Tag: ಅನ್ಶುಮನ್ ಸಿಂಗ್

  • ಕೀರ್ತಿ ಚಕ್ರ; ಪತಿಯ ಮರಣೋತ್ತರ ಪ್ರಶಸ್ತಿ ಸ್ವೀಕರಿಸುವಾಗ ಕ್ಯಾ.ಅನ್ಶುಮನ್‌ ಸಿಂಗ್‌ ಪತ್ನಿ ಭಾವುಕ

    ಕೀರ್ತಿ ಚಕ್ರ; ಪತಿಯ ಮರಣೋತ್ತರ ಪ್ರಶಸ್ತಿ ಸ್ವೀಕರಿಸುವಾಗ ಕ್ಯಾ.ಅನ್ಶುಮನ್‌ ಸಿಂಗ್‌ ಪತ್ನಿ ಭಾವುಕ

    – ಪತಿಯ ಬಗ್ಗೆ ಹೇಳಿ ಸ್ಮೃತಿ ಭಾವುಕ

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ 7 ಮಂದಿ ಸೈನಿಕರಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕ್ಯಾ.ಅನ್ಶುಮನ್‌ ಸಿಂಗ್‌  (Captain Angshuman Singh) ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಲಾಯಿತು . ಈ ಗೌರವವನ್ನು ಸ್ವೀಕರಿಸಲು ಕ್ಯಾ.ಅನ್ಶುಮನ್‌ ಸಿಂಗ್‌ ಅವರ ಪತ್ನಿ ಸ್ಮೃತಿಯವರು ಸ್ಮರಣಾರ್ಥ ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಸ್ಮೃತಿ ತುಂಬಾ ಭಾವುಕರಾಗಿದ್ದರು. ಪತಿಯನ್ನು ಕಳೆದುಕೊಂಡ ದುಃಖವನ್ನು ಕಣ್ಣೀರಿನಲ್ಲಿಯೇ ಮುಚ್ಚಿಟ್ಟು ರಾಷ್ಟ್ರಪತಿಯವರಿಂದ ʼಕೀರ್ತಿ ಚಕ್ರʼ (Kirti Chakra) ಪಡೆದರು. ಇದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸನ್ಮಾನ ಸಮಾರಂಭದ ನಂತರ ಸ್ಮೃತಿ (Smriti Singh) ತಮ್ಮ ಪತಿಯೊಂದಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡರು. ನಾವಿಬ್ಬರೂ ಕಾಲೇಜಿನ ಮೊದಲ ವರ್ಷದಲ್ಲಿ ಓದುತ್ತಿದ್ದಾಗ ಭೇಟಿಯಾದೆವು. ಮೊದಲ ನೋಟದಲ್ಲೇ ಇಬ್ಬರೂ ಪ್ರೀತಿಯಲ್ಲಿ ಬಿದ್ದೆವು. ಒಂದು ತಿಂಗಳ ನಂತರ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ ಆಯ್ಕೆಯಾದರು. ವಾಸ್ತವವಾಗಿ ಅವರು ಬಹಳ ಬುದ್ಧಿವಂತ. ಒಂದು ತಿಂಗಳು ಭೇಟಿಯಾದ ನಂತರ ನಾವು 8 ವರ್ಷಗಳ ಕಾಲ ದೂರನೇ ಇದ್ದೆವು. ಇದಾದ ನಂತರ ನಾವಿಬ್ಬರೂ ಮದುವೆಯಾದೆವು.

    ಮದುವೆಯಾಗಿ ಎರಡು ತಿಂಗಳ ನಂತರ ಸಿಯಾಚಿನ್‌ನಲ್ಲಿ ನಿಯೋಜನೆಗೊಂಡಿದ್ದರು. ಇದು ನಿಜವೆಂದು ನಂಬಲು 7-8 ಗಂಟೆ ತೆಗೆದುಕೊಂಡಿತ್ತು. ಆದರೆ ಈಗ ನನ್ನ ಕೈಯಲ್ಲಿ ಕೀರ್ತಿ ಚಕ್ರವಿದೆ ಎಂದು ಗದ್ಗದಿತರಾದ ಸ್ಮೃತಿ, ಅವರೇ ನನಗೆ ಹೀರೋ. ಇನ್ನೊಬ್ಬರ ಜೀವ ಉಳಿಸಲು ತನ್ನ ಪ್ರಾಣವನ್ನೇ ಕೊಟ್ಟರು. ನಾವು ಹೇಗಾದರೂ ನಮ್ಮ ಜೀವನವನ್ನು ನಡೆಸುತ್ತೇವೆ ಎಂದು ಕಣ್ಣೀರಿಟ್ಟರು.

    ಕ್ಯಾ.ಅನ್ಶುಮನ್‌ ಸಿಂಗ್‌ ಅವರನ್ನು ಕಳೆದ ವರ್ಷ ಜುಲೈ ತಿಂಗಳಲ್ಲಿ ಪಂಜಾಬ್ ಬೆಟಾಲಿಯನ್‌ನ 403 ಫೀಲ್ಡ್ ಆಸ್ಪತ್ರೆಯಲ್ಲಿ ರೆಜಿಮೆಂಟಲ್ ಮೆಡಿಕಲ್ ಆಫೀಸರ್ ಆಗಿ ನೇಮಿಸಲಾಯಿತು. 2023 ರ ಜುಲೈ 19 ರಂದು ಶಾರ್ಟ್ ಸರ್ಕ್ಯೂಟ್‌ನಿಂದ ಸೇನೆಯ ಮದ್ದುಗುಂಡುಗಳ ಬಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಅನೇಕ ಸೈನಿಕರು ಈ ಬಂಕರ್‌ನಲ್ಲಿ ಸಿಲುಕಿಕೊಂಡರು. ಸೈನಿಕರನ್ನು ರಕ್ಷಿಸಲು ಕ್ಯಾ.ಅನ್ಶುಮನ್‌ ಸಿಂಗ್‌ ಬಂಕರ್ ಪ್ರವೇಶಿಸಿದರು. ಅಲ್ಲದೇ ಮೂವರು ಸೈನಿಕರನ್ನು ಸುರಕ್ಷಿತವಾಗಿ ಹೊರತೆಗೆದರು. ಆದರೆ ಅನ್ಶುಮನ್‌ ಸಿಂಗ್‌ ಅವರು ಗಂಭೀರ ಗಾಯಗೊಂಡರು. ಬಳಿಕ ಎಲ್ಲಾ ಸೈನಿಕರನ್ನು ಚಂಡೀಗಢಕ್ಕೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಅಲ್ಲಿ ಅನ್ಶುಮನ್‌ ಸಿಂಗ್‌ ನಿಧನರಾದರು.

  • ಪೊಲೀಸ್ ಪೇದೆಯ ಮೇಲೆ ಬಿಜೆಪಿ ಶಾಸಕನಿಂದ ಹಲ್ಲೆ, ಕೊಲೆ ಬೆದರಿಕೆ- ವಿಡಿಯೋ ನೋಡಿ

    ಪೊಲೀಸ್ ಪೇದೆಯ ಮೇಲೆ ಬಿಜೆಪಿ ಶಾಸಕನಿಂದ ಹಲ್ಲೆ, ಕೊಲೆ ಬೆದರಿಕೆ- ವಿಡಿಯೋ ನೋಡಿ

    ಭೋಪಾಲ್: ಬಿಜೆಪಿ ಶಾಸಕರೊಬ್ಬರು ಪೊಲೀಸ್ ಸಿಬ್ಬಂದಿಗೆ ಕಪಾಳಕ್ಕೆ ಬಾರಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಭೋಪಾಲ್ ದಲ್ಲಿ ನಡೆದಿದೆ.

    ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಬಿಜೆಪಿ ಶಾಸಕ ಚಂಪಾಲಾಲ್ ದೇವ್ಡಾ ಉದಯನಗರ ಪೊಲೀಸ್ ಠಾಣೆಗೆ ನುಗ್ಗಿ ಕಾನ್ಸ್ ಟೇಬಲ್ ಕಪಾಳಕ್ಕೆ ಹೊಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಪೊಲೀಸರು ಠಾಣೆಗೆ ಕರೆತಂದಿದ್ದರು. ಅವರನ್ನು ಠಾಣಾ ನಿರ್ಬಂಧಿತ ಜಾಗದಲ್ಲಿ ಅವರನ್ನು ಕೂರಿಸಲಾಗಿತ್ತು. ಈ ವೇಳೆ ದೇವ್ಡಾರವರ ಸೋದರ ಅಳಿಯ ಪೊಲೀಸ್ ಠಾಣೆಯ ನಿರ್ಬಂಧಿತ ಸ್ಥಳವನ್ನು ಪ್ರವೇಶಿಸಿದ್ದಾರೆ. ಅಲ್ಲದೇ ಅಲ್ಲಿದ್ದ ವ್ಯಕ್ತಿಯೊಬ್ಬರಿಂದ ನೀರಿನ ಬಾಟಲಿಯನ್ನು ಎಸೆದಿದ್ದಾರೆ.

    ಪೇದೆ ಸಂತೋಷ್ ಎಂಬುವರು ಈ ಪ್ರದೇಶವನ್ನು ಪ್ರವೇಶ ಮಾಡಿದ್ದು ಯಾಕೆ ಎಂದು ದೇವ್ಡಾ ಅವರ ಸೋದರ ಅಳಿಯರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ದೇವ್ಡಾರ ಅಳಿಯ ಈ ವಿಷಯವನ್ನು ಸಚಿವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಶಾಸಕ ದೇವ್ಡಾ ಪೊಲೀಸ್ ಠಾಣೆಯ ಒಳಗೆ ಬಂದು ಪೇದೆ ಸಂತೋಷ್ ಅವರ ಕಪಾಳಕ್ಕೆ ಎರಡು ಬಾರಿ ಹೊಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ಘಟನೆ ಪೊಲೀಸ್ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಪೊಲೀಸ್ ಪೇದೆ ಸಂತೋಷ್ ಹೇಳುವಂತೆ ಯಾವುದೋ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ಬಂದು ಅಲ್ಲಿದ್ದ ವ್ಯಕ್ತಿಯೊಬ್ಬರಿಂದ ನೀರಿನ ಬಾಟಲಿಯನ್ನು ಕಿತ್ತುಹಾಕಿದರು. ಅವರು ಹೊರಟು ನಿಂತಾಗ ಸಂತೋಷ್ ಅವರನ್ನು ತಡೆಯಲು ಮುಂದಾದರು. ಆಗ ಶಾಸಕ ದೇವ್ಡಾ ಹಾಗೂ ಅವರ ಮಗ ಪ್ರವೇಶಿಸಿ ಅವರ ಮೇಲೆ ಹಲ್ಲೆಗೆ ಮುಂದಾದರು ಎಂದು ಹೇಳಿದ್ದಾರೆ.

    ಈ ಘಟನೆಯನ್ನು ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ ಪಿ ಅನ್ಶುಮನ್ ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ. ಈ ಘಟನೆಯು ರಾತ್ರಿ 12 ರ ನಂತರ ನಡೆದಿದ್ದು ಭಾರತೀಯ ದಂಡ ಸಂಹಿತೆ 353 ಸೆಕ್ಷನ್ (ಕರ್ತವ್ಯದ ವೇಳೆ ಸರ್ಕಾರಿ ನೌಕರನ ಮೇಲೆ ಹಲ್ಲೆ), ಹಾಗೂ 332(ಕರ್ತವ್ಯ ನಿರ್ವಹಿಸದಂತೆ ಸರ್ಕಾರಿ ನೌಕರನಿಗೆ ಬೆದರಿಸಿ ಗಾಯ ಉಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೇವಾಸ್ ಜಿಲ್ಲೆಯ ಬಿಜೆಪಿ ವಕ್ತಾರ ಶಂಭು ಅಗರ್‍ವಾಲ್ ಈ ಘಟನೆ ದೇವ್ಡಾರವರಿಗೆ ಸಂಬಂಧಪಟ್ಟದ್ದಲ್ಲ. ಈ ಕುರಿತಂತೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.