Tag: ಅಭಯಚಂದ್ರ ಜೈನ್

  • ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ಆಗದೇ ತಿಮರೋಡಿ ಬಂಧನವಾಗದೇ ತನಿಖೆ ನಡೆಯಬಾರದು: ಮಾಜಿ ಸಚಿವ ಅಭಯಚಂದ್ರ ಜೈನ್

    ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ಆಗದೇ ತಿಮರೋಡಿ ಬಂಧನವಾಗದೇ ತನಿಖೆ ನಡೆಯಬಾರದು: ಮಾಜಿ ಸಚಿವ ಅಭಯಚಂದ್ರ ಜೈನ್

    ಮಂಗಳೂರು: ಮಹೇಶ್‌ ಶೆಟ್ಟಿ ತಿಮರೋಡಿಯನ್ನ (Mahesh Shetty Thimarodi) ಬಂಧಿಸುವುದಕ್ಕೆ ನಿಮ್ಮಿಂದ ಆಗೋದಿಲ್ವಾ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅಭಯಚಂದ್ರ ಜೈನ್ (Abhayachandra Jain) ಸರ್ಕಾರದ ವಿರುದ್ಧವೇ ಗರಂ ಆಗಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ಆಗದೇ ತಿಮರೋಡಿ ಬಂಧನವಾಗದೇ ತನಿಖೆ ನಡೆದರೆ ನನ್ನ ವಿರೋಧವಿದೆ ಎಂದು ಹೇಳಿದರು.

    ಅನಾಮಿಕ ಇನ್ನೂ 13 ಪಾಯಿಂಟ್ ತೋರಿಸಬಹುದು. ಆರಂಭದಲ್ಲೇ ಮುಸುಕುಧಾರಿಯ (Mask Man) ಮಂಪರು ಪರೀಕ್ಷೆ ಆಗಬೇಕಿತ್ತು. ಇನ್ನು ಮುಂದೆ ಅನಾಮಿಕನನ್ನು ಧರ್ಮಸ್ಥಳ ದ್ವಾರ ದಾಟಿ ದೇವಸ್ಥಾನದ ವಠಾರಕ್ಕೆ ಬರಲು ನಾವು ಬಿಡುವುದಿಲ್ಲ. ಮತ್ತೆ ಬಾಹುಬಲಿ ಬೆಟ್ಟಕ್ಕೆ ಬಂದರೆ ನಾನು ಮುಂದೆ ನಿಲ್ಲುತ್ತೇನೆ ಎಂದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್‌ ರಿಯಾಕ್ಷನ್‌

     

    ಮುಂದಿನ ತನಿಖೆ ಏನಿದ್ದರೂ ಮಂಪರು ಪರೀಕ್ಷೆ ನಂತರವೇ ಆಗಬೇಕು. ತಿಮರೋಡಿಯನ್ನು ಬಂಧಿಸಿದ ನಂತರವೇ ಮುಂದಿನ ತನಿಖೆ ನಡೆಯಬೇಕು. ತಿಮರೋಡಿಯನ್ನು ಬಂಧಿಸುವುದು ಸರ್ಕಾರಕ್ಕೆ ಕಷ್ಟದ ಕೆಲಸ ಅಲ್ಲ. ರಾಜ್ಯ ಸರ್ಕಾರ ಏನು ಮಾಡುತ್ತದೆ ನೋಡೋಣ ಎಂದು ಹೇಳಿದರು. ಇದನ್ನೂ ಓದಿ: ರೈಲಿಗೂ ಲಗೇಜ್ ಪಾಲಿಸಿ ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

    ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಿರಂತರ ಸುಳ್ಳು ಅಪಪ್ರಚಾರ ನಡೆಯುತ್ತಿದೆ. ಮುಸುಕುಧಾರಿಯ ಬಳಿಕ ಹೊಸ ದೂರುದಾರರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಡಾ. ವೀರೇಂದ್ರ ಹೆಗ್ಗಡೆ ನಾಡಿಗೆ ಬಹಳ ಉಪಕಾರ ಮಾಡಿದವರು. ಶ್ರೀ ಕ್ಷೇತ್ರದ ಆರೋಪ, ಸಲ್ಲದ ಮಾತಿಗೆ ತಡೆ ಬೀಳಬೇಕಾಗಿದೆ ಎಂದು ತಿಳಿಸಿದರು.

