Tag: ಅಜಾತ ಶತ್ರು

  • ದೇವರ ಮನೆಯಲ್ಲಿ ಫೋಟೋ ಇಟ್ಟು ಅಟಲ್ ಜೀ ಪೂಜಿಸುತ್ತಿದ್ದಾರೆ ದಾವಣಗೆರೆ ಅಭಿಮಾನಿ

    ದೇವರ ಮನೆಯಲ್ಲಿ ಫೋಟೋ ಇಟ್ಟು ಅಟಲ್ ಜೀ ಪೂಜಿಸುತ್ತಿದ್ದಾರೆ ದಾವಣಗೆರೆ ಅಭಿಮಾನಿ

    ದಾವಣಗೆರೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾದ ಹಿನ್ನೆಲೆಯಲ್ಲಿ ದಾವಣಗೆರೆಯ ಅಭಿಮಾನಿಯೊಬ್ಬ ದೇವರ ಮನೆಯಲ್ಲಿ ವಾಜಪೇಯಿ ಅವರ ಫೋಟೋ ಇಟ್ಟು ಪೂಜೆ ಸಲ್ಲಿಸಿದ್ರು.

    ದಾವಣಗೆರೆಯ ಬಿಜೆಪಿ ಕಾರ್ಯಕರ್ತ ಕಡ್ಲೆಬಾಳು ಧನಂಜಯ ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿದ್ದು, ಚಿಕ್ಕಂದಿನಿಂದಲೂ ವಾಜಪೇಯಿ ಜೀ ಅವರಿಗೆ ಅಪ್ಪಟ ಅಭಿಮಾನಿಯಾಗಿದ್ದಾರೆ. ಇದೀಗ ಅವರ ಸಾವಿನ ಸುದ್ದಿ ಕೇಳಿ ಬಹಳ ದುಃಖ ಪಟ್ಟಿದ್ದಾರೆ. ಇದರಿಂದ ವಾಜಪೇಯಿಯವರ ಫೋಟೋವನ್ನು ದೇವರ ಫೋಟೋಗಳ ಜೊತೆಗೆ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ವಾಜಪೇಯಿ  ಅವರನ್ನು ದೇವರಿಗೆ ಹೋಲಿಸಿ ಪೂಜೆ ಸಲ್ಲಿಸಿ ಅಭಿಮಾನಿಯೊಬ್ಬ ಕೃತಜ್ಞತೆ ಮೆರೆದಿದ್ದಾರೆ.

    ಭದ್ರಾವತಿಗೆ ಬಂದಿದ್ದರು ಅಟಲ್ ಜೀ:
    ಇಂದಿರಾ ಹತ್ಯೆ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದ ಸಂದರ್ಭದಲ್ಲಿ ವಾಜಪೇಯಿ ಸೋಲು ಅರಗಿಸಿಕೊಳ್ಳದ ಭದ್ರಾವತಿಯ ಲಕ್ಷ್ಮಿನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ರು. ವಿಚಾರ ತಿಳಿದ ಕೂಡಲೇ ವಾಜಪೇಯಿ ಭದ್ರಾವತಿಗೆ ಬಂದು, ಲಕ್ಷ್ಮಿನಾರಾಯಣ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ, ತಂಗಿ ತಮ್ಮನ ಓದಿಗೂ ನೆರವು ನೀಡಿದ್ದರು. ಅಲ್ಲದೇ ರಾಜ್ಯ ಬಿಜೆಪಿ ನಾಯಕರ ಕಣ್ಣೀರು ಕಂಡು ವಾಜಪೇಯಿ ನ ದೈನ್ಯಂ ನ ಪಲಾಯನಂ ಎಂದಿದ್ದರು.

    ದೇಶವೇ ಕಣ್ಣೀರು:
    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಟ್ಟಿನಲ್ಲಿ 9 ವಾರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅಟಲ್ ಜಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

    ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಒಟ್ಟಿನಲ್ಲಿ ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತ್ರಿವರ್ಣ ಧ್ವಜ ಅರ್ಧಕ್ಕೆ ಇಳಿಸಿ ಮಾಜಿ ಪ್ರಧಾನಿಗೆ ರಾಜ್ಯ ಸರ್ಕಾರದಿಂದ ಗೌರವ

    ತ್ರಿವರ್ಣ ಧ್ವಜ ಅರ್ಧಕ್ಕೆ ಇಳಿಸಿ ಮಾಜಿ ಪ್ರಧಾನಿಗೆ ರಾಜ್ಯ ಸರ್ಕಾರದಿಂದ ಗೌರವ

    ಬೆಂಗಳೂರು: ಮಾಜಿ ಪ್ರಧಾನಿ, ಅಜಾತ ಶತ್ರು ಹಾಗೂ ಭಾರತ ರತ್ನ ಪುರಸ್ಕೃತ ಅಟಲ್ ಬಿಹಾರಿ ನಿಧನರಾದ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರದಿಂದ ಅವರಿಗೆ ಗೌರವ ಸೂಚಿಸಲಾಯಿತು.

    ವಿಧಾನಸೌಧ, ಹೈಕೋರ್ಟ್, ಸರ್ಕಾರಿ ಕಚೇರಿಗಳ ಮೇಲಿನ ತ್ರಿವರ್ಣ ಧ್ವಜ ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೇ ಕರ್ನಾಟಕ ಸರ್ಕಾರದಿಂದ ಶ್ರದ್ಧಾಂಜಲಿ ಕೂಡ ಅರ್ಪಿಸಲಾಯಿತು.

    ರಾಜ್ಯ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಹಿರಿಯ ನಾಯಕ ರಾಮಚಂದ್ರೇಗೌಡ, ಮಾಜಿ ಡಿಸಿಎಂ ಆರ್.ಅಶೋಕ್, ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಟ್ಟಿನಲ್ಲಿ 9 ವಾರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅಟಲ್ ಜಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

    ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಒಟ್ಟಿನಲ್ಲಿ ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿ ಯಶಸ್ಸಿನ ಹಿಂದಿನ ನಾಯಕ ವಾಜಪೇಯಿ!

    ಮೋದಿ ಯಶಸ್ಸಿನ ಹಿಂದಿನ ನಾಯಕ ವಾಜಪೇಯಿ!

    ಬೆಂಗಳೂರು: ಬಿಜೆಪಿ ಇಂದು ಆಡಳಿರೂಢ ಪಕ್ಷವಾಗಿದೆ. ಸದ್ಯಕ್ಕೆ ಬಿಜೆಪಿ ಎಂದರೆ ಮೋದಿ ಎನ್ನುವಂತಾಗಿದೆ. ಆದರೆ ಕೆಲ ವರ್ಷಗಳ ಹಿಂದೆ “ಅಬ್ ಕೀ ಬಾರ್ ಅಟಲ್ ಸರ್ಕಾರ್” ಎಂದೇ ಕರೆಯಲಾಗುತ್ತಿತ್ತು. ಎಂತಹ ಸಂದರ್ಭದಲ್ಲೂ ಎದೆಗುಂದದ ಅಟಲ್ ಅವರ ಧೈರ್ಯ, ಪ್ರೋಖ್ರಾನ್ ಅಣು ಪರೀಕ್ಷೆಯ ಸಂದರ್ಭದಲ್ಲೇ ಆಗಲಿ, ಕಾರ್ಗಿಲ್ ಯುದ್ಧದ ಸಮಯದಲ್ಲೇ ಆಗಲಿ ಅವರು ತೋರಿದ ದಿಟ್ಟತನ ಅವರೊಳಗಿದ್ದ ಪ್ರಖರ ರಾಜಕಾರಣಿಯ ಪರಿಚಯವನ್ನು ಮಾಡಿಕೊಟ್ಟಿತ್ತು. ಇಂತಹ ವಾಜಪೇಯಿಯವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಮಾತ್ರವಲ್ಲ, ತಮ್ಮಂತೆ ಬಿಜೆಪಿ ಪಕ್ಷಕ್ಕೆ ನೇತಾರರಾಗುವಂತಹ ಸಮರ್ಥ ಶಿಷ್ಯರನ್ನ ತಯಾರು ಮಾಡಿದರು. ಇವತ್ತು ಮೋದಿ ಭಾರತದ ಯಶಸ್ವಿ ಪ್ರಧಾನಿಯಾಗಿದ್ದಾರೆ ಅಂದರೆ ಅದರ ಹಿಂದಿರುವ ಶಕ್ತಿ ಅಡ್ವಾಣಿ ಮತ್ತು ವಾಜಪೇಯಿ ಮಾತ್ರ.


