Tag: ಅನುಷಾ ರಾವ್

  • ಮಿಲೆನಿಯಲ್ಸ್ ಜನರೇಷನ್ನಿನ ರೋಚಕ `ಮನರೂಪ’!

    ಮಿಲೆನಿಯಲ್ಸ್ ಜನರೇಷನ್ನಿನ ರೋಚಕ `ಮನರೂಪ’!

    ಬೆಂಗಳೂರು: ಕಿರಣ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದಿರೋ ಬಹು ನಿರೀಕ್ಷಿತ ಚಿತ್ರ ಮನರೂಪ. ಟೈಟಲ್ ಪೋಸ್ಟರ್ ಮೂಲಕವೇ ಪ್ರೇಕ್ಷಕರನ್ನೆಲ್ಲ ಅಚ್ಚರಿಗೀಡು ಮಾಡಿದ್ದ ಈ ಸಿನಿಮಾ ಇದೇ 22ರಂದು ತೆರೆಗಾಣಲಿದೆ. ಒಂದು ಸಿನಿಮಾ ಯಾವ ಯಾವ ರೀತಿಯಲ್ಲಿ ಸೆಳೆಯುವಂಥಾ ಕಂಟೆಂಟು ಹೊಂದಿರಬೇಕೋ ಅದೆಲ್ಲವನ್ನೂ ಬೆರೆಸಿಯೇ ನಿರ್ದೇಶಕರು ಈ ಕಥೆಯನ್ನು ಸಿದ್ಧಗೊಳಿಸಿದ್ದಾರೆ. ಇದುವರೆಗೆ ಪ್ರೇಕ್ಷಕರು ಅಂದುಕೊಂಡಿರುವಂತೆ, ಮೊನ್ನೆ ಬಿಡುಗಡೆಯಾದ ಟ್ರೇಲರ್‍ನಲ್ಲಿ ಕಾಣಿಸಿದಂತೆ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಧಾಟಿಯ ಕಥಾನಕವನ್ನೊಳಗೊಂಡಿದೆ ಅಂತಲೇ ಹೇಳಲಾಗುತ್ತದೆ. ನೋಡುಗರನ್ನು ಕ್ಷಣ ಕ್ಷಣವೂ ಕ್ಯೂರಿಯಾಸಿಟಿಯ ಕಮರಿಗೆ ತಳ್ಳುವಂತಹ ರೋಚಕ ಕಥೆಯನ್ನೊಳಗೊಂಡಿರೋ ಈ ಕಥೆಗೆ ಶೀರ್ಷಿಕೆಗೆ ತಕ್ಕುದಾದ ಛಾಯೆಯೂ ಇದೆ. ಒಂದು ಜನರೇಷನ್ನಿನ ಒಟ್ಟಾರೆ ಮನೋ ಪಲ್ಲಟಗಳನ್ನೂ ಕೂಡ ಈ ಕಥೆಯೊಂದಿಗೆ ಬೆರೆಸಲಾಗಿದೆ. ಅದುವೇ ಈ ಸಿನಿಮಾದ ಪ್ರಧಾನ ಅಂಶವೆಂದರೂ ತಪ್ಪಲ್ಲ.

