Tag: ಅಖಂಡ ಕರ್ನಾಟಕ

  • ಉತ್ತರ-ದಕ್ಷಿಣ ಭೇದ ನಮಗಿಲ್ಲ, ನಮ್ಮದು ಒಂದೇ ಕರ್ನಾಟಕ: ಸಿದ್ದರಾಮಯ್ಯ

    ಉತ್ತರ-ದಕ್ಷಿಣ ಭೇದ ನಮಗಿಲ್ಲ, ನಮ್ಮದು ಒಂದೇ ಕರ್ನಾಟಕ: ಸಿದ್ದರಾಮಯ್ಯ

    – ಸೌಹಾರ್ದತೆ ಪರಂಪರೆ ಗಟ್ಟಿಗೊಳಿಸಲೆಂದೇ ಬಾದಾಮಿಯಿಂದ ಸ್ಪರ್ಧೆ

    ಬೆಂಗಳೂರು: ಉತ್ತರ-ದಕ್ಷಿಣವೆಂಬ ಬೇಧ ನಮಗಿಲ್ಲ. ನಮ್ಮದು ಒಂದೇ ಕರ್ನಾಟಕ ನೀತಿ. ಅದುವೇ ಅಖಂಡ ಕರ್ನಾಟಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚಾರಿತ್ರಿಕ ಕಾರಣಗಳಿಂದಾಗಿ ರಾಜ್ಯದ ಕೆಲವು ಭಾಗಗಳು ಹಿಂದುಳಿದಿರುವುದು ನಿಜ. ಅವುಗಳ ಅಭಿವೃದ್ದಿಗೆ ಒತ್ತು ನೀಡುವ ಪ್ರಾದೇಶಿಕ ನ್ಯಾಯದ ಪರವಾಗಿ ನಮ್ಮ ಪಕ್ಷ ಇದೆ. ಜಾತಿ-ಧರ್ಮಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಜನದ್ರೋಹದ ಕೆಲಸ. ಅಖಂಡ ಕರ್ನಾಟಕದ ರಕ್ಷಣೆ-ಅಭಿವೃದ್ದಿಗೆ ಕಾಂಗ್ರೆಸ್ ಬದ್ಧ, ನಾನು ಸದಾ ಸಿದ್ಧ. ಉತ್ತರ-ದಕ್ಷಿಣದ ನಡುವಿನ ಅಂತರವನ್ನು ಹೋಗಲಾಡಿಸಿ ಸೌಹಾರ್ದತೆಯ ಪರಂಪರೆಯನ್ನು ಗಟ್ಟಿಗೊಳಿಸಲಿಕ್ಕಾಗಿಯೇ ನಾನು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆ ಕ್ಷೇತ್ರದ ಜನರ ಆಶೀರ್ವಾದ ನನ್ನ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ ಎಂದು ತಿಳಿಸಿದ್ದಾರೆ.

    ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನಕ್ಕೆ ತಿದ್ದುಪಡಿ (371-ಜೆ) ಮಾಡಬೇಕೆಂಬ ಬೇಡಿಕೆ ಈಡೇರಿಸಿದ್ದು, ಕಾಂಗ್ರೆಸ್ ಪಕ್ಷ. ಆ ಬೇಡಿಕೆಯನ್ನು ತಿರಸ್ಕರಿಸಿದ್ದ ಬಿಜೆಪಿಯ ನಾಯಕರು ಈಗ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿರುವುದು ಆತ್ಮದ್ರೋಹ ಮಾತ್ರವಲ್ಲ, ಆತ್ಮವಂಚಕ ನಡವಳಿಕೆ. ಡಿ.ಎಂ.ನಂಜುಂಡಪ್ಪ ಸಮಿತಿಯ ಶಿಫಾರಸ್ಸಿನಂತೆ ರೂಪಿಸಲಾಗಿದ್ದ ವಿಶೇಷ ಅಭಿವೃದ್ದಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಮಾಡಲು ಅದರ ಅವಧಿಯನ್ನು 5 ವರ್ಷಗಳ ಕಾಲ ವಿಸ್ತರಿಸಿದ್ದು, ನಮ್ಮ ಸರ್ಕಾರ. ಪ್ರತಿ ವರ್ಷ ಇದಕ್ಕಾಗಿ 1500 ಕೋಟಿ ರೂ. ವಿಶೇಷ ಅನುದಾನವನ್ನು ನಮ್ಮ ಸರ್ಕಾರ ನೀಡಿತ್ತು ಅಂತ ಸಾಲು ಸಾಲು ಟ್ವೀಟ್ ಮಾಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂಬುದರ ಕುರಿತಾಗಿ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರೂ ಆಗಿರುವ ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

    ಉತ್ತರ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರೈತ ಸಂಘಟನೆ ಆಗಸ್ಟ್ 2 ರಂದು 13 ಜಿಲ್ಲೆಗಳ ಬಂದ್ ಗೆ ಕರೆ ನೀಡಿದೆ.

  • ಕನ್ನಡದ ಬಗ್ಗೆ ನೀವೇನು ಮಾತನಾಡೋದು: ಪ್ರತಿಭಟನೆ ವೇಳೆ ಮಹಿಳೆಯಿಂದ ವಾಟಾಳ್‍ಗೆ ಕ್ಲಾಸ್

    ಕನ್ನಡದ ಬಗ್ಗೆ ನೀವೇನು ಮಾತನಾಡೋದು: ಪ್ರತಿಭಟನೆ ವೇಳೆ ಮಹಿಳೆಯಿಂದ ವಾಟಾಳ್‍ಗೆ ಕ್ಲಾಸ್

    ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡ ಎಂದು ವಾಟಾಳ್ ನಾಗರಾಜ್ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿ ಅಪರಿಚಿತ ಮಹಿಳೆಯೊಬ್ಬಳು ಕ್ಲಾಸ್ ತೆಗೆದುಕೊಂಡಿದ್ದಾಳೆ.

    ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಮಹಿಳೆಯೊಬ್ಬಳು ಆಗಮಿಸಿ, ಕನ್ನಡದ ಬಗ್ಗೆ ನೀವೇನು ಮಾತನಾಡೋದು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾಳೆ.

    ನಾನು ಉಪ್ಪಿನ ಸತ್ಯಾಗ್ರಹ ಮಾಡಿದ್ದೀನಿ, ಕರಾಳ ಸತ್ಯಾಗ್ರಹ ಮಾಡಿದ್ದೀನಿ. ಕನ್ನಡದ ಬಗ್ಗೆ ನೀವೇನು ಮಾತನಾಡುವುದು ಎಂದು ಪ್ರಶ್ನಿಸಿದ್ದಾಳೆ. ಈ ವೇಳೆ ಆಕೆಯನ್ನು ಹಿಡಿದು ಹೊರಗಡೆ ಕಳುಹಿಸಲು ಮುಂದಾದ ಬೆಂಬಲಿಗನಿಗೆ ಡೊಂಟ್ ಟಚ್ ಮೈ ಎಂದು ಹೇಳಿದ್ದಾಳೆ.

    ಜೋಳದ ರೊಟ್ಟಿ ಉತ್ತರ ಕರ್ನಾಟಕ, ರಾಗಿ ಮುದ್ದೆ ದಕ್ಷಿಣ ಕರ್ನಾಟಕ ಇದರ ಸಂಕೇತವಾಗಿ ಬಹಿರಂಗವಾಗಿ ಕುಳಿತು ಊಟ ಮಾಡುವ ಮೂಲಕ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗನ್ನ ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

    ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ನಿಜ. ಆದ್ರೆ ಕರ್ನಾಟಕವನ್ನ ಯಾವುದೇ ಕಾರಣಕ್ಕೂ ಎರಡು ಭಾಗ ಮಾಡಬೇಡಿ. ಅಖಂಡ ಕರ್ನಾಟಕ ಎಲ್ಲರಿಗೂ ಬೇಕಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ನಿಜ. ಈ ಕುರಿತು ಬಿಜೆಪಿಯವರು ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ಅವರಿಗೆ ಇಷ್ಟು ದಿನ ಮಹಾದಾಯಿ ವಿಚಾರ ಕುರಿತು ಏಕೆ ಮಾತನಾಡಲಿಲ್ಲ, ಉತ್ತರ ಕರ್ನಾಟಕ ಜನರ ನೋವು ನಿಮಗೆ ಗೊತ್ತಾಗಲ್ವಾ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯ ಇಬ್ಭಾಗ ಮಾಡಿದ್ರೆ ಬೀದರ್ ನಿಂದ ಚಾಮರಾಜನಗರದಿಂದ ಪ್ರತಿಭಟನೆ ಮಾಡ್ತೇವೆ. ನಾಳೆ ಬೆಳಿಗ್ಗೆ ಈ ಬಗ್ಗೆ ಸಭೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುವುದಾಗಿ ವಾಟಾಳ್ ನಾಗರಾಜ್ ಹೇಳಿದರು.