    ವಾಜಪೇಯಿ ಎಂತಹ ಸಂದರ್ಭವನ್ನು ಹೇಗೆ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು ಎನ್ನುವುದಕ್ಕೆ ಒಂದು ಸಣ್ಣ ನಿದರ್ಶನವೆಂದರೆ, ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ ಉದ್ಭವಿಸಿದ್ದ ಕ್ಷೋಭೆಯನ್ನು ಸಂಭಾಳಿಸಿದ ರೀತಿ. 2002 ಫೆಬ್ರವರಿ 27. ಅಂದು ಗುಜರಾತಿನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಕೋಮುದಳ್ಳುರಿಯಲ್ಲಿ ನೊಂದು ಬೆಂದವರು ಸಾವಿರಾರು ಜನ. ಪ್ರಾಣ ಕಳೆದುಕೊಂಡವರು ನೂರಾರು ಮಂದಿ. ಗುಜರಾತ್ ರಾಜ್ಯದಲ್ಲಿ ನಡೆದ ಒಂದು ಹತ್ಯಾಕಾಂಡ ಭಾರತದ ಉದ್ದಗಲಕ್ಕೂ ಕಾವನ್ನು ಹರಡಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನರಮೇಧವನ್ನೇ ಮಾಡಿಬಿಟ್ಟರು.


    ಭಾವೈಕ್ಯತೆಗೆ ಧಕ್ಕೆ ತಂದು ಬಿಟ್ಟರು ಎಂದು ಆರೋಪಿಸಲಾಯ್ತು. ಇದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ಸರ್ಕಾರ ಭಾರೀ ಮುಖಭಂಗವನ್ನು ಅನುಭವಿಸಬೇಕಾಗಿ ಬಂತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪರ-ವಿರೋಧ ಚರ್ಚೆಗಳು ಹಲವು ದಿನಗಳ ಮಟ್ಟಿಗೆ ಭಾರೀ ಸಂಚಲನವನ್ನೇ ಉಂಟು ಮಾಡಿದವು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೋ ಬೇಡವೋ ಎನ್ನುವ ಜಿಜ್ಞಾಸೆ ತೀವ್ರವಾಗಿದ್ದ ಸಮಯದಲ್ಲಿಯೇ ಈ ಘಟನೆ ನಡೆದದ್ದು, ಆತಂಕಕ್ಕೂ ಕಾರಣವಾಗಿತ್ತು. ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎನ್ನುವ ಒತ್ತಡ ಹೆಚ್ಚಾಗುತ್ತೆ. ಆಗ ವಾಜಪೇಯಿ ಹೇಳಿದ್ದು ಒಂದೇ ಮಾತು.


    “ಗೋಧ್ರಾ ಹತ್ಯಾಕಾಂಡವನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ರಾಜನಾದವನು ಪ್ರಜೆಗಳನ್ನು ಸಮಾನವಾಗಿ ಕಾಣಬೇಕೇ ಹೊರತು ಜಾತಿ-ಧರ್ಮಗಳ ಆಧಾರದ ಮೇಲೆ ವರ್ಗೀಕರಣ ಮಾಡುವುದು ಸರಿಯಲ್ಲ. ಮೋದಿ ಅವರೇ, ಮೊದಲು ರಾಜಧರ್ಮ ಪಾಲನೆ ಮಾಡಿ. ಅದು ನಿಮ್ಮ ಕರ್ತವ್ಯ ಕೂಡ.” ಹೀಗೆ ಹೇಳಿ ಮುಖ್ಯಮಂತ್ರಿ ಹುದ್ದೆ ತ್ಯಜಿಸಬೇಕಿದ್ದ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ರಕ್ಷಿಸಿದ್ದರು. ಅಂದು ಅಟಲ್ ಬಿಹಾರಿ ವಾಜಪೇಯಿ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ.


    ಮೋದಿಯಂತಹ ನಾಯಕ ಮಾತ್ರವಲ್ಲ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹೀಗೆ ರಾಷ್ಟ್ರ ರಾಜಕೀಯದಿಂದ ಪ್ರಾದೇಶಿಕ ಮಟ್ಟದವರೆಗೂ ಹಲವು ನವ ನಾಯಕರ ಹುಟ್ಟಿಗೆ ಕಾರಣರಾದರು ವಾಜಪೇಯಿ. ಆ ಮೂಲಕ ಸಾವಿರಾರು ಕಾರ್ಯಕರ್ತರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ಫೂರ್ತಿಯಾಗಿದ್ದ ವಾಜಪೇಯಿ ಇಂದಿಗೂ ಎಂದೆಂದಿಗೂ ಅಜರಾಮರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಟಲ್ ಜಿಗೆ ಕರ್ನಾಟಕದೊಂದಿಗಿತ್ತು ಆತ್ಮೀಯ ಒಡನಾಟ

    ಅಟಲ್ ಜಿಗೆ ಕರ್ನಾಟಕದೊಂದಿಗಿತ್ತು ಆತ್ಮೀಯ ಒಡನಾಟ

    ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೂ ಕರ್ನಾಟಕಕ್ಕೂ ಬಿಡಿಸಲಾಗದ ನಂಟು. ಕರುನಾಡಿನ ತುಂಬಾ ಮಂದಿ ಅಟಲ್‍ಜಿ ಒಡನಾಡಿಗಳಾಗಿದ್ರು. ಡಿ ಹೆಚ್ ಶಂಕರಮೂರ್ತಿ, ದಿವಂಗತ ನಾಯಕ ವಿಎಸ್ ಆಚಾರ್ಯ, ಆರ್‍ಎಸ್‍ಎಸ್‍ನ ಕೆ ನರಹರಿ ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ರು.

    ನವ ಭಾರತದ ಹರಿಕಾರ, ಛಲವಾದಿ ಅಟಲ್ ಬಿಹಾರಿ ವಾಜಪೇಯಿ ಇನ್ನು ನೆನಪು ಮಾತ್ರ. ಅವರು ಇಲ್ಲ ಅಂದ್ರ ಅವರ ನೆನಪುಗಳು ಎದೆಂದು ಅಜರಾಮರ. ಅಟಜೀ ಅವರು ಕರ್ನಾಟಕದೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು. ಅಟಲ್‍ಜಿ 1977ರಲ್ಲಿ ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದಾಗ ಪ್ರೋಟೋಕಾಲ್ ಮುಗಿದ ಕೂಡಲೇ ಶಂಕರಮೂರ್ತಿ ಕಹಾ ಹೈ ಎಂದಿದ್ದರಂತೆ. ಮೂಲೆಯಲ್ಲಿ ನಿಂತಿದ್ದ ಶಂಕರಮೂರ್ತಿ ಎದುರಿಗೆ ಬಂದಾಗ ಅಟಲ್‍ಜಿ ಸೀದಾ ಹೆಗಲ ಮೇಲೆ ಕೈ, ಎಲ್ಲಿ ನಿನ್ನ ಕಾರು..? ನಡಿ ನಿನ್ನ ಮನೆಗೆ ಎಂದು ಶಂಕರಮೂರ್ತಿಯನ್ನು ಉದ್ದೇಶಿಸಿ ವಾಜಪೇಯಿ ಮಾತನಾಡಿದ್ರು.


    ಒಂದೇ ಚಪಾತಿ ಹಂಚಿಕೊಂದ್ದರು:
    1983 ಚುನಾವಣೆ ಸಮಯದಲ್ಲಿ ವಾಜಪೇಯಿ, ಶಂಕರಮೂರ್ತಿ ಒಟ್ಟೊಟ್ಟಿಗೆ ಪ್ರಚಾರ ಮಾಡಿದ್ದರು. ಬೆಳಗಾವಿಯಲ್ಲಿ ಪ್ರಚಾರ ವೇಳೆ ಇಬ್ಬರಿಗೂ ಹೊಟ್ಟೆ ಹಸಿವಾಗಿತ್ತು. ಆದ್ರೆ ಒಂದೇ ಚಪಾತಿ ಇತ್ತು. ಚಪಾತಿಯ ಒಂದು ತುಂಡು ಸವಿದ ಅಟಲ್‍ಜಿ, ಕೂಡಲೇ ನಿನ್ನ ಗತಿಯೇನು..? ತಿಂದೆಯಾ ಅಂತಾ ಶಂಕರಮೂರ್ತಿಯನ್ನು ಪ್ರಶ್ನಿಸಿದ್ದರು. ಇಲ್ಲ ಎಂದ ತಕ್ಷಣ ಚಪಾತಿಯ `ಆ ಕಡೆ ನೀನು ತಿನ್ನು.. ಈ ಕಡೆ ನಾನು ತಿನ್ನುತ್ತಾ ಬರುವೆ’ ಅಂತ ಶಂಕರಮೂರ್ತಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಭದ್ರಾವತಿಗೆ ಬಂದಿದ್ದರು ಅಟಲ್ ಜೀ:
    ಇಂದಿರಾ ಹತ್ಯೆ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದ ಸಂದರ್ಭದಲ್ಲಿ ವಾಜಪೇಯಿ ಸೋಲು ಅರಗಿಸಿಕೊಳ್ಳದ ಭದ್ರಾವತಿಯ ಲಕ್ಷ್ಮಿನಾರಾಯಣ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ರು. ವಿಚಾರ ತಿಳಿದ ಕೂಡಲೇ ವಾಜಪೇಯಿ ಭದ್ರಾವತಿಗೆ ಬಂದು, ಲಕ್ಷ್ಮಿನಾರಾಯಣ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ, ತಂಗಿ ತಮ್ಮನ ಓದಿಗೂ ನೆರವು ನೀಡಿದ್ದರಂತೆ. ಅಲ್ಲದೇ ರಾಜ್ಯ ಬಿಜೆಪಿ ನಾಯಕರ ಕಣ್ಣೀರು ಕಂಡು ವಾಜಪೇಯಿ ನ ದೈನ್ಯಂ ನ ಪಲಾಯನಂ ಎಂದಿದ್ದರು.


    ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದ ವಾಜಪೇಯಿಗೆ ಜ್ವರ ಬಂದು ಮಲಗಿದ್ದಾಗ, ವಿಎಸ್ ಆಚಾರ್ಯರು ವಾಜಪೇಯಿ ಚಹಾ ಹಿಡಿದ ಕೊಡಲೇ ಎದ್ದು ಕುಳಿತ್ತದ್ದರಂತೆ. ಅಲ್ಲದೇ ವಿಎಸ್ ಆಚಾರ್ಯರ ಸಣ್ಣ ಕೆಂಪು ಕಾರಿನಲ್ಲಿ ಕುಳಿತುಕೊಳ್ಳಲಾಗದೇ ವಾಜಪೇಯಿ ಕೆಳಗೆ ಇಳಿದಿದ್ದರು. ಅಟಲ್‍ಜೀ ಬೆಂಗಳೂರಿಗೆ ಬಂದಾಗ ಆಪ್ತ ಆರ್‍ಎಸ್‍ಎಸ್‍ನ ಕೆ.ನರಹರಿ ಮನೆಗೆ ನೇರವಾಗಿ ತೆರಳುತ್ತಿದ್ರಂತೆ. ಕೆ.ನರಹರಿ ತಾಯಿಯ ಅಡುಗೆ ಕೈ ರುಚಿಗೆ ವಾಜಪೇಯಿ ಮಾರು ಹೋಗಿದ್ದಲ್ಲದೇ, ರೋಟಿ ಮಾಡಿಸಿಕೊಂಡು ತಿಂದು ಬರುತ್ತಿದ್ದರು.

    1994ರ ಚುನಾವಣೆಯಲ್ಲಿ ಹುಣಸೂರಿನಿಂದ ಸಿ ಹೆಚ್ ವಿಜಯಶಂಕರ್ ಸ್ಪರ್ಧೆ ಮಾಡಿದ್ದರು. ವಿಜಯಶಂಕರ್ ಪರ ಪ್ರಚಾರಕ್ಕೆ ಬಂದಿದ್ದ ವಾಜಪೇಯಿ ಇಷ್ಟು ದಿನ ಶಂಕರ ಮಾತ್ರ ನಮ್ಮೊಂದಿಗೆ ಇದ್ದ.. ಈಗ ವಿಜಯ ಸೇರಿಕೊಳ್ಳಲಿದೆ ಎಂದಿದ್ದರು. ದೆಹಲಿಯಲ್ಲಿ ಭೇಟಿ ಮಾಡಿದಾಗ ಮಹಾರಾಜನನ್ನ ಸೋಲಿಸಿದ್ದು ನೀವೇನಾ ಎಂದು ಪ್ರಶ್ನಿಸಿದ್ದರು ಎಂಬಂತಹ ಮಾಹಿತಿಗಳು ತಿಳಿದುಬಂದಿದೆ. ಒಟ್ಟಿನಲ್ಲಿ ಅಜಾತಶತ್ರು, ಮಹಾನ್ ನಾಯಕನನ್ನು ಕಳೆದುಕೊಂಡ ದೇಶವೇ ಕಂಬನಿ ಮಿಡಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಗೃಹದಲ್ಲಿ ಅಟಲ್‍ಜಿ ಪಾರ್ಥಿವ ಶರೀರ – ಸಂಜೆ 4 ಗಂಟೆಗೆ ಅಂತ್ಯಕ್ರಿಯೆ

    ಸ್ವಗೃಹದಲ್ಲಿ ಅಟಲ್‍ಜಿ ಪಾರ್ಥಿವ ಶರೀರ – ಸಂಜೆ 4 ಗಂಟೆಗೆ ಅಂತ್ಯಕ್ರಿಯೆ

    ನವದೆಹಲಿ: ಅಜಾತಶತ್ರು, ಮಾಜಿ ಪ್ರಧಾನಿ ವಾಜಪೇಯಿ ಅಗಲಿಕೆಯೊಂದಿಗೆ ದೇಶದಲ್ಲಿ ಒಂದು ಯುಗಾಂತ್ಯವಾಗಿದೆ. ಈ ಮಹಾನ್ ನಾಯಕನ ಅಂತಿಮ ದರ್ಶನಕ್ಕೆ ಇದೀಗ ಗಣ್ಯರ ದಂಡೇ ಹರಿದು ಬರ್ತಿದೆ.

    ಬೆಳಗ್ಗೆ 9 ಗಂಟೆವರೆಗೆ ದೆಹಲಿಯ 6ಎ ಕೃಷ್ಣಮೆನನ್ ಮಾರ್ಗ್‍ನಲ್ಲಿರುವ ವಾಜಪೇಯಿ ನಿವಾಸದಲ್ಲಿಯೇ ದರ್ಶನಕ್ಕೆ ಇಡಲಾಗುತ್ತೆ. ಈ ವೇಳೆ ಬಂಧು ಮಿತ್ರರಿಗೆ ಮತ್ತು ಗಣ್ಯರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಂತರ 9 ಗಂಟೆಗೆ ಕೃಷ್ಣಮೆನನ್ ಮಾರ್ಗ್‍ನ ನಿವಾಸದಿಂದ ಪಾರ್ಥಿವ ಶರೀರದ ಮೆರವಣಿಗೆ ಹೊರಡಲಿದ್ದು, 5 ಕಿಲೋಮೀಟರ್ ದೂರದ ಬಿಜೆಪಿ ಮುಖ್ಯ ಕಚೇರಿಗೆ ತಲುಪಲಿದೆ.

    ಅಲ್ಲಿ 2 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ. ಬಳಿಕ 9 ಕಿಲೋಮೀಟರ್ ದೂರದ ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ.

    ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿಯ ಕವಿ ಸಮಯ: ಕೇಳಿ ಆ ಮಧುರ ಕಂಠದಲಿ ಕವಿತೆ- ವಿಡಿಯೋ ನೋಡಿ

    ವಾಜಪೇಯಿಯ ಕವಿ ಸಮಯ: ಕೇಳಿ ಆ ಮಧುರ ಕಂಠದಲಿ ಕವಿತೆ- ವಿಡಿಯೋ ನೋಡಿ

    ಹಾರ್ ನಹೀಂ ಮಾನೂಂಗಾ, ರಾರ್ ನಯೀ ಥಾನುಂಗಾ ಅಂದವರು ವಾಜಪೇಯಿ. ಗೀತ್ ನಹೀ ಗಾತಾ ಹೂಂ ಅಂದವ್ರೂ ಅವರೇ, ಗೀತ್ ನಯಾ ಗಾತಾ ಹೂಂ ಅಂತಾ ಹೇಳಿದವರು ಅದೇ ಅಟಲ್‍ಜೀ. ಭಾಷಣಕ್ಕೆ ನಿಂತ್ರೆ ಸ್ಪಟಿಕದಂತೆ ಸಿಡಿಯುವ ಅವರ ಸಾಲುಗಳನ್ನ ಹೇಗೆ ತಾನೆ ಮರೆಯೋಕೆ ಸಾಧ್ಯ..? ರಾಜಕೀಯದಲ್ಲಿ ಅಟಲ್‍ಜೀ ಸರ್ವೋತ್ತಮ ನಾಯಕನಾಗಿ ಎಲ್ಲರಿಂದ ಮೆಚ್ಚುಗೆ ಗಳಿಸಲು ಅವರೊಳಗಿದ್ದ ಒಬ್ಬ ಸಂವೇದನಾಶೀಲ ಕವಿ ಕೂಡಾ ಕಾರಣ. ಅವರು ನಮ್ಮಿಂದ ದೂರವಾದರೂ ಅವರ ಕವಿತೆಗಳು, ಪ್ರತಿಭಟನೆಯ ಸಾಲುಗಳು ಸದಾ ಅಟಲ್‍ಜೀ ಅವರನ್ನ ನಮ್ಮ ಹತ್ತಿರದಲ್ಲೇ ಇರಿಸುತ್ತವೆ. ಕವಿಯಾಗಿ ವಾಜಪೇಯಿ ನಮ್ಮೊಂದಿಗೆ ಹೇಗಿದ್ರು ಅನ್ನೋದನ್ನು ಹೇಳುತ್ತಾ ಅವರಿಗೆ ನಮ್ಮದೊಂದು ನುಡಿ ನಮನ ಇದು.

    ಇತ್‍ನಾ ಕಾಫೀ ಹೈ, ಅಂತಿಮ್ ದಸ್ತಕ್ ಪರ್
    ಖುದ್ ದರ್ವಾಜಾ ಖೋಲೇ…
    ಅಪ್ನೇ ಹೀ ಮನ್ ಸೇ ಕುಛ್ ಬೋಲೇ…

    (ಇಷ್ಟು ಮಾತ್ರವೇ ನನ್ನ ಇಚ್ಛೆ.. ಕೊನೆಯ ಕ್ಷಣಕ್ಕೆ ಬಾಗಿಲು ಬಡಿದ ದನಿ ಕೇಳಿದಾಗ, ನಾನೇ ಹೋಗಿ ಬಾಗಿಲು ತೆರೆಯುವೆ.. ನನ್ನ ಮನದೊಂದಿಗೇ ಒಂದಿಷ್ಟು ಮಾತನಾಡುವೆ.)

    ದೇಶದ ಪ್ರಧಾನಮಂತ್ರಿ ಹುದ್ದೆವರೆಗೆ ಏರಿದ್ರೂ, ಅಟಲ್ ಜೀ ಕೊನೆಗೂ ಕೇಳಿಕೊಂಡಿದ್ದು ಇಷ್ಟೇ. ಈ ಕವಿತೆಯನ್ನ ಕೇಳ್ತಿದ್ರೆ ಕವಿ ಮತ್ತು ಓದುಗನ ನಡುವಿನ ಅಂತರವೇ ಕರಗಿ ಹೋಗುತ್ತೆ. ವಾಜಪೇಯಿ ಅಂದ್ರೆನೇ ಹಾಗೆ, ಅವರೊಬ್ಬ ಗಾಢ ಮನಸ್ಸಿನ ಅತಿ ಸೂಕ್ಷ್ಮ ಸಂವೇದನಾಶೀಲ ಕವಿ. ಸ್ಪಟಿಕದಂತೆ ಪುಟಿಯುವ ಅವರ ಸಾಲುಗಳು ಯಾರನ್ನು ಪ್ರಭಾವಗೊಳಿಸಿಲ್ಲ ಹೇಳಿ. ಈ ವ್ಯವಸ್ಥೆ, ರಾಜಕೀಯವನ್ನ ನೋಡಿ ಹೀಗೆ ಹಾಡಿದ್ರು ಅಟಲ್ ಜೀ. ಹಾಗಂತ ಅಟಲ್‍ಜೀ ಅತ್ಯಂತ ಪ್ರತಿಭಟನಾತ್ಮಕ, ನಮ್ಮನ್ನ ಡಿಪ್ರೆಷನ್‍ಗೆ ಒಯ್ಯುವ ಕವಿ ಅಂದುಕೊಳ್ಳಬೇಡಿ. ಅವರು ಎಷ್ಟೊಂದು ಆಶಾವಾದಿ ಆಗಿದ್ರು ಅಂದ್ರೆ ನಮ್ಮನ್ನು ಹತಾಶೆಯಿಂದ ಭರವಸೆಯಡೆಗೆ ಕರೆದೊಯ್ತಿದ್ರು.

    ಹೊಸ ಗೀತೆ ಹಾಡುತ್ತೇನೆ ಅಂತಾನೇ ಅದನ್ನ ಮಾಡಿ ತೋರಿಸಿದವರು ಅಟಲ್‍ಜೀ. ಬಹುಷಃ ಬರೆದಂತೆ ಬದುಕಿದ ಅತಿ ವಿರಳ ಕವಿಗಳ ಸಾಲಿನಲ್ಲಿ ವಾಜಪೇಯಿ ಕೂಡಾ ಒಬ್ಬರು.. ತಮ್ಮ ಕವಿತೆಗಳಲ್ಲೇ ರಾಷ್ಟ್ರಪ್ರೇಮವನ್ನ ಮೆರೆಯುತ್ತಿದ್ರು. ಕೊನೆವರೆಗೂ ಕಟ್ಟಾ ಹಿಂದೂ, ರಾಷ್ಟ್ರಪ್ರೇಮಿ ಆಗಿಯೇ ಇದ್ರು. ಗಗನ್ ಮೇ ಲೆಹರ್‍ತಾ ಹೈ ಭಗವಾನ್ ಹಮಾರಾ ಅಂತ ನಮ್ಮ ಸಂಸ್ಕೃತಿಯನ್ನ ಹೆಮ್ಮೆಯಿಂದ ಹೇಳಿಕೊಂಡವರು ಅಟಲ್‍ಜೀ. ಅಷ್ಟೇ ನಮ್ಮ ಜನರ ಸ್ವಾರ್ಥವನ್ನ ಕಟುವಾಗಿ ಟೀಕಿಸಿದ್ರು.

    ಭಾರತ್ ಜಮೀನ್ ಕಾ ತುಕ್ಡಾ ನಹೀಂ,
    ಜೀತಾ ಜಾಗ್ ತಾ ರಾಷ್ಟ್ರ್ ಪುರುಷ್ ಹೇ
    ಯೇ ವಂದನ್ ಕೀ ಭೂಮಿ ಹೇ
    ಅಭಿನಂದನ್ ಕಿ ಭೂಮಿ ಹೇ
    ಯೇ ತರ್ಪಣ್ ಕೀ ಭೂಮಿ ಹೇ
    ಯೇ ಅರ್ಪಣ್ ಕೀ ಭೂಮಿ
    ಇಸ್ ಕಾ ಕಂಕರ್ ಕಂಕರ್ ಶಂಕರ್ ಹೇ
    ಇಸ್ ಕಾ ಬಿಂದು ಬಿಂದು ಗಂಗಾ ಜಲ್ ಹೇ
    ಹಮ್ ಜೀಯೇಂಗೇತೋ ಇಸ್ ಕೇ ಲಿಯೇ,
    ಹಮ್ ಮರೇಂಗೇ ತೋ ಇಸ್ ಕೇ ಲಿಯೇ..

    (ಭಾರತ ಕೇವಲ ಒಂದು ಜಮೀನಿನ ತುಂಡಲ್ಲ, ಅದು ಗೆಲ್ಲುತ್ತಾ, ಎಚ್ಚರದಿಂದಿರುವ ಜಾಗೃತ ರಾಷ್ಟ್ರ ಪುರುಷ. ಅದು ವಂದಿಸುವ ಭೂಮಿ, ಅಭಿನಂದಿಸುವ ಭೂಮಿ. ಅದು ತರ್ಪಣದ ಭೂಮಿ, ಅರ್ಪಣೆಯ ಭೂಮಿ. ಇದರ ಕಣ ಕಣದಲ್ಲಿಯೂ ಶಂಕರನಿದ್ದಾನೆ.. ಇದರ ಹನಿ ಹನಿಯಲ್ಲೂ ಗಂಗಾಜಲವಿದೆ. ನಾವು ಬದುಕುವುದಾದರೆ ಭಾರತಕ್ಕಾಗಿ, ನಾವು ಸಾಯುವುದಾದರೆ ಭಾರತಕ್ಕಾಗಿ.)

    ಪಾಂಚ್ ಹಜಾರ್ ಸಾಲ್ ಕೀ ಸಂಸ್ಕೃತಿ:
    ಗರ್ವ ಕರೇಂ ಯಾ ರೋಯೇ?
    ಸ್ವಾರ್ಥ್ ಕೀ ದೌಡ್ ಮೇ, ಕಹೀಂ ಆಜಾದಿ ಫಿರ್ ನಾ ಖೋಯೇಂ.

    (ಐದು ಸಾವಿರ ವರ್ಷಗಳ ಸಂಸ್ಕೃತಿ. ಇದರ ಮೇಲೆ ಗರ್ವ ಮಾಡಲೋ, ಇಲ್ಲಾ ಕಣ್ಣೀರು ಹಾಕಲೋ.. ಸ್ವಾರ್ಥದ ಈ ಓಟದಲ್ಲಿ ಭಾರತ ಮತ್ತೊಮ್ಮೆ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳಲಿಕ್ಕಿಲ್ಲವೇ.?)

    ಹಲವು ರಾಜಕೀಯ ಏಳು ಬೀಳುಗಳನ್ನ ಕಂಡ ವಾಜಪೇಯಿ, ಪಾಕಿಸ್ತಾನ ಭಾರತವನ್ನು ಕೆಣಕಿದಾಗ ತಮ್ಮ ಪ್ರತಿಭಟನಾತ್ಮಕ ಸಾಲುಗಳ ಮೂಲಕವೇ ಬುದ್ಧಿ ಹೇಳಿದವರು.. ಏಕ್ ನಹೀ ದೋ ನಹೀ ಕರೋ ಬೀಸೋ ಸಮ್‍ಜೋತೆ.. ಪರ್ ಸ್ವತಂತ್ರ ಭಾರತ್ ಕಾ ಮಸ್ತಕ್ ಕಭೀ ನಹೀ ಚುಕೆಗಾ ಅಂತ ಅಮೆರಿಕಾಕ್ಕೆ ಎಚ್ಚರಿಕೆ ನೀಡಿದ್ರು. ಆಜಾದಿ ಅನ್ಮೊಲ್ ನಹೀ ಇಸ್ ಕಾ ಮೋಲ್ ಲಗಾವ್ ಅಂತ ಪಾಕಿಸ್ತಾನಕ್ಕೆ ಪಾಠ ಹೇಳಿದ್ರು.