    ಮನರೂಪ ಸಿನಿಮಾ 1980 ರಿಂದ 2000ದ ನಡುವಿನ ವರ್ಷಗಳ ನಡುವಿನ ಅವಧಿಯಲ್ಲಿ ಹುಟ್ಟಿರುವವರ ಕಥೆ. ಹೊಸ ತಲೆಮಾರು ಅಥವಾ ಮಿಲೆನಿಯಲ್ಸ್ ಎಂದು ಕರೆಸಿಕೊಳ್ಳುವ ಈ ಅವಧಿಯಲ್ಲಿ ಜನಿಸಿದ ಸಮೂಹದಲ್ಲಿ ಕಾಣುವ ಎರಡು ಬಗೆಯ ಭಿನ್ನತೆಯನ್ನು ಮನರೂಪ ಸಿನಿಮಾದಲ್ಲಿ ನಿರೂಪಿಸಲಾಗಿದೆ. ಖಂಡಿತವಾಗಿಯೂ, ಮನರೂಪ ಹೊಸ ತಲೆಮಾರಿನ ಸಿನಿಮಾ. ಪರಸ್ಪರ ಪ್ರೀತಿ ವಿಶ್ವಾಸದಿಂದ ಕುಟುಂಬದಲ್ಲಿ ಇರಲಾಗದ, ಹೊಂದಿಕೊಂಡು ಜೀವಿಸಲಾಗದ, ಒಂಟಿಯಾಗಿಯೇ ಉಳಿಯಲು ಇಚ್ಛಿಸುವ, ಆದರೆ ತಮ್ಮನ್ನೇ ಗಮನಿಸಬೇಕು ಎನ್ನುವ ಮನೋಭಾವದ ಯುವ ಮನಸ್ಸಿನ ಕಥೆ ಇಲ್ಲಿದೆ.

    ಉತ್ತರಕನ್ನಡದ ಶಿರಸಿ, ಸಿದ್ಧಾಪುರ ಭಾಗಗಳಲ್ಲಿ ಮನರೂಪ ಚಿತ್ರೀಕರಣ ಮಾಡಲಾಗಿದೆ. ಮುಖ್ಯ ಭೂಮಿಕೆಯಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಅಭಿನಯಿಸಿದ್ದಾರೆ. ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರು ಅಭಿನಯಿಸಿದ್ದಾರೆ. ನಿರ್ದೇಶಕ ಕಿರಣ್ ಹೆಗ್ಡೆ ಹಲವಾರು ವರ್ಷಗಳ ಕಾಲ ಕಾಡಿಸಿಕೊಂಡು, ಅದಕ್ಕಾಗಿ ತಯಾರಾಗಿ, ವರ್ಷಗಟ್ಟಲೆ ಶ್ರಮವಹಿಸಿ ರೂಪಿಸಿರೋ ಚಿತ್ರ ಮನೋರೂಪ. ಅದು ನಿಮ್ಮೆಲ್ಲರೆದುರು ಬಿಚ್ಚಿಕೊಳ್ಳಲು ದಿನಗಣನೆ ಶುರುವಾಗಿದೆ.

  • ಕಾಡಿನ ಒಡಲಲ್ಲಿ ಬಿಚ್ಚಿಕೊಳ್ಳುವ ‘ಮನರೂಪ’ ಬೆಚ್ಚಿ ಬೀಳಿಸುತ್ತೆ!

    ಕಾಡಿನ ಒಡಲಲ್ಲಿ ಬಿಚ್ಚಿಕೊಳ್ಳುವ ‘ಮನರೂಪ’ ಬೆಚ್ಚಿ ಬೀಳಿಸುತ್ತೆ!

    ಬೆಂಗಳೂರು: ಕಾಡು ಮತ್ತು ಅದರೊಳಗಿನ ನಿಗೂಢಗಳ ಕಥೆ ಈ ವರೆಗೂ ಅನೇಕ ಸಿನಿಮಾ ರೂಪದಲ್ಲಿ ಪ್ರೇಕ್ಷಕರನ್ನು ಎದುರುಗೊಂಡಿವೆ. ಕಾಡೊಳಗೆ ಸಂಚರಿಸುವ ಕಥೆಯನ್ನೊಳಗೊಂಡಿರೋ ಸಿನಿಮಾಗಳ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲಿ ಎಂದೂ ಬತ್ತದ ಬೆರಗುಗಳಿವೆ. ಈ ಕಾರಣದಿಂದಲೇ ಆಗಾಗ ಅಂಥಾ ಸಿನಿಮಾಗಳು ಅಣಿಗೊಂಡರೆ ಎಲ್ಲರೂ ಅದರತ್ತ ಆಕರ್ಷಿತರಾಗುತ್ತಾರೆ. ಇಂಥಾ ಕಾಡಿನ ರಹಸ್ಯಗಳ ಜೊತೆಗೆ ಮನುಷ್ಯನ ಮಾನಸಿಕ ತಲ್ಲಣಗಳೂ ಸೇರಿದ ಕಥೆಯೊಂದಿಗೆ ತೆರೆಗಾಣಲು ರೆಡಿಯಾಗಿರೋ ಚಿತ್ರ ಮನರೂಪ. ಕಿರಣ್ ಹೆಗ್ಡೆ ನಿರ್ದೇಶನದ ಈ ಸಿನಿಮಾ ಇದೇ ತಿಂಗಳ 22ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ.

