Tag: ಅನಿಷ್ಟ ಪದ್ಧತಿ

  • ‘ಪಬ್ಲಿಕ್’ ಇಂಪ್ಯಾಕ್ಟ್ – ಯಾದಗಿರಿಯಲ್ಲಿ ಅನಿಷ್ಟ ಪದ್ಧತಿಗೆ ತಿಲಾಂಜಲಿ ಇಟ್ಟ ಜಿಲ್ಲಾಡಳಿತ

    ‘ಪಬ್ಲಿಕ್’ ಇಂಪ್ಯಾಕ್ಟ್ – ಯಾದಗಿರಿಯಲ್ಲಿ ಅನಿಷ್ಟ ಪದ್ಧತಿಗೆ ತಿಲಾಂಜಲಿ ಇಟ್ಟ ಜಿಲ್ಲಾಡಳಿತ

    ಯಾದಗಿರಿ: ಜಿಲ್ಲೆಯ ಸುರಪುರ (Surapura) ತಾಲೂಕಿನಲ್ಲಿ ಅನಿಷ್ಟ ಪದ್ಧತಿಯೊಂದು ಜೀವಂತವಾಗಿದ್ದು, ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ರೆ ದಲಿತರಿಗೆ (Dalits) ಬಹಿಷ್ಕಾರ ಹಾಕಲಾಗುತ್ತದೆ ಎಂಬ ವಿಚಾರ ಕಳೆದ ಎರಡು ದಿನದಿಂದ ಮುನ್ನೆಲೆಗೆ ಬಂದಿತ್ತು. ಈ ಕುರಿತು ನಿಮ್ಮ ಪಬ್ಲಿಕ್ ಟಿವಿ (Public Tv) ವರದಿಯನ್ನು ಪ್ರಸಾರ ಮಾಡಿದ ಹಿನ್ನೆಲೆ ಎಚ್ಚೆತ್ತ ಜಿಲ್ಲಾಡಳಿತ ಕೊನೆಗೂ ಈ ಅನಿಷ್ಟ ಪದ್ಧತಿಗೆ ತಿಲಾಂಜಲಿ ಬಿಟ್ಟಿದೆ.

    ಅನಿಷ್ಟ ಪದ್ಧತಿಯ ಕುರಿತು ಪಬ್ಲಿಕ್ ಟಿವಿಯಲ್ಲಿ ಬಿತ್ತರವಾದ ವರದಿಯಿಂದ ಯಾದಗಿರಿ ಜಿಲ್ಲಾಡಳಿತ (District Administration) ಎಚ್ಚೆತ್ತುಕೊಂಡು ದೇವಿಕೇರಾ ಗ್ರಾಮದಲ್ಲಿ ಪ್ರಾಣಿ ಬಲಿ ನಿಷೇಧಿಸಿ ಶಾಂತಿಯುತವಾಗಿ ದೇವಿ ಜಾತ್ರೆಯನ್ನು ಆಚರಣೆ ಮಾಡಿದೆ. ಕೋಣ ಬಲಿಕೊಡುವ ಜಾಗದಲ್ಲಿ ಕುಂಬಳಕಾಯಿ ಒಡೆದು ಮರೆಮ್ಮ, ಪಾಲ್ಕಮ್ಮ ಹಾಗೂ ದೇವಮ್ಮ ದೇವಿ ಜಾತ್ರೆಯನ್ನು (Fair) ಆಚರಿಸಲಾಯಿತು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಜಾತ್ರೆ ಆಚರಣೆ ಮಾಡಿದ್ದು, ಜಾತ್ರೆ ಹಿನ್ನೆಲೆ ದೇವಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಕೆ ಮಾಡಲಾಯಿತು. ಇದನ್ನೂ ಓದಿ: ದೇವರಿಗೆ ಬಲಿಕೊಟ್ಟ ಕೋಣದ ಮಾಂಸ ತಿನ್ನದಿದ್ರೆ ದಲಿತರಿಗೆ ಬಹಿಷ್ಕಾರ – ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ

    ನೂರಾರು ಮುತ್ತೈದೆಯರು ಮಡಿಯಿಂದ ತಮ್ಮತಮ್ಮ ಮನೆಗಳಿಂದ ದೀಪಗಳನ್ನ ತಲೆ ಮೇಲೆ ಇಟ್ಟುಕೊಂಡು ದೇವಸ್ಥಾನಕ್ಕೆ ಆಗಮಿಸಿ ದೀಪ ಬೆಳಗಿಸಿದರು. ಅಲ್ಲದೇ ಡೊಳ್ಳು ಕುಣಿತ ಹಾಗೂ ವಿವಿಧ ಕಲಾ ತಂಡಗಳು ಜಾತ್ರೆಗೆ ಮೆರಗು ತಂದವು. ರಾತ್ರಿಯಿಂದ ಬೆಳಗ್ಗಿನ ಜಾವದವರೆಗೂ ಜರುಗಿದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಅನಿಷ್ಠ ಪದ್ಧತಿಗೆ ಯಾದಗಿರಿ ಜಿಲ್ಲಾಡಳಿತ ಮಂಗಳ ಹಾಡಿದೆ. ದೇವಿಕೇರಾ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮಸ್ಥರನ್ನು ಸುರಪುರ ತಹಶೀಲ್ದಾರ್ ವಿಜಯಕುಮಾರ್ ಮನವೊಲಿಸಿದ್ದಾರೆ. ಪ್ರಾಣಿ ಬಲಿ ನಿಷೇಧಕ್ಕಾಗಿ ಕಟ್ಟುನಿಟ್ಟಿನ ಮುಂಜಾಗೃತಾ ಕ್ರಮ ಕೈಗೊಂಡ ಹಿನ್ನೆಲೆ ದೇವಿಕೇರಾ ಗ್ರಾಮದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: 2ನೇ ಹಂತದ ಭಾರತ್ ಜೋಡೋ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧಾರ

    ಶಾಂತಿಯುತ ಜಾತ್ರೆ ಆಚರಣೆಗಾಗಿ ಸುರಪುರ ತಹಶೀಲ್ದಾರ್ ರಾತ್ರಿ ಇಡೀ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಈ ಪರಿಣಾಮ ಮರೆಮ್ಮ, ಪಾಲ್ಕಮ್ಮ ಹಾಗೂ ದೇವಮ್ಮ ದೇವರ ಜಾತ್ರೆ ಎರಡು ದಿನಗಳ ಕಾಲ ಶಾಂತಿಯುತವಾಗಿ ಜರುಗಿದೆ. ಇದಕ್ಕೂ ಮೊದಲು ಜಾತ್ರೆಯಲ್ಲಿ ಬಲಿ ಕೊಟ್ಟ ಕೋಣದ ಮಾಂಸ ದಲಿತರು ತಿನ್ನಬೇಕಿತ್ತು. ಹಾಗೇ ಕೋಣದ ಮಾಂಸ ತಿನ್ನದೇ ಇದ್ದರೆ ಬಹಿಷ್ಕಾರ ಹಾಕುವ ಬೆದರಿಕೆಯನ್ನೂ ಒಡ್ಡಲಾಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: 70 ಕೋಟಿ ವಂಚನೆ ಮಾಡಿದ ಟೆಕ್ಕಿ ದಂಪತಿ!

  • ‘ಸಾಲದ ದುಡ್ಡು ವಾಪಸ್ ಕೊಡುವವರೆಗೂ ಶವ ಸಂಸ್ಕಾರಕ್ಕೆ ಬಿಡಲ್ಲ’- ಯಜಮಾನರ ಪಟ್ಟು

    ‘ಸಾಲದ ದುಡ್ಡು ವಾಪಸ್ ಕೊಡುವವರೆಗೂ ಶವ ಸಂಸ್ಕಾರಕ್ಕೆ ಬಿಡಲ್ಲ’- ಯಜಮಾನರ ಪಟ್ಟು

    – ಮೃತನ ಮನೆಗೆ ಹೋಗದಂತೆ ಗ್ರಾಮಸ್ಥರಿಗೆ ಆದೇಶ
    – 19,300 ರೂ. ಕೊಟ್ಟ ಬಳಿಕ ನಡೆದ ಅಂತ್ಯಸಂಸ್ಕಾರ
    – ಮೂಕಪ್ರೇಕ್ಷಕರಂತೆ 4 ಗಂಟೆ ನಿಂತಿದ್ದ ಪೊಲೀಸರು

    ಚಾಮರಾಜನರ: ‘ಸಾಲದ ದುಡ್ಡು ವಾಪಸ್ ಕೊಡುವವರೆಗೂ ಶವ ಸಂಸ್ಕಾರಕ್ಕೆ ಬಿಡಲ್ಲ’ ಎಂದು ಯಜಮಾನರು ಪಟ್ಟು ಹಿಡಿದ ಅಮಾನವೀಯ ಘಟನೆ ಜಿಲ್ಲೆಯ ಅಮಚವಾಡಿ ಗ್ರಾಮದಲ್ಲಿ ನಡೆದಿದೆ.

