Tag: ಅಂಧ ದಂಪತಿ

  • ಅಂಧ ದಂಪತಿಯ ಮಗು ಕಿಡ್ನಾಪ್ ಪ್ರಕರಣ – 3 ದಿನಗಳ ಬಳಿಕ ಮಗು ಪತ್ತೆ

    ಅಂಧ ದಂಪತಿಯ ಮಗು ಕಿಡ್ನಾಪ್ ಪ್ರಕರಣ – 3 ದಿನಗಳ ಬಳಿಕ ಮಗು ಪತ್ತೆ

    ಬೆಂಗಳೂರು: ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಏ.27 ರಂದು ಅಂಧ ದಂಪತಿಯ ಮಗು ಕಿಡ್ನಾಪ್ ಆಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯೊಬ್ಬರು ಮಗುವನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ.

    ರಾಯಚೂರಿನ ರಾಯದುರ್ಗಾ ಮೂಲದ ಬಸವರಾಜು, ಚಿನ್ನು ದಂಪತಿಯ ಎಂಟು ತಿಂಗಳ ಮಗು ಸಾಗರ್‍ನನ್ನು ಮಹಿಳೆಯೊಬ್ಬಳು ಸಹಾಯ ಮಾಡುವ ನೆಪದಲ್ಲಿ ಕಿಡ್ನಾಪ್ ಮಾಡಿದ್ದಳು. ಮಗು ಕಳೆದುಕೊಂಡ ಬಗ್ಗೆ ದಂಪತಿ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ವರದಿ ಮಾಡಿತ್ತು.

    ಈ ನಡುವೆಯೇ ನಗರದ ಕೆಂಗೇರಿ ನಿವಾಸಿ ಪಾರ್ವತಮ್ಮ ಎಂಬವರು ಮಗು ಸಾಗರ್‍ನನ್ನು ಇಂದು ಉಪ್ಪಾರಪೇಟೆ ಪೊಲೀಸ್ ಠಾಣೆ ತಂದು ಒಪ್ಪಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ, ಈ ಮಗು ನಮಗೆ ಎರಡು ದಿನದ ಹಿಂದೆ ಇದೇ ಮೆಜೆಸ್ಟಿಕ್ ಬಳಿ ಬಸ್‍ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಕೊಟ್ಟರು. ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿದ ಕಾರಣ ನಾನು ಮಗುವನ್ನು ನೋಡಿಕೊಳ್ಳಲು ಒಪ್ಪಿದೆ. ಆದರೆ ಆ ಬಳಿಕ ಮಹಿಳೆ ಎಷ್ಟು ಸಮಯ ಕಾದರು ಬರಲಿಲ್ಲ. ಏನು ಮಾಡುವುದೆಂದು ತಿಳಿಯದೇ ಮಗುವನ್ನು ಮನೆಗೆ ತೆಗೆದುಕೊಂಡು ಬಂದು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೆ. ಮಾಧ್ಯಮಗಳಲ್ಲಿ ಮಗುವಿನ ಸುದ್ದಿ ಪ್ರಸಾರ ವೇಳೆ ನನಗೆ ಇದರ ಅರಿವಾಗಿದ್ದು, ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.

    ಸದ್ಯ ಮಗು ಸಿಕ್ಕಿರುವುದಿಂದ ಪ್ರಕರಣವನ್ನು ಕೈ ಬಿಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಮಗು ಅಪಹರಣ ಹಿಂದಿನ ಮಹಿಳೆ ಯಾರು? 3 ದಿನಗಳ ಬಳಿಕ ಮಗು ಪತ್ತೆಯಾದ ಹಿಂದಿನ ಘಟನೆ ಬಗ್ಗೆ ಹಲವು ಅನುಮಾನಗಳು ಇರುವ ಕಾರಣ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದುಕೊಂಡಿದ್ದ ಮಗು ಮತ್ತೆ ತಾಯಿಯ ಮಡಿಲು ಸೇರಿದ್ದರಿಂದ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

  • ಸಹಾಯ ಮಾಡೋ ನೆಪದಲ್ಲಿ ಅಂಧ ದಂಪತಿಯ ಮಗುವನ್ನು ಕಿಡ್ನಾಪ್‍ಗೈದ ಮಹಿಳೆ

    ಸಹಾಯ ಮಾಡೋ ನೆಪದಲ್ಲಿ ಅಂಧ ದಂಪತಿಯ ಮಗುವನ್ನು ಕಿಡ್ನಾಪ್‍ಗೈದ ಮಹಿಳೆ

    ಬೆಂಗಳೂರು: ಮಗುವಿಗೆ ನೀರು ಕುಡಿಸಲು ಸಹಾಯ ಮಾಡುವಂತೆ ಅಂಧ ದಂಪತಿಯ ಸಹಾಯಕ್ಕೆ ಬಂದ ಮಹಿಳೆ ಮಗುವಿನೊಂದಿಗೆ ಪರಾರಿಯಾಗಿರುವ ಘಟನೆ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ರಾಯಚೂರು ಮೂಲದ ಅಂಧ ದಂಪತಿಯಾದ ಚಿನ್ನು ಮತ್ತು ಬಸವರಾಜು ಅವರ ಮಗುವನ್ನು ಅಪಹರಣ ಮಾಡಿದ್ದು, ಶನಿವಾರ ಬೆಳಗ್ಗೆ 7:30ರ ಸಮಯದಲ್ಲಿ ಘಟನೆ ನಡೆದಿದೆ.

    ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ದಂಪತಿ ತಮ್ಮ 8 ತಿಂಗಳ ಮಗುವಿಗೆ ನೀರು ಕುಡಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅನಾಮಿಕ ಮಹಿಳೆ ಸಹಾಯ ನೆಪದಲ್ಲಿ ಧಾವಿಸಿದ್ದು, ಮಗುವಿನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಘಟನೆ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದ್ದು, ಮಗುವಿನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.