    ಈ ಎಲ್ಲ ಸಾಲುಗಳು ವಾಜಪೇಯಿ ಅವರನ್ನ ಮತ್ತೆ ಮತ್ತೆ ನೆನಪಿಸುತ್ತವೆ. ವಾದ ಪ್ರತಿವಾದಕ್ಕೆ ಅವರ ಅರ್ಥಪೂರ್ಣ ಕವಿತೆಗಳು ಎಂಥವರನ್ನು ಎದ್ದು ನಿಲ್ಲುವಂತೆ ಮಾಡುತ್ತೆ.. ಹಾಗೆ ಅವರೊಬ್ಬ ಸಂವೇದನಾಶೀಲ ಕವಿ ಆಗಿದ್ರು.. ಅವರ ಊಂಛಾಯೀ ಅನ್ನೋ ಕವಿತೆಯಲ್ಲಿ ಒಂದು ಕಡೆ ಅವರ ಸರಳತೆಯನ್ನ ಪ್ರದರ್ಶಿದ್ದು ಹೀಗೆ..

    ಮೇರೆ ಪ್ರಭು, ಮುಝೆ ಇತ್ ನೀ ಊಂಛಾಯೀ ಕಭಿ ಮತ್ ದೇನಾ,
    ಗೈರೋಂ ಕೊ ಗಲೇ ಲಾ ಲಗಾ ಸಕೊಂ,
    ಇತ್ ನೀ ರುಖಾಯೇ ಕಭಿ ಮತ್ ದೇನಾ.

    (ಓ ಪ್ರಭು, ನನ್ನನ್ನ ಇಷ್ಟೊಂದು ಎತ್ತರದವನಾಗಿ ಎಂದೂ ಮಾಡಬೇಡ, ನನ್ನ ಜನರನ್ನ ಅಪ್ಪಿಕೊಳ್ಳಲು ಆಗದಷ್ಟು ಒಣ ಮನಸ್ಸಿನವನಾಗಿ, ಎಂದೂ ಮಾಡಬೇಡ)

    ಹಲವು ಬಾರಿ ವಾಜಪೇಯಿ ಕವಿಯಾಗಿ ಹಲವು ಸಾಲುಗಳನ್ನ ಹೇಳಿದ್ದಾರೆ, ಬರೆದಿದ್ದಾರೆ. ಬಿಜೆಪಿ ಒಡೆದು ಹೋದಾಗ ಕದಮ್ ಮಿಲಾಕರ್ ಚಲ್‍ನಾ ಹೋಗಾ ಅಂತ ಹಾಡಿದವರು ವಾಜಪೇಯಿ. ಸಿಕ್ಕ ಸಮಯದಲ್ಲಿ ಮಾನವೀಯತೆ, ಮೌಲ್ಯಗಳು ಸಂವೇದನಾಶೀಲತೆಯನ್ನ ಮೆರೆದವರು ಎಲ್ಲರ ಪ್ರೀತಿಯ ಅಟಲ್‍ಜೀ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿ ದಿನಚರಿ ಹೀಗಿರುತ್ತಿತ್ತು..!

    ವಾಜಪೇಯಿ ದಿನಚರಿ ಹೀಗಿರುತ್ತಿತ್ತು..!

    ಟಲ್ ಬಿಹಾರಿ ವಾಜಪೇಯಿ ಅವರು ಶಿಸ್ತಿನ ಸಿಪಾಯಿ, ಬೆಳಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ ಸಾಕಷ್ಟು ದೂರದವರೆಗೆ ಕಾಲ್ನಡಿಗೆಯಲ್ಲಿ ಸುತ್ತಾಡಿ ಬರುವುದು ಅವರ ದೈನಂದಿನ ಕ್ರಮವಾಗಿತ್ತು. ಅವರ ಸಾಕು ನಾಯಿಗಳ ಜೊತೆಗೂಡಿ ಸುತ್ತಾಡುವುದು ಒಂದು ವಿಶೇಷ. ಸುತ್ತಾಟದ ಅವಧಿಯಲ್ಲಿ ಯಾರೊಂದಿಗೂ ಮಾತನಾಡದೇ ಇರುವುದು ಅವರು ಅನುಸರಿಸಿಕೊಂಡು ಬಂದ ಕ್ರಮ. (ಪ್ರಧಾನಿಯಾದ ಮೇಲೆ ಬೆಳಗಿನ ವಾಯು ಸಂಚಾರ, ಅವರ ಬಂಗಲೆಯ ಸುತ್ತಮುತ್ತಲಿನ ಆವರಣದಲ್ಲಿ ಮಾತ್ರ ಮಾಡುತ್ತಿದ್ದರು).

    ಬೆಳಗಿನ ಸುತ್ತಾಟದ ನಂತರ ವಾರ್ತಾ ಪತ್ರಿಕೆಗಳನ್ನು ಓದುವುದು ಮತ್ತು ವ್ಯಂಗ್ಯ ಚಿತ್ರಗಳನ್ನು ಆಸಕ್ತಿಯಿಂದ ನೋಡುವುದು ಅವರ ನಿತ್ಯ ಪದ್ಧತಿಯಾಗಿತ್ತು. ಮನರಂಜನೆಗಾಗಿ ಸಂಗೀತ ಕೇಳುವುದು, ಉತ್ತಮ ಚಲನಚಿತ್ರಗಳನ್ನು ನೋಡಿ ಆನಂದಿಸುವುದು ಅವರ ಅಭ್ಯಾಸ. ಓದುವ ಚಟ ಅವರಿಗೆ ಬಹಳ. ಎಲ್ಲರೂ ಈ ಚಟ ಬೆಳೆಸಿಕೊಳ್ಳಬೇಕೆಂಬುದೇ ಅವರ ಆಶಯ, ಗ್ವಾಲಿಯರ್ ನ ಸ್ವಂತ ಮನೆಯಲ್ಲಿ ಸಾರ್ವಜನಿಕ ವಾಚನಾಲಯ ಪ್ರಾರಂಭಿಸುವ ಉದ್ದೇಶವೂ ಅವರಿಗಿತ್ತು..

    ಒಂಟಿಯಾಗಿ ಕುಳಿತು ಕವನ ರಚಿಸುವುದೆಂದರೆ ಅಟರ್‍ರವರಿಗೆ ಬಹಳ ಸಂತಸ. ತಾವು ಬರೆದ ಕವನಗಳನ್ನು ಅವರು ಯಾರಿಗೂ ತೋರಿಸುತ್ತಿರಲಿಲ್ಲ. ಆದರೆ ಅವರು ತಮ್ಮ ಹುಟ್ಟುಹಬ್ಬದಂದು ಮನೆ ಮಂದಿಗೆ ತಾವು ಬರೆದ ಕವನವನ್ನು ಕೊಡುಗೆಯಾಗಿ ನೀಡುವುದನ್ನು ಒಂದು ಸಂಪ್ರದಾಯವಾಗಿ ಮಾಡಿಕೊಂಡಿದ್ದರು. ಕವನ ಬರೆಯಲಿ, ಸ್ವಯಂಸೇವಕನಾಗಿ ದುಡಿಯಲಿ, ರಾಜಕಾರಣದಲ್ಲಿ ತೊಡಗಲಿ, ಪ್ರಧಾನಿಯ ಪಟ್ಟಕ್ಕೇರಲಿ, ಇವುಗಳೆಲ್ಲವುಗಳಿಗಿಂತ ಪ್ರಮಾಣಿಕತೆಯೇ ಮುಖ್ಯ ಎನ್ನುತ್ತಾರೆ.