    ಪತ್ರಿಕೋದ್ಯಮ ಮತ್ತು ಸಾಹಿತ್ಯದತ್ತ ಅಪಾರ ಆಸಕ್ತಿ ಹೊಂದಿರುವ, ಆ ಮೂಲಕವೇ ಸೂಕ್ಷ್ಮವಾದ ಮನಸ್ಥಿತಿಯನ್ನು ತಮ್ಮದಾಗಿಸಿಕೊಂಡಿರುವವರು ನಿರ್ದೇಶಕ ಕಿರಣ್ ಹೆಗ್ಡೆ. ಸಾಹಿತ್ಯಾಸಕ್ತಿ ಮತ್ತು ತಾವು ಹುಟ್ಟಿ ಬೆಳೆದ ಶಿರಸಿ ಭಾಗದ ವಾತಾವರಣದಿಂದಲೇ ಅವರಿಗೆ ಸೂಕ್ಷ್ಮವಂತಿಕೆಯ ಮನಸ್ಥಿತಿ ಸಿದ್ಧಿಸಿದೆ. ಬಹುಶಃ ಸಾಹಿತ್ಯದ ಸಂಗವಿರದೆ ಮನರೂಪದಂಥಾ ಕಥೆಗಳು ರೂಪುಗೊಳ್ಳಲು ಸಾಧ್ಯವೇ ಇಲ್ಲವೇನೋ… ಈ ಸಿನಿಮಾ ಹೊಸತನ ದ ಕಥೆಯನ್ನೊಳಗೊಂಡಿದೆ ಅನ್ನೋ ಸುಳಿವು ಈ ಹಿಂದೆ ಪೋಸ್ಟರ್ ಗಳ ಮೂಲಕವೇ ಸಿಕ್ಕಿ ಹೋಗಿತ್ತು. ಇದೀಗ ಮನರೂಪ ಬಿಡುಗಡೆಯ ಹೊಸ್ತಿಲಲ್ಲಿರುವ ಘಳಿಗೆಯಲ್ಲಿ ನಿರ್ದೇಶಕರು ಮತ್ತೂ ಇಂಟರೆಸ್ಟಿಂಗ್ ಆದ ಒಂದಷ್ಟು ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದುವೇ ಈ ಸಿನಿಮಾದತ್ತ ಪ್ರೇಕ್ಷಕರಲ್ಲಿರೋ ಕುತೂಹಲವನ್ನು ಮತ್ತಷ್ಟು ತೀವ್ರಗೊಳಿಸುವಂತಿವೆ.