  • ಪುತ್ತೂರಿನ ಘಟನೆಗೆ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್ ಕಾರಣ: ಅಭಯ್ ಚಂದ್ರ ಜೈನ್

    ಪುತ್ತೂರಿನ ಘಟನೆಗೆ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್ ಕಾರಣ: ಅಭಯ್ ಚಂದ್ರ ಜೈನ್

    – ಬಿ.ಕೆ ಹರಿಪ್ರಸಾದ್‍ರನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ

    ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರೇ ಕಾರಣ ಎಂದು ಮಾಜಿ ಸಚಿವ ಅಭಯ್ ಚಂದ್ರ ಜೈನ್ (AbhayChandra Jain) ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ನೇರ ಕಾರಣ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನಳಿನ್ ಕುಮಾರ್ ಕಟೀಲ್ ಕಾರಣ. ಸಿದ್ದರಾಮಯ್ಯ (Siddaramaiah) ನಾಳೆ ಅಧಿಕಾರ ಸ್ವೀಕಾರ ಮಾಡಬೇಕು. ಕಲ್ಲಡ್ಕ ಭಟ್ ಈ ಘಟನೆಗೆ ಕಾಂಗ್ರೆಸ್ ಕಾರಣ ಅಂತಾ ಹೇಳುತ್ತಾರೆ. ಕಟೀಲ್ ಲೋಕಸಭಾ ಸದಸ್ಯನಾಗಿ ಕಾರ್ಯಕರ್ತರಿಗೆ ಸಾಯುವ ಹಾಗೆ ಹೊಡಿಸ್ತಾರೆ ಅಂದ್ರೆ ಅವರಿಗೆ ಮಾನವೀಯತೆ ಇದ್ಯಾ ಎಂದು ಜೈನ್ ಪ್ರಶ್ನಿಸಿದರು.

    ಇದೇ ವೇಳೆ ಬಿ.ಕೆ ಹರಿಪ್ರಸಾದ್ (BK Hariprasad) ರನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಒತ್ತಾಯಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಮೊಯ್ಲಿ, ಆಸ್ಕರ್, ಪೂಜಾರಿಯವರಂತಹ ನಾಯಕ ನಮಗೆ ಬೇಕು. ಈ ಜಿಲ್ಲೆಗೆ ಬಲಿಷ್ಠ ನಾಯಕ ಬೇಕು. ಇದನ್ನು ಹೈಕಮಾಂಡ್, ಕಾಂಗ್ರೆಸ್ ಪ್ರಮುಖರು ಇದನ್ನು ಅರಿಯಬೇಕು. ಹೀಗಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ಗೃಹ ಸಚಿವರನ್ನಾಗಿ ಮಾಡಬೇಕು. ಹಾಗೆಯೇ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿಯೂ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ

    ಹರಿಪ್ರಸಾದ್ ಶಕ್ತಿವಂತ, ಆಡಳಿತದಲ್ಲಿ ತಿಳುವಳಿಕೆಯುಳ್ಳ ವ್ಯಕ್ತಿಯಾಗಿದ್ದಾರೆ. ಹರಿಪ್ರಸಾದ್ ಉಸ್ತುವಾರಿ ಮಂತ್ರಿ ಆದರೆ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಅವರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಜನರನ್ನು ಸಮಾನಾಗಿ ಕಾಣುತ್ತಾರೆ. ಹರಿಪ್ರಸಾದ್ ಅವರು ಗಡುಸಾಗಿ ಆಡಳಿತ ನಡೆಸುವ ವ್ಯಕ್ತಿಯಾಗಿದ್ದಾರೆ. ಅವರು ಛಲದಂಕ ಮಲ್ಲ,1978 ರಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೊಟ್ಟರೆ ಜನ ಸಾಮರಸ್ಯದ ಜೀವನ ಮಾಡಬಹುದು. ಜಿಲ್ಲೆಗೆ ಶಕ್ತಿ ತುಂಬುವ ಕೆಲಸವನ್ನು ಬಿ.ಕೆ ಹರಿಪ್ರಸಾದ್ ಮಾಡಲಿದ್ದಾರೆ. ಯುಟಿ ಖಾದರ್ (UT Khader) ಗೂ ಒಳ್ಳೆಯ ಮಂತ್ರಿ ಸ್ಥಾನ ಸಿಗಬೇಕು ಎಂದರು.