    ಭಾರತದ ಯಾವ ರಾಜಕೀಯ ನಾಯಕನಲ್ಲೂ ಇರದ ಮಹಾನ್ ಆದರ್ಶ ಗುಣಗಳು ಇವರಲ್ಲಿ ಮನೆ ಮಾಡಿತ್ತು. ವಾಜಪೇಯಿ ಅವರು ಯಾವುದೇ ಸ್ಥಳಕ್ಕೆ ಬಂದು ಭಾಷಣ ಮಾಡುತ್ತಾರೆಂದರೆ ಆ ಸ್ಥಳಕ್ಕೆ ಲಕ್ಷಾಂತರ ಜನ ಬಂದು ಸೇರುತ್ತಿದ್ದರು. ಅವರ ಭಾಷಣಗಳು, ಕಾವ್ಯಮಯ, ಭಾಷಣ ಅತಿಮಹತ್ವದಾಗಿ ಎದ್ದು ಕಾಣುತ್ತದೆ. ರಾಜಕೀಯ ನಾಯಕರಲ್ಲಿ ಸಾಹಿತ್ಯ ಅಡಗಿರುತ್ತದೆಂದರೆ ಅದು ವಾಜಪೇಯಿ ಅವರ ಮನದಲ್ಲಿ ಕರಗತವಾಗಿತ್ತು. ಯಾವ ಕವಿಗಿಂತಲೂ ಕಮ್ಮಿಯಿಲ್ಲ ಎನ್ನುವ ರೀತಿಯಲ್ಲಿ ಅರ್ಥಪೂರ್ಣವಾಗಿ ಸಾಹಿತ್ಯವನ್ನು, ನಮ್ಮ ಪರಂಪರೆಯನ್ನು ಗಟ್ಟಿಯಾಗಿ ಹೇಳುವ ಭರವಸೆಯ ಮುತ್ಸದ್ಧಿ ನಾಯಕರಾಗಿದ್ದರು ವಾಜಪೇಯಿ.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊದಲ ಬಾರಿಗೆ ಕೇವಲ 13 ದಿನಗಳ ಪ್ರಧಾನಿಯಾಗಿದ್ರು ವಾಜಪೇಯಿ!

    ಮೊದಲ ಬಾರಿಗೆ ಕೇವಲ 13 ದಿನಗಳ ಪ್ರಧಾನಿಯಾಗಿದ್ರು ವಾಜಪೇಯಿ!

    ರಾಮ ಜನ್ಮ ಭೂಮಿ ಹೋರಾಟದಲ್ಲಿ ಎಲ್‍ಕೆ ಅಡ್ವಾಣಿ ದೇಶವ್ಯಾಪಿ ಸಂಚರಿಸುವ ಮೂಲಕ ಬಿಜೆಪಿಗೆ ಜನಬೆಂಬಲವನ್ನು ತಂದು ಕೊಟ್ಟಿದ್ದರು. ಈ ಹೋರಾಟಕ್ಕೆ ವಿಎಚ್‍ಪಿ ಮತ್ತು ಆರ್‍ಎಸ್‍ಎಸ್ ಬೆಂಬಲ ನೀಡಿತ್ತು. ಪರಿಣಾಮ 1994 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳಿಸಲು ಯಶಸ್ವಿಯಾಗಿತ್ತು. 1995ರಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲವಾಯಿತು. ಮಹಾರಾಷ್ಟ್ರದಲ್ಲಿ 65 ಸ್ಥಾನ ಹಾಗೂ ಗುಜರಾತ್‍ನಲ್ಲಿ 121 ಸ್ಥಾನ ಬಿಜೆಪಿಗಳಿಸಿತ್ತು.

    ಇವೆಲ್ಲದರ ಪರಿಣಾಮ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 161 ಸ್ಥಾನಗಳಿಸಿದ್ದರೆ, ಕಾಂಗ್ರೆಸ್ 140, ಜನತಾದಳ 40 ಸ್ಥಾನಗಳಿಸಿತ್ತು. ಮುಂಬೈನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿ ಮಾಡಲು ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು.

    ವಾಜಪೇಯಿಯವರು ದೇಶದ 10ನೇ ಪ್ರಧಾನಿಯಾಗಿ ಮೇ 16, 1996ರಲ್ಲಿ ಸಂಸತ್ತಿನ ಅಶೋಕ ಹಾಲ್‍ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅಂದು ರಾಷ್ಟ್ರಪತಿಯಾಗಿದ್ದ ಡಾ. ಶಂಕರ್ ದಯಾಳ್ ಶರ್ಮಾ ಅವರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರಮಾಣವಚನ ಬೋಧಿಸಿದ್ದರು.

    ಅಟಲ್ ಜೊತೆಗೆ ಅಂದು ಸಿಕಂದರ್ ಭಕ್ತ್, ಡಾ.ಮುರಳಿ ಮನೋಹರ ಜೋಶಿ, ಸೂರಜ್ ಬಾನ್, ಪ್ರಮೋದ್ ಮಹಾಜನ್, ಜಸ್ವಂತ್ ಸಿಂಗ್, ಕರಿಯಾ ಮುಂಡಾ, ರಾಮ್ ಜೇಠ್ಮಲಾನಿ, ಧನಂಜಯ್ ಕುಮಾರ್, ಸುರೇಶ್ ಪ್ರಭು, ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕರು ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಅಂದಿನ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪರಾಷ್ಟ್ರಪತಿ ಕೆ.ಆರ್.ನಾರಾಯಣ, ಎಲ್.ಕೆ.ಅಡ್ವಾಣಿ, ವಿಜಯರಾಜೇ ಸಿಂಧಿಯಾ, ಪಿವಿ ನರಸಿಂಹ ರಾವ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಅದೇ ದಿನ ಸಂಜೆ 5 ಗಂಟೆಗೆ ಅಟಲ್ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ವಾಜಪೇಯಿ ಅವರು, ಸದನದಲ್ಲಿ ಬಹುಮತ ಸಾಬೀತು ಪಡಿಸಲು ನಮಗೆ ಮೇ 31ರವರೆಗೆ ಸಮಯ ನೀಡಲಾಗಿದೆ. ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ನಾವು ಮರ್ಯಾದೆಯಿಂದ ಹಿಂದೆ ಸರಿಯುತ್ತೇವೆ. ಆದರೆ ನಾವು ಯಾವುದೇ ಕುದುರೆ ವ್ಯಾಪಾರದ ಮಾರ್ಗವನ್ನು ಅನುಸರಿಸುವುದಿಲ್ಲ. ನಮ್ಮಲ್ಲಿರುವ ಎಲ್ಲಾ ಸಾಮಥ್ರ್ಯ ಬಳಸಿ ಬಹುಮತ ಸಾಬೀತು ಮಾಡುತ್ತೇವೆ. ಆದರೆ ನಮ್ಮ ಹೋರಾಟದ ಅಂತಿಮ ಗುರಿ ಅಧಿಕಾರ ಪಡೆಯುವುದೊಂದೇ ಅಲ್ಲ. ಒಳ್ಳೆಯ ಸರ್ಕಾರ ನಡೆಸುವುದು ಕೂಡಾ ನಮ್ಮ ಉದ್ದೇಶ ಎಂದು ಹೇಳಿದ್ದರು.

    ಮುಂದುವರಿದು ಮಾತನಾಡಿದ ಅವರು, ರಾಷ್ಟ್ರ ಇಂದು ಸಂಕಷ್ಟಮಯ ಪರಿಸ್ಥಿತಿಯಲ್ಲಿದೆ. ದೇಶದ ಆರ್ಥಿಕ ಸ್ಥಿತಿ ಬಿಗಡಾಯಿಸಿದೆ. ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಸ್ವಚ್ಛ, ಪ್ರಾಮಾಣಿಕ, ಸಂವೇದನಾಶೀಲ ಹಾಗೂ ಪಾರದರ್ಶಕ ಸರ್ಕಾರ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದ್ದರು.

    ಕಳೆದ 40 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ನಾನು ಕುರ್ಚಿಗಾಗಿ ಅಥವಾ ಯಾವುದೇ ಪದವಿಗಾಗಿ ದುಡಿಯುತ್ತಿಲ್ಲ. ನನ್ನ ಕರ್ತವ್ಯದ ಭಾವನೆಯಿಂದ ನಾನು ರಾಷ್ಟ್ರಕ್ಕಾಗಿ, ಮಾತೃಭೂಮಿಗಾಗಿ, ಸೇವೆಗಾಗಿ, ಸಮರ್ಪಣಾ ಭಾವದಿಂದ ದುಡಿಯುತ್ತಿದ್ದೇನೆ. ರಾಷ್ಟ್ರ ಉತ್ಥಾನದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅಂದು ಸಂಪುಟ ಸಭೆಯಲ್ಲಿ ಮಾತು ಮುಗಿಸಿದ್ದರು ಅಟಲ್ ಬಿಹಾರಿ ವಾಜಪೇಯಿ. ಆದರೆ ಸಿಕ್ಕಿದ ಅವಕಾಶದಲ್ಲಿ ಬಹುಮತ ಸಾಬೀತು ಪಡಿಸಲು ಆಗಲಿಲ್ಲ. ಹೀಗಾಗಿ 13 ದಿನಗಳಲ್ಲೇ ವಾಜಪೇಯಿ ಸರ್ಕಾರ ಬಿದ್ದು ಹೋಯಿತು.

    13 ತಿಂಗಳ ಪ್ರಧಾನಿ: 1998 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳಿಸಿತು. ಮಿತ್ರ ಪಕ್ಷಗಳನ್ನು ಸೇರಿಸಿ ಎನ್‍ಡಿಎ ಒಕ್ಕೂಟ ರಚಿಸುವ ಮೂಲಕ ಎರಡನೇ ಬಾರಿ ವಾಜಪೇಯಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಎಐಡಿಎಂಕೆ ಅಧಿನಾಯಕಿ ಜಯಲಲಿತಾ ಸರ್ಕಾರಕ್ಕೆ ನೀಡಿದ ಬಹುಮತವನ್ನು ಹಿಂತೆಗೆದ ಕಾರಣ ವಾಜಪೇಯಿ ಅವರ 13 ತಿಂಗಳ ಅಧಿಕಾರ ಅವಧಿ ಅಂತ್ಯವಾಯಿತು.

    ಕಾರ್ಗಿಲ್ ಯುದ್ದ, ಪೋಕ್ರಾನ್‍ನಲ್ಲಿ ಅಣುಬಾಂಬು ಸ್ಪೋಟ ಪರಿಣಾಮದಿಂದಾಗಿ 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳಿಸಿತು. ಮಿತ್ರಪಕ್ಷಗಳನ್ನು ಸದಸ್ಯರನ್ನು ಸೇರಿಸಿ ಎನ್‍ಡಿಎ ಒಕ್ಕೂಟ ಲೋಕಸಭೆಯ ಒಟ್ಟು 543 ಸದಸ್ಯರಲ್ಲಿ 303 ಎನ್‍ಡಿಎ ಸದಸ್ಯರು ಆಯ್ಕೆ ಆದ್ದರಿಂದ ವಾಜಪೇಯಿ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಆಯ್ಕೆಯಾದರು.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ಯಥಾವತ್ ವಿವರ)

    https://youtu.be/c6bRPaIlo1s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ರಿಕೋದ್ಯಮಿಯೂ ಆಗಿದ್ದರು ಅಟಲ್‍ಜೀ

    ಪತ್ರಿಕೋದ್ಯಮಿಯೂ ಆಗಿದ್ದರು ಅಟಲ್‍ಜೀ

    ಟಲ್‍ಜೀಯವರು ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ `ಪ್ರಚಾರಕ’ರಾಗಿ ನಿಂತರು. ಲಕ್ನೋ ಸಮೀಪದ ಶಾಂಡಿಲಾ ಶಾಖೆಯಲ್ಲಿ ಅವರು ಕಾರ್ಯಾರಂಭ ಮಾಡಿದರು. ಬೆಳಗಿನ ವೇಳೆಯಲ್ಲಿ `ಶಾಖೆ’ಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸುತ್ತಿದ್ದರು. ಮಧ್ಯಾಹ್ನದ ವೇಳೆಯಲ್ಲಿ ಕವನಗಳನ್ನು ರಚಿಸುತ್ತಿದ್ದರು. ಈ ಪ್ರಕಾರ ಸತತ ಒಂದು ವರ್ಷಕಾಲ ಸಂಘದ ಪ್ರಚಾರಕ್ಕಾಗಿ ಸೇವೆ ಸಲ್ಲಿಸಿದರು. ಆ ಬಳಿಕ ಅವರ ಗಮನ ಪತ್ರಿಕೋದ್ಯಮದತ್ತ ಹರಿಯಿತು.

    ಪ್ರಾರಂಭದಲ್ಲಿ `ರಾಷ್ಟ್ರಧರ್ಮ’ ಎಂಬ ಮಾಸ ಪತ್ರಿಕೆಯನ್ನು ಪಂಡಿತ ದೀನದಯಾಳ್ ಉಪಾಧ್ಯಾಯರ ಜೊತೆಗೂಡಿ ಲಕ್ನೋದಲ್ಲಿ ಪ್ರಾರಭಿಸಿದ್ದರು. ಈ ಪತ್ರಿಕೆ ಪ್ರಾರಂಭವಾಗಿದ್ದು 1947ರಲ್ಲಿ. ಈ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಮುಂದೆ ಅಟಲ್‍ರವರ ಸಂಪಾದಕತ್ವದಲ್ಲಿ `ಪಾಂಚಜನ್ಯ’ ಎಂಬ ವಾರಪತ್ರಿಕೆ ಪ್ರಾರಂಭವಾಯಿತು. ಹೀಗೆ ಪತ್ರಿಕೋದ್ಯಮದಲ್ಲಿ ಸಾಕಷ್ಟು ಅನುಭವ ಪಡದ ನಂತರ ಅಟಲ್‍ರವರು `ಸ್ವದೇಶ’ ಮತ್ತು `ಅರ್ಜುನ್’ ಎಂಬ ಎರಡು ದೈನಿಕ ಪತ್ರಿಕೆಗಳ ಸಂಪಾದಕತ್ವದ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಅಟಲ್‍ಜೀ ಯವರ ಸಂಪಾದಕೀಯ ತುಂಬಾ ಹರಿತವಾಗಿರುತ್ತಿತ್ತು. ಓದುಗರ ಮನಸ್ಸಿನ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತಿತ್ತು ಎಂಬುದು ಆ ಕಾಲದ ವಾಚಕರ ಅನಿಸಿಕೆಯಾಗಿತ್ತು. ತೀಕ್ಷ್ಣ ಹಾಗೂ ನಿಖರವಾದ ಬರವಣಿಗೆ ಅವರದಾಗಿರುತ್ತಿತ್ತು.

    ದಿನದ ಕಾರ್ಯ ಮುಗಿದ ನಂತರ ಏಕಾಂತದಲ್ಲಿ ಕುಳಿತು ಕೊಳ್ಳುವುದು ಅವರ ಸ್ವಭಾವ. ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಹರಟೆ ಹೊಡೆಯವುದು ಮತ್ತು ಸಂಜೆ ವೇಳೆಯಲ್ಲಿ ಒಳ್ಳೆಯ ಚಲನಚಿತ್ರ ನೋಡುವುದು ಅವರ ಹವ್ಯಾಸವಾಗಿತ್ತು. ಉತ್ತಮ ಚಲನಚಿತ್ರ ನೋಡುವುದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರಾಣ. ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾರಂಗದ ಮೂಲಕ ಭಾರತೀಯರಲ್ಲಿ ರಾಷ್ಟ್ರೀಯತೆ, ಮೂಢನಂಬಿಕೆ, ಸಮಾಜದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಪತ್ರಕರ್ತರಾಗಿ ಜನಮನಕ್ಕೆ ಅರಿವು ತಲುಪಿಸಿದರು. ಮುಂದೆ ಪ್ರಧಾನಮಂತ್ರಿಯಾದಾಗ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

    https://www.youtube.com/watch?v=c6bRPaIlo1s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿಯವರ ಬಾಲ್ಯದ ಅಚ್ಚರಿಯ ಮಾಹಿತಿಯಿದು!

    ವಾಜಪೇಯಿಯವರ ಬಾಲ್ಯದ ಅಚ್ಚರಿಯ ಮಾಹಿತಿಯಿದು!

    ಭಾರತದ ದೇಶದ ಮಹಾನ್ ರಾಜಕೀಯ ನಾಯಕರಾದ ಅಟಲ್‍ಜೀ ಅವರ ಜನನವಾದದ್ದು ಮಧ್ಯಪ್ರದೇಶದ ಗ್ವಾಲಿಯರ್ ನ ಶಿಂಧೆಯ ದಂಡು ಪ್ರದೇಶದಲ್ಲಿ. ಸುಸಂಸ್ಕೃತ ಮನೆತನದಲ್ಲಿ ಜನಿಸಿದರು. ಅವರು ಜನಿಸಿದ್ದು 1924ರ ಡಿಸೆಂಬರ್ 25 ರಂದು.

    ಅಟಲ್ ಅವರ ತಂದೆ ಕೃಷ್ಣಬಿಹಾರಿ ವಾಜಪೇಯಿ, ತಾಯಿ ಕೃಷ್ಣಾದೇವಿ. ತಂದೆ-ತಾಯಿ ಚಿಂತನೆ ಮಾಡಿ ಮಗುವಿಗೆ `ಅಟಲ್ ಬಿಹಾರಿ’ ಎಂದು ನಾಮಕರಣ ಮಾಡಿದರು. ಅಟಲ್ ಎಂದರೆ `ಗಟ್ಟಿ’ (ಕಾರ್ಯಸಾಧಕ) ಎಂದರ್ಥ. ಬಿಹಾರಿ ಎಂದರೆ `ವಿಚಾರ ಮಾಡುವವ’ ಎಂದರ್ಥ. ನಿಜವಾಗಿಯೂ ಒಬ್ಬ ಮಹಾನ್ ಗಟ್ಟಿ ವಿಚಾರಶೀಲ ವ್ಯಕ್ತಿಯಾಗಿದ್ದರು ಅಟಲ್ ಬಿಹಾರಿ.

    ಶಿಶುವಿನ ಚಂಚಲತೆ, ಹೊಳೆಯುವ ಕಣ್ಣುಗಳು, ದಷ್ಟ-ಪುಷ್ಟ ಶರೀರ, ಲವಲವಿಕೆಯ ಮುಖ ಸದಾ ಮುಗಳ್ನಗು ಮತ್ತು ಎಲ್ಲರೊಂದಿಗೂ ಬೆರೆಯುವ ಗುಣ ಅವರಲ್ಲಿತ್ತು. ಮಗುವನ್ನು ಒಮ್ಮೆ ನೋಡಿದರೆ ಸಾಕು ಯಾರಿಗಾದರೂ ಎತ್ತಿ ಮುದ್ದಾಡಬೇಕೆಂಬ ಆಸೆಯಾಗುತ್ತಿತ್ತು. ಹಾಗಿದ್ದರು ಅಟಲ್‍ರವರು.

    ಚಿಕ್ಕಂದಿನಿಂದಲೇ ಅಕ್ಷರದ ಜ್ಞಾನ ಬೆಳೆಸಿಕೊಳ್ಳುವ ಹಾಗೆ ಮನೆಯವರು ಪ್ರಯತ್ನಿಸುತ್ತಿದ್ದರು. ಹಾಗೇ ಬೇಗನೆ ಎಬ್ಬಿಸಿ ತಣ್ಣೀರು ಸ್ನಾನ ಮಾಡಿಸಿ ಜಪ-ತಪ, ಮಂತ್ರ ಪಠಣ, ರಾಮಾಯಣ, ಮಹಾಭಾರತ, ಗೀತೆ ಮತ್ತು ಶ್ರೀ ಮದ್ಭಾಗವತದ ಅಧ್ಯಯನದಲ್ಲಿ ತೊಡಗಿಸುತ್ತಿದ್ದರು ಮತ್ತು ಇತರೆ ಭಾಷೆಯ ಗ್ರಂಥಗಳನ್ನು ಅಭ್ಯಸಿಸಲು ಹೇಳುತ್ತಿದ್ದರು.

    ಬಾಲಕ ಅಟಲ್‍ರನ್ನು ನಂತರದ ದಿನಗಳಲ್ಲಿ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಮಾಡಿದ ಪಾಠ ತಿಳಿಯದೆ ಇದ್ದಾಗ ತನ್ನ ತಂದೆ ಸ್ವಂತ ಅಧ್ಯಾಪಕರಿರುವುದರಿಂದ ಅವರನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ಅಟಲ್‍ಜೀ ಹಾತೊರೆಯುತ್ತಿದ್ದರು. ಶಾಲೆಗೆ ಚಕ್ಕರ್ ಹೊಡೆಯದೆ ಓದು ಮತ್ತು ಮನೆಪಾಠಗಳಲ್ಲಿ ನಿರತರಾಗಿದ್ದರು.

    ಅಟಲ್‍ರವರು ಗ್ವಾಲಿಯರ್ ನಲ್ಲಿದ್ದ ಗೋರಖಿ ವಿದ್ಯಾಲಯದ ಮಿಡಲ್ ಪರೀಕ್ಷೆ ಪಾಸು ಮಾಡಿದರು. ಅಭ್ಯಾಸದಲ್ಲಿ ಅವರು ಯಾವತ್ತು ಹಿಂದೆ ಬೀಳದವರು. ಎಲ್ಲಾ ವಿದ್ಯಾರ್ಥಿಗಳಿಗಿಂತ ಪತ್ರಿಭಾವಂತ ವಿದ್ಯಾರ್ಥಿಯಾಗಿದ್ದರು. ಹೈಸ್ಕೂಲಿನಲ್ಲಿ ನಡೆಯುವ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಜಾಣತನದ ಮಾತು ಹಾಗೂ ನಡವಳಿಕೆಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಯಾವುದೇ ಪರೀಕ್ಷೆ ಇರಲಿ ಅದರಲ್ಲಿ ಕ್ಲಾಸಿಗೆ ಪ್ರಥಮ ರ‍್ಯಾಂಕ್ ಬರುತ್ತಿದ್ದರು. ಶಾಲಾ ಪಠ್ಯಪುಸ್ತಕಗಳಿಗಿಂತ ಆಧ್ಯಾತ್ಮಿಕ, ಪೌರಾಣಿಕ, ಭಾಗವತ, ರಾಮಾಯಣ ಮತ್ತು ಮಹಾಭಾರತ ಪುಸ್ತಕಗಳ ಓದಿನಲ್ಲೇ ಅವರಿಗೆ ಹೆಚ್ಚು ಆಸಕ್ತಿ. ಕತೆ, ಕಾದಂಬರಿ ಹಾಗೂ ವಿಚಾರ ಸಾಹಿತ್ಯ ಅವರಿಗೆ ಅಚ್ಚುಮೆಚ್ಚು, ಕಬಡ್ಡಿ ಎಂದರೆ ಅತಿ ಇಷ್ಟವಾದ ಆಟ. ಅವರೊಬ್ಬ ಉತ್ತಮ ಕಬ್ಬಡಿ ಪಟುವೂ ಹೌದು.

    ತಂದೆಯ ಕವಿತೆಗಳನ್ನು ಕೇಳಿ ಕೇಳಿ ತಾನು ಪ್ರಾಸಬದ್ಧವಾಗಿ ಹೇಳತೊಡಗಿದ, ಮಾತಿನ ಗಾದೆ, ಹೋಲಿಕೆ, ತಿಳಿಹಾಸ್ಯ, ವ್ಯಂಗ್ಯಗಳನ್ನು ಹೇಗೆ ಪ್ರಯೋಗಿಸಬೇಕೆಂಬುದನ್ನು ತಂದೆಯಿಂದ ಕಲಿತರು. ಹಾಗೇ ನಮ್ಮ ದೇಶದ ಹಬ್ಬ ಹರಿದಿನ ಸಾಂಸ್ಕೃತಿಕ ಪರಂಪರೆಯನ್ನು ಗಟ್ಟಿಯಾಗಿ ಮೈಗೂಡಿಕೊಂಡು ಬೆಳೆದರು.

    ಅಟಲ್ ಜೀ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದಾಗ ಮನೆಯಲ್ಲಿ ಶುದ್ಧ ಭಾರತೀಯ ವಾತಾವರಣ, ಸುಸಂಸ್ಕೃತ, ಆಧ್ಯಾತ್ಮಕದ ಪರಿಸರ, ಆರ್ಯ ಸಮಾಜದ ನಾಯಕರು ಮತ್ತು ಕಾರ್ಯಕರ್ತರು ತಂದೆಯನ್ನು ಕಾಣಲು ಸದಾ ಬರುತ್ತಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೂ ಆಗಮಿಸುತ್ತಿದ್ದರು. ವಂಶಾನುಕ್ರಮ ಮತ್ತು ಮನೆಯ ವಾತಾವರಣದ ಉಜ್ವಲ ರಾಷ್ಟ್ರಭಕ್ತಿ ಅವರಿಗೆ ದೊರೆತ ಪರಿಸರ ಅವರ ವ್ಯಕ್ತಿತ್ವದ ಮೇಲೆ ಸಾಕಷ್ಟು ಪರಿಣಾಮವನ್ನುಂಟು ಮಾಡಿತು. ಇದುವೇ ಮುಂದೆ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿತು.

    ಅಟಲ್ ಹೈಸ್ಕೂಲ್ ದಿನಗಳಿಂದಲೂ ಉತ್ತಮ ಭಾಷಣಕಾರರಾಗಿದ್ದರು. ಭಾಷಣಕಾರನ ಸತ್ವ, ಕತೆಗಾರಿಕೆ ಮತ್ತು ಗುಣಗಳು ಅಟಲ್‍ಗೆ ಅವರ ತಂದೆ ಮತ್ತು ತಾತನಿಂದ ಬಳುವಳಿಯಾಗಿ ಹರಿದು ಬಂದಿದೆ ಎನ್ನಬಹುದು. ಏಕೆಂದರೆ ಅವರಿಬ್ಬರೂ ಕೂಡ ಉತ್ತಮ ವಾಗ್ಮಿಗಳಾಗಿದ್ದರು.

    ಕಾವ್ಯಮಯವಾದ ಭಾಷೆ, ಪ್ರಾಸಬದ್ಧ ಮಾತು, ಚುರುಕು ಮತ್ತು ಚಾಟಿಯೇಟಿನಂತಹ ನುಡಿ ಅವರ ಮಾತುಗಾರಿಕೆಯಾಗಿತ್ತು. ಶಾಲಾ ದಿನಗಳಲ್ಲಿ ತಮ್ಮ ಸಹಪಾಠಿಗಳೊಂದಿಗೆ ಉತ್ತಮ ಸ್ಪರ್ಧೆಯನ್ನು ಮಾಡುತ್ತ ಬೆಳೆದ ಇವರಿಗೆ ಮನೆಯ ಕೌಟುಂಬಿಕ ವಾತಾವರಣ ವ್ಯಕ್ತಿತ್ವ ನಿರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

    https://www.youtube.com/watch?v=gopOVPqsjmU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv