Tag: ಅಂಬಾರಿ

  • ಅರಮನೆ ನಗರಿಯಲ್ಲಿ ದಸರಾ ವೈಭವ – ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ

    ಅರಮನೆ ನಗರಿಯಲ್ಲಿ ದಸರಾ ವೈಭವ – ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ

    -415ನೇ ದಸರಾ ಮಹೋತ್ಸವಕ್ಕೆ ಸಜ್ಜಾದ ಮೈಸೂರು
    -ಸತತ 6ನೇ ಬಾರಿಗೆ ಅಂಬಾರಿ ಹೊರಲಿರುವ ಅಭಿಮನ್ಯು

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ (Mysuru Dasara) ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಅರಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಕಣ್ತುಂಬಿಕೊಳ್ಳಲು ಜನ ಕಾತರರಾಗಿದ್ದಾರೆ.

    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಕೌಂಟ್‌ಡೌನ್ ಶುರುವಾಗಿದೆ. ಇದಕ್ಕೂ ಮುನ್ನ ಅಂಬಾವಿಲಾಸ ಅರಮನೆ ಒಳಭಾಗ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ಜಂಬೂಸವಾರಿ ವೀಕ್ಷಣೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ಸಿದ್ಧತೆಯಾಗಿದೆ.ಇದನ್ನೂ ಓದಿ: ವಿಜಯ ದಶಮಿ| ದುರ್ಗಾ ನಮಸ್ಕಾರ ಪೂಜೆ ಮಾಡೋದರ ಉದ್ದೇಶ ಏನು?

    415ನೇ ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಮೈಸೂರು ಸಜ್ಜಾಗಿದೆ. ಬೆಳಗ್ಗೆ 9:30ರಿಂದ 10ಕ್ಕೆ ಪಟ್ಟದ ಆನೆ, ಕುದುರೆ, ಹಸು ಮತ್ತು ಖಾಸಾ ಆಯುಧಗಳೊಂದಿಗೆ ಅರಮನೆ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ ಬೆಳಗ್ಗೆ 9:45ಕ್ಕೆ ವಜ್ರಮುಷ್ಠಿ ಕಾಳಗ ನಡೆಯಲಿದೆ. ಬೆಳಗ್ಗೆ 10:50ರಿಂದ 11:10ಕ್ಕೆ ಬನ್ನಿಪೂಜೆ ನಡೆಯಲಿದೆ. ಬಳಿಕ ಅರಮನೆ ಅಂಗಳದಲ್ಲಿರುವ ಭುವನೇಶ್ವರಿ ದೇಗುಲಕ್ಕೆ ವಿಜಯಯಾತ್ರೆ ನಡೆಯಲಿದೆ. ಬಳಿಕ ವಿಜಯಯಾತ್ರೆ ಅರಮನೆಗೆ ವಾಪಸ್ಸಾಗಲಿದೆ.

    ಬೆಳಗ್ಗೆ 10ರಿಂದ 10:30ರ ಸುಮಾರಿಗೆ ಚಾಮುಂಡಿಬೆಟ್ಟದಿಂದ ತಾಯಿ ವಿಗ್ರಹ ಅರಮನೆಗೆ ಬರಲಿದೆ. ಮಧ್ಯಾಹ್ನ 1ರಿಂದ 1:8ರ ಶುಭ ಧನುರ್ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:40ರ ಬಳಿಕ ಚಿನ್ನದ ಅಂಬಾರಿ ಕಟ್ಟಲಾಗುತ್ತೆ. ಸಂಜೆ 4:42ರಿಂದ 5:06 ಗಂಟೆಗೆ ಪುಷ್ಪಾರ್ಚನೆ ನೆರವೇರಲಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ನಡೆಯಲಿದ್ದು, ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಸಂಜೆ 7 ಗಂಟೆಗೆ ಪಂಜಿನ ಕವಾಯತು ನಡೆಯಲಿದೆ.

    ಇನ್ನು ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲು ರೆಡಿಯಾಗಿದ್ದು, ಸತತ ಆರನೇ ಬಾರಿಗೆ ರಾಜಗಾಂಭೀರ್ಯದಲ್ಲಿ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ. ಅಭಿಮನ್ಯು ಸೇರಿ ಇತರ ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ. ಇದನ್ನೂ ಓದಿ: Navratri 2025: ವಿಜಯದಶಮಿಯ ಪೌರಾಣಿಕ ಮಹತ್ವವೇನು?

    ದಸರಾ ಗಜಪಡೆ
    ಅಂಬಾರಿ ಆನೆ : ಕ್ಯಾಪ್ಟನ್ ಅಭಿಮನ್ಯು, 59 ವರ್ಷ, 6ನೇ ಬಾರಿ ಅಂಬಾರಿ
    ಕುಮ್ಕಿ ಆನೆ : ಕಾವೇರಿ ಮತ್ತು ರೂಪ
    ನಿಶಾನೆ ಆನೆ : ಧನಂಜಯ , 45 ವರ್ಷ
    ನೌಪತ್ ಆನೆ : ಗೋಪಿ, 42 ವರ್ಷ
    ಸಾಲಾನೆ : ಭೀಮ, 25 ವರ್ಷ
    ಪಟ್ಟದ ಆನೆ : ಶ್ರೀಕಂಠ ಮತ್ತು ಲಕ್ಷ್ಮಿ
    ಸಾಲಾನೆಗಳು: ಮಹೇಂದ್ರ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿ ಈ ಆನೆಗಳು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿವೆ.

    ಈ ಬಾರಿ ಅಂಬಾವಿಲಾಸ ಅರಮನೆ ಆವರಣದಲ್ಲಿ 48 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ 60 ಸಾವಿರಕ್ಕೂ ಹೆಚ್ಚು ಜನರಿಗೆ ದಸರಾ ವೀಕ್ಷಣೆಗೆ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಇತ್ತೀಚಿನ ಕೆಲ ಕಾಲ್ತುಳಿತ ಅವಘಢ ಹಿನ್ನೆಲೆ ಸರ್ಕಾರ ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವೀಕ್ಷಕರ ಸಂಖ್ಯೆ ಇಳಿಕೆ ಮಾಡಿದೆ. ಅಲ್ಲದೇ ಒಳಭಾಗದಲ್ಲಿ ಪೊಲೀಸ್ ಭದ್ರತೆ ಕೂಡ ಹೆಚ್ಚು ಮಾಡಿದೆ. ಇನ್ನೂ ಪಾಸ್ ಇದ್ದವರಿಗೆ ಮಾತ್ರ ಅರಮನೆ ಒಳಭಾಗ ದಸರಾ ವೀಕ್ಷಣೆಗೆ ಅವಕಾಶ ನೀಡಿಲಾಗಿದೆ. ಸಿಎಂ ಸೇರಿದಂತೆ ಹಲವು ಕ್ಯಾಬಿನೆಟ್ ಸಚಿವರು ಕೂಡ ಜಂಬೂಸವಾರಿಯಲ್ಲಿ ಭಾಗಿಯಾಗಲಿದ್ದಾರೆ. ಗಣ್ಯರು, ಅಧಿಕಾರಿಗಳು, ಸಾರ್ವಜನಿಕರು, ರಾಜಮನೆತನದ ಕುಟುಂಬಸ್ಥರು, ನ್ಯಾಯಾಧೀಶರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.

    ಬೆಳಗ್ಗೆ 11ಗಂಟೆ ನಂತರ ಪಾಸ್ ಹೊಂದಿರುವ ಸಾರ್ವಜನಿಕರಿಗೆ ಅರಮನೆ ಪ್ರವೇಶ ನೀಡಲಾಗುತ್ತೆ. ಈಗಾಗಲೇ ನಗರ ವ್ಯಾಪ್ತಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 9 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆಯಾಗಿದ್ದು, ಅಂಬಾರಿ ಸಾಗುವ ರಾಜಮಾರ್ಗ ಸೇರಿದಂತೆ ನಗರ ವ್ಯಾಪ್ತಿ ಹೆಚ್ಚಿನ ಸಿಸಿಟಿವಿ ಅಳವಡಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅಲ್ಲದೇ ಅಂಬಾರಿ ಸಾಗುವ ಮಾರ್ಗದುದ್ದಕ್ಕೂ ರಸ್ತೆಬದಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಿದ್ದು, ಅಂಬಾರಿ ಸಾಗುವಾಗ ಜನ ದಾಟಿ ರಸ್ತೆಗೆ ಬಾರದಂತೆ ಕ್ರಮವಹಿಸಲಾಗಿದೆ.