    ಅಮಚವಾಡಿ ಗ್ರಾಮದ ನಿವಾಸಿ ಲಿಂಗರಾಜ್ ನಾಯಕ್ (45) ಮೃತ ವ್ಯಕ್ತಿ. ಅದೇ ಗ್ರಾಮದ ಯಜಮಾನರು ಲಿಂಗರಾಜ್ ಕುಟುಂಬಸ್ಥರಿಗೆ ಬಹಿಷ್ಕಾರ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸಾಲದ ಹಣ ಪಾವತಿಸುವವರೆಗೂ ಶವ ಸಂಸ್ಕಾರಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

    ಲಿಂಗರಾಜ್ ನಾಯಕ್ ಮೃತಪಟ್ಟು ಅರ್ಧ ದಿನವೇ ಕಳೆದು ಹೋಗಿತ್ತು. ಆತನ ಸಾವಿನ ಸುದ್ದಿ ಇಡೀ ಊರಿಗೆ ಹರಡಿತ್ತು. ಸಾವಿರಾರು ಜನರಿರುವ ಅಮಚವಾಡಿ ಗ್ರಾಮದ ಯಾರೊಬ್ಬರೂ ಲಿಂಗರಾಜ್ ಮನೆಗೆ ಕಡೆಗೆ ಸುಳಿಯಲಿಲ್ಲ. ಬೇರೆ ಬೇರೆ ಕಡೆಯಿಂದ ಬಂದ ನೆಂಟರಸ್ಥರಿಗೂ ಅಂತ್ಯ ಸಂಸ್ಕಾರ ಮಾಡದಂತೆ ಗ್ರಾಮದ ಯಜಮಾನರು ಅಲಿಖಿತ ಆದೇಶ ನೀಡಿದ್ದರು. ಹೊತ್ತು ಮುಳುಗುತ್ತಿದ್ದರೂ ಅಂತ್ಯ ಸಂಸ್ಕಾರ ಆಗದೇ ಇರುವುದನ್ನು ನೆನೆದು ಲಿಂಗರಾಜ್‍ನ ಮಕ್ಕಳು ಮತ್ತು ಪತ್ನಿ ಕಣ್ಣೀರಿಡುತ್ತಿದ್ದ ದೃಶ್ಯ ನೋಡುಗರ ಮನಕಲಕುವಂತೆ ಮಾಡಿತ್ತು.

    ಲಿಂಗರಾಜ್ ನಾಯಕ್‍ಗೆ ಇಬ್ಬರು ಪತ್ನಿಯರು ಹಾಗೂ ನಾಲ್ಕು ಮಕ್ಕಳಿದ್ದಾರೆ. ಮೊದಲನೇ ಹೆಂಡತಿ ಕಳೆದ 12 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಳು. ಎರಡನೇ ಹೆಂಡತಿ ಪತಿಯ ಕಿರುಕುಳ ತಾಳಲಾರದೇ ತವರು ಮನೆ ಸೇರದ್ದಳು. ಮೊದಲನೇ ಹೆಂಡತಿ ಎರಡು ಮಕ್ಕಳನ್ನ ಮದುವೆ ಮಾಡಲಾಗಿತ್ತು. ಉಳಿದವರು ಬೇರೆ ಕಡೆ ವಾಸವಿದ್ದರು. ಹಾಗಾಗಿ ಲಿಂಗರಾಜ್ ನಾಯಕ್ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ.

    ಮದ್ಯ ಕುಡಿತದ ದಾಸನಾಗಿದ್ದ ಲಿಂಗರಾಜ್ ವಿವಿಧ ಸಂಘಗಳಿಂದ ಸಾಲ ಮಾಡಿದ್ದ. ಸಾಲ ಕೊಡದೇ ಇದ್ದಾಗ ಗ್ರಾಮಸ್ಥರು ಅವನಿಗೆ 19,300 ರೂ. ಕೊಡುವವರೆಗೂ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಜೊತೆಗೆ ಲಿಂಗರಾಜ್ ಮೂರು ಎಕರೆ ಜಾಗವನ್ನು ಇಬ್ಬರಿಗೆ ಮಾರ್ಟ್ ಗೇಜ್ ಮಾಡಿ ಹಣ ಪಡೆದಿದ್ದ. ಬಹಿಷ್ಕಾರಕ್ಕೆ ಕ್ಯಾರೇ ಎನ್ನದೆ ತನ್ನಷ್ಟಕ್ಕೆ ತಾನು ಎಂಬತಿದ್ದ. ಆದರೆ ಇದ್ದಕ್ಕಿದ್ದಂತೆ ಮಂಗಳವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ ಮಕ್ಕಳು ಬಂದರೂ ಕೂಡ ಅಂತ್ಯ ಸಂಸ್ಕಾರಕ್ಕೆ ಗ್ರಾಮದ ಯಜಮಾನರು ಅವಕಾಶ ಕಲ್ಪಿಸಿರಲಿಲ್ಲ. ಅಷ್ಟೇ ಅಲ್ಲದೆ ಯಾರೂ ಕೂಡ ಮೃತ ಲಿಂಗರಾಜ್ ಮನೆಗೆ ಹೋಗುವಂತಿಲ್ಲ ಎಂದು ಯಜಮಾನರು ಗ್ರಾಮಸ್ಥರಿಗೆ ತಾಕೀತು ಮಾಡಿದ್ದರು.

    19,300 ರೂ. ನೀಡ ಬೇಕು. ಜೊತೆಗೆ ಜಮೀನ್ನು ಮಾರ್ಟ್ ಗೇಜ್ ಮಾಡಿ ಪಡೆದಿರುವ ಒಂದೂವರೆ ಲಕ್ಷ ರೂ. ಹಣವನ್ನ ಕೊಡ ಬೇಕು ಎಂದು ಯಜಮಾನರು ಮೃತನ ಮಗನಿಗೆ ಹೇಳಿದ್ದರು. ಸಾವಿರಾರು ರೂಪಾಯಿ ಹಣ ಇಲ್ಲದೇ ಇರುವಾಗ ಲಕ್ಷಾಂತರ ರೂಪಾಯಿ ತರುವುದಾದರು ಎಲ್ಲಿಂದ ಎಂದು ಮೃತನ ಮಕ್ಕಳು ಯಜಮಾನರ ಬಳಿ ಅಂಗಲಾಚಿದ್ದರು. ಆದರೆ ಅದ್ಯಾವುದಕ್ಕೂ ಒಪ್ಪದ ಯಜಮಾನರು ಹಣ ನೀಡುವವರೆಗೆ ಶವ ಎತ್ತದಂತೆ ಕಟ್ಟಪ್ಪಣೆ ಹೊರಡಿಸಿದ್ದರು.

    ಈ ಮಧ್ಯೆ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನಾಲ್ಕೈದು ಗಂಟೆಗಳ ಕಾಲ ಕುಳಿತ್ತಿದ್ದರು. ನಂತರ ಸಾಲಸೋಲ ಮಾಡಿ 19,300 ರೂ. ಕೊಡುತ್ತಿದ್ದಂತೆ ಶವ ಎತ್ತಲು ಅವಕಾಶ ಕಲ್ಪಿಸಲಾಯಿತು. ಆದರೂ ಅಂತ್ಯ ಸಂಸ್ಕಾರಕ್ಕೆ ಗ್ರಾಮಸ್ಥರು ಹೋಗದಂತೆ ನಿರ್ಬಂಧ ವಿಧಿಸಲಾಗಿತ್ತು.

    ಇಂತಹ ಆಧುನಿಕ ಯುಗದಲ್ಲೂ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ಜಾರಿಯಲ್ಲಿ ಇರುವುದು ಮಾತ್ರ ದುರಾದೃಷ್ಟ. ಬಹಿಸ್ಕಾರದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸದೇ ಇರುವುದು ಮಾತ್ರ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಸ್ಥಳಕ್ಕೆ ಬಂದ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಕೂಡ ಬಹಿಸ್ಕಾರ ಹಾಕಿದವರ ವಿರುದ್ಧ ಮಾತನಾಡದೇ ಇದ್ದದ್ದು ದುರ್ದೈವ ಎಂದು ಸ್ಥಳೀಯರು ದೂರಿದ್ದಾರೆ.