    ಹರಿಪ್ರಸಾದ್ ಗೆ ಉಸ್ತುವಾರಿ ಸ್ಥಾನ, ಖಾದರ್ ಗೆ ಮಂತ್ರಿ ಸ್ಥಾನ ಕೊಡಬೇಕು. ಕಾಂಗ್ರೆಸ್ ನ ಐದು ಗ್ಯಾರಂಟಿ ಜಿಲ್ಲೆಯಲ್ಲಿ ಯಶಸ್ವಿಯಾಗಿಲ್ಲ. ಆದರೆ ಈ ಜಿಲ್ಲೆಗೂ ಆ ಯೋಜನೆಯನ್ನು ಜಾರಿ ಮಾಡಬೇಕು. ಯುಟಿ ಖಾದರ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಯುಟಿ ಖಾದರ್ ರಲ್ಲಿ ಡ್ಯಾಶಿಂಗ್ ನೇಚರ್ ಇಲ್ಲ. ಖಾದರ್ ಮೇಲೆ ಕೋಮು ಭಾವನೆ ತೋರಿಸಿ ಅವರನ್ನು ಸ್ತಬ್ಧ ಮಾಡುತ್ತಾರೆ ಎಂದು ಹೇಳಿದರು.

  • ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಅಭಯಚಂದ್ರ ಜೈನ್

    ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಅಭಯಚಂದ್ರ ಜೈನ್

    – ರಾಜಕೀಯ ನಿವೃತ್ತಿ ಘೋಷಿಸಿದ್ರಾ ಮಾಜಿ ಸಚಿವ..?

    ಮಂಗಳೂರು: ಕಾಂಗ್ರೇಸ್ ಪಕ್ಷದಲ್ಲಿ ಹಿರಿಯರೇ ಇರೋದು. ಹೀಗಾಗಿ ಮುಂದಿನ ದಿನದಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಘೋಷಿಸಿದ್ದಾರೆ.

    ಇಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಬದಲಾವಣೆ ಅಗತ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಯುವಕರಿಗೆ ಅವಕಾಶ ಒದಗಿಸಬೇಕು. ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಾನು ಯುವಕರಿಗೆ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದ್ದೆ. ಆದರೂ ನಾನು ಸ್ಪರ್ಧಿಸಬೇಕಾಯಿತು. ಕೊನೆಗೆ ಸೋಲಬೇಕಾಯಿತು ಎಂದರು. ಇದನ್ನೂ ಓದಿ: ಸಿಎಂ ಪುತ್ರನ ಹೆಸರಲ್ಲಿ ರಾಮುಲು PA ಡೀಲ್..? – 3 ಆಡಿಯೋದಲ್ಲಿ 5 ಕೋಟಿಗೆ ಡಿಮ್ಯಾಂಡ್

    ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಯುವಕರಿಗೆ ಸ್ಥಾನ ನೀಡುವುದು ಇಂದಿನ ರಾಜಕೀಯದ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ನಾನು ಈಗಾಗಲೇ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಸ್ವಯಂ ಆಗಿ ನಿರ್ಧರಿಸಿ, ಯುವಕರಿಗೆ ಸ್ಥಾನ ನೀಡಿ ಗೆಲ್ಲಿಸಲು ನಾನು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

  • ತಾಕತ್ತಿದ್ದರೆ ಚುನಾವಣೆಗೆ ನಿಲ್ಲಲಿ- ಕರಿಂಜೆ ಸ್ವಾಮೀಜಿಗೆ ಏಕವಚನದಲ್ಲೇ ಸವಾಲೆಸೆದ ಶಾಸಕ ಅಭಯಚಂದ್ರ ಜೈನ್

    ತಾಕತ್ತಿದ್ದರೆ ಚುನಾವಣೆಗೆ ನಿಲ್ಲಲಿ- ಕರಿಂಜೆ ಸ್ವಾಮೀಜಿಗೆ ಏಕವಚನದಲ್ಲೇ ಸವಾಲೆಸೆದ ಶಾಸಕ ಅಭಯಚಂದ್ರ ಜೈನ್

    ಮಂಗಳೂರು: ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಅವರು ಮೂಡಬಿದಿರೆಯ ಕರಿಂಜೆ ಮುಕ್ತಾನಂದ ಸ್ವಾಮೀಜಿ ಕುರಿತು ಪಕ್ಷದ ಕಾರ್ಯಕ್ರಮದಲ್ಲಿ ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ್ದಾರೆ.

    ತುಳುವಿನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಜೈನ್, ಅವಾ ಯಾರೋ ಒಬ್ಬ ಕರಿಂಜೆ ಸ್ವಾಮೀಜಿ ಭಾಷಣದಲ್ಲಿ ಹೇಳಿದನಂತೆ. ಒಬ್ಬ ರಾಕ್ಷಸ ಮುಖ್ಯಮಂತ್ರಿ ಇದ್ದಾನೆ. ಒಬ್ಬ ರಾಕ್ಷಸ ಎಂಎಲ್‍ಎ ಇದ್ದಾನೆ ಅಂತ. ನನಗೆ ಬೈಯಲಿ, ಅದು ಬಿಟ್ಟು ಮುಖ್ಯಮಂತ್ರಿಗೆ ಇನ್ನೊಮ್ಮೆ ಬೈದರೆ ಅವನು ಎಷ್ಟು ದೊಡ್ಡ ಸ್ವಾಮೀಜಿ ಆದರೂ ಬಿಡುವುದಿಲ್ಲ. ಅವನಿಗೆ ಕಪ್ಪು ಬಾವುಟ ಹಿಡಿಯುವಂತೆ ನಾನು ಮಾಡ್ತೇನೆ ಅಂತ ಹೇಳಿದ್ರು.

    ತಾಕತ್ತಿದ್ದರೆ ಕರಿಂಜೆ ಸ್ವಾಮೀಜಿ ಚುನಾವಣೆಗೆ ನಿಲ್ಲಲಿ. ಅವನು ಸರ್ಕಾರಿ ಜಾಗ ಕಬಳಿಸಿದ್ದಾನೆ. ಅದನ್ನು ತನಿಖೆ ಮಾಡಬೇಕು ಅಂತ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಅಂತ ಏಕವಚನದಲ್ಲಿ ನಿಂದಿಸಿ ಸವಾಲೆಸೆದಿದ್ದಾರೆ.

    ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿಗೆ ಬೈದ್ರೆ ನಾವು ಬಿಡಲ್ಲ. ದೊಡ್ಡ ಮಟ್ಟದ ಹೋರಾಟವೇ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಯಾರಿಗೂ ಅನ್ಯಾಯ ಮಾಡಿಲ್ಲ. ಬದಲಾಗಿ ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಒಗ್ಗಟ್ಟು ಬಹಳ ಮುಖ್ಯವಾಗಿದೆ. ಈಗಾಗಲೇ ಕಾಂಗ್ರೆಸ್ ವಿರುದ್ಧ ಹಲವಾರು ಪಿತೂರಿಗಳು ನಡೆದಿದ್ದು, ಇದ್ಯಾವುದನ್ನೂ ನಾವು ಕೇರ್ ಮಾಡಲ್ಲ. ಅವುಗಳನ್ನೆಲ್ಲಾ ಎದುರಿಸುವ ಕೆಲಸ ಮಾಡುತ್ತೇವೆ ಅಂದ್ರು.

    ಪ್ರತಾಪ್ ಚಂದ್ರ ಶೆಟ್ಟಿ ಅವರು ಹಿರಿಯ ಕಾಂಗ್ರೆಸ್ ಎಂಎಲ್‍ಎ ಹಾಗೂ ಎಂಎಲ್ ಸಿ ಆಗಿದ್ದರು. ಪ್ರಾಮಾಣಿಕ ವ್ಯಕ್ತಿಯಾಗಿರೋ ಅವರು ಇಂದಿಗೂ ಕುಂದಾಪುರದಲ್ಲಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಅವರೇ ವಿಧಾನಪರಿಷತ್ ಸದಸ್ಯರಾಗಬೇಕು ಅಂತ ಅವರು ಒತ್ತಾಯಿಸಿದರು.

    ಕರಿಂಜೆ ಶ್ರೀ ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ರಾಕ್ಷಸ ಸಿಎಂ ಮತ್ತು ರಾಕ್ಷಸ ಎಂಎಲ್‍ಎ ಎಂಬ ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಇದೀಗ ಹಿಂದೂ ಸ್ವಾಮೀಜಿ ಬಗ್ಗೆ ಶಾಸಕ ಅಭಯಚಂದ್ರ ಹೇಳಿಕೆ ನೀಡಿರುವುದರ ವಿರುದ್ಧ ಹಿಂದೂಪರ ಸಂಘಟನೆಗಳು ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದು, ಬೃಹತ್ ಪ್ರತಿಭಟನೆಗೆ ನಿರ್ಧಾರ ನಡೆಸಿವೆ.

  • ಕರಾವಳಿಯಲ್ಲಿ ಕಂಬಳ ಶುರು ಮಾಡಲು ಸಜ್ಜಾಗ್ತಿದೆ ವೇದಿಕೆ

    ಕರಾವಳಿಯಲ್ಲಿ ಕಂಬಳ ಶುರು ಮಾಡಲು ಸಜ್ಜಾಗ್ತಿದೆ ವೇದಿಕೆ

    ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಅತ್ತ ರಾಷ್ಟ್ರಪತಿ ಅಂಕಿತ ಸಿಗುತ್ತಿದ್ದಂತೆಯೇ ಈ ಋತುವಿನ ಮೊದಲ ಕಂಬಳಕ್ಕೆ ಸಿದ್ಧತೆ ನಡೆದಿದೆ.

    ನವೆಂಬರ್ 11 ಮತ್ತು 12 ರಂದು ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ನಡೆಯಲಿದ್ದು ಕರೆ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ.

    ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಈ ಕಂಬಳ ನಡೆಯಲಿದ್ದು ಕಂಬಳದ ವಿಚಾರ ಕೋರ್ಟ್ ಮೆಟ್ಟಿಲೇರಿದ ಎರಡು ವರ್ಷದ ಬಳಿಕ ಅಧಿಕೃತವಾಗಿ ನಡೆಯುತ್ತಿದೆ. ಇದೇ ವೇಳೆ, ರಾಜ್ಯ ಸರಕಾರ ಕಂಬಳದ ಕುರಿತು ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತವೂ ಲಭಿಸಿದ್ದು ಕಂಬಳ ಪ್ರಿಯರಿಗೆ ವರದಾನವಾಗಿ ಪರಿಣಮಿಸಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯಿಂದ ಕಂಬಳದ ವೇಳಾಪಟ್ಟಿ ನಿಗದಿಯಾಗಿದ್ದು ಪ್ರತಿ ಶನಿವಾರ ಕಂಬಳ ನಡೆಯುತ್ತೆ ಎಂಬುದಾಗಿ ತಿಳಿದುಬಂದಿದೆ.

     

  • ಕರಾವಳಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟ-ಸಿಎಂ ಎದುರೇ ಐವಾನ್, ಜೈನ್ ವಾರ್!

    ಕರಾವಳಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟ-ಸಿಎಂ ಎದುರೇ ಐವಾನ್, ಜೈನ್ ವಾರ್!

    ಮಂಗಳೂರು: ಕರಾವಳಿಯಲ್ಲಿ ಕಾಂಗ್ರೆಸ್‍ನ ಭಿನ್ನಮತ ಶಮನವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಮುಂದೆಯೇ ಪಕ್ಷದ ಸಚೇತಕ ಐವಾನ್ ಡಿಸೋಜ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ವಾಗ್ವಾದ ನಡೆಸಿದ್ದಾರೆ.

    ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಭೇಟಿ ನೀಡುವ ಸಲುವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ವೇಳೆ ಸಿದ್ದರಾಮಯ್ಯನವರನ್ನು ಸ್ವಾಗತಿಸಲು ಐವಾನ್ ಡಿಸೋಜಾ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಬೆಂಬಲಿಗರು ಬಂದಿದ್ರು.

    ಆದರೆ ಐವನ್ ಬೆಂಬಲಿಗರು ಭಿತ್ತಿಪತ್ರ ಹಿಡಿದು ಜಯಕಾರ ಕೂಗಿದ್ದನ್ನು ಶಾಸಕ ಅಭಯಚಂದ್ರ ಜೈನ್ ಆಕ್ಷೇಪಿಸಿದ್ದಾರೆ. ಈ ವೇಳೆ, ಉಭಯ ನಾಯಕರ ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯಿತು. ಆ ಬಳಿಕ ಸಿಎಂ ಸಿದ್ದರಾಮಯ್ಯ ಆಗಮಿಸಿದಾಗ ಸ್ವತಃ ಶಾಸಕ ಅಭಯಚಂದ್ರ ಜೈನ್, ಮುಖ್ಯ ಸಚೇತಕ ಐವನ್ ಡಿಸೋಜರನ್ನು ದುರುಗುಟ್ಟಿದ್ದಲ್ಲದೆ ಕೈಯಿಂದ ಎಳೆದಾಡಿದ ಘಟನೆ ನಡೆಯಿತು.

    ಐವನ್ ಡಿಸೋಜ ಅವರು ಸಿಎಂ ಹತ್ತಿರ ಹೋಗದಂತೆ ಜೈನ್ ಬೆಂಬಲಿಗರು ತಳ್ಳಿದ ವಿದ್ಯಮಾನ ಸಿಎಂ ಸಮ್ಮುಖದಲ್ಲಿಯೆ ನಡೆದಿದ್ದು ಭಿನ್ನಮತಕ್ಕೆ ಸಾಕ್ಷಿಯಾಯ್ತು. ಇದ್ರಿಂದ ಸಿಎಂ ಸಿದ್ದರಾಮಯ್ಯ ತೀವ್ರ ಮುಜುಗರಕ್ಕೊಳಗಾದ್ರು. ಈಗಾಗ್ಲೆ ಮೂಡುಬಿದಿರೆ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಐವನ್ ಡಿಸೋಜ ಕಸರತ್ತು ಆರಂಭಿಸಿದ್ದು ಇದೇ ವೇಳೆ ಇಂತಹ ಘಟನೆ ನಡೆದಿರುವುದು ಹೊಸ ರಾಜಕೀಯ ಸ್ವರೂಪ ಪಡೆಯುವ ಸಾಧ್ಯತೆಯಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸುಮಾರು 252.50 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಆಗಮಿಸಿದ್ದರು. ಮಿನಿ ವಿಧಾನಸೌಧ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 100 ಹಾಸಿಗೆಗಳ ಹೊಸ ಆಸ್ಪತ್ರೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳನ್ನು ಉದ್ಘಾಟಿಸಲಿದ್ದಾರೆ.

  • ವೀಡಿಯೋ: ರಸ್ತೆಗಾಗಿ ಬೇಡಿಕೆ ಇಟ್ಟ ಮಹಿಳೆಗೆ ಮೂಡಬಿದ್ರೆ ಶಾಸಕ ಅಭಯ್‍ಚಂದ್ರ ಜೈನ್ ನಿಂದನೆ

    ವೀಡಿಯೋ: ರಸ್ತೆಗಾಗಿ ಬೇಡಿಕೆ ಇಟ್ಟ ಮಹಿಳೆಗೆ ಮೂಡಬಿದ್ರೆ ಶಾಸಕ ಅಭಯ್‍ಚಂದ್ರ ಜೈನ್ ನಿಂದನೆ

    – ಕಾಂಗ್ರೆಸ್ ಶಾಸಕನ ಧಮ್ಕಿ ಈಗ ಫುಲ್ ವೈರಲ್

    ಮಂಗಳೂರು: ರಸ್ತೆ ನಿರ್ಮಾಣದ ಬಗ್ಗೆ ಮನವಿ ಮಾಡಿದ ಮಹಿಳೆಯೋರ್ವರನ್ನು ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಏಕವಚನದಲ್ಲಿ ನಿಂದಿಸಿ ಅವಮಾನಿಸಿದ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ವೈರಲ್ ಆಗಿದೆ.

    ಮೂಡಬಿದ್ರೆಯ ಧರೆಗುಡ್ಡೆ ಗ್ರಾಮಪಂಚಾಯತ್ ವ್ಯಾಪ್ತಿಯ ಪಣಪಿಲ ಎಂಬಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಪರಿಶೀಲನೆಗೆ ಬಂದಿದ್ದ ಶಾಸಕ ಅಭಯ್‍ಚಂದ್ರ ಜೈನ್ ಅವರಲ್ಲಿ ಸ್ಥಳೀಯ ನಿವಾಸಿ ವಸಂತಿ ಪೂಜಾರ್ತಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇಲ್ಲಿನ ಶಾಲೆಯೊಂದಕ್ಕೆ ಹೋಗುವ ರಸ್ತೆಗೆ ಇಂದಿಗೂ ಡಾಂಬರೀಕರಣ ಆಗಿಲ್ಲ. ಆ ರಸ್ತೆಯನ್ನು ಪರಿಶೀಲಿಸಿ ಎಂದಿದ್ದೇ ತಡ ಶಾಸಕ ಜೈನ್ ಸಿಡಿಮಿಡಿಗೊಂಡು ಮಹಿಳೆಗೆ ತುಳು ಭಾಷೆಯಲ್ಲಿ ಏಕವಚನದಲ್ಲಿ ಬೈದಿದ್ದಾರೆ.

    `ನಮ್ಮಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ನಮಗೆ ಶಾಲೆ ಮುಖ್ಯ. ಹೀಗಾಗಿ ರಸ್ತೆಗೆ ಡಾಂಬರೀಕರಣ ಮಾಡಿಕೊಡಿ ಎಂದು ಮಹಿಳೆ ಕೇಳಿಕೊಂಡಾಗ ಅಭಯ್ ಚಂದ್ರ ಜೈನ್, `ಮಾಡಿ ಕೊಡಲ್ಲ ಅಂದ್ರೆ ಮಾಡಿಕೊಡಲ್ಲ ಏನ್ ಮಾಡ್ತಿ ನೀನು’ ಅಂತಾ ಕಿಡಿಕಾರಿದ್ದಾರೆ. ಈ ವೇಳೆ ಜೈನ್ ಮಾತಿಗೆ ಜೊತೆಯಿದ್ದವರೂ ದನಿಗೂಡಿಸಿದ್ದಾರೆ.

    ಇದನ್ನು ಅಲ್ಲೇ ಇದ್ದ ವ್ಯಕ್ತಿಯೋರ್ವರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಮೊಬೈಲ್ ಚಿತ್ರೀಕರಣ ಆಗುತ್ತದೆ ಎಂದು ಗಮನಿಸಿದ ಧರೆಗುಡ್ಡೆ ಪಂಚಾಯತ್ ಸದಸ್ಯ ಸುಭಾಶ್ಚಂದ್ರ ಜೈನ್ ತಕ್ಷಣ ಮೊಬೈಲ್‍ಗೆ `ಕೈ’ ಅಡ್ಡ ಇಟ್ಟಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಶಾಸಕರ ವರ್ತನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

    https://www.youtube.com/watch?v=8tZC4zCUQ7s&feature=youtu.be