    ಒಟ್ಟಾರೆ ಜಂಬೂಸವಾರಿಗೆ ಸಕಲ ಸಿದ್ಧತೆಗಳೆಲ್ಲಾ ಆಗಿದ್ದು, ಅಂಬಾರಿ ಹೊತ್ತು ಸಾಗುವ ಅಭಿಮನ್ಯು ರಾಜಗಾಂಭೀರ್ಯತೆಯೊಂದಿಗೆ ತಾಯಿ ಚಾಮುಂಡೇಶ್ವರಿ ಆಶೀರ್ವಾದಕ್ಕೂ ಜನ ಕಾತುರದಿಂದ ಕಾಯುತ್ತಿದ್ದಾರೆ.ಇದನ್ನೂ ಓದಿ: ದಸರಾ ಜಂಬೂಸವಾರಿಗೆ ಕೌಂಟ್ ಡೌನ್ – ಭರದಿಂದ ಸಾಗಿದ ತಯಾರಿ

  • ಐತಿಹಾಸಿಕ ಮೈಸೂರು ಜಂಬೂಸವಾರಿಗೆ ಅದ್ಧೂರಿ ತೆರೆ

    ಐತಿಹಾಸಿಕ ಮೈಸೂರು ಜಂಬೂಸವಾರಿಗೆ ಅದ್ಧೂರಿ ತೆರೆ

    – ನೀಲಿ ರೇಷ್ಮೆ ಸೀರೆಯಲ್ಲಿ ಚಾಮುಂಡಿ ತಾಯಿ ವಿರಾಜಮಾನ

    ಮೈಸೂರು: ಐತಿಹಾಸಿಕ ಮೈಸೂರು ಜಂಬೂಸವಾರಿ (Jamboo Savari) ಯಶಸ್ವಿಯಾಗಿ ನೆರವೇರಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ (Ambari) ನಾಡಿನ ಅಧಿದೇವತೆ ಚಾಮುಂಡೇಶ್ವರಿ ಲಕ್ಷ ಲಕ್ಷ ಮಂದಿಗೆ ದರ್ಶನ ಭಾಗ್ಯ ಕರುಣಿಸಿದ್ದಾರೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ನಾಡದೇವತೆ ಕಂಡು ಲಕ್ಷಾಂತರ ಜನ ಪುನೀತರಾದರು. ನೀಲಿ ರೇಷ್ಮೆ ಸೀರೆ, ಹೂ ಅಲಂಕಾರದಲ್ಲಿ ಚಾಮುಂಡಿ ತಾಯಿ ನೋಡಲು ಎರಡು ಕಣ್ಣು ಸಾಲದಾಗಿತ್ತು.

    ಶುಭ ಕುಂಭ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಐದನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಮೈಸೂರು ಅರಮನೆ (Mysuru Palace) ಆವರಣದಿಂದ ಬನ್ನಿಮಂಟಪದವರೆಗೂ ಉತ್ಸವ ಮೂರ್ತಿ ಹೊತ್ತು ಗಜಪಡೆ ಹೆಜ್ಜೆ ಹಾಕಿತು. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ, ಕುಮ್ಕಿ ಆನೆಗಳಾಗಿ ಲಕ್ಷ್ಮಿ, ಹಿರಣ್ಯ ಆನೆಗಳು ಕ್ಯಾಪ್ಟನ್ ಅಭಿಮನ್ಯುಗೆ ಸಾಥ್ ನೀಡಿದವು.

    ಅರಮನೆಯ ಉತ್ತರ ದಿಕ್ಕಿನಲ್ಲಿರುವ ಬಲರಾಮ ದ್ವಾರದ ಮೂಲಕ ರಾಜಬೀದಿಗೆ ಜಂಬೂಸವಾರಿ ಸಾಗಿತು. ಕೆಆರ್ ಸರ್ಕಲ್, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ ಸಾಗಿ ಬನ್ನಿ ಮಂಟಪ ತಲುಪಿತು. ಆಗಾಗ ಸುರಿಯುತ್ತಿದ್ದ ಮಳೆ ನಡುವೆಯೂ ದೇಶ ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಮಂದಿ ಜಂಬೂಸವಾರಿ ನೋಡಲು ಕಿಕ್ಕಿರಿದು ಸೇರಿದ್ದರು.

    ದಸರಾ ಉತ್ಸವಕ್ಕೆ ಕಲಾತಂಡಗಳ ಮೆರುಗು:
    ಮೈಸೂರು ಅರಮನೆ ಆವರಣದಲ್ಲಿ ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳ ಮೆರವಣಿಗೆ ಸಾಗಿತ್ತು. ಮೆರವಣಿಗೆ ವೇಳೆ ಜೋರು ಮಳೆ ಬಂದರೂ ಜನರು ಕಲಾ ಸಂಸ್ಕೃತಿಯನ್ನು ಆಸ್ವಾದಿಸಿದರು. ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಕೊಡವರ ಕುಣಿತ, ಗೊರವರ ಕುಣಿತ, ಪೂಜಾ ಕುಣಿತ, ವೀರಭದ್ರ ಕುಣಿತ, ನಂದಿ ಕೋಲು, ನವಿಲು ನೃತ್ಯ, ಬೀಸು ಕಂಸಾಳೆ, ಗಾರುಡಿ ಗೊಂಬೆ ಹೀಗೆ ಹತ್ತು ಹಲವು ಕಲಾತಂಡಗಳು ರಾಜ್ಯ ಕಲಾ ಸಂಸ್ಕೃತಿಯನ್ನು ಸಾರಿದವು. ಕೀಲು ಕುದುರೆ, ಹುಲಿ ವೇಷ, ಚಂಡೇ ವಾದನ, ಹಕ್ಕಿಪಿಕ್ಕಿ ನೃತ್ಯ, ದೊಣ್ಣೆ ವರಸೆಯಂತೂ ಕನ್ನಡ ನಾಡಿನ ವೈಭವವನ್ನು ಮತ್ತೆ ನೆನಪಿಸಿತು.

    ಇನ್ನು ಸ್ತಬ್ಧಚಿತ್ರಗಳಲ್ಲಿ ಪ್ರಮುಖವಾಗಿ ಕೆಎಂಎಫ್‌ನ ಕ್ಷೀರೋತ್ಸವ, ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಟ್ಯಾಬ್ಲೋ, ಮುರುಡೇಶ್ವರದ ಶಿವನ ಮೂರ್ತಿ, ಬೆಂಗಳೂರು ಗ್ರಾಮಾಂತರದ ಟ್ಯಾಬ್ಲೋ, ಬಾಗಲಕೋಟೆಯಿಂದ ರನ್ನನ ಕಾವ್ಯ ಗದಾಯುದ್ಧ ಟ್ಯಾಬ್ಲೋ ಸೇರಿದಂತೆ ಹಲವು ಸ್ತಬ್ಧಚಿತ್ರಗಳು ಎಲ್ಲರ ಗಮನ ಸೆಳೆಯಿತು.

    ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ:
    ಮೈಸೂರು ಜಂಬೂ ಸವಾರಿಗೆ ಚಾಲನೆ ನೀಡುವ ಮೊದಲು ಸಿಎಂ ಸಿದ್ದರಾಮಯ್ಯ (Siddaramaiah) ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಈಡುಗಾಯಿ ಹೊಡೆದರು.

    ನಂದಿಧ್ವಜ ಪೂಜೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು. ವಿಶೇಷವಾಗಿ ದುಷ್ಟಶಕ್ತಿಗಳ ಸಂಹಾರವಾಗಲಿ, ದುಷ್ಟಶಕ್ತಿಗಳ ವಿನಾಶವಾಗಲಿ ಎಂದರು. ಒಟ್ಟಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಯಶಸ್ವಿಯಾಗಿ ನೆರವೇರಿತು. ಮೈಸೂರಿನಲ್ಲಿ ದೀಪಾಲಂಕಾರ 10 ದಿನಗಳ ಕಾಲ ಮುಂದುವರಿಯಲಿದೆ.

  • Mysuru Dasara | ಜಂಬೂ ಸವಾರಿ ರೂಟ್‌ ಮ್ಯಾಪ್‌ ಹೇಗಿದೆ?

    Mysuru Dasara | ಜಂಬೂ ಸವಾರಿ ರೂಟ್‌ ಮ್ಯಾಪ್‌ ಹೇಗಿದೆ?

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಅಂಬಾವಿಲಾಸ ಅರಮನೆಯಲ್ಲಿ ಭರದ ಸಿದ್ಧತೆ ನಡೆದಿದೆ.

    ಈ ನಡುವೆ ಜಿಲ್ಲಾಡಳಿತ ಜಂಬೂ ಸವಾರಿ ಮಾರ್ಗವನ್ನ ಬದಲಾವಣೆ ಮಾಡಿದೆ. ಅರಮನೆ ಆವರಣದಲ್ಲಿ ಜಂಬೂ ಸವಾರಿ ಮಾರ್ಗ ಬದಲಾವಣೆ ಮಾಡಿದ್ದು, ಹೊಸ ಸಂಪ್ರದಾಯ ಆರಂಭಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

    ಪ್ರತಿ ಬಾರಿ ಅಂಬಾರಿ ಕಟ್ಟಿದ ನಂತರ ಆನೆ ನೇರವಾಗಿ ಪುಷ್ಪಾರ್ಚನೆಗೆ ಬಂದು ನಿಲ್ಲುತ್ತಿತ್ತು. ಆದ್ರೆ ಈ ಬಾರಿ ಪುಷ್ಪಾರ್ಚನೆಗೆ ಮೊದಲೇ ಸುಮಾರು 400 ಮೀಟರ್ ಸಂಚಾರ ಮಾಡುವಂತೆ ಪ್ಲಾನ್ ಮಾಡಲಾಗಿದೆ. ಅಂಬಾರಿ ಕಟ್ಟಿದ ನಂತರ ಅಭಿಮನ್ಯುವು ತ್ರಿನಯನೇಶ್ವರ ದೇವಸ್ಥಾನ ತಲುಪಿ, ಅಲ್ಲಿಂದ ಶ್ವೇತ ವರಹ ದೇವಸ್ಥಾನ ಬಳಿ ಸಾಗಿ ನಂತರ ಗಣ್ಯರ ಬಳಿ ಬಂದು ನಿಲ್ಲುತ್ತದೆ. ಹೀಗಾಗಿ ಗಣ್ಯರ ಪುಷ್ಪಾರ್ಚನೆಗೆ ಮುನ್ನವೇ 10 ಸಾವಿರಕ್ಕೂ ಹೆಚ್ಚು ಮಂದಿಗೆ ಅಂಬಾರಿಯಲ್ಲಿ ಅಲಂಕಾರ ಭೂಷಿತಳಾದ ತಾಯಿ ಚಾಮುಂಡಿ ದರ್ಶನ ಕೊಡಲಿದ್ದಾಳೆ.

    10 ರಿಂದ 15 ಸಾವಿರ ಆಸನ ವ್ಯವಸ್ಥೆ:
    ಇನ್ನೂ ಕೋವಿಡ್‌ ಸಮಯ ಹೊರತುಪಡಿಸಿ ಉಳಿದೆಲ್ಲ ವರ್ಷ ಜಂಬೂ ಸವಾರಿಗೆ ಅರಮನೆ ಆವರಣದಲ್ಲಿ 25 ರಿಂದ 30 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ 10 -15 ಸಾವಿರ ಹೆಚ್ಚುವರಿ ಆಸನಗಳ ವ್ಯವಸ್ಥೆಗೆ ಜಿಲ್ಲಾಡಳಿತ ಪ್ಲ್ಯಾನ್‌ ಮಾಡಿದೆ. ಹಾಗಾಗಿ 40 ಸಾವಿರ ಆಸನಗಳ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಮೆರವಣಿಗೆಯಲ್ಲಿ 9 ಆನೆಗಳು ಭಾಗಿ:
    ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಮೆರವಣಿಗೆಗೆ ಸಂಬಂಧಿಸಿದಂತೆ ಮಾತನಾಡಿರುವ ಡಿಸಿಎಫ್ ಪ್ರಭುಗೌಡ, ಕಳೆದ 50 ದಿನಗಳಿಂದ ಆನೆಗಳಿಗೆ ತಯಾರಿ ನೀಡಿದ್ದೇವೆ, ಯಾವುದೇ ಸಮಸ್ಯೆಗಳಿಲ್ಲ. ಯಶಸ್ವಿಯಾಗಿ ಜಂಬೂ ಸವಾರಿ ಮಾಡುವ ಕಾನ್ಪಿಡೆನ್ಸ್‌ನಲ್ಲಿದ್ದೇವೆ. ನಿನ್ನೆ ಸಂಜೆ ಕೂಡ ಮಾವುತ, ಕಾವಾಡಿಗರ ತಂಡದ ಜೊತೆ ಸಭೆ ಮಾಡಿದ್ದೇವೆ ಅವರೆಲ್ಲರೂ ಕೂಡ ಉತ್ಸಾಹದಲ್ಲಿದ್ದಾರೆ. 14 ಆನೆಗಳ ಪೈಕಿ 9 ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. 5 ಆನೆಗಳು ಮೀಸಲು ಆನೆಗಳಾಗಿರಲಿವೆ. ಇವು ಮೆರವಣಿಗೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ಶ್ರೀರಂಗಪಟ್ಟಣ ಜಂಬೂ ಸವಾರಿ ಮೆರವಣಿಗೆ ವೇಳೆ ಲಕ್ಷ್ಮಿ ಆನೆ ಗಲಿಬಿಲಿ ಆಗಿತ್ತು. ಅದು ಲಾರಿ ಹತ್ತೋಕೆ ಹಠ ಮಾಡಿತ್ತು. ಅದನ್ನ ಹೊರತು ಪಡಿಸಿದ್ರೆ ಜನ ನೋಡಿ ನಮ್ಮ ಆನೆಗಳು ಗಾಬರಿಯಾಗಲ್ಲ. ಆ ರೀತಿಯ ಯಾವುದೇ ತೊಂದರೆ ಇಲ್ಲ ಎಂದು ಡಿಸಿಎಫ್ ಪ್ರಭುಗೌಡ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಹೆಚ್‌.ಡಿ.ಕೋಟೆ, ಪ್ರಾಣ ಕಳೆದುಕೊಂಡ ಜಾಗದಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ: ಸಿಎಂ

    ಹೆಚ್‌.ಡಿ.ಕೋಟೆ, ಪ್ರಾಣ ಕಳೆದುಕೊಂಡ ಜಾಗದಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ: ಸಿಎಂ

    ಬೆಂಗಳೂರು: ದಸರಾ ಆನೆ ಅರ್ಜುನ (Dasara Elephant Arjuna) ಪ್ರಾಣ ಕಳೆದುಕೊಂಡ ಜಾಗ ಹಾಗೂ ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಅಂಬಾರಿ ಹೊತ್ತ ಅರ್ಜುನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅರ್ಜುನನ ಸಾವಿನ ಕುರಿತು ಸಂಪೂರ್ಣ ಮಾಹಿತಿ ಕೇಳಿದ್ದೇನೆ. ಅರ್ಜುನ ಆನೆ ಸಕಲೇಶಪುರದಲ್ಲಿ ಎಲ್ಲಿ ಪ್ರಾಣ ಕಳೆದುಕೊಂಡಿದ್ನೋ ಅಲ್ಲಿಯೇ ಸ್ಮಾರಕ ಮಾಡುತ್ತೇವೆ. ಹಾಗೂ ಹೆಗ್ಗಡದೇವನಕೋಟೆಯಲ್ಲಿಯೂ ಸ್ಮಾರಕ ಮಾಡಲು ತಿಳಿಸಿದ್ದೇವೆ ಎಂದರು.

