Tag: ಅಮರವಾತಿ

  • ಆಟೋಗೆ ಬಸ್ ಡಿಕ್ಕಿ -ಚಾಲಕ ಸೇರಿ ಶಾಲೆಗೆ ಹೋಗ್ತಿದ್ದ ನಾಲ್ಕು ವಿದ್ಯಾರ್ಥಿಗಳ ದಾರುಣ ಸಾವು

    ಆಟೋಗೆ ಬಸ್ ಡಿಕ್ಕಿ -ಚಾಲಕ ಸೇರಿ ಶಾಲೆಗೆ ಹೋಗ್ತಿದ್ದ ನಾಲ್ಕು ವಿದ್ಯಾರ್ಥಿಗಳ ದಾರುಣ ಸಾವು

    ಅಮರಾವತಿ: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಆಟೋ ರಿಕ್ಷಾಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸೇರಿದಂತೆ ನಾಲ್ಕು ಮಂದಿ ಶಾಲಾ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೇಪಾಡು ಗ್ರಾಮ ಬಳಿ ನಡೆದಿದೆ.

    ಅಪಘಾತದಲ್ಲಿ ಮೃತಪಟ್ಟ ಎಲ್ಲಾ ವಿದ್ಯಾರ್ಥಿಗಳು ವೇಮಾವರಂ ಗ್ರಾಮದ ನಿವಾಸಿಗಳಾಗಿದ್ದು, ಗಾಯತ್ರಿ, ರೇಣುಕಾ, ಶೈಲಜಾ, ಕಾರ್ತಿಕ್ ರೆಡ್ಡಿ ಹಾಗೂ ಚಾಲಕ ಧನ್‍ರಾಜ್ ಎಂದು ಗುರುತಿಸಲಾಗಿದೆ. ಅಲ್ಲದೇ ಆಟೋದಲ್ಲಿದ್ದ ಇತರೇ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶ್ರೀಶೈಲಂ ಮಾರ್ಗವಾಗಿ ತೆರಳುತ್ತಿದ್ದ ಬಸ್, ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಗುರುವಾರ ಬೆಳಗ್ಗೆ ಅಧಿಕ ಮಂಜು ಇದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಘಟನೆ ಕುರಿತು ವಿಧಾನಸಭಾ ಸ್ಪೀಕರ್ ಶಿವಪ್ರಸಾದ್ ರಾವ್, ಮಾನವ ಸಂಪನ್ಮೂಲ ಸಚಿವ ಗಂಟಾ ಶ್ರೀನಿವಾಸ ರಾವ್ ಮತ್ತು ಆರೋಗ್ಯ ಸಚಿವ ಶ್ರೀನಿವಾಸ್ ಸಂತಾಪವನ್ನು ವ್ಯಕ್ತಪಡಿಸಿದ್ದು, ಸಚಿವ ಶ್ರೀನಿವಾಸ್ ಗಾಯಗೊಂಡ ವಿದ್ಯಾರ್ಥಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಅಪಘಾತ ನಡೆದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಗುಂಟೂರು ಸಾರಿಗೆ ಇಲಾಖೆಯ ಸ್ಥಳೀಯ ಮ್ಯಾನೇಜರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ವಾಟ್ಸಪ್ ಓದುಗರು ಗ್ರೂಪ್‍ನಿಂದ ನಾಳೆ ಉಡುಪಿಯಲ್ಲಿ ಅಮರಾವತಿ ಚಿತ್ರ ಪ್ರದರ್ಶನ

    ವಾಟ್ಸಪ್ ಓದುಗರು ಗ್ರೂಪ್‍ನಿಂದ ನಾಳೆ ಉಡುಪಿಯಲ್ಲಿ ಅಮರಾವತಿ ಚಿತ್ರ ಪ್ರದರ್ಶನ

    ಉಡುಪಿ: ವಾಟ್ಸಾಪ್ ಓದುಗರು ಗ್ರೂಪ್ ಪೌರ ಕಾರ್ಮಿಕರ ಜೀವನ ಕಥೆಯುಳ್ಳ, ಬಿ.ಎಂ.ಗಿರಿರಾಜ್ ನಿರ್ದೇಶನದ “ಅಮರಾವತಿ” ಕನ್ನಡ ಚಲನಚಿತ್ರ ಪ್ರದರ್ಶನ ಫೆಬ್ರವರಿ 23 ಗುರುವಾರದಂದು ಉಡುಪಿಯ ಡಯಾನಾ ಥಿಯೇಟರಿನಲ್ಲಿ ಆಯೋಜಿಸಿದೆ.

    ಸಂಜೆ 4.30 ಹಾಗೂ 7.30 ಕ್ಕೆ ಎರಡು ಶೋಗಳು ಗುರುವಾರದಂದು ಪ್ರದರ್ಶನಗೊಳ್ಳಲಿವೆ. ಸಂಜೆ ಮತ್ತು ರಾತ್ರಿಯ ಎರಡು ಶೋಗಳಿಗಾಗಿ ಥಿಯೇಟರನ್ನು ಬುಕ್ ಮಾಡಿದ್ದು, ಟಿಕೆಟ್ ದರವನ್ನು 60 ರೂ. ಹಾಗೂ 50 ರೂ. ಯಂತೆ ನಿಗದಿ ಮಾಡಲಾಗಿದೆ.

    ಸಾಮಾಜಿಕ ಕಳಕಳಿಯ ಸಂದೇಶವಿರುವ ಅಮರಾವತಿ ಚಿತ್ರ ಪ್ರದರ್ಶನಕ್ಕೆ ಉಡುಪಿಯ ಡಯಾನಾ ಥಿಯೇಟರ್ ಕಡಿಮೆ ದರದಲ್ಲಿ ಅವಕಾಶ ನೀಡಿದೆ. ಎರಡು ಪ್ರದರ್ಶನಗಳ ನಂತರ ನಿರ್ದೇಶಕರು ಹಾಗೂ ನಟರನ್ನೊಳಗೊಂಡ ಅಮರಾವತಿ ಚಿತ್ರತಂಡ ಪ್ರದರ್ಶನದ ದಿನ ಆಗಮಿಸಲಿದೆ. ಚಿತ್ರದ ನಂತರ ಅವರೊಂದಿಗೆ ಸಂವಾದವಿದೆ ಎಂದು ಓದುಗರು ವಾಟ್ಸಾಪ್ ಗ್ರೂಪ್ ಮುಖ್ಯಸ್ಥ ಮಂಜುನಾಥ್ ಹೇಳಿದ್ದಾರೆ.

    ಪೌರ ಕಾರ್ಮಿಕರಿಗೆ ಉಚಿತ, ವಿಶೇಷ ಆಹ್ವಾನ: ಉಡುಪಿ ನಗರಸಭೆಯ ಎಲ್ಲಾ ಪೌರಕಾರ್ಮಿಕರಿಗೆ ಉಚಿತ ಹಾಗೂ ವಿಶೇಷ ಆಹ್ವಾನ ನೀಡಲಾಗಿದೆ. ಸಂವಾದದಲ್ಲಿ ಪೌರಕಾರ್ಮಿಕರೂ ಭಾಗವಹಿಸಲಿದ್ದು ತಮ್ಮ ಜೀವನ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ.

    ಉಡುಪಿ ಮೂಲದ ಓದುಗರು ಬಳಗ ವರ್ಷದ ಹಿಂದೆ ಮೊದಲ ಪ್ರಯತ್ನವಾಗಿ ಮಂಗಳಮುಖಿಯರ ಜೀವನ ಕಥೆ ಆಧರಿಸಿದ, ಲಿಂಗದೇವರು ನಿರ್ದೇಶನದ `ನಾನು ಅವನಲ್ಲ ಅವಳು’ ಸಿನಿಮಾ ಪ್ರದರ್ಶನ ಮಾಡಿಸಲಾಗಿತ್ತು. ಎರಡು ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿದ್ದವು. ಕಲೆಕ್ಷನ್ ಆದ ಹಣದಲ್ಲಿ ಉಡುಪಿಯ ಮಂಗಳ ಮುಖಿಯರು ಶಿಕ್ಷಣ, ಉದ್ಯೋಗ ಹೀಗೆ ಸಮಾಜದ ಮುಖ್ಯವಾಹಿನಿಗೆ ಬರಲು ಬೇಕಾದ ಸಹಾಯವನ್ನು ಮಾಡಿತ್ತು.

    ಈ ಬಾರಿ ಅಮರಾವತಿ ಚಿತ್ರದಂತಹ ಸದಭಿರುಚಿಯ ಸಿನಿಮಾಗಳಿಗೆ ಜನ ಬರುವುದಿಲ್ಲ, ಥಿಯೇಟರ್ ಸಿಗುವುದಿಲ್ಲ ಎಂಬುದನ್ನು ಸುಳ್ಳು ಮಾಡಬೇಕು. ಪೌರ ಕಾರ್ಮಿಕರ ಸಮಸ್ಯೆ ಏನೆಂಬುದನ್ನು ಎಲ್ಲರೂ ಅರಿಯಬೇಕು. ಅವರ ಜೀವನ ಹೇಗಿದೆ ಎಂದು ತಿಳಿಯಲು ಆಯೋಜಕರು ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ.