Tag: ಅಖಂಡ ಶ್ರೀನಿವಾಸ ಮೂರ್ತಿ

  • ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಸೇರ್ಪಡೆ

    ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಸೇರ್ಪಡೆ

    ಬೆಂಗಳೂರು: ಕಾಂಗ್ರೆಸ್‌ನಿಂದ ವಿಧಾನಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ (Akhanda Srinivas Murthy) ಬುಧವಾರ ಬಿಜೆಪಿ ಸೇರ್ಪಡೆಗೊಂಡರು.

    ನಗರದ ಬಿಜೆಪಿ (BJP) ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Yediyurappa) ಸಮ್ಮುಖದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಅವರು ಬಿಜೆಪಿ ಸೇರಿದರು. ಪುಲಿಕೇಶಿನಗರ ಕ್ಷೇತ್ರದ ತಮ್ಮ ಬೆಂಬಲಿಗರ ಜತೆ ಅಖಂಡ ಬಿಜೆಪಿ ಸೇರ್ಪಡೆಗೊಂಡರು. ಪಕ್ಷದ ಧ್ವಜ ಕೊಟ್ಟು, ಪಕ್ಷದ ಶಾಲು ಹಾಕಿ ಯಡಿಯೂರಪ್ಪ ಪಕ್ಷಕ್ಕೆ ಬರಮಾಡಿಕೊಂಡರು. ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್, ಶಾಸಕ ಸುನೀಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: 500 ವರ್ಷದ ಬಳಿಕ ರಾಮನವಮಿಯಂದು ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಅಭಿಷೇಕ, ಸೂರ್ಯ ತಿಲಕ!

    ಈ ವೇಳೆ ಮಾತನಾಡಿದ ಯಡಿಯೂರಪ್ಪ, ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಸೇರಿದ್ದು ನಮಗೆ ದೊಡ್ಡ ಬಲ ತಂದಿದೆ. ಎರಡೂವರೆ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲೋದು ನಿಶ್ಚಿತ. ಅಖಂಡ ಮನೆಗೆ ಬೆಂಕಿ ಹಾಕಿದಾಗ ಕಾಂಗ್ರೆಸ್ ಅವರ ಪರ ನಿಲ್ಲಲಿಲ್ಲ. ಅಖಂಡ ಚುನಾವಣೆ ಸಮಯದಲ್ಲಿ ಬಂದಿರೋದ್ರಿಂದ ಶೋಭಾ ಅವರು ದೊಡ್ಡ ಅಂತರದಲ್ಲಿ ಗೆಲ್ಲಲು ಅನುಕೂಲ ಆಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

    ಬಿಜೆಪಿ ಸೇರಿದ ನಂತರ ಅಖಂಡ ಶ್ರೀನಿವಾಸ್ ಮೂರ್ತಿ ಮಾತನಾಡಿ, ಶ್ರೀರಾಮನವಮಿಯಂದು ಪಕ್ಷ ಸೇರ್ಪಡೆಯಾಗಲು ಅವಕಾಶ ನೀಡಿದ್ದಾರೆ. ನಾನು ಬಿಜೆಪಿ ಸೇರಲು ಕಾರಣ ಶ್ರೀರಾಮನ ಆಶೀರ್ವಾದ. ಯಡಿಯೂರಪ್ಪ, ಶೋಭಕ್ಕ ಆಶೀರ್ವಾದ ಕಾರಣ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲು ನಾನು ಸಿದ್ಧ. 2018 ರಲ್ಲಿ ಅತಿ ಹೆಚ್ಚು ವೋಟು ಪಡೆದು ಗೆದ್ದವನು ನಾನು. ನನಗೆ ಟಿಕೆಟ್ ತಪ್ಪಿಸಿದ್ದು ಕಾಂಗ್ರೆಸ್. ನನ್ನದಲ್ಲದ ತಪ್ಪಿಗೆ ನನ್ನ ಮನೆ ಸುಟ್ಟು ಹಾಕಿದ್ರು ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಡಿ.ಕೆ.ಸುರೇಶ್‌ ಆಪ್ತನ ಮನೆ ಮೇಲೆ ಐಟಿ ದಾಳಿ

    ನಮ್ಮ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಒಗ್ಗಟ್ಟಾಗಿದ್ದೇವೆ. ಮುಸ್ಲಿಂ ಬಾಂಧವರಿಗೆ ಮನವಿ ಮಾಡ್ತೀನಿ. ಅಮಾಯಕರು ಜೈಲಲ್ಲಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಅದಕ್ಕೆ ನಾನು ಕಾರಣ ಅಲ್ಲ. ನಿಜವಾಗಿ ಬೆಂಕಿ ಹಚ್ಚಿದವರು ಹೊರಗೆ ಓಡಾಡಿಕೊಂಡು, ಪಕ್ಷದಲ್ಲಿ ಪದವಿ ಪಡೆದುಕೊಂಡಿದ್ದಾರೆ. ನನಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ತಪ್ಪಿಸಿದ್ದು ಒಳ್ಳೆಯದಾಯ್ತು. ಇದರಿಂದ ನಾನು ಬಿಜೆಪಿಗೆ ಬರುವಂತಾಗಿದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಕೊಡಿಸೋಣ. ನಾವೆಲ್ಲರೂ ಒಗ್ಗಟ್ಟಾಗಿ ಶೋಭಕ್ಕಗೆ ಲೀಡ್ ಕೊಟ್ಟು ಗೆಲ್ಲಿಸೋಣ ಎಂದು ಕರೆ ನೀಡಿದರು.

  • ಮಾಜಿ ಕಾಂಗ್ರೆಸ್‌ ಶಾಸಕ ಅಖಂಡ ಬುಧವಾರ ಬಿಜೆಪಿ ಸೇರ್ಪಡೆ

    ಮಾಜಿ ಕಾಂಗ್ರೆಸ್‌ ಶಾಸಕ ಅಖಂಡ ಬುಧವಾರ ಬಿಜೆಪಿ ಸೇರ್ಪಡೆ

    ಬೆಂಗಳೂರು: ಮಾಜಿ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ (Akhanda Srinivas Murthy) ಬುಧವಾರ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಎಸ್‌ಪಿಯಿಂದ (BSP) ಪುಲಿಕೇಶಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಖಂಡ ಶ್ರೀನಿವಾಸ ಮೂರ್ತಿ ಸೋತಿದ್ದರು. ಅಖಂಡ ಬಿಜೆಪಿ ಸೇರ್ಪಡೆಯಿಂದ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಅನುಕೂಲವಾಗುವ ಸಾಧ್ಯತೆಯಿದೆ.  ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ದ್ವಾರಕೀಶ್

     

    ಪುಲಿಕೇಶಿನಗರ (Pulakeshinagar) ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದು 2018ರ ಚುನಾವಣೆಯಲ್ಲಿ 81 ಸಾವಿರ ಮತಗಳಿಂದ ಅಖಂಡ ಶ್ರೀನಿವಾಸ ಮೂರ್ತಿ ಗೆಲುವು ಸಾಧಿಸಿದ್ದರು. ಆದರೆ 2023ರ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಕಾರಣ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದರು.

    ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಕಾಂಗ್ರೆಸ್ಸಿಗರೇ ಬೆಂಕಿ ಹಚ್ಚಿದ್ದಾರೆ. ವೋಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ಅವರನ್ನು ಮೂಲೆಗುಂಪು ಮಾಡಿ ಅನ್ಯಾಯ ಮಾಡಿದ್ದಾರೆ ಎಂದಿ ಬಿಜೆಪಿ ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ ವಿರುದ್ಧ ಆರೋಪಿಸಿತ್ತು.  ಇದನ್ನೂ ಓದಿ: ಸುರ್ಜೇವಾಲಾಗೆ ಶಾಕ್‌ – 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ

     

    ವಿಧಾನಸಭಾ ಚುನಾವಣಾ ಸಮಯದಲ್ಲಿ ಪ್ರತಿಕ್ರಿಯಿಸಿದ್ದ ಅಖಂಡ ಶ್ರೀನಿವಾಸ ಮೂರ್ತಿ, ಕೆಜೆ ಹಳ್ಳಿ ಡಿಜೆಹಳ್ಳಿ ಗಲಾಟೆಯಾದ್ರೂ ನಾವೆಲ್ಲಾ ಅಣ್ಣತಮ್ಮಂದಿರಂತೆ ಇದ್ದೆವು. ಆದರೆ ಬೆಂಕಿ ಹಚ್ಚಿ ಜೈಲಿಗೆ ಹೋಗಿಬಂದ ನಾಯಕರೇ ನನಗೆ ಟಿಕೆಟ್ ತಪ್ಪಿಸಿದ್ದಾರೆ. ನನ್ನ ತಂದೆ 40 ವರ್ಷ ಬ್ಲಾಕ್ ಕಾಂಗ್ರಸ್ ಅಧ್ಯಕ್ಷರಾಗಿದ್ದರು ಎಂದು ತಿಳಿಸಿದ್ದರು.

  • ನಮ್ಮ ಮನೆಗೆ ಬೆಂಕಿ ಹಚ್ಚಿದವರನ್ನ ಪಕ್ಷದ ಅಧ್ಯಕ್ಷರು ಜೊತೆಯಲ್ಲಿಟ್ಟುಕೊಂಡು ಓಡಾಡ್ತಿದ್ದಾರೆ: ಅಖಂಡ

    ನಮ್ಮ ಮನೆಗೆ ಬೆಂಕಿ ಹಚ್ಚಿದವರನ್ನ ಪಕ್ಷದ ಅಧ್ಯಕ್ಷರು ಜೊತೆಯಲ್ಲಿಟ್ಟುಕೊಂಡು ಓಡಾಡ್ತಿದ್ದಾರೆ: ಅಖಂಡ

    ಬೆಂಗಳೂರು: ನಮ್ಮ ಮನೆಗೆ ಬೆಂಕಿ ಹಚ್ಚಿದವರನ್ನು ಪಕ್ಷದ ಅಧ್ಯಕ್ಷರು ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಹೆಸರು ಹೇಳಿದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆರೋಪ ಮಾಡಿದರು.

    ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದೆ ಎಂಬ ಕಾರಣಕ್ಕೆ ನನ್ನ ಮೇಲೆ ಹಿರಿಯ ನಾಯಕರು ಷಡ್ಯಂತ್ರ ರೂಪಿಸಿದರು. ಈ ಚುನಾವಣೆಯಲ್ಲಿ ಟಿಕೆಟ್ ಕೂಡ ತಪ್ಪಿಸಿದರು. ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಉಳಿದ ಶಾಸಕರಿಗಾದರೂ ನ್ಯಾಯ ಕೊಡಿ ಅವರಿಗೆ ಅನ್ಯಾಯ ಮಾಡಬೇಡಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ವಿವಾದ – ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

    2020 ರಲ್ಲಿ ನನ್ನ ಮನೆಗೆ ಬೆಂಕಿ ಹಾಕಿ ಪೊಲೀಸ್ ಠಾಣೆಗೂ ಬೆಂಕಿ ಹಚ್ಚಿದ್ದರು. ಗಾಡಿಗಳಿಗೂ ಬೆಂಕಿ ಹಾಕಿದ್ದರು. ಸಿಸಿಟಿವಿ ಫೂಟೇಜ್ ನೋಡಿಯೆ ಆರೋಪಿಗಳನ್ನ ಹುಡುಕಿ ಕೇಸು ಹಾಕಿದ್ದಾರೆ. ಅಮಾಯಕರನ್ನ ಕೇಸಿನಿಂದ ಅವಾಗಲೇ ಕೈ ಬಿಟ್ಟಿದ್ದಾರೆ. ಈಗ ಈ ಬೆಳವಣಿಗೆ ಆಗಿದೆ. ಇದರ ಹಿಂದೆ ಯಾರೋ ಕಿಂಗ್‌ಪಿನ್ ಇದ್ದಾರೆ. ಹಿರಿಯ ನಾಯಕರ ಶಡ್ಯಂತ್ರ ಇದೆ ಎಂದು ಆರೋಪಿಸಿದರು.

    ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಕೋರ್ಟ್‌ಗೂ ಮನವಿ ಮಾಡುತ್ತೇನೆ. ನಮ್ಮ ವಕೀಲರ ಮೂಲಕ ಸರ್ಕಾರದ ನಡೆ ಬಗ್ಗೆ ಕೋರ್ಟ್‌ಗೆ ಮನವಿ ಮಾಡುತ್ತೇನೆ. ಅಮಾಯಕರಿದ್ದರೆ ಅವರನ್ನ ಬಿಡಿ ಎಂದು ಹಿಂದೆ ನಾನೇ ಹೇಳಿದ್ದೆ. ಸಿಸಿ ಕ್ಯಾಮೆರಾ ಫೂಟೇಜ್ ನೋಡಿಯೆ ಪೊಲೀಸರು ಹಾಗೂ ಎನ್‌ಐಎ ತಪ್ಪಿತಸ್ಥರನ್ನ ಬಂಧಿಸಿರುವುದು. ಈಗ ಹೀಗೆ ಮಾಡುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಫ್ರೆಂಡ್ಸ್ ನಡುವಿನ ಘಟನೆಯನ್ನ ಎಲ್ಲಿಗೋ ತೆಗೆದುಕೊಂಡು ಹೋಗ್ಬೇಡಿ: ಉಡುಪಿ ಕೇಸ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ

    ನಾನು ದಲಿತ ಶಾಸಕ. ನನಗೆ ರಕ್ಷಣೆ ಕೊಡಲಿಲ್ಲ. ಅಂದು ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ತನ್ವಿರ್ ಸೇಠ್ ಪತ್ರದ ಹಿಂದೆ ಹಿರಿಯ ನಾಯಕರು ಇದ್ದಾರೆ. ನಾನು 2018 ರಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೆ. ಸಿಎಂ ಹಾಗೂ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಸರ್ಕಾರದ ಈ ನಡೆ ವಿರುದ್ಧ ಕೋಟ್‌ನಲ್ಲೂ ಹೋರಾಟ ಮಾಡ್ತೀನಿ ಎಂದು ತಿಳಿಸಿದರು.

    ಆರೋಪಿಗಳನ್ನ ಬಿಡುಗಡೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಹಾಗೂ ಸಂಪತ್ ರಾಜು ವಿರುದ್ಧ ಅಖಂಡ ಶ್ರೀನಿವಾಸ ಮೂರ್ತಿ ಗುಡುಗಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದು, ಡಿಕೆಶಿ ಫೈಟ್‌ನಲ್ಲಿ ಗೆದ್ದ ಪರಮೇಶ್ವರ್‌!

    ಸಿದ್ದು, ಡಿಕೆಶಿ ಫೈಟ್‌ನಲ್ಲಿ ಗೆದ್ದ ಪರಮೇಶ್ವರ್‌!

    ಬೆಂಗಳೂರು: ಪುಲಕೇಶಿನಗರದಲ್ಲಿ (Pulakeshinagar) ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗಿದ್ದು ಪರಮೇಶ್ವರ್‌ (Parameshwar) ಆಪ್ತನಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿದೆ.

    ಮನೆಗೆ ಬೆಂಕಿ ಬಿದ್ದವರಿಗೂ ಇಲ್ಲ. ಬೆಂಕಿ ಹಾಕಿದ ಆರೋಪ ಹೊತ್ತವರಿಗೂ ಟಿಕೆಟ್ ಸಿಕ್ಕಿಲ್ಲ. ಇಬ್ಬರ ನಡುವಿನ ಜಗಳ ಎರಡು ಬಣದ ನಡುವಿನ ಫೈಟ್ ಮೂರನೇ ಬಣಕ್ಕೆ ನೆರವಾಗಿದೆ.

    ಕೆಜಿಹಳ್ಳಿ ಡಿಜೆಹಳ್ಳಿ ಗಲಾಟೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ (Akhanda Srinivas Murthy) ಮನೆಗೆ ಬೆಂಕಿ ಬಿದ್ದಿತ್ತು. ಸಂಪತ್‌ ರಾಜ್‌ ಮೇಲೆ ಬೆಂಕಿ ಹಾಕಿಸಿದ ಆರೋಪ ಬಂದಿತ್ತು.

    ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್‌ ನೀಡುವಂತೆ ಸಿದ್ದರಾಮಯ್ಯ (Siddaramaiah) ಲಾಬಿ ಮಾಡಿದ್ದರೆ ಮಾಜಿ ಬಿಬಿಎಂಪಿ ಮೇಯರ್‌ ಸಂಪತ್‌ ರಾಜ್‌ (Sampath Raj) ಪರ ಡಿಕೆ ಶಿವಕುಮಾರ್‌ ಬ್ಯಾಟ್‌ ಬೀಸಿದ್ದರು.