    ಅರ್ಜುನ ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದವನ ಅಚಾನಕ್ ಸಾವಾಗಿದೆ. ಆತ ಇನ್ನೂ ಹೆಚ್ಚು ಕಾಲ ಬದುಕಬೇಕಿತ್ತು, ಇನ್ನೊಂದು ಆನೆ ಕಾರ್ಯಾಚರಣೆಗೆ ಅರ್ಜುನ ನನ್ನ ಉಪಯೋಗಿಸಿದ ಕಾರಣ ಸಾವನಪ್ಪಿದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಅರ್ಜುನನ ದುರಂತ ಅಂತ್ಯ – ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ

    ಇತ್ತ ಹಾಸನದಲ್ಲಿ ಮಾವುತ ವಿನು ಮಾತನಾಡುತ್ತಾ, ಅರ್ಜುನನ್ನು ನೆನೆದು ಕಣ್ಣೀರು ಹಾಕಿದರು. ಕಾದಾಟದ ವೇಳೆ ಕಾಲಿನಲ್ಲಿ ರಕ್ತ ಬಂತು. ಆದರೂ ಮದಗಜದ ಜೊತೆಗೆ ಹೋರಾಡಿದ. ನಂತರ ಮಿಸ್ ಫೈರ್ ಆಗಿ ಕಾಲಿಗೆ ಗುಂಡು ಬಿತ್ತು. ಪ್ರಶಾಂತ ಇಲ್ಲದಿದ್ದರೂ ಅರ್ಜುನ ಹೋರಾಡಿ ಗೆಲ್ಲುತ್ತಿದ್ದನು. ಆದರೆ ಕಾಲಿಗೆ ಬಿದ್ದ ಗಾಯದಿಂದ ಆಗಲಿಲ್ಲ. ಕಾಡಾನೆ ತಿವಿದು ಸಾಯಿಸಿತು. ಅರ್ಜುನ ಹತ್ತು ಜನರ ಪ್ರಾಣ ಉಳಿಸಿ ಸಾವನ್ನಪ್ಪಿದ್ದಾನೆ. ಹೀಗಾಗಿ ಮೈಸೂರಿನಲ್ಲೇ ಆತನ ಸ್ಮಾರಕ ಮಾಡಬೇಕು ಎಂದು ಕಣ್ಣೀರಿಡುತ್ತಲೇ ಸರ್ಕಾರಕ್ಕೆ ಒತ್ತಾಯಿಸಿದರು.

  • ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

    ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?

    ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಹಾ ಪ್ರಮಾದವೊಂದು ನಡೆದಿರುವ ಬಗ್ಗೆ ಸಂಶಯ ಮೂಡಿದೆ. ಗುರಿ ತಪ್ಪಿ ಬಿದ್ದ ಅದೊಂದು ಗುಂಡೇಟಿನಿಂದ ಅರ್ಜುನ (Arjuna) ಬಲ ಕಳೆದುಕೊಂಡು ಕಾದಾಡಲಾಗದೆ ಸೋಲೊಪ್ಪಿದನಾ ಎಂಬ ಪ್ರಶ್ನೆ ಮೂಡಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆಗಿರುವ ಯಡವಟ್ಟಿನ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

    ಮದದಲ್ಲಿದ್ದ ಕಾಡಾನೆ (Elephant) ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದರು. ಮದದಲ್ಲಿರುವ ಕಾಡಾನೆ ಹುಚ್ಚಾನೆಯಂತೆ ವರ್ತಿಸುತ್ತದೆ ಎಂಬ ಜ್ಞಾನ ಇದ್ದರೂ ತಪ್ಪು ನಿರ್ಧಾರ ತೆಗೆದುಕೊಂಡರು ಎಂದು ತಜ್ಞರು ಟೀಕಿಸುತ್ತಿದ್ದಾರೆ. ಕಾಡಾನೆ ಸೆರೆಗೆ ತೆರಳಿದ್ದ ವೇಳೆ ಒಂಟಿಸಲಗ ಏಕಾಏಕಿ ದಾಳಿ ಮಾಡಿತ್ತು. ಸಲಗ ದಾಳಿ ಮಾಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.

    ಗುಂಡು ಹಾರಿಸಿದಾಗ ಗುರಿ ತಪ್ಪಿ ಅದು ಅರ್ಜುನನ ಕಾಲಿಗೆ ತಗುಲಿರುವ ಬಗ್ಗೆ ಅನುಮಾನ ಮೂಡಿದೆ. ಗುಂಡು ತಗುಲಿದ ಬಗ್ಗೆ ಕಾರ್ಯಾಚರಣೆ ಸ್ಥಳದಲ್ಲಿದ್ದ ಆನೆ ಮಾವುತರೊಬ್ಬರು ನೀಡಿರುವ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟಿಸಿದೆ. ಅರ್ಜುನನ ಕಾಲಿಗೆ ಗುಂಡು ತಗುಲುತ್ತಲೇ ಅದು ಬಲ ಕಳೆದುಕೊಂಡಿತ್ತು. ಈ ವೇಳೆ ಹಂತಕ ಆನೆ ಹಠಾತ್ ದಾಳಿ ಮಾಡಿತ್ತು ಎನ್ನಲಾಗಿದೆ.

    ಕಾರ್ಯಾಚರಣೆ ತಂಡದಿಂದ ಆಕಸ್ಮಿಕವಾಗಿ ಮತ್ತೊಂದು ಯಡವಟ್ಟಾಗಿರುವ ಬಗ್ಗೆ ಅನುಮಾನ ಮೂಡಿದೆ. ಮಿಸ್ ಫೈರ್ ಆಗಿ ಸಾಕಾನೆಗೆ ಅರವಳಿಕೆ ಮದ್ದು ಡಾಟ್ ಆಗಿದ್ದರಿಂದ ಕಾರ್ಯಾಚರಣೆ ತಂಡ ಕೂಡ ಬಲ ಕಳೆದುಕೊಂಡು ಸಮಸ್ಯೆ ಎದುರಿಸಿದೆ. ಮದವೇರಿದ ಆನೆಗೆ ಅರವಳಿಕೆ ಚುಚ್ಚದೇ ಹೋಗಿದ್ದರಿಂದ ಅರ್ಜುನ ಬಲ ಕಳೆದುಕೊಂಡು ಬಲಿಯಾದ ಎನ್ನಲಾಗಿದೆ. ಈ ಎಲ್ಲಾ ಸಂಶಯಗಳನ್ನು ಬಗೆಹರಿಸಲು ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಎಲ್ಲೆಡೆ ಒತ್ತಾಯಿಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ಆದ ಯಡವಟ್ಟಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಹಿಸಲಾಗುತ್ತಿದೆ.

    ಮಾವುತ ಬಿಚ್ಚಿಟ್ಟ ಸತ್ಯ:
    ಕಾರ್ಯಾಚರಣೆ ವೇಳೆ ಅರವಳಿಕೆ ಇಂಜೆಕ್ಷನ್ ನೀಡಲಾಯಿತು. ಅದು ಗುರಿ ತಪ್ಪಿ ಪ್ರಶಾಂತ ಹೆಸರಿನ ಸಾಕಾನೆಗೆ ಬಿತ್ತು. ನಂತರ ಇನ್ನೊಂದು ಇಂಜೆಕ್ಷನ್ ನೀಡಿ ಪ್ರಶಾಂತನನ್ನು ಸುಧಾರಿಸಲಾಯಿತು. ಆಮೇಲೆ ಅರ್ಜುನನ ಮೇಲೆ ಮೊದಲಬಾರಿಗೆ ಕಾಡಾನೆ ದಾಳಿ ಮಾಡಿತು. ಕಾಡಾನೆ, ಸಾಕಾನೆ ಕಾಳಗದ ವೇಳೆ ಕೋವಿಯಿಂದ ಗುಂಡು ಹಾರಿಸಲಾಯಿತು. ಆಗ ಅರ್ಜುನನ ಕಾಲಿಗೆ ಗುಂಡು ತಗುಲಿತ್ತು. ದೊಡ್ಡ ಆನೆ ಅದು ಮರಗಳನ್ನು ಬೀಳಿಸಿತು. ನಾವು ಆನೆ ಮೇಲಿಂದ ಇಳಿದು ಓಡಿದೆವು. ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ವೀಡಿಯೋ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

    ಅರ್ಜುನ ಅಂತ್ಯಕ್ರಿಯೆ:
    ಮದಗಜದ ಜೊತೆ ಹೋರಾಡುವಾಗ ವೀರಮರಣವನ್ನಪ್ಪಿದ ಅರ್ಜುನನ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಈ ವೇಳೆ ಮೈಸೂರು ಅರಮನೆಯ ರಾಜಮನೆತನದ ಪುರೋಹಿತ ಪ್ರಹ್ಲಾದ್ ಸ್ಥಳಕ್ಕೆ ಆಗಮಿಸಲಿದ್ದಾರೆ. ಸಕಲೇಶಪುರ ತಾಲೂಕಿನ, ಯಸಳೂರು ಹೋಬಳಿ ದಬ್ಬಳ್ಳಿಕಟ್ಟೆ ಕೆಎಫ್‌ಡಿಸಿ ನೆಡುತೋಪಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಕಲ ವಿಧಿವಿಧಾನ ಹಾಗೂ ಸರ್ಕಾರಿ ಗೌರವಗಳೊಂದಿಗೆ ಅರ್ಜುನನ ಅಂತ್ಯಕ್ರಿಯೆ ನಡೆಯಲಿದೆ. ಸಕಲ ವಿಧಿವಿಧಾನಗಳನ್ನು ರಾಜಮನೆತನದ ಪುರೋಹಿತ ಪ್ರಹ್ಲಾದ್ ನೆರವೇರಿಸಲಿದ್ದಾರೆ. ಜೊತೆಗೆ ಜಿಲ್ಲಾಡಳಿತ ಸರ್ಕಾರಿ ಗೌರವ ಸಲ್ಲಿಸಲಿದೆ. ಸದ್ಯ ಮಂಗಳವಾರ 12 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅರಣ್ಯ ಇಲಾಖೆ ಅವಕಾಶ ನೀಡಿದೆ. ಇದನ್ನೂ ಓದಿ: Rain Alert: ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ

  • ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

    ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

    ಹಾಸನ: 8 ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನನ (Captain Arjuna) ಹಠಾತ್ ನಿಧನಕ್ಕೆ ನಾಡಿನ ಜನರು ಕಂಬನಿ ಮಿಡಿದಿದ್ದಾರೆ. ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರ್ಜುನ ತನ್ನೊಂದಿಗೆ ತೆರಳಿದ್ದ ಹಲವರ ಜೀವ ಉಳಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ.

    ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಯಸಳೂರು, ಬಾಳೆಕೆರೆ ಅರಣ್ಯದಲ್ಲಿ ಕಾಡಾನೆಗಳನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನ ಸೇರಿ 4 ಪಳಗಿದ ಆನೆಗಳೊಂದಿಗೆ ಇಂದು ಕಾರ್ಯಾಚರಣೆ ಆರಂಭಿಸಿದ್ದರು. ಪುಂಡಾನೆಯೊಂದಕ್ಕೆ ಅರವಳಿಕೆ ಚುಚ್ಚು ಮದ್ದು ನೀಡುತ್ತಿದ್ದ ಸಂದರ್ಭ ಅರ್ಜುನನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ 3 ಸಾಕಾನೆಗಳು ಹಿಮ್ಮೆಟ್ಟಿವೆ. ಆನೆಗಳು ಕಾದಾಡಲು ಪ್ರಾರಂಭಿಸುತ್ತಿದ್ದಂತೆ ಮಾವುತ ಕೂಡಾ ಇಳಿದು ದೂರ ಓಡಿದ್ದಾರೆ.

    ಮದವೇರಿದ ಕಾಡಾನೆ ದಾಳಿ ಮಾಡುತ್ತಿದ್ದಂತೆ ಅರ್ಜುನ ಪ್ರತಿರೋಧ ತೋರದೇ ಹೋಗಿದ್ದರೆ ಇತರ ಆನೆಗಳು ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿದ್ದವರ ಜೀವಕ್ಕೆ ಕುತ್ತಾಗುತ್ತಿತ್ತು. ಕೊಂಚ ಯಡವಟ್ಟಾಗಿದ್ದರೂ ಕೂಡ ಹಲವು ಸಿಬ್ಬಂದಿಯ ಪ್ರಾಣಕ್ಕೆ ಅಪಾಯವಿರುತ್ತಿತ್ತು. ಅದೃಷ್ಟವಶಾತ್ ಅರ್ಜುನ ಕಾಡಾನೆ ಜೊತೆ ಕಾಳಗಕ್ಕೆ ನಿಂತಿದ್ದರಿಂದ ದುರಂತ ತಪ್ಪಿದೆ. ತನ್ನ ಪ್ರಾಣ ತ್ಯಾಗ ಮಾಡಿ ಅರ್ಜುನ ಹಲವರ ಜೀವ ಉಳಿಸಿದ್ದಾನೆ. ಮದಗಜಗಳ ಕಾಳಗದಲ್ಲಿ ಅರ್ಜುನ ವೀರಮರಣ ಹೊಂದಿದ್ದಾನೆ.

    ಕಾರ್ಯಾಚರಣೆ ಸ್ಥಗಿತ:
    ಕಾಡಾನೆ ಕಾರ್ಯಾಚರಣೆ ವೇಳೆ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿರುವ ಹಿನ್ನೆಲೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅರ್ಜುನನಿಗೆ ತಿವಿದು ಪ್ರಾಣ ಬಿಟ್ಟರೂ ಕೂಡಾ ಹಂತಕ ಆನೆ ಮಾತ್ರ ಬಹಳ ಹೊತ್ತಿನವರೆಗೂ ಅಲ್ಲೇ ಇತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಇವೆಲ್ಲವನ್ನೂ ದೂರದಲ್ಲೇ ನಿಂತು ನೋಡಬೇಕಾಯಿತು. ಇದನ್ನೂ ಓದಿ: ಕಾಡಾನೆ ದಾಳಿಗೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಬಲಿ

    ಕುಸಿದು ಬಿದ್ದ ಮಾವುತ:
    ಕಾಡಾನೆ ದಾಳಿಯಿಂದ ಅರ್ಜುನ ಕಣ್ಮುಚ್ಚಿದ ಸುದ್ದಿ ಕೇಳಿ ಅಕ್ಕರೆಯಿಂದ ನೋಡಿಕೊಂಡಿದ್ದ ಮಾವುತ ವಿನು ನೋವಿನಿಂದ ಕುಸಿದು ಬಿದ್ದಿದ್ದರು. ಮದಗಜದ ಜೊತೆ ಅರ್ಜುನ ಕಾದಾಡುವಾಗ ಮಾವುತ ವಿನು ಆನೆ ಮೇಲಿಂದ ಇಳಿದು ಬಂದಿದ್ದರು. ವಿನುವಿಗೆ ಅನಾರೋಗ್ಯ ಇದ್ದ ಕಾರಣ ಅರ್ಜುನನ ಸಾವಿನ ಸುದ್ದಿಯನ್ನು ಇಲಾಖೆ ಸಿಬ್ಬಂದಿ ಮೊದಲಿಗೆ ತಿಳಿಸಿರಲಿಲ್ಲ. ಆನಂತರ ಮಾವುತ ವಿನುಗೆ ತನ್ನ ಪ್ರೀತಿಯ ಅರ್ಜುನನ ಸಾವಿನ ವಿಚಾರವನ್ನು ತಿಳಿಸಲಾಗಿತ್ತು. ಈ ವೇಳೆ ವಿನು ಕಣ್ಣೀರಿಡುತ್ತಲೇ ಉಳಿದ ಸಾಕಾನೆಗಳೊಂದಿಗೆ ಬಂದಿದ್ದರು. ದಾರಿ ಮಧ್ಯೆ ವಿನು ಅರ್ಜುನನ ಸಾವಿನ ನೋವು ತಡೆಯಲಾರದೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ 108 ಅಂಬುಲೆನ್ಸ್ ಮೂಲಕ ಮಾವುತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ – 1 ತಿಂಗಳು ಪರೀಕ್ಷೆ ಮುಂದೂಡಿಕೆ

     

  • ಕಾಡಾನೆ ದಾಳಿಗೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಬಲಿ

    ಕಾಡಾನೆ ದಾಳಿಗೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಬಲಿ

    ಹಾಸನ: ಕಾಡಾನೆ (Wild Elephant) ಸೆರೆ ಹಿಡಿದು ಸ್ಥಳಾಂತರ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ಕ್ಯಾಪ್ಟನ್ ಅರ್ಜುನ (Arjuna) ಸಾವನ್ನಪ್ಪಿದ ಘಟನೆ ಹಾಸನ (Hassan) ಜಿಲ್ಲೆ, ಸಕಲೇಶಪುರ (Sakleshpura) ತಾಲೂಕಿನ ಯಸಳೂರು ಬಳಿ ನಡೆದಿದೆ.

    ನಾಲ್ಕು ಸಾಕಾನೆಗಳೊಂದಿಗೆ ಇಂದು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿದೆ. ಇದನ್ನೂ ಓದಿ: ಮಾಜಿ ಸಚಿವ ಸಿಪಿವೈ ಬಾವ ಮಹದೇವಯ್ಯ ಶವ ಪತ್ತೆ

    ಸಾಕಾನೆ ಅರ್ಜುನ ಒಂಟಿಸಲಗದ ಜೊತೆ ಕಾಳಗಕ್ಕಿಳಿದಿದೆ. ಮದಗಜಗಳ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದೆ. ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ಮಾವುತರು ಅರ್ಜುನನ ಮೇಲಿನಿಂದ ಇಳಿದು ಓಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಳ್ಳತನಕ್ಕೆ ಬಂದು ಹಣ, ಬಂಗಾರ ದೋಚಿದ್ದಲ್ಲದೇ ಊಟ ಮಾಡಿ ಹೋದ ಕಳ್ಳರು!

    ಕ್ಯಾಪ್ಟನ್ ಅರ್ಜುನ ದಸರಾ ವೇಳೆ ಎಂಟು ಬಾರಿ ಅಂಬಾರಿ ಹೊತ್ತಿದ್ದು, ಜನರ ಪ್ರೀತಿಗೆ ಪಾತ್ರರಾಗಿತ್ತು. ಇಂದು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ಬಲಿಯಾಗಿದೆ. ಕಾಡಾನೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ವೇಳೆ ಭಾರೀ ದುರಂತ ನಡೆದಿದ್ದು, ಕಾಡಾನೆ ದಾಳಿಗೆ ಪಳಗಿದ ಆನೆ ಅರ್ಜುನ ಸಾವನ್ನಪ್ಪಿದೆ. ಇದನ್ನೂ ಓದಿ: ಕೂಟಿಯಾಲ ಹೊಳೆಯಲ್ಲಿ ತಾಯಿ, ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ

    ಸಕಲೇಶಪುರ ತಾಲೂಕಿನ ಯಸಳೂರು, ಬಾಳೆಕೆರೆ ಫಾರೆಸ್ಟ್‌ನಲ್ಲಿ ಘಟನೆ ನಡೆದಿದೆ. ಅರ್ಜುನ ಸೇರಿ ನಾಲ್ಕು ಪಳಗಿದ ಆನೆಗಳೊಂದಿಗೆ ಅರಣ್ಯ ಇಲಾಖೆ ಇಂದು ಕಾರ್ಯಾಚರಣೆ ಆರಂಭಿಸಿತ್ತು. ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವಾಗ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ ಮೂರು ಸಾಕಾನೆಗಳು ಹಿಮ್ಮೆಟ್ಟಿದೆ. ಇದನ್ನೂ ಓದಿ: ಸಿಂಧನೂರಿನಲ್ಲಿ ಸರಣಿ ಕಳ್ಳತನ – 60 ಮೊಬೈಲ್, ಬೈಕ್, ಲ್ಯಾಪ್‍ಟಾಪ್ ದೋಚಿದ ಕಳ್ಳರು

    ಒಂಟಿ ಸಲಗದ ಜೊತೆ ಅರ್ಜುನ ಕಾಳಗಕ್ಕಿಳಿದಿದ್ದು, ಮದಗಜಗಳ ಕಾಳಗದಲ್ಲಿ ಅರ್ಜುನ ವೀರಮರಣ ಹೊಂದಿದೆ. ಅರ್ಜುನ ಆನೆಯ ಹಠಾತ್ ಸಾವಿನಿಂದ ಪ್ರಾಣಿಪ್ರಿಯರಿಗೆ ಶಾಕ್ ಆಗಿದೆ. ಹೊಟ್ಟೆ ಭಾಗದಲ್ಲಿ ತಿವಿತಕ್ಕೆ ಒಳಗಾಗಿ ಕ್ಯಾಪ್ಟನ್ ಅರ್ಜುನ ಕೊನೆಯುಸಿರೆಳೆದಿದೆ. ಮೈಸೂರು ದಸರಾದಲ್ಲಿ ಅರ್ಜುನ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತು ಜನಮನಗೆದ್ದಿತ್ತು. 2012ರಿಂದ 2019 ರವರೆಗೆ ಅಂಬಾರಿ ಹೊತ್ತು ಅರ್ಜುನ ಸೈ ಎನಿಸಿಕೊಂಡಿತ್ತು. ಎಲ್ಲಾ ರೀತಿಯಲ್ಲೂ ಜನರ ಪ್ರೀತಿಗೆ ಪಾತ್ರನಾಗಿದ್ದ ಕ್ಯಾಪ್ಟನ್ ಅರ್ಜುನನ ಹಠಾತ್ ಸಾವು ಕಂಡು ಮಾವುತರು ಕಣ್ಣೀರಾಗಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ವೃದ್ಧನ ಬರ್ಬರ ಹತ್ಯೆ- ದೃಶ್ಯ ಮೊಬೈಲ್‍ನಲ್ಲಿ ಸೆರೆ

  • ತಾಕತ್ತಿದ್ರೆ ಅಂಬಾರಿ ದಿನ ಸಿದ್ದರಾಮಯ್ಯ ನಾನ್‍ವೆಜ್ ತಿಂದ ವೀಡಿಯೋ ಇದ್ರೆ ರಿಲೀಸ್ ಮಾಡು: ಸೀತಾರಾಂ ಸವಾಲ್

    ತಾಕತ್ತಿದ್ರೆ ಅಂಬಾರಿ ದಿನ ಸಿದ್ದರಾಮಯ್ಯ ನಾನ್‍ವೆಜ್ ತಿಂದ ವೀಡಿಯೋ ಇದ್ರೆ ರಿಲೀಸ್ ಮಾಡು: ಸೀತಾರಾಂ ಸವಾಲ್

    ಮೈಸೂರು: ಅಂಬಾರಿ ದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ನಾನ್‍ವೆಜ್ ತಿಂದಿದ್ದ ವೀಡಿಯೋ ತಾಕತ್ ಇದ್ದೆ ರಿಲೀಸ್ ಮಾಡು ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಕಾಂಗ್ರೆಸ್‍ನ ಸೀತಾರಾಂ ಸವಾಲೆಸೆದಿದ್ದಾರೆ.

