Tag: ಅಧ್ಯಯನ ತಂಡ

  • ವೀಕ್ಷಣೆಗೆ ಬಂದ ಕೇಂದ್ರ ತಂಡಕ್ಕೆ ನೆರೆ ಬಂದಾಗಿನ ಪರಿಸ್ಥಿತಿಯ ವೀಡಿಯೋ ತೋರಿಸಿದ ರೈತ

    ವೀಕ್ಷಣೆಗೆ ಬಂದ ಕೇಂದ್ರ ತಂಡಕ್ಕೆ ನೆರೆ ಬಂದಾಗಿನ ಪರಿಸ್ಥಿತಿಯ ವೀಡಿಯೋ ತೋರಿಸಿದ ರೈತ

    ಹಾವೇರಿ: ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

    ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ, ಮುನವಳ್ಳಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಜಲಾವೃತಗೊಂಡಿದ್ದ ಮೆಕ್ಕೆಜೋಳ, ಕಬ್ಬು ಹಾಗೂ ಹತ್ತಿಯನ್ನ ಪರಿಶೀಲನೆ ನಡೆಸಿದರು. ಕಳೆದ ಮೂರು ವರ್ಷಗಳಿಂದ ಮಳೆ ಬಂದರೆ ಸಾಕು ಕೆರೆ ಹಾಗೂ ಹಳ್ಳದ ನೀರು ಬಂದು ಬೆಳೆ ಸಂಪೂರ್ಣ ಹಾನಿಯಾಗಿತ್ತದೆ ಎಂದು ರೈತರು ಇದೇ ವೇಳೆ ಹೇಳಿದರು. ಇದನ್ನೂ ಓದಿ: ಗಣೇಶೋತ್ಸವಕ್ಕೆ 5 ದಿನ ಅವಕಾಶ ಕೊಟ್ಟ ಸರ್ಕಾರ

    ಅಧಿಕಾರಿಗಳಿಗೆ ನೆರೆ ಬಂದಾಗಿನ ಪರಿಸ್ಥಿತಿಯ ವೀಡಿಯೋವನ್ನು ಸಹ ತೋರಿಸಿದರು. ಕೇಂದ್ರ ನೆರೆ ಅಧ್ಯಯನ ತಂಡದ ಅಧಿಕಾರಿಗಳು, ನಾಗನೂರು, ಕೂಡಲ, ವರದಹಳ್ಳಿ, ಮಂಟಗಣಿ ಸೇರಿದಂತೆ ಹಲವು ರಸ್ತೆ, ಬೆಳೆಯ ಹಾನಿ ಸಮೀಕ್ಷೆ ನೀಡೆಸಿದರು. ಹೆದ್ದಾರಿ ರಸ್ತೆ ಸಾರಿಗೆ ಮಂತ್ರಾಲಯದ ಅಧಿಕಾರಿ ಎಸ್.ಪಿ.ವಿಜಯಕುಮಾರ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧಿಕಾರಿ ಕೈಲಾಸ ಸಂಕ್ಲಾ ನೇತೃತ್ವದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಸಾಥ್ ನೀಡಿದರು.

  • ನೆರೆ ಹಾನಿ ಅಧ್ಯಯನಕ್ಕೆ ಇಂದು ಕೇಂದ್ರದ ತಂಡ ಆಗಮನ

    ನೆರೆ ಹಾನಿ ಅಧ್ಯಯನಕ್ಕೆ ಇಂದು ಕೇಂದ್ರದ ತಂಡ ಆಗಮನ

    ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹ ಹಾನಿಯನ್ನು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಅಧ್ಯಯನ ತಂಡ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಇಂದಿನಿಂದ ಮೂರು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ನೆರೆ ಹಾನಿ ಬಗ್ಗೆ ಪರಿಶೀಲನೆ ನಡೆಸಲಿದೆ.

    ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ ನೇತೃತ್ವದಲ್ಲಿ ಅಧ್ಯಯನ ನಡೆಯಲಿದ್ದು, ತಂಡದಲ್ಲಿ ಕೃಷಿ, ಹಣಕಾಸು, ಜಲಶಕ್ತಿ ಹಾಗೂ ಸಾರಿಗೆ ಸಚಿವಾಲಯದ ಅಧಿಕಾರಿಗಳು ಇರಲಿದ್ದಾರೆ. ಮೂರು ದಿನಗಳ ಕಾಲ  ರಾಜ್ಯಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜೀವ ಹಾನಿ, ಬೆಳೆ ಹಾನಿ, ಆಸ್ತಿ ಪಾಸ್ತಿ ನಷ್ಟ ಹಾಗೂ ಹಾಳಾದ ರಸ್ತೆಗಳ ಬಗ್ಗೆ ಅಧ್ಯಯನ ನಡೆಸಿ ರಾಜ್ಯದಲ್ಲಾದ ಒಟ್ಟು ಹಾನಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ.

    ರಾಜ್ಯದಲ್ಲಿ ಭಾರಿ ಪ್ರವಾಹ ಉಂಟಾದ ಹಿನ್ನೆಲೆ ಶೀಘ್ರ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸುವಂತೆ, ಮಧ್ಯಂತರ ನೆರವು ರಾಜ್ಯಕ್ಕೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಕಳೆದ ವಾರ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಿಎಸ್‍ವೈ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿಗಳ ಮನವಿ ಹಿನ್ನಲೆ ಗೃಹ ಇಲಾಖೆಯಿಂದ ಈಗ ಅಧ್ಯಯನ ತಂಡವನ್ನು ಕಳುಹಿಸಲಾಗಿದೆ.

    ಕಳೆದ ನಾಲ್ಕು ದಶಕಗಳಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಪರಿಸ್ಥಿತಿಯನ್ನು ಕರ್ನಾಟಕ ಎದುರಿಸಿದೆ. ಒಂದು ಕಡೆ ಮಳೆರಾಯ ಜಲರಕ್ಕಸನ ಅವತಾರವೆತ್ತಿ ಅಬ್ಬರಿಸಿ ಬೊಬ್ಬಿರಿದಿದ್ದ. ಇನ್ನೊಂದೆಡೆ ಭೂ ಕುಸಿತ ಸಂಭವಿಸಿ ಜನ ಕಂಗಾಲಾಗಿದ್ದರು.

    16 ಜಿಲ್ಲೆಗಳ 80 ತಾಲೂಕುಗಳ 840 ಗ್ರಾಮಗಳು ಜಲದಿಗ್ಬಂಧನದಲ್ಲಿ ಸಿಲುಕಿದ್ದವು. 624 ಪರಿಹಾರ ಕೇಂದ್ರ ತೆರೆಯಲಾಗಿದ್ದು ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿತ್ತು.

    ಪ್ರವಾಹ ಪೀಡಿತ ಪ್ರದೇಶಗಳ 12,651 ಮನೆಗಳು ಸಂಪೂರ್ಣ ಹಾನಿಯಾಗಿವೆ. 3.22 ಲಕ್ಷ ಹೆಕ್ಟೇರ್ ಜಮೀನು ಮುಳುಗಡೆಯಾಗಿದೆ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ ಹಾಗೂ ಮಲೆನಾಡಿನಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಿ ಜನಜೀವನ ಸಂಪೂರ್ಣ ಸ್ತಬ್ಧವಾಗಿತ್ತು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಹಾಗೂ ಭೂ ಕುಸಿತದಿಂದ ಜನರು ಪರಿತಪಿಸುವಂತಾಗಿತ್ತು. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿ ಸಾಕಷ್ಟು ನೀರನ್ನು ಹರಿಬಿಡಲಾಗಿತ್ತು.