    ಇಲ್ಲಿನ ಇಡೀ ಕಥೆ ಕಾಡಿನ ಬ್ಯಾಕ್‍ಡ್ರಾಪ್‍ನಲ್ಲಿ ಕಳೆಗಟ್ಟಿಕೊಳ್ಳುವಂತೆ ಕಿರಣ್ ಹೆಗ್ಡೆ ನೋಡಿಕೊಂಡಿದ್ದಾರೆ. ಕಾಡೊಳಗಿನ ನಿಶ್ಯಬ್ಧ ಮೋಹಕವೂ ಹೌದು, ಭಯಾನಕವೂ ಹೌದು. ಅಂಥಾ ವಾತಾವರಣಕ್ಕೆ ಎಂಭತ್ತರ ದಶಕದಿಂದ ಎರಡು ಸಾವಿರನೇ ಇಸವಿಯ ವರೆಗಿನ ಜನರೇಷನ್ನಿನ ಮನೋಲೋಕವನ್ನು ಸಮ್ಮಿಳಿತಗೊಳಿಸಿ ಕಿರಣ್ ಹೆಗ್ಡೆ ಈ ಕಥೆಯನ್ನು ರೂಪಿಸಿದ್ದಾರಂತೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್‍ನಲ್ಲಿ ಇಡೀ ಸಿನಿಮಾ ಅದೆಷ್ಟು ಕುತೂಹಲಕರವಾಗಿ ಮೂಡಿ ಬಂದಿದೆ ಎಂಬುದು ಸ್ಪಷ್ಟವಾಗಿಯೇ ಗೊತ್ತಾಗಿದೆ. ಸದರಿ ಟ್ರೇಲರ್ ನಲ್ಲಿನ ತೀವ್ರತೆಯೇ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ಥ್ರಿಲ್ ಆಗಿಸಲಿದೆಯಂತೆ.

    ಹತ್ತು ವರ್ಷಗಳ ನಂತರ ಮುಖಾಮುಖಿಯಾಗಿ ಖುಷಿಗೊಳ್ಳುವ ಸ್ನೇಹಿತರ ದಂಡೊಂದು ಕರಡಿ ಗುಹೆಯೆಂಬ ಪ್ರದೇಶಕ್ಕೆ ಚಾರಣ ಹೊರಡುತ್ತೆ. ಆ ಹಾದಿಯಲ್ಲಿ ಎದುರಾಗುವ ವಿಕ್ಷಿಪ್ತ ಮತ್ತು ಭಯಾನಕ ಸನ್ನಿವೇಶಿಗಳಿಗೆ ಅವರೆಲ್ಲ ಹೇಗೆ ಸ್ಪಂದಿಸುತ್ತಾರೆ, ಅವರ ಮಾನಸಿಕ ಸ್ಥಿತಿಗತಿಗಳು ಹೇಗೆಲ್ಲ ರೂಪಾಂತರಗೊಳ್ಳುತ್ತವೆ ಎಂಬುದರ ಸುತ್ತ ಕಥೆ ಚಲಿಸುತ್ತೆ. ಹಾಗಂತ ಇದನ್ನು ಬೇರೆ ಜಾಡಿನ ಸಿನಿಮಾ ಅಂದುಕೊಳ್ಳಬೇಕಿಲ್ಲ. ಅದೆಷ್ಟೋ ವರ್ಷಗಳಿಂದ ಸಿನಿಮಾ ವ್ಯಾಮೋಹ ಹೊಂದಿರುವ ಕಿರಣ್ ಹೆಗ್ಡೆ ಕಮರ್ಶಿಯಲ್ ಹಾದಿಯಲ್ಲಿಯೇ ಈ ದೃಷ್ಯಗಳನ್ನು ಕಟ್ಟಿ ಕೊಟ್ಟಿದ್ದಾರಂತೆ. ಅಂತೂ ಕಾಡುತ್ತಲಾ ಬೆಚ್ಚಿ ಬೀಳಿಸಲಿರೋ ಮನರೂಪ ಇದೇ 22ರಂದು ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.

  • ಇದು ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಚಿತ್ರಕಥಾ!

    ಇದು ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಚಿತ್ರಕಥಾ!

    ಹೊಸಬರ ತಂಡದ ಮೇಲೆ ಕನ್ನಡ ಪ್ರೇಕ್ಷಕರಲ್ಲಿರೋ ನಂಬಿಕೆ ಮತ್ತೊಮ್ಮೆ ನಿಜವಾಗಿದೆ. ಇದೀಗ ಬಿಡುಗಡೆಯಾಗಿರೋ ಚಿತ್ರಕಥಾ ಹೊಸಾ ತಂಡವೊಂದು ರೂಪಿಸಿರೋ ಚಿತ್ರ. ಆದರೆ ಆರಂಭ ಕಾಲದಿಂದಲೂ ಈ ಸಿನಿಮಾ ಪೋಸ್ಟರ್ ಮುಂತಾದ ಕ್ರಿಯೇಟಿವ್ ಅಂಶಗಳೊಂದಿಗೆ ಪ್ರೇಕ್ಷಕರನ್ನು ಆಕರ್ಶಿಸುತ್ತಲೇ ಸಾಗಿ ಬಂದಿತ್ತು. ಅದೇ ಬಿಸಿಯಲ್ಲಿ ಬಿಡುಗಡೆಯಾಗಿರೋ ಚಿತ್ರಕಥಾ ಕಡೇಯವರೆಗೂ ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಮೂಲಕ ಪ್ರೇಕ್ಷಕರನ್ನು ಸಂತುಷ್ಟಗೊಳಿಸುವಲ್ಲಿ ಯಶಸ್ವಿಯಾಗಿದೆ.

    ಇದು ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನ ಚಿತ್ರವೆಂದು ಬಿಂಬಿಸಲ್ಪಡುತ್ತಲೇ ಅದರಲ್ಲಿಯೂ ವಿಶೇಷವಾದುದೇನನ್ನೋ ಬಚ್ಚಿಟ್ಟುಕೊಂಡಿರುವಂಥಾ ಸೂಚನೆ ರವಾನಿಸುತ್ತಾ ಬಂದಿದ್ದ ಚಿತ್ರ. ಚಿತ್ರತಂಡ ಜಾಹೀರು ಮಾಡಿದ್ದ ಒಂದೊಂದು ಸಣ್ಣ ಸಣ್ಣ ಸುಳಿವುಗಳೂ ಸಹ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ್ದವು. ಒಂದು ಸಶಕ್ತ ತಾರಾಗಣದೊಂದಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಹೊಸತನದ ಸುಳಿವಿನೊಂದಿಗೆ ಸಾಗಿ ಬಂದಿದ್ದ ಚಿತ್ರಕಥಾದ ನವೀನ ಶೈಲಿಯ ಕಥೆ, ನಿರೂಪಣಾ ಶೈಲಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇಡೀ ಚಿತ್ರ ಮೂಡಿ ಬಂದಿರೋ ರೀತಿಯೇ ಅದಕ್ಕೆ ತಕ್ಕುದಾಗಿದೆ.

    ಇದು ಓರ್ವ ಕಲಾವಿದ ಮತ್ತು ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ಕಟ್ಟಿಕೊಂಡಿರೋ ಹುಡುಗನೊಬ್ಬನ ಸುತ್ತಾ ಸುತ್ತುವ ಕಥಾಹಂದರ ಹೊಂದಿರುವ ಚಿತ್ರ. ಇಲ್ಲಿ ಸುಜಿತ್ ರಾಥೋಡ್ ರಾಣಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಣಾ ಚಿತ್ರರಂಗದ ಬಗ್ಗೆ ಬಣ್ಣದ ಕನಸುಗಳನ್ನು ತುಂಬಿಕೊಂಡು ನಿರ್ದೇಶಕನಾಗೋ ಆಸೆಯಿಂದ ಜೀವಿಸೋ ಹುಡುಗ. ಆದರೆ ಈ ಹಾದಿಯಲ್ಲಿ ಎಲ್ಲ ಪ್ರಯತ್ನಗಳಾಚೆಗೂ ನಿರಾಸೆಗಳೇ ಆತನ ಕೈ ಹಿಡಿಯುತ್ತವೆ. ತಾನು ನಿರ್ದೇಶಕನಾಗಲು ಕಾಲ ಕೂಡಿ ಬಂದಿಲ್ಲವಲ್ಲಾ ಎಂಬ ಚಿಂತೆಯಲ್ಲಿರುವಾಗಲೇ ಪ್ರೀತಿಯ ಹುಡುಗಿಯೂ ಕೈಬಿಟ್ಟು ನಡೆದು ಹೋಗುತ್ತಾಳೆ. ಆ ಕ್ಷಣಗಳಲ್ಲಿ ರಾಣಾನನ್ನು ಇಡಿಯಾಗಿ ತಬ್ಬಿ ನಿಲ್ಲೋದು ಗಾಢವಾದ ಹತಾಶೆ ಮಾತ್ರ.

    ಇಂಥಾ ಸ್ಟೇಜಿನಲ್ಲಿರೋ ಹುಡುಗರಿಗೆ ಬಾರಿನ ಸ್ಟೆಪ್ಪುಗಳೇ ಮೊದಲನೆಯದಾಗಿ ಸ್ವಾಗತಿಸುತ್ತವೆ. ರಾಣಾ ಕೂಡಾ ಹತಾಶೆಯ ಮಡುವಿಗೆ ಬಿದ್ದು ಬಾರು ಸೇರಿಕೊಳ್ಳುತ್ತಾನೆ. ಇಂಥಾ ಘಳಿಗೆಯಲ್ಲಿಯೇ ಕಲಾವಿದನೊಬ್ಬ ಬಿಡಿಸಿದ ಚಿತ್ರ ಅಘೋರಿಯ ರೂಪದಲ್ಲಿ ಆತನನ್ನು ಕಾಡಲು ಶುರುವಿಡುತ್ತದೆ. ಇದು ಭ್ರಮೆಯಾ ವಾಸ್ತವವಾ ಎಂಬ ಸತ್ಯವನ್ನು ನಶೆಯಲ್ಲಿ ತಡಕಾಡುತ್ತಿರುವಾಗಲೇ ಸಾಕ್ಷಾತ್ತು ಅಘೋರಿಯೇ ರಾಣಾನೆದುರು ಪ್ರತ್ಯಕ್ಷವಾಗುತ್ತಾನೆ. ಕೊಲ್ಲಲೂ ಮುಂದಾಗುತ್ತಾನೆ. ನಂತರ ರಾಣಾ ಹೋದಲ್ಲಿ ಬಂದಲ್ಲಿ ಕೊಲ್ಲಲು ಹವಣಿಸೋ ಅಘೋರಿಯದ್ದೇ ಕಾಟ. ರಾಣಾನನ್ನು ಕಾಡುತ್ತಿರೋ ಅಘೋರಿಯ ಮೂಲ ಹುಡುಕುತ್ತಾ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಸುಧಾರಾಣಿ ಎಂಟ್ರಿ ಕೊಡುತ್ತಾರೆ. ಆ ನಂತರದ್ದು ನಿಜಕ್ಕೂ ರೋಚಕ ಜರ್ನಿ.

    ಹಾಗಾದರೆ ಈ ಅಘೋರಿಯ ಚಿತ್ರ ಬಿಡಿಸಿದ ಕಲಾವಿದನ್ಯಾರು, ಆ ಕಲಾವಿದನಿಗೂ ರಾಣಾಗೂ ಇರುವ ನಂಟ್ಯಾವುದು, ಯಾಕೆ ಆ ಅಘೋರಿ ನಾಯಕನ ಬೆಂಬಿದ್ದು ಕೊಲ್ಲಲು ಹವಣಿಸುತ್ತಾನೆಂಬ ಪ್ರಶ್ನೆಗಳಿಗೆ ಕ್ಲೈಮ್ಯಾಕ್ಸ್ ವರೆಗೂ ಕುತೂಹಲ ಬಿಗಿಯಾಗಿಟ್ಟುಕೊಳ್ಳುವ ಉತ್ತರವೊಂದು ಚಿತ್ರಕಥಾದಲ್ಲಿದೆ. ಮತ್ತದು ಮಜವಾದ ಅನುಭವಗಳನ್ನೇ ನೋಡುಗರೆಲ್ಲರಿಗೂ ಕಡೆಯವರೆಗೂ ಕಟ್ಟಿ ಕೊಡುತ್ತದೆ. ಆ ಅನುಭವ ಕೂಡಾ ಸಾಮಾನ್ಯ ಸೈಕಾಲಾಜಿಕಲ್ ಥ್ರಿಲ್ಲರ್ ಕಥನಗಳಿಗಿಂತ ಭಿನ್ನವಾಗಿದೆ ಎಂಬುದೇ ಚಿತ್ರಕಥಾ ಆಪ್ತವಾಗೋದರ ಹಿಂದಿರುವ ಅಸಲೀ ಗುಟ್ಟು.

    ಇದು ಯಶಸ್ವಿ ಬಾಲಾದಿತ್ಯ ನಿರ್ದೇಶನದ ಮೊದಲ ಚಿತ್ರ. ಆದರೆ ಅವರು ಇಡೀ ಚಿತ್ರವನ್ನು ಪಳಗಿದ ನಿರ್ದೇಶಕನಂತೆ ನಿಭಾಯಿಸಿದ ರೀತಿ ಇಷ್ಟವಾಗುವಂತಿದೆ. ಇಲ್ಲಿ ಒಂದು ಹಂತದಲ್ಲಿ ಪಾತ್ರಗಳೇ ವಿಹ್ವಲಗೊಳ್ಳುತ್ತವೆ. ಗೊಂದಲಕ್ಕೆ ಬೀಳುತ್ತವೆ. ಚೂರೇ ಚೂರು ಆಚೀಚೆಯಾದರೂ ಅದು ಪ್ರೇಕ್ಷಕರಿಗೂ ದಾಟಿಕೊಳ್ಳುವ ಅಪಾಯವೂ ಇದ್ದೇ ಇತ್ತು. ಆದರೆ ಅದನ್ನೂ ಕೂಡಾ ಕುತೂಹಲವಾಗಿ ಮಾರ್ಪಾಟು ಮಾಡಿರೋದು ಯಶಸ್ವಿ ಬಾಲಾದಿತ್ಯರ ಟ್ಯಾಲೆಂಟಿಗೆ ಸಾಕ್ಷಿಯಂತಿದೆ. ಸುಧಾರಾಣಿ, ಬಿ. ಜಯಶ್ರೀ, ದಿಲೀಪ್ ರಾಜ್, ತಬಲಾ ನಾಣಿ, ಅನುಷಾ ರಾವ್ ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರಗಳನ್ನು ಪರಿಣಾಮಕಾರಿಯಾಗಿಸಿದ್ದಾರೆ. ಸುಜಿತ್ ರಾಥೋಡ್ ಕೂಡಾ ಇದು ಮೊದಲ ಚಿತ್ರವೆಂಬುದನ್ನೇ ಮರೆಮಾಚುವಂಥಾ ಮಾಗಿದ ನಟನೆ ಕೊಟ್ಟಿದ್ದಾರೆ.

    ಅಂತೂ ಚಿತ್ರಕಥಾ ಪ್ರತೀ ಪ್ರೇಕ್ಷಕರಲ್ಲಿಯೂ ವಿಭಿನ್ನ ಅನುಭೂತಿಯೊಂದನ್ನು ಮೂಡಿಸಿಸುತ್ತಲೆ. ಖುದ್ದು ನೋಡುಗರೇ ಭ್ರಮ ಮತ್ತು ವಾಸ್ತವದ ನಡುವಿನ ತೊಳಲಾಟದಲ್ಲಿ ಅರೆಕ್ಷಣ ಕಂಗಾಲಾಗುವಂತೆ ಮಾಡುವಷ್ಟು ಸಶಕ್ತವಾಗಿ ಇಲ್ಲಿನ ದೃಶ್ಯಗಳು ಮೂಡಿ ಬಂದಿವೆ. ಈ ಸಿನಿಮಾವನ್ನು ನೋಡುವ ಮೂಲಕ ಅಂಥಾ ವಿಶಿಷ್ಟ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

    ರೇಟಿಂಗ್: 3.5/5