    ಸಿದ್ದರಾಮಯ್ಯ 2017 ರಲ್ಲಿ ನಾನ್ ವೆಜ್ ತಿಂದು ದಸರಾ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ ವಿಚಾರದ ಬಗ್ಗೆ ಅಂದಿನ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಮುಖಂಡ ಸೀತರಾಂ ಕಿಡಿಕಾರಿದ್ದಾರೆ. 2017ರ ಘಟನೆಯ ವೀಡಿಯೋ ಇದ್ದರೆ ತೋರಿಸು. ನಿನಗೆ ತಾಕತ್ತಿದ್ದರೆ ಆ ವೀಡಿಯೋ ಬಿಡುಗಡೆ ಮಾಡು ಎಂದು ಪ್ರತಾಪ್ ಸಿಂಹಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನಾಟಿ ಕೋಳಿ ಊಟ ಮಾಡಿ ಅಂಬಾರಿಗೆ ಪುಷ್ಪಾರ್ಚನೆ: ಸಿದ್ದು ವಿರುದ್ಧ ಪ್ರತಾಪ್‌ ಸಿಂಹ ಕಿಡಿ

    ಚಾಮುಂಡಿ ಅಮ್ಮನ ಸನ್ನಿಧಾನಕ್ಕೆ ಹೋಗೋಣ ಅಲ್ಲೇ ಪ್ರಮಾಣ ಮಾಡೋಣ. ನಾನು ಅಂದು ಅವರ ಜೊತೆಯಲ್ಲೇ ಇದ್ದೆ. ಚಪಾತಿ, ಅನ್ನ ಸಾರು ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಹಾಗೂ ನಂದಿಧ್ವಜ ಪೂಜೆ ಮಾಡಿದ್ರು. ಆದರೆ ಇಲ್ಲದ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸಬೇಡಿ. ಆಗೊಮ್ಮೆ ನೀವೂ ಹೇಳಿದ್ದು ನಿಜವಾದ್ರೆ ಬನ್ನಿ ಚಾಮುಂಡಿ ಬೆಟ್ಟಕ್ಕೆ ಪ್ರಮಾಣ ಮಾಡಿ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಮಾಂಸದೂಟ ಮಾಡಿಯೇ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದು: ಮಾಜಿ ಮೇಯರ್ ರವಿಕುಮಾರ್

    ಸಿದ್ದರಾಮಯ್ಯ ಮಾಂಸದೂಟ ಮಾಡಿಯೇ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದು: ಮಾಜಿ ಮೇಯರ್ ರವಿಕುಮಾರ್

    ಮೈಸೂರು: 2017ರ ದಸರಾ ಅಂಬಾರಿ ದಿನ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಎಂದು ಮಾಜಿ ಮೈಸೂರು ಮೇಯರ್ ರವಿಕುಮಾರ್ ಹೇಳಿಕೆ ನೀಡಿದ್ದಾರೆ.

    ನಾಟಿ ಕೋಳಿ ಊಟ ಮಾಡಿಯೇ ಸಿದ್ದರಾಮಯ್ಯ ದಸರಾ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದರು. ಈ ಕಾರಣಕ್ಕೆ ಅವರಿಗೆ ಮತ್ತೇ ಅಂಬಾರಿಗೆ ಪುಷ್ಟಾರ್ಚನೆ ಮಾಡುವ ಅವಕಾಶ ಸಿಗಲಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಸ್ಫೋಟಕ ಆರೋಪ ಮಾಡಿದ್ದರು. ಪ್ರತಾಪ್ ಸಿಂಹ ಹೇಳಿಕೆಗೆ ಪುಷ್ಠಿ ನೀಡುವಂತೆ, ಅಂದಿನ ಮೈಸೂರು ಮೇಯರ್ ಆಗಿದ್ದ ಎಂ.ಜೆ ರವಿಕುಮಾರ್ ಪಬ್ಲಿಕ್‌ ಟಿವಿಗೆ ಹೇಳಿಕೆ ನೀಡಿದ್ದು, 2017ರ ದಸರಾ ಅಂಬಾರಿ ದಿನ ಅಂದಿನ ಸಿಎಂ ಸಿದ್ದರಾಮಯ್ಯ ನಾಟಿ ಕೋಳಿ ಊಟ ಮಾಡಿದ್ದರು. ಅವತ್ತು ಅವರ ಊಟದ ಟೇಬಲ್‍ನಲ್ಲಿ ಅವರ ಜೊತೆ ನಾನು ಕುಳಿತಿದ್ದೆ. ಲಲಿತ್ ಮಹಲ್ ಹೋಟೆಲ್‍ನಲ್ಲಿ ಮಾಂಸಹಾರ – ಸಸ್ಯಹಾರದ ಊಟದ ವ್ಯವಸ್ಥೆ ಇತ್ತು. ಸಿದ್ದರಾಮಯ್ಯ ಅವರು ನಾಟಿ ಕೋಳಿ ಊಟ ಮಾಡಿದ್ದರು ಎಂದು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನಾಟಿ ಕೋಳಿ ಊಟ ಮಾಡಿ ಅಂಬಾರಿಗೆ ಪುಷ್ಪಾರ್ಚನೆ: ಸಿದ್ದು ವಿರುದ್ಧ ಪ್ರತಾಪ್‌ ಸಿಂಹ ಕಿಡಿ

    ಮೈಸೂರು ದಸರಾದಲ್ಲಿ ಮುಖ್ಯಮಂತ್ರಿ ಸೇರಿದಂತೆ ಉಸ್ತುವಾರಿ ಸಚಿವರಿಗೆ ಊಟ ಮಾಡಿಸುವುದು ಸಂಪ್ರದಾಯ. ಅಂದು ಸಿದ್ದರಾಮಯ್ಯ ನಾಟಿ ಕೋಳಿ ಊಟ ಮಾಡಲು ಮುಂದಾಗಿದ್ದರು. ಅಂಬಾರಿಗೆ ಪುಷ್ಪಾರ್ಚನೆ ಮಾಡುವ ದಿನ ಮಾಂಸಹಾರನಾ ಸರ್ ಅಂತಾ ನಾವು ಕೇಳಿದ್ದೇವೂ, ಅಯ್ಯೋ ಬಾ ಏನಾಗುತ್ತೆ ಅಂತಾ ಸಿದ್ದರಾಮಯ್ಯ ಅಂದ್ರು. ಅವರು ಅವತ್ತು ಮಾಂಸಹಾರ ಊಟ ಮಾಡಿದ್ದರು. ನಾನು ದಸರಾ ದಿನ ಉಪವಾಸ ಮಾಡುತ್ತಿದ್ದೆ ನಾನು ಅಂದು ಉಪವಾಸ ಮಾಡಿದ್ದೆ. ಊಟ ಮುಗಿಸಿದ ಬಳಿಕ ಸಿದ್ದರಾಮಯ್ಯ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದರು ನಾನು ಜೊತೆಯಲ್ಲಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ, ಶಕ್ತಿ ಪ್ರದರ್ಶನ ಸರಿಯಲ್ಲ: ವಿಶ್ವನಾಥ್

    Live Tv
    [brid partner=56869869 player=32851 video=960834 autoplay=true]

  • ಅಭಿಮನ್ಯು ಟೀಂಗೆ ಹೊಸ ಮೆಂಬರ್ ಎಂಟ್ರಿ- ಅಶ್ವತ್ಥಾಮ ಭವಿಷ್ಯದ ಕ್ಯಾಪ್ಟನ್!

    ಅಭಿಮನ್ಯು ಟೀಂಗೆ ಹೊಸ ಮೆಂಬರ್ ಎಂಟ್ರಿ- ಅಶ್ವತ್ಥಾಮ ಭವಿಷ್ಯದ ಕ್ಯಾಪ್ಟನ್!

    ಮೈಸೂರು: ಈ ಬಾರಿಯ ಸರಳ ದಸರಾಕ್ಕೆ ಬರಲು ಅರ್ಜುನ ನೇತೃತ್ವದ ಗಜಪಡೆ ಸಿದ್ಧವಾಗಿದೆ. ಇದರೊಂದಿಗೆ ಅಭಿಮನ್ಯು ಟೀಂಗೆ ಹೊಸ ಆನೆ ಸೇರ್ಪಡೆಯಾಗಿದೆ. ಅದರ ಹೆಸರು ಅಶ್ವತ್ಥಾಮ. ಮಹಾಭಾರತದ ದ್ರೋಣಾಚಾರ್ಯರ ಮಗನ ಹೆಸರಿನ ಈ ಆನೆ ಈ ಬಾರಿಯ ದಸರೆಯ ಪ್ರಮುಖ ಆಕರ್ಷಣೆಯಾಗಲಿದೆ.

    ಪುಂಡ ಹಾಗೂ ಜಗಮೊಂಡನಾಗಿದ್ದ ಈ ಆನೆ ಈಗ ದಸರಾ ಆನೆಗಳ ತಂಡ ಸೇರಿದೆ. ಅಶ್ವತ್ಥಾಮ ನಾಲ್ಕು ವರ್ಷದ ಹಿಂದೆ ಕಾಡಿನಿಂದ ನಾಡಿಗೆ ಬಂದು ಸಿಕ್ಕಾಪಟ್ಟೆ ಕಿರಿಕ್ ಮಾಡಿತ್ತು. ಹಾಸನ ಜಿಲ್ಲೆ ಸಕಲೇಶಪುರದ ಸುತ್ತಮುತ್ತ ಕಾಡಿನಿಂದ ನಾಡಿಗೆ ಬರುತ್ತಿದ್ದ ಈ ಆನೆ ಬೆಳೆದ ಬೆಳೆಯನ್ನು ತಿಂದು ಮತ್ತೆ ಕಾಡು ಸೇರುತ್ತಿತ್ತು. ಇದರಿಂದ ಆತಂಕಗೊಂಡ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆಗ ಆಪರೇಷನ್ ಗಜರಾಜ ಶುರುವಾಗಿತ್ತು. ಗ್ರಾಮಸ್ಥರು ಹೇಳಿದ ಪ್ರಕಾರ ಆನೆ ಭಾರಿ ಗಾತ್ರದ್ದಾಗಿತ್ತು. ಉದ್ದನೆಯ ದಂತ, ಆಕರ್ಷಕ ಮೈ ಕಟ್ಟಿನ ಒಂಟಿ ಸಲಗ ಅಂತಾ ಗೊತ್ತಾಗಿತ್ತು. ಆದ್ದರಿಂದ ಅರಣ್ಯ ಇಲಾಖೆಯವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರಲಿಲ್ಲ. ಅಶ್ವತ್ಥಾಮನ ಸೆರೆಗೆ ಬಂದಿದ್ದು, ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಆನೆ ನೇತೃತ್ವದಲ್ಲಿ ಅರ್ಜುನ ಸೇರಿ ಹಲವು ಆನೆಗಳ ಕಾರ್ಯಾಚರಣೆಯಲ್ಲಿ ಅಶ್ವತ್ಥಾಮ ಸೆರೆಯಾಗಿತ್ತು. ಇದನ್ನೂ ಓದಿ: ಈ ಬಾರಿ ಸರಳ, ಸಾಂಪ್ರದಾಯಿಕ ದಸರಾ ಆಚರಣೆ

    ಅಂದು 30 ವರ್ಷದ ಗಂಡಾನೆಯಾಗಿದ್ದ, ಅಶ್ವತ್ಥಾಮನನ್ನು ಕಂಡ ಅಧಿಕಾರಿಗಳು ಇದಕ್ಕೆ ತರಬೇತಿ ನೀಡಿ ಪಳಗಿಸಿದರೆ ಅತ್ಯುತ್ತಮ ಆನೆಯಾಗಲಿದೆ ಅನಿಸಿತು. ತಕ್ಷಣ ಮೇಲಧಿಕಾರಿಗಳಿಂದ ಅನುಮತಿ ಪಡೆದು, ಹರವೆ ಆನೆ ಕ್ಯಾಂಪ್‍ಗೆ ಕರೆತಂದು ತರಬೇತಿ ನೀಡಿದ್ದರು. ಶಿಬಿರಕ್ಕೆ ಬಂದ ಆನೆಗೆ ಅಶ್ವತ್ಥಾಮ ಎಂದು ನಾಮಕರಣ ಮಾಡಲಾಯಿತು. ಬರೋಬ್ಬರಿ 3,500ಕೆಜಿ ತೂಕವಿದ್ದ ಅಶ್ವತ್ಥಾಮ, 2.85 ಮೀಟರ್ ಎತ್ತರ, 3.46 ಮೀಟರ್ ಉದ್ದವಿತ್ತು. ದಂತಗಳು ಆಕರ್ಷಕವಾಗಿ ಉದ್ದವಾಗಿದ್ದು, ಉಗ್ರ ಸ್ವರೂಪಿಯಾಗಿದ್ದ ಅಶ್ವತ್ಥಾಮ ಎಲ್ಲರಲ್ಲೂ ಆತಂಕ ಸೃಷ್ಟಿಸಿತ್ತು. ತರಬೇತಿಯಿಂದ ಉಗ್ರನಾಗಿದ್ದ ಆನೆ ಸೌಮ್ಯವಾಗಿದೆ. ಸಮತಟ್ಟಾದ ಬೆನ್ನು ಇರುವ ಕಾರಣ ದಸರೆಗೆ ಆಯ್ಕೆ ಮಾಡಲಾಗಿದೆ. ಅಶ್ವತ್ಥಾಮನಿಗೆ ಕೇವಲ 34 ವರ್ಷ ಜೊತೆಗೆ ಸಮತಟ್ಟಾದ ಬೆನ್ನು ಇದೆ. ಚಿನ್ನದ ಅಂಬಾರಿ ಕಟ್ಟಲು ಹೇಳಿ ಮಾಡಿಸಿದ ಮೈ ಕಟ್ಟು. ಹೀಗಾಗಿಯೇ ಅಶ್ವತ್ಥಾಮ ಭವಿಷ್ಯದ ಅಂಬಾರಿ ಹೊರುವ ಆನೆ ಎಂದೇ ಬಿಂಬಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಸೋನಿಯಾ ಗಾಂಧಿ ಅನಿವಾರ್ಯತೆ ಇದೆ, ನಮಗೆ ಇಲ್ಲ: ಪ್ರತಾಪ್ ಸಿಂಹ

    ಇದೇ ಮೊದಲ ಬಾರಿಗೆ ಅಶ್ವತ್ಥಾಮ ಮೈಸೂರು ದಸರೆಗೆ ಪ್ರವೇಶ ಮಾಡಲಿದ್ದು, ಅಶ್ವತ್ಥಾಮನಿಗೆ ಮಾವುತ ಶಿವು ಹಾಗೂ ಕಾವಾಡಿ ಗಣೇಶ್ ಜೊತೆಯಾಗಿದ್ದಾರೆ. ಕೇವಲ ನಾಲ್ಕು ವರ್ಷದಲ್ಲಿ ಇವರ ನಡುವೆ ಅವಿನಾಭಾವ ಸಂಬಂಧ ಬೆಳೆದಿದ್ದು, ಇವರು ಹೇಳಿದ ಎಲ್ಲಾ ಮಾತುಗಳನ್ನು ಚಾಚು ತಪ್ಪದೆ ಪಾಲಿಸುವ ಅಶ್ವತ್ಥಾಮ ಇದೀಗ ಎಲ್ಲರ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದೆ.