೋತ್ಪಾದಕರೆಂದು ಗುರುತಿಸಿ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಟ್ವಿಟ್ಟರ್ ಬಳಕೆದಾರ ಉಪಸಾನ ಸಿಂಗ್ ಟ್ವೀಟ್ ಮಾಡಿದ್ದಾರೆ.

    ಈ ರೀತಿ ಘೋಷಣೆ ಕೂಗುವುದು ಹೆಚ್ಚಾಗಿದೆ ಜೈಲಿಗೆ ಹೋಗಿ ಹೊರ ಬಂದು ದೊಡ್ಡ ನಾಯಕರಾಗುತ್ತಾರೆ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ದೇಶದಲ್ಲಿ ಏನು ನೋಡಬೇಕು ಎಂದೆಲ್ಲ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ರವಿಶಂಕರ್ ಗುರೂಜಿ ಪಾಕಿಸ್ತಾನ ಜಿಂದಾಬಾದ್ ಎಂದಿರುವ ವಿಡಿಯೋ ಹಾಕಿ ಸಮರ್ಥಿಸಿಕೊಂಡರೆ, ಅಮೂಲ್ಯಳ ಹಳೆಯ ಫೇಸ್ಬುಕ್ ಪೊಸ್ಟ್ ಹಾಕಿ ಕೆಲವರು ಅವಳ ಉದ್ದೇಶ ಬೇರೆಯಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

    ನಡೆದಿದ್ದೇನು?
    ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಲಿಯೋನಾ, ‘ಪಾಕಿಸ್ತಾನ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡಿದ್ದು, ಆಕೆಯನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು. ಕೂಡಲೇ ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದು, ಇದೀಗ ಪೊಲೀಸರು ಆಕೆಯನ್ನು ಜೈಲಿಗಟ್ಟಿದ್ದಾರೆ.

  • ಪಾಕ್ ಪರ ಘೋಷಣೆ ಕೂಗಿದ್ದು ವಿಕೃತ ಮನಸ್ಸಿನವರು: ಅನಿತಾ ಕುಮಾರಸ್ವಾಮಿ

    ಪಾಕ್ ಪರ ಘೋಷಣೆ ಕೂಗಿದ್ದು ವಿಕೃತ ಮನಸ್ಸಿನವರು: ಅನಿತಾ ಕುಮಾರಸ್ವಾಮಿ

    ರಾಮನಗರ: ಪಾಕ್ ಪರ ಘೋಷಣೆ ಕೂಗುತ್ತಿರುವುದನ್ನು ನೋಡಿ ನಿಜವಾಗಿಯೂ ನನಗೆ ಆಶ್ಚರ್ಯವಾಗುತ್ತಿದೆ. ನಮ್ಮ ದೇಶದವರಾಗಿ ಪಾಕಿಸ್ತಾನದ ಪರ ಘೋಷಣೆ ಕೂಗುವುದು ವಿಕೃತ ಮನಸ್ಸಿನವರು ಅಂತ ಹೇಳಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

    ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು. ಮುಂದೆ ಇನ್ಯಾರು ಆ ರೀತಿ ಮಾಡಬಾರದು, ಆ ರೀತಿ ಕ್ರಮ ಕೈಗೊಂಡರೆ ಬೇರೆಯವರಿಗೂ ಹೆದರಿಕೆ ಇರುತ್ತದೆ. ಆ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಪ್ರತಿಕ್ರಿಯಿಸಿ, ದೇಶದಲ್ಲಿ ಬಾಳುವಂತಹ ಪ್ರತಿಯೊಬ್ಬರೂ ದೇಶಕ್ಕೆ ಋಣಿಯಾಗಿರಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾರೇ ಆದರೂ ಅಷ್ಟೇ. ಗುರುವಾರ ಆಗಿರುವ ಘಟನೆ ನಾವೆಲ್ಲರೂ ತಲೆ ತಗ್ಗಿಸುವ ವಿಚಾರ. ಆಯೋಜಕರು ಇದರ ಬಗ್ಗೆ ಸೂಕ್ಷ್ಮತೆ ಅರಿಯಬೇಕಿತ್ತು. ಯಾರೇ ಮಾಡಿದ್ದರೂ ಅದು ತಪ್ಪೇ, ನಿನ್ನೆಯೇ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದರು.

    ಹೋರಾಟಗಳಲ್ಲಿ ಕಿಡಿ ಹಚ್ಚುವವರ ವಿರುದ್ಧ ಪೊಲೀಸರು ಮೊದಲೇ ಕ್ರಮ ವಹಿಸಬೇಕಿತ್ತು. ಎಲ್ಲರಿಗೂ ಇದು ಮುಜುಗರ ತರುವಂತಹ ವಿಚಾರ. ಹೋರಾಟ ಮಾಡುವ ವೇಳೆ ಕೆಲವು ಕಿಡಿಗೇಡಿಗಳು ಇರುತ್ತಾರೆ. ಈ ವಿಚಾರವಾಗಿ ಆಯೋಜಕರು ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಅಲ್ಲದೆ ಪೊಲೀಸರು ಮುಂಜಾಗೃತಾ ಕ್ರಮ ವಹಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

    ನಡೆದಿದ್ದೇನು?
    ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಲಿಯೋನಾ, ‘ಪಾಕಿಸ್ತಾನ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡಿದ್ದು, ಆಕೆಯನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು. ಕೂಡಲೇ ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದು, ಇದೀಗ ಪೊಲೀಸರು ಆಕೆಯನ್ನು ಜೈಲಿಗಟ್ಟಿದ್ದಾರೆ.

  • ವೈರಿ ಪಾಕ್ ಪರ ಘೋಷಣೆ ಕೂಗಿದ್ರೆ ಸರ್ಕಾರ ಸಹಿಸಲ್ಲ: ಕಾರಜೋಳ

    ವೈರಿ ಪಾಕ್ ಪರ ಘೋಷಣೆ ಕೂಗಿದ್ರೆ ಸರ್ಕಾರ ಸಹಿಸಲ್ಲ: ಕಾರಜೋಳ

    ಗದಗ: ನಮ್ಮ ದೇಶದ ಅನ್ನ ಉಂಡು, ವೈರಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ತಪ್ಪು. ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 130 ಕೋಟಿ ಜನರೂ ದೇಶ ಭಕ್ತರಾಗಬೇಕು. ದೇಶದ ಸಂಸ್ಕೃತಿಯನ್ನು ಗೌರವವಿಸಬೇಕು, ಸಂವಿಧಾನದ ಚೌಕಟ್ಟಿನಲ್ಲಿ ದೇಶಪ್ರೇಮ ಬೆಳೆಸಬೇಕು. ಈ ಹುಡುಗಿಗೆ ತಿಳುವಳಿಕೆ ಕಡಿಮೆ ಇರುವುದರಿಂದ ಹೀಗೆ ಆಗಿರಬಹುದು. ಇಂತಹ ತಪ್ಪು ಯಾರೇ ಮಾಡಿದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೇಶ ದ್ರೋಹದ ಚಟುವಟಿಕೆಗಳನ್ನು ಸರ್ಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

    ಮಹದಾಯಿ, ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಡಿಸಿಎಂ ಕಾರಜೋಳ ಸಂತಸ ವ್ಯಕ್ತಪಡಿಸಿ, ಇದು ರಾಜ್ಯಕ್ಕೆ ಸಿಕ್ಕ ಜಯ. ಮಹಾದಾಯಿ, ಕಳಸಾ ಬಂಡೂರಿ ನಮ್ಮ ಭಾಗದ ಜನರ ಬಹುದಿನದ ಹೋರಾಟವಾಗಿತ್ತು. ಟ್ರಿಬ್ಯೂನಲ್ ನಲ್ಲಿ ನಮಗೆ ಗೆಲುವು ಆಗಿದ್ದರೂ, ಗೋವಾ, ಮಹಾರಾಷ್ಟ್ರ, ರಾಜ್ಯದವರು ಖ್ಯಾತೆ ತೆಗೆದು ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದಾಗಿ ಟ್ರಿಬ್ಯೂನಲ್ ನೀಡಿದ್ದ ಆದೇಶದ ಕುರಿತ ಗೆಜೆಟ್ ನೋಟಿಫಿಕೇಷನ್ ತಡವಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಟ್ರಿಬ್ಯೂನಲ್ ಆದೇಶದಂತೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಆದೇಶಿಸಿದೆ. ಇದನ್ನು ಸ್ವಾಗತಿಸುತ್ತೇನೆ ಎಂದರು.

    ಪ್ರಥಮ ಹಂತದಲ್ಲಿ ಜಯ ಸಿಕ್ಕಿದೆ, ಬಂದ ನೀರನ್ನು ಕುಡಿಯಲು, ನೀರಾವರಿಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸಲು ನಮ್ಮ ಸರ್ಕಾರ ಬದ್ಧವಿದೆ. ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಾಲಿಸಬೇಕು. ಬೇಗನೆ ನೋಟಿಫಿಕೆಷನ್ ಆಗುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

  • ಅಮೂಲ್ಯ ಲಿಯೋನಾಗೆ ಪೂರ್ತಿ ಮಾತನಾಡಲು ಅವಕಾಶ ಕೊಡಬೇಕಿತ್ತು: ಡಿಕೆಶಿ

    ಅಮೂಲ್ಯ ಲಿಯೋನಾಗೆ ಪೂರ್ತಿ ಮಾತನಾಡಲು ಅವಕಾಶ ಕೊಡಬೇಕಿತ್ತು: ಡಿಕೆಶಿ

    ಬೆಂಗಳೂರು: ಅಮೂಲ್ಯ ಲಿಯೋನಾ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಫೋಷಣೆ ಕೂಗಿದ ಬಳಿಕ ಏನು ಹೇಳುತ್ತಿದ್ದಳು ಅದನ್ನ ಪೂರ್ತಿ ಹೇಳಲು ಅವಕಾಶ ಕೊಡಬೇಕಿತ್ತು ಅಂತ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

    ಅಮೂಲ್ಯ ಲಿಯೋನಾ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಆಕೆಯ ಭಾಷಣಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಆಕೆ ಈಗ ಹೇಳಿದ ಮಾತನ್ನು ಕೇಳಿರಲಿಲ್ಲ. ಅಮೂಲ್ಯಗೆ ಪೂರ್ತಿ ಮಾತನಾಡಲು ಅವಕಾಶ ನೀಡಬೇಕಿತ್ತು. ಆದರೆ ಮಧ್ಯದಲ್ಲಿ ಏನೋ ಸಮಸ್ಯೆಯಾಗಿದೆ. ಇದರ ಬಗ್ಗೆ ನನಗೆ ಇನ್ನೂ ಕೆಲವು ಸ್ಪಷ್ಟನೆಗಳು ಬೇಕಿದೆ. ಹೀಗಾಗಿ ಈ ಬಗ್ಗೆ ನಾನು ಹೆಚ್ಚಾಗಿ ಕಮೆಂಟ್ ಮಾಡುವುದಿಲ್ಲ ಎಂದು ತಿಳಿಸಿದರು.

    ಏನಿದು ಪ್ರಕರಣ?
    ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲೇ ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯ ಲಿಯೋನಾ ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಕೂಗಿದ್ದಳು.

    ವೇದಿಕೆ ಮೇಲೆ ಬಂದ ಅಮೂಲ್ಯ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಆಕೆಯನ್ನು ತಡೆದಿದ್ದರು, ಬಳಿಕ ಪೊಲೀಸರು ಕೂಡಲೇ ಅಮೂಲ್ಯಳನ್ನು ವೇದಿಕೆಯಿಂದ ಕರೆದುಕೊಂಡು ವಶಕ್ಕೆ ಪಡೆದರು.

    ಈಗ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಅಮೂಲ್ಯಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ 5ನೇ ಎಸಿಎಂಎಂ ಜಡ್ಜ್ ಆದೇಶಿಸಿದ್ದಾರೆ. ಇಷ್ಟಾದರೂ ಕೂಡ ಅಮೂಲ್ಯಳಿಗೆ ಭಯವಾಗಲಿ, ಪಶ್ಚಾತಾಪವಾಗಿ ಆಗಿಲ್ಲ. ಬದಲಿಗೆ ವಿಕ್ಟರಿ ಸಿಂಬಲ್ ತೋರಿಸಿ ಭಂಡತನ ಮೆರೆದಿದ್ದಾಳೆ.

    ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿ ಏಕಾಏಕಿ ಕುಖ್ಯಾತಿ ಗಳಿಸಿದ ಆರೋಪಿ ಅಮೂಲ್ಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಅಮೂಲ್ಯ ಹೇಳಿಕೆ ವಿಡಿಯೋ ಆಧಾರದ ಮೇಲೆ ಅವರನ್ನು ಅರೆಸ್ಟ್ ಮಾಡಿದ ಉಪ್ಪಾರಪೇಟೆ ಠಾಣೆ ಪೊಲೀಸರು, ಸುಮೋಟೋ ಕೇಸ್ ದಾಖಲಿಸಿ ಎಫ್‍ಐಆರ್ ದಾಖಲಿಸಿಕೊಂಡರು. ಅಮೂಲ್ಯ ವಿರುದ್ಧ ಐಪಿಸಿ ಸೆಕ್ಷನ್ 124ಎ(ದೇಶದ್ರೋಹ ಆರೋಪ), 153ಎ(ಶತೃತ್ವ ಬಿತ್ತುವುದು), 153ಬಿ(ಭಾವೈಕ್ಯತೆ ಹಾಗೂ ರಾಷ್ಟೀಯ ಏಕೀಕರಣಕ್ಕೆ ಧಕ್ಕೆ ತರುವುದು) ಸೆಕ್ಷನ್ ಅಡಿ ಕೇಸ್ ದಾಖಲಿಸಿದ್ದಾರೆ.