    ಇಬ್ಬರ ನಡುವಿನ ಹಗ್ಗಜಗ್ಗಾಟ ಈಗ ಪರಮೇಶ್ವರ್ ಆಪ್ತ ಎ.ಸಿ ಶ್ರೀನಿವಾಸ್‍ಗೆ ಪುಲಿಕೇಶಿನಗರದ ಟಿಕೆಟ್‌ ಸಿಕ್ಕಿದೆ. ಶ್ರೀನಿವಾಸ್‌ ಅವರು ದೇವನಹಳ್ಳಿ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಮುಂದಾಗಿದ್ದರು. ಆದರೆ ಅಲ್ಲಿಯ ಟಿಕೆಟ್‌ ಕೈ ತಪ್ಪಿದ್ದರೂ ಈಗ ಪುಲಕೇಶಿನಗರದ ಟಿಕೆಟ್‌ ಸಿಕ್ಕಿದೆ. ಇದನ್ನೂ ಓದಿ: ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ – ಈಶ್ವರಪ್ಪಗೆ ಹೈಕಮಾಂಡ್‌ ಶಾಕ್‌

     

    ಕಾಂಗ್ರೆಸ್‌ ಬಿಡುಗಡೆ ಮಾಡಿದ ಮೂರು ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದ ಕಾರಣ ಅಖಂಡ ಶ್ರೀನಿವಾಸಮೂರ್ತಿ ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

    ಕಳೆದ ಬಾರಿ ಚುನಾವಣೆಯಲ್ಲಿ ಅಖಂಡ 81 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದರು. ಶ್ರೀನಿವಾಸಮೂರ್ತಿಗೆ 97,574 ಮತಗಳು ಬಿದ್ದಿದ್ದರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪ್ರಸನ್ನಕುಮಾರ್‌ಗೆ 15,948 ಮತಗಳು ಸಿಕ್ಕಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸುಶೀಲಾ ದೇವರಾಜ್‌ಗೆ 9,479 ಮತಗಳು ಬಿದ್ದಿದ್ದವು.

  • ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್‌ಗಾಗಿ ದೇಗುಲ, ಮಸೀದಿಯಲ್ಲಿ ವಿಶೇಷ ಪೂಜೆ

    ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್‌ಗಾಗಿ ದೇಗುಲ, ಮಸೀದಿಯಲ್ಲಿ ವಿಶೇಷ ಪೂಜೆ

    ಬೆಂಗಳೂರು: ಕಾಂಗ್ರೆಸ್‌ನ (Congress) ಮೂರನೇ ಪಟ್ಟಿಯಲ್ಲಿ ಪುಲಕೇಶಿನಗರದ ವಿಧಾನಸಭಾ ಕ್ಷೇತ್ರಕ್ಕೆ ಅಖಂಡ ಶ್ರೀನಿವಾಸ ಮೂರ್ತಿ (Akhanda Srinivas Murthy) ಅವರ ಹೆಸರು ಬರಲಿ ಹಾಗೂ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ದೇಗುಲ ಮತ್ತು ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

    ಪುಲಕೇಶಿನಗರದಲ್ಲಿನ ತಂಗಬೆಟ್ಟ ಸುಬ್ರಮಣ್ಯ ದೇಗುಲ ಹಾಗೂ ಮಸೀದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು, ಟಿಕೆಟ್‌ಗಾಗಿ ಪೂಜೆ, ಪುನಸ್ಕಾರ ಮಾಡಿದರು. ಇದನ್ನೂ ಓದಿ: ಹಿಂದೂಗಳ ಭಾವನೆಗೆ ಧಕ್ಕೆ ಆರೋಪ: ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ಜೆಡಿಎಸ್ ದೂರು

    ಕಾಂಗ್ರೆಸ್ ಹೈಕಮಾಂಡ್ ಬಳಿ ತೆರಳಿ ಅವರಲ್ಲಿ ಟಿಕೆಟ್‌ಗಾಗಿ ಮನವಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ದೇವರ ಮೊರೆ ಹೋಗಿದ್ದೇವೆ. ಇಲ್ಲಿಯ ಪೂಜೆಯಿಂದ ಹೈಕಮಾಂಡ್ ಅಖಂಡ ಶ್ರೀನಿವಾಸ ಮೂರ್ತಿಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿ ಎಂದು ಪ್ರಾರ್ಥಿಸಿದರು.

    ಕಳೆದ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಅತೀ ಹೆಚ್ಚು ಅಂದರೆ, 81 ಸಾವಿರ ಮತಗಳಿಂದ ಅಮೋಘ ಗೆಲುವು ಸಾಧಿಸಿರುವ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಈ ಬಾರಿ ಟಿಕೆಟ್ ನೀಡಲು ವಿಳಂಬವಾಗುತ್ತಿರುವುದಕ್ಕೆ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಗುಜರಾತ್ ನಾಯಕರನ್ನು ಮೆಚ್ಚಿಸಲು KMF ಮುಗಿಸುವ ಹುನ್ನಾರ: ಹೆಚ್ಡಿಕೆ ವಾಗ್ದಾಳಿ

    ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಈ ಬಾರಿ ಟಿಕೆಟ್ ನೀಡಿದ್ದೇ ಆದ್ದಲ್ಲಿ ಅವರನ್ನು ಕಳೆದ ಬಾರಿಗಿಂತ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವಂತೆ ಮಾಡಲಾಗುವುದು ಎಂದು ಬೆಂಬಲಿಗರು ಭರವಸೆ ನೀಡಿದ್ದಾರೆ. ಹಾಗೆಯೇ ಅಖಂಡ ಶ್ರೀನಿವಾಸ ಮೂರ್ತಿ ಅವರ ಪರ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿದರು.

  • ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಒಂದು ವರ್ಷ

    ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಒಂದು ವರ್ಷ

    – ನ್ಯಾಯ ಸಿಕ್ಕೇ ಸಿಗುತ್ತೆ ಅಂದ್ರು ಶಾಸಕ ಅಖಂಡ

    ಬೆಂಗಳೂರು: ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಇಂದಿಗೆ ಬರೋಬ್ಬರಿ ಒಂದು ವರ್ಷ ತುಂಬಿದೆ. ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ನವೀನ್ ಹಾಕಿದ್ದ ಪೋಸ್ಟ್ ನೆಪಕ್ಕೆ ಶುರುವಾಗಿದ್ದ, ಗಲಾಟೆ ಪ್ರಕರಣ ದೊಡ್ಡ ಮಟ್ಟದ ಗಲಭೆಗೆ ಕಾರಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗಲಭೆಕೋರರು, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಬಳಿ ಜಮಾಯಿಸಿ ಕಲ್ಲು ತೂರಾಟ ಮಾಡಿ ಅಲ್ಲಿಂದ ವಾಹನಗಳು ಸೇರಿದಂತೆ ಮನೆಗೆ ಬೆಂಕಿ ಹಾಕಿದ್ದರು. ನಂತರ ನೋಡು ನೋಡುತ್ತಿದ್ದಂತೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಪುಂಡಾಟ ಮೆರೆದು ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಮನೆಗಳಿಗೆ ಕಲ್ಲು ತೂರಾಟ ಮಾಡಿದ್ದರು.

    ಗಲಭೆ ವಿಕೋಪಕ್ಕೆ ಹೋಗ್ತಿದ್ದಂತೆ ಡಿಜೆ ಹಳ್ಳಿ , ಕೆಜಿ ಹಳ್ಳಿ ಪೊಲೀಸ್ ಠಾಣೆಯ ಬಳಿ ಬಂದ ನೂರಾರು ಗಲಭೆಕೊರರು, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿ ಪೊಲೀಸರ ವಾಹನಗಳನ್ನು ಸುಟ್ಟು ಪುಂಡಾಟ ಮೆರದಿದ್ದರು. ಪೊಲೀಸರು ಇಷ್ಟೆಲ್ಲಾ ನಡೀತಿದ್ರು ಏನು ಮಾಡಲಾಗದ ಸ್ಥಿತಿಯಲ್ಲಿ ನಿಲ್ಲಬೇಕಾಯಿತು. ಕೊನೆಗೆ ಪರಿಸ್ಥಿತಿ ಕೈ ಮೀರುತ್ತಿರುವದನ್ನ ನೋಡಿ ಪೊಲೀಸರು ಫೈರಿಂಗ್ ಶುರುಮಾಡಿದ್ದರು. ಈ ವೇಳೆ ಓರ್ವ ಗುಂಡೇಟಿಗೆ ಬಲಿಯಾಗಿದ್ದ.

    ಎನ್‍ಐಎ ಮತ್ತು ಸಿಸಿಬಿ ಪೊಲೀಸರು ತನಿಖೆ ನಡೆಸಿ 450ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ತನಿಖೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡದ ಬಗ್ಗೆ ಸಾಕ್ಷಿ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಕೂಡ ಬಂಧಿಸಲಾಗಿತ್ತು. ಸದ್ಯ ಈ ಪ್ರಕರಣದ ತನಿಖೆಯನ್ನು ಎನ್‍ಐಎ ಪೊಲೀಸರು ನಡೆಸುತ್ತಿದೆ. ವಿಪರ್ಯಾಸವೆಂದರೆ ಗಲಾಟೆಯಲ್ಲಿ ಹಾನಿಗೊಳಾದ ಡಿಜೆ ಹಳ್ಳಿ ಪೊಲೀಸ್ ಠಾಣೆ ಇನ್ನೂ ಕೂಡ ಹಾಗೇ ಇದೆ. ಮನೆ ಕಳೆದುಕೊಂಡ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಕೂಡ ನೆಲಸಮ ಆಗಿದ್ದು, ಇನ್ನೂ ನಿರ್ಮಾಣ ಆಗಿಲ್ಲ. ಇದನ್ನೂ ಓದಿ: ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ – ಪೊಲೀಸರು ಕೊಟ್ರು 20-20ಯ ತ್ರಿಪಲ್ ಶಾಕ್!

    ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಪ್ರತಿಕ್ರಿಯೆ:
    ಬೆಂಗಳೂರಿನ ಡಿಜೆ ಹಳ್ಳಿ -ಕೆಜಿ ಹಳ್ಳಿ ಗಲಭೆಗೆ ಇಂದಿಗೆ ಸರಿಯಾಗಿ ಒಂದು ವರ್ಷ ಆದ ಹಿನ್ನೆಲೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮಾಧ್ಯಮ ಗಳಿಗೆ ಪ್ರತಿಕ್ರಿಯೆಸಿದ್ದಾರೆ. ಕಳೆದ ವರ್ಷ ಇದೇ ದಿನದಂದು ನಮ್ಮ ಮನೆ ಮೇಲೆ ನೂರಾರು ಸಂಖ್ಯೆಯಲ್ಲಿ ಕಿಡಿಗೇಡಿಗಳು ಗಲಾಟೆ ಮಾಡಿ ಬೆಂಕಿ ಹಾಕಿದ್ರು. ಮನೆ ಮುಂದಿದಿದ್ದ ವಾಹನಗಳನ್ನು ಸುಟ್ಟು ಹಾಕಿದ್ರು. ನಮ್ಮ ಕುಟುಂಬ ತಾಯಿ -ತಂದೆ ಬಾಳಿ ಬದುಕಿದ ಮನೆ ಇದು. ನೋಡಿದ್ರೆ ದುಖಃ ಆಗುತ್ತೆ. ಇನ್ನೂ ಕೂಡ ಇಲ್ಲಿ ಹೊಸ ಮನೆ ನಿರ್ಮಾಣ ಮಾಡಲು ಆಗಿಲ್ಲ. ನಮ್ಮ ಪಕ್ಷದ ಕೆಲ ನಾಯಕರೇ ಅಂದಿನ ಘಟನೆಗೆ ಪರೋಕ್ಷವಾಗಿ ಬೆಂಬಲ ನೀಡಿರೋದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ನಾನು ಇನ್ನೂ ಕೂಡ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು.  ಇದನ್ನೂ ಓದಿ:ಹೀಗೊಂದು ವಿಚಿತ್ರ ಕೋಳಿ ಮೊಟ್ಟೆ – ಮನೆಯವರಿಗೆ ಅಚ್ಚರಿ

    ನನಗೆ ನ್ಯಾಯ ಸಿಕ್ಕೇ ಸಿಗುತ್ತೆ:
    ನನ್ನ ಮನೆ ಮೇಲಿನ ದಾಳಿಗೆ ಯಾರೆಲ್ಲಾ ಕಾರಣ, ಏನೆಲ್ಲಾ ಮಾಡಿದ್ದು ಅನ್ನೋದನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಮನಕ್ಕೆ ತಂದಿದ್ದೀನಿ. ಅವರು ನನಗೆ ನ್ಯಾಯ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನಗೂ ಕೂಡ ನ್ಯಾಯ ಸಿಗುವ ವಿಶ್ವಾಸವಿದೆ, ನಮ್ಮ ಪಕ್ಷದ ಮಾಜಿ ಮೇಯರ್ ಸಂಪತ್ ರಾಜ್, ಯಾಸೀರ್, ಅರುಣ್, ಸಂತೋಷ, ಝಕೀರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇನೆ.. ಈ ಪ್ರಕರಣದಲ್ಲಿ ಬಂಧನವಾಗಿ, ಈಗ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಅವರ ಜಾಮೀನು ವಜಾ ಮಾಡಬೇಕು ಅಂತಾ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದೇನೆ. ತಡವಾದ್ರು ನನಗೆ ನ್ಯಾಯ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆ ನನ್ನದು. ನನಗೆ ಆದ ರೀತಿ ಬೇರೆ ಯಾವುದೇ ಶಾಸಕ ಅಥವಾ ವ್ಯಕ್ತಿ ಗೆ ಆಗಬಾರದು ಅಂತಾ ತಮ್ಮ ಮನದ ನೋವವನ್ನು ಹೊರಹಾಕಿದರು. ಇದನ್ನೂ ಓದಿ:ಅಕ್ಟೋಬರ್ 1ರೊಳಗೆ ಮೀಸಲಾತಿ ಪ್ರಕಟಿಸಿ- ಸರ್ಕಾರಕ್ಕೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಂದೇಶ

  • ಸಿಎಲ್‍ಪಿ ಸಭೆಯಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಗರಂ

    ಸಿಎಲ್‍ಪಿ ಸಭೆಯಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಗರಂ

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಗರಂ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪಕ್ಷದ ನಾಯಕರ ಎದುರೇ ಸಿಎಲ್ ಪಿ ಸಭೆಯಲ್ಲಿ ಅಖಂಡ ತನ್ನ ಆಕ್ರೋಶ ಹೊರಹಾಕಿದ್ದಾರೆ. ನನಗೊಂದು ನ್ಯಾಯ, ಸೌಮ್ಯ ರೆಡ್ಡಿಗೆ ಒಂದು ನ್ಯಾಯನಾ..?, ನನ್ನ ಪರ ಯಾವ ಒಬ್ಬ ಶಾಸಕರು ಹೇಳಿಕೆ ಕೊಟ್ಟಿಲ್ಲ. ಸೌಮ್ಯ ರೆಡ್ಡಿ ಪರ ಹೋರಾಟ ನಡೆದಿದೆ ಎಂದು ಕಿಡಿಕಾರಿದರು ಎನ್ನಲಾಗಿದೆ.

    ಅಖಂಡ ಶ್ರೀನಿವಾಸ್ ಮೂರ್ತಿ ಮಾತಿಗೆ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಕೂಡ ದನಿಗೂಡಿಸಿದರು. ಆದರೆ ಅಖಂಡ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂಬುದಾಗಿ ತಿಳಿದುಬಂದಿದೆ.

    ಸಭೆಯಲ್ಲಿ ಸಿ ಎಲ್ ಪಿ ನಾಯಕ ಸಿದ್ದರಾಮಯ್ಯ, ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಹಾಗೂ ಕೆ ಸಿ ಕೊಂಡಯ್ಯ ಮತ್ತಿತರರು ಉಪಸ್ಥಿತರಿದ್ದರು.

  • ‘ಫೈರ್’ ಸಂಪತ್ ‘ರಾಜ್’ ಬಂಧನವಾಗಿದ್ದೇಗೆ?

    ‘ಫೈರ್’ ಸಂಪತ್ ‘ರಾಜ್’ ಬಂಧನವಾಗಿದ್ದೇಗೆ?

    ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಎಸ್ಕೇಪ್ ಆಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಇಂದು ಪೊಲೀಸರು ಸಂಪತ್ ರಾಜ್ ಗೆಳೆಯ ಕಾಂಟ್ರಾಕ್ಟರ್ ರಿಯಾಜುದ್ದೀನ್ ಎಂಬಾತನನ್ನ ಬಂಧಿಸಿದ್ದರು. ರಿಯಾಜುದ್ದೀನ್ ನೀಡಿದ ಮಾಹಿತಿ ಆಧಾರದ ಮೇಲೆ ಸಂಪತ್ ರಾಜ್ ಬಂಧನವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್ ಗುಣಮುಖವಾದ ಬಳಿಕ ಎಸ್ಪೇಕ್ ಆಗಿ ನಾಗರಹೊಳೆಯ ಫಾರ್ಮ್ ನಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ರಿಯಾಜುದ್ದೀನ್ ತನ್ನ ಕಾರಿನಲ್ಲಿಯೇ ಸಂಪತ್ ರಾಜ್ ನನ್ನು ಕರೆದುಕೊಂಡು ತನ್ನ ಆಪ್ತರ ಬಳಿ ಬಿಟ್ಟಿದ್ದನು. ರಿಯಾಜುದ್ದೀನ್ ಶಿಷ್ಯರ ಚಲನವಲನ ಮೇಲೆಯೂ ಸಿಸಿಬಿ ತಂಡ ಕಣ್ಣಿಟ್ಟಿತ್ತು. ರಿಯಾಜುದ್ದೀನ್ ಶಿಷ್ಯರು ಸಂಪತ್ ರಾಜ್ ಜೊತೆ ನೇರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

    ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದ ವೇಳೆ ಸಂಪತ್ ರಾಜ್ ಕೂಗಳತೆ ದೂರದಲ್ಲಿಯೇ ಇದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಯ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ ರಾಜ್ ಸಿಸಿಬಿ ವಿಚಾರಣೆಗ ಎದುರಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರಿಂದ ಬಂಧನ ವಿಳಂಬವಾಗಿತ್ತು.

  • ಸಂಪತ್‍ರಾಜ್‍ನ ಪಕ್ಷದಿಂದ ಉಚ್ಛಾಟಿಸುವಂತೆ ಮನವಿ ಮಾಡ್ತೀನಿ: ಅಖಂಡ

    ಸಂಪತ್‍ರಾಜ್‍ನ ಪಕ್ಷದಿಂದ ಉಚ್ಛಾಟಿಸುವಂತೆ ಮನವಿ ಮಾಡ್ತೀನಿ: ಅಖಂಡ

    ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ನನ್ನು ಪಕ್ಷದಿಂದ ಉಚ್ಛಾಟಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಜಮೀರ್ ಅಹ್ಮದ್ ಬಳಿ ಮನವಿ ಮಾಡುತ್ತೇನೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ ಅಪರಾಧಿ ಅಪರಾಧಿನೆ. ಯಾರೇ ಅಪರಾಧಿ ಆಗಿದ್ದರೂ ಶಿಕ್ಷೆ ಕೊಡಬೇಕು. ನಾನು ಯಾರ ಜೊತೆಗೂ ದ್ವೇಷದ ರಾಜಕಾರಣ ಮಾಡಿಲ್ಲ. ನಾನು ಶಾಸಕನಾಗಿ ಕೆಲಸ ಮಾಡಿಲ್ಲ. ಪಬ್ಲಿಕ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.

    ನಾನು ಎಲ್ಲಾ ವಾರ್ಡಿನಲ್ಲಿ ಕಾರ್ಪೊರೇಟರ್ ಗಳ ಜೊತೆ ಚೆನ್ನಾಗೆ ಇದ್ದೆ. ಕಾರ್ಯಕ್ರಮಗಳಿಗೆ ಅವರ ಜೊತೆಗೆ ಪೂಜೆ ಮಾಡುತ್ತಿದ್ದೆ. ನನ್ನನ್ನು ಹತ್ಯೆ ಮಾಡುವಂತದ್ದು ಏನು ಮಾಡಿದ್ದೆ. ಸಂಪತ್ ರಾಜುನಾ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಅಂತ ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಬಳಿ ಹೋಗಿ ಒತ್ತಾಯ ಮಾಡ್ತೀನಿ. ನನ್ನ ಪ್ರಾಣ ತೆಗಿಯಲು ಮುಂದಾಗಿದ್ದರು ಅವರನ್ನ ಪಕ್ಷದಿಂದ ಉಚ್ಚಾಟಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಶಾಸಕ ಅಖಂಡ ಮನೆಗೆ ಕಾಂಗ್ರೆಸ್ಸಿಗರಿಂದಲೇ ಬೆಂಕಿ

    ನಾನು ಪಕ್ಷ ಸೇರುವಾಗ ಸೇರಿಸಿಕೊಳ್ಳಬಾರದು ಅಂತ ಗಲಾಟೆ ಮಾಡಿದ್ದರು. ಆದರೆ ಚಾರ್ಜ್ ಶೀಟ್ ನೋಡಿದ್ರೆ ಹೀಗೆ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ಅಂತವರಿಂದ ಪಕ್ಷಕ್ಕೆ ಕೆಟ್ಟ ಹೆಸರು ಅಂತವರು ಪಕ್ಷದಲ್ಲಿ ಇರಬಾರದು. ನಾಳೆ ಡಿಕೆಶಿಯನ್ನ ಭೇಟಿ ಮಾಡಿ ಮಾತಾಡುತ್ತೇನೆ. ನನ್ನ ಮನವಿಗೆ ಸ್ಪಂದಿಸ್ತಾರೆ ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಶಾಸಕ ಅಖಂಡ ಮನೆಗೆ ಕಾಂಗ್ರೆಸ್ಸಿಗರಿಂದಲೇ ಬೆಂಕಿ

    ಶಾಸಕ ಅಖಂಡ ಮನೆಗೆ ಕಾಂಗ್ರೆಸ್ಸಿಗರಿಂದಲೇ ಬೆಂಕಿ

    – ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಅಂಶ
    – ಪುಂಡರಿಗೆ ಉಚಿತ ಪೆಟ್ರೋಲ್‌

    ಬೆಂಗಳೂರು: ದೇವರ ಜೀವನಹಳ್ಳಿ (ಡಿಜೆ ಹಳ್ಳಿ), ಕಾಡುಗೊಂಡನ ಹಳ್ಳಿ(ಕೆಜೆ ಹಳ್ಳಿ) ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಸಿಸಿಬಿ ಕೋರ್ಟ್‍ಗೆ ಸಲ್ಲಿಸಿದ ದೋಷರೋಪ ಪಟ್ಟಿಯಲ್ಲಿನ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಡಿ.ಜೆ. ಹಳ್ಳಿ ಗಲಭೆ ಹಿಂದೆ ಕಾಂಗ್ರೆಸ್-ಎಸ್‍ಡಿಪಿಐ ಪಾತ್ರವಿರುವ ಬಗ್ಗೆ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.

    ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮಧ್ಯಂತರ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಈ ಆರೋಪ ಪಟ್ಟಿಯಲ್ಲಿ ಮುಸ್ಲಿಂ ಬಾಹುಳ್ಯದ ತಿಲಕ್‍ನಗರ, ಚಾಮರಾಜಪೇಟೆ, ಗೋರಿಪಾಳ್ಯದ ಪುಂಡ ಯುವಕರನ್ನು ಪ್ರಚೋದಿಸಿ ಗಲಭೆ ಮಾಡಿಸಲಾಗಿದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹತ್ಯೆಗೆ ಸಂಚು ನಡೆದಿತ್ತು ಎಂಬ ಅಂಶ ಉಲ್ಲೇಖವಾಗಿದೆ.

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಪುಲಕೇಶಿ ನಗರದ ಕೈ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಕಾಂಗ್ರೆಸ್ಸಿಗರೇ ಬೆಂಕಿ ಹಚ್ಚಿಸಿದ್ದಾರೆ. ಅಖಂಡ ಮನೆಗೆ ಬೆಂಕಿ ಬಿದ್ದಾಗ, ಕೇವಲ 100 ಮೀಟರ್ ದೂರದಲ್ಲಿ ಇರುವ ಸಂತೋಷ್ ನಿವಾಸದಲ್ಲಿ ಸಂಪತ್ ರಾಜ್ ಇದ್ದರು. ಅಸಲಿಗೆ ಗಲಭೆಗೆ ಹಣಕಾಸಿನ ಸಹಾಯ ಮಾಡಿದ್ದೇ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಜಾಕೀರ್ ಎಂದು ತಿಳಿದುಬಂದಿದೆ.

    ಗಲಭೆ ನಡೆಸಲು ಬಂದಿದ್ದ ಪುಂಡರಿಗೆ ಸಂಪತ್ ರಾಜ್ ಉಚಿತವಾಗಿ ಪೆಟ್ರೋಲ್ ನೀಡಿದ್ದರು. ಇದರ ಜವಾಬ್ದಾರಿಯನ್ನು ಅರುಣ್ ವಹಿಸಿಕೊಂಡಿದ್ದ. ಕಾವಲ್ ಬೈರಸಂದ್ರದ ಬಸ್ ನಿಲ್ದಾಣದಲ್ಲೇ ಹಣ ಕೂಡ ಹಂಚಲಾಗಿತ್ತು ಎಂಬುದಕ್ಕೆ ದೃಶ್ಯ ಸಾಕ್ಷ್ಯ ಸಮೇತ ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

    ಆಖಂಡ ಶ್ರೀನಿವಾಸಮೂರ್ತಿ ಹೆಸರು ಹಾಳು ಮಾಡಲು ಪೂರ್ವ ನಿಯೋಜಿತ ಸಂಚು ಎಂಬುದು ತನಿಖೆ ವೇಳೆ ಬಯಲಾಗಿದೆ. ಶಾಸಕರ ಹೆಸರು ಕೆಡಿಸಲು ಒಳ್ಳೆಯ ಸಮಯಕ್ಕೆ ಕೆಲವು ಮುಖಂಡರು ಕಾದಿದ್ದರು. ನವೀನ್ ಪೋಸ್ಟ್ ಹಾಕುತ್ತಿದ್ದಂತೆ ಎಲ್ಲರೂ ಸಕ್ರಿಯರಾಗಿ ಈ ಗಲಭೆ ನಡೆಸಿದ್ದಾರೆ ಎಂಬ ಅಂಶ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

    50 ಪುಟಗಳ ಮಧ್ಯಂತರ ಚಾರ್ಜ್ ಶೀಟ್‌ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದರೆ, ಮಾಜಿ ಪಾಲಿಕೆ ಸದಸ್ಯ ಝಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸಕ್ಕೆ ಬೆಂಕಿ ಇಡಲು ಇವರ ಪಾತ್ರ ಇದೆ. ಟೆಕ್ನಿಕಲ್ ಸಾಕ್ಷ್ಯಗಳ ಮೂಲಕ ಗಲಭೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

    ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎ ಆರ್ ಝಾಕೀರ್ ಅವರ ವಿಚಾರಣೆ ನಡೆಸಿಲ್ಲ. ಈಗಾಗಲೇ ಇಬ್ಬರಿಗೂ ವಿಚಾರಣೆಗೆ ಬರುವಂತೆ ಎರಡನೇ ಬಾರಿ ನೋಟಿಸ್‌ ನೀಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸದ್ಯಕ್ಕೆ ಸಂಪತ್‌ ರಾಜ್‌ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ.

    ಪ್ರತಿಭಟನೆ: ಚಾರ್ಜ್‍ಶೀಟ್ ಬೆನ್ನಲ್ಲೇ ಶಾಸಕ ಅಖಂಡ ಶ್ರೀನಿವಾಸ್ ಬೆಂಬಲಿಗರು ಸಂಪತ್ ರಾಜ್ ವಿರುದ್ಧ ಬೀದಿಗೆ ಇಳಿದಿದ್ದಾರೆ. ಟ್ಯಾನರಿ ರಸ್ತೆಯಲ್ಲಿರುವ ಸಂಪತ್ ರಾಜ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಸಂಪತ್ ರಾಜ್, ಜಾಕೀರ್ ಬಂಧಿಸುವಂತೆ ಒತ್ತಾಯಿಸಿದರು.