Tag: ಅಂಧರು

  • ಅಂಧ ಜೋಡಿಗೆ ಬೆಳಕಾದ 400 ಆಟೋ ಚಾಲಕರು

    ಅಂಧ ಜೋಡಿಗೆ ಬೆಳಕಾದ 400 ಆಟೋ ಚಾಲಕರು

    ಬೆಂಗಳೂರು: ಅಂಧರ ಬಾಳಿಗೆ ಆಟೋ ಚಾಲಕರ (Auto Drivers) ಸೇನೆ ಹೊಸ ಬೆಳಕು ನೀಡಿದೆ. ಪ್ರೀತಿಸಿ ಆರ್ಥಿಕ ಸಮಸ್ಯೆಯಿಂದ ಮದುವೆಯಾಗದೇ ಇದ್ದ ಅಂಧ ಪ್ರೇಮಿಗಳಿಗೆ (Blind Couple) ಆಟೋ ಚಾಲಕರೆಲ್ಲಾ ಸೇರಿ ಅಪರೂಪದ ಮದುವೆ (Marriage) ಮಾಡಿಸಿದ್ದಾರೆ. ಆಟೋ ಚಾಲಕರ ಸಮ್ಮುಖದಲ್ಲೇ ಸಪ್ತಪದಿ ತುಳಿದ ಜೋಡಿ, ಹೊಸ ಜೀವನ ಆರಂಭಿಸಿದ್ದಾರೆ.

    ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬೇಗುರಿನ ಅಕ್ಷಯನಗರದ ವಿನಾಯಕ ದೇವಸ್ಥಾನದಲ್ಲಿ ಈ ಅಂಧ ಜೋಡಿಗೆ ಆಟೋ ಚಾಲಕರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ವಧುವಿಗೆ 3 ಗ್ರಾಂ ಚಿನ್ನದ ತಾಳಿ, ಕಾಲುಂಗುರ, ಸೀರೆ ಹಾಗೂ ವರನಿಗೆ ಬಟ್ಟೆ ಕೊಡಿಸಿ, ಸಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ. ವಧು-ವರನಿಗೆ ತಂದೆ ತಾಯಿ, ಸಂಬಂಧಿಕರು ಇರಲಿಲ್ಲ. 400 ಆಟೋ ಚಾಲಕರೇ ಇಂತಿಷ್ಟು ಹಣ ಸಂಗ್ರಹಿಸಿ ಮದುವೆ ಕಾರ್ಯಕ್ರಮ ಮಾಡಿದ್ದಾರೆ. ಇದನ್ನೂ ಓದಿ: Bengaluru-Mysuru Expressway ನಲ್ಲಿ ಬೇಸಿಗೆ ಮಳೆಗೇ ಅವಾಂತರ- ವಾಹನ ಸವಾರರ ಪರದಾಟ

    ವರ ಮಂಜುನಾಥ್ ಕೋಲಾರ ಮೂಲದವರಾಗಿದ್ದು, ಬಿಎ ವ್ಯಾಸಂಗ ಮಾಡಿದ್ದಾರೆ. ವಧು ದೇವಿರಮ್ಮ ಹಾಸನ ಮೂಲದವರು. ಅವರಿಬ್ಬರು ಹುಟ್ಟುತ್ತಲೇ ಅಂಧರು. ವಯಸ್ಸು 30 ದಾಟಿದರೂ ಇಬ್ಬರಿಗೆ ಮದುವೆಯ ಭಾಗ್ಯ ಬಂದಿರಲಿಲ್ಲ. ಹೀಗೆ ಕುಗ್ಗಿ ಹೋಗುತ್ತಿದ್ದ ಸಮಯದಲ್ಲೇ ಇಬ್ಬರಿಗೆ ಪ್ರೀತಿ ಚಿಗುರೊಡೆದಿತ್ತು. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಇದೀಗ ಅಂಧ ಜೋಡಿಯ ಬಾಳಿಗೆ 400 ಆಟೋ ಚಾಲಕರು ಬೆಳಕಾಗಿದ್ದಾರೆ. ಇದನ್ನೂ ಓದಿ: `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ

  • ಅಂಧತ್ವವನ್ನು ಮೆಟ್ಟಿನಿಂತು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಹಳ್ಳಿ ಪ್ರತಿಭೆ ಲೋಕೇಶ್

    ಅಂಧತ್ವವನ್ನು ಮೆಟ್ಟಿನಿಂತು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಹಳ್ಳಿ ಪ್ರತಿಭೆ ಲೋಕೇಶ್

    ಕೊಪ್ಪಳ: ಕ್ರೀಡೆಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಕ್ರಿಕೆಟ್ ಆಟದ ಅಂಧರ ವಿಭಾಗದಲ್ಲಿ ಭಾರತ ದೇಶದ ಬಿ3 ತಂಡಕ್ಕೆ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಯುವಕ ಆಯ್ಕೆಯಾಗಿದ್ದಾರೆ.

    ಚಿಕ್ಕಬೆಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿರುವ ಯಡಳ್ಳಿ ಗ್ರಾಮದ ಲೋಕೇಶ್ ಎನ್ನುವ ಯುವಕ ಸದ್ಯ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ಹಳ್ಳಿ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಹಾಗೇ ಮಾಡಿದ್ದಾರೆ. ಆಯ್ಕೆಯಾಗಿ ಐದಾರು ವರ್ಷಗಳು ಕಳೆದಿದ್ದು, ಇದೀಗ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ಯುವ ಪ್ರತಿಭೆ ಅಂಗವಿಕಲತೆಯನ್ನು ವರವನ್ನಾಗಿ ಮಾಡಿಕೊಂಡು ಮಿಂಚುಹರಿಸುತ್ತಿದ್ದಾರೆ. ಕಡು ಬಡತನವನ್ನು ಅನುಭವಿಸುತ್ತಿರುವ ರೇಣುಕಪ್ಪ, ಹುಲಿಗೇಮ್ಮ ದಂಪತಿಗಳ ನಾಲ್ಕನೇ ಮಗನಾದ ಲೋಕೇಶ್ ಕಣ್ಣು ಕಾಣದೆ ಹುಟ್ಟು ಅಂಧತ್ವವನ್ನು ಪಡೆದುಕೊಂಡಿದ್ದಾರೆ. ಅಂಧತ್ವವನ್ನು ವರವನ್ನಾಗಿ ಮಾಡಿಕೊಂಡಿರುವ ಲೋಕೇಶ್ ಕ್ರಿಕೆಟ್‍ನಲ್ಲಿ ಆಸಕ್ತಿಯನ್ನು ಹೊಂದಿದ್ದು, ಅದರಲ್ಲಿಯೇ ಮುಂದುವರಿದು ಸದ್ಯ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ಹೆಸರು ವಾಸಿಯಾಗಿದ್ದಾರೆ. ಇದನ್ನೂ ಓದಿ: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ

    ಗ್ರಾಮದಲ್ಲಿ ಕ್ರಿಕೆಟ್ ಆಡುವ ಮೂಲಕ ಆಸಕ್ತಿಯನ್ನು ರೂಡಿಸಿಕೊಂಡಿದ್ದ ಲೋಕೇಶ್ ಕಳೆದ 15 ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ, ಕೂಲಿ ಕೆಲಸವನ್ನು ಮಾಡುವ ಮೂಲಕ ಸಮರ್ಥ ಟ್ರಸ್ಟ್ ವತಿಯಿಂದ ಕ್ರಿಕೆಟ್ ಅಭ್ಯಾಸವನ್ನು ನಡೆಸಿದ್ದಾರೆ. ಬೆಂಗಳೂರಿನಲ್ಲಿ ರಣಜಿ ತಂಡಗಳಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಅದರ ಫಲವಾಗಿ ಭಾರತ ತಂಡದ ಅಂಧರ ವಿಭಾಗಕ್ಕೆ ಆಯ್ಕೆಯಾಗಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು

    2016 ರಲ್ಲಿ ಟೀಂ ಇಂಡಿಯಾಗೆ ಆಯ್ಕೆ:
    ರಣಜಿಯಲ್ಲಿ ಉತ್ತಮ ಪ್ರದರ್ಶನದಿಂದ ಭಾರತದ ಬಿ3 ವಿಭಾಗದ ಅಂಧರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಲೋಕೇಶ್, 2016 ರಲ್ಲಿ ಅಂಧರ ಏಷ್ಯಾ ಕಪ್ ಪಂದ್ಯಾವಳಿ ಆಡಿದ್ದಾರೆ. ಬಾಂಗ್ಲಾದೇಶದಲ್ಲಿ ಏಷ್ಯ ಕಪ್ ಪಂದ್ಯಗಳನ್ನು ಆಡುವ ಮೂಲಕ ಟೂರ್ನಿಯಲ್ಲಿ ಆಲ್‌ರೌಂಡರ್ ಪ್ರದರ್ಶನದ ಮೂಲಕ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ಟ್ರೋಪಿಯಲ್ಲಿ ಭಾಗವಹಿಸಿದ್ದಾರೆ. 2019ರಲ್ಲಿ ನೇಪಾಳನಲ್ಲಿ ಭಾರತ ಮತ್ತು ನೇಪಾಳ ಪಂದ್ಯಾವಳಿ ಉತ್ತಮ ಪ್ರದರ್ಶನ ವನ್ನು ತೊರಿಸಿದ್ದಾರೆ. 2021 ಡಿಸೆಂಬರ್‌ನಲ್ಲಿ ಮೂರು ದಿನಗಳ ಕಾಲ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮ್ಯಾನ್‌ ಆಗಿ ಆಡುವ ಮೂಲಕ ಅಬ್ಬರದ ಬ್ಯಾಟಿಂಗ್ ಮಾಡಿ, ಲೋಕೇಶ್ 142 ರನ್‍ಗಳನ್ನು ಕಲೆ ಹಾಕಿ ಮಿಂಚಿದ್ದಾರೆ. ಸರಣಿಯಲ್ಲಿ ಉತ್ತಮ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸರಣಿಯ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಲೋಕೇಶ್ ಅವರು ಪಡೆದುಕೊಂಡಿದ್ದರು.

    ಬಡವತದಲ್ಲಿ ಕುಟುಂಬ:
    ಲೋಕೇಶ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದರು ಸಹ ತಾಲೂಕಿನ ಯಡಳ್ಳಿ ಗ್ರಾಮದ ಪುಟ್ಟ ಮನೆಯಲ್ಲಿ ಇರುವ ಲೋಕೇಶ್ ಅವರ ತಂದೆ, ತಾಯಿ ಈಗಲೂ ಸಹ ಬಡತನದಲ್ಲೇ ಕಾಲ ಕಳೆಯುತ್ತಿದ್ದಾರೆ. ಇರುವ ಕೊಂಚ ಜಮೀನಿನಲ್ಲಿಯೇ ಕೃಷಿ ಮಾಡಿಕೊಂಡು, ಬೆಟ್ಟದಲ್ಲಿ ಸಿಗುವ ಕಟ್ಟಿಗೆಗಳಿಂದ ಮನೆ ಬಳಕೆ ವಸ್ತುಗಳನ್ನು ಸಿದ್ಧ ಪಡಿಸಿ, ಮಾರುಕಟ್ಟೆಯಲ್ಲಿ ಅವುಗಳನ್ನು ಮಾರಾಟ ಮಾಡಿ, ಬದುಕು ಸಾಗಿಸುತ್ತಿದ್ದಾರೆ. ಮಗ ಉತ್ತಮ ಪ್ರದರ್ಶನ ತೋರಿ ಭಾರತ ದೇಶದಲ್ಲಿಯೇ ಹೆಸರು ವಾಸಿಯಾದರೂ ಸಹ ಪಾಲಕರು ಮಾತ್ರ ಬಡತನದಲ್ಲಿ ಕೈತೊಳೆಯುತ್ತಿದ್ದಾರೆ. ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿ ನಾಲ್ಕೈದು ವರ್ಷಗಳು ಕಳೆದರೂ ಸಹ ರಾಜ್ಯ ಸರ್ಕಾರ ಗುರುತಿಸಿ ಗೌರವಿಸಲು ಮುಂದಾಗಿಲ್ಲ. ಪಂದ್ಯಗಳನ್ನು ಆಡಿದ ವೇಳೆಯಲ್ಲಿ ದೊರೆಯುವ ಕೊಂಚ ಆದಾಯದಲ್ಲಿಯೇ ಬದುಕು ಸಾಗಿಸಬೇಕಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಸಹಾಯ ಧನಗಳು ಸಹ ದೊರೆತಿಲ್ಲ ಎನ್ನುವುದು ಲೋಕೇಶ್ ಅವರ ಮಾತಾಗಿದ್ದು, 2022ರಲ್ಲಿ ನಡೆಯಲಿರುವ ಅಂಧರ ವಿಶ್ವಕಪ್ ಪಂದ್ಯಾವಳಿಯನ್ನು ಆಡುವ ಕನಸು ಕಟ್ಟಿಕೊಂಡು ಕ್ರಿಕೆಟ್ ಆಟದ ಮೂಲಕ ಜೀವನ ರೂಪಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

  • ಪ್ಲಾಸ್ಟಿಕ್ ಜಾಗೃತಿ, ಗಿನ್ನಿಸ್ ದಾಖಲೆಗಾಗಿ ಜಗತ್ತಿನ ಅತಿ ದೊಡ್ಡ ಸೆಣಬಿನ ಚೀಲ ಹೊಲಿದ ಅಂಧರು

    ಪ್ಲಾಸ್ಟಿಕ್ ಜಾಗೃತಿ, ಗಿನ್ನಿಸ್ ದಾಖಲೆಗಾಗಿ ಜಗತ್ತಿನ ಅತಿ ದೊಡ್ಡ ಸೆಣಬಿನ ಚೀಲ ಹೊಲಿದ ಅಂಧರು

    ಚೆನ್ನೈ: ಗಿನ್ನಿಸ್ ದಾಖಲೆ ನಿರ್ಮಿಸಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 9 ಜನ ಅಂಧರು ಕೇವಲ 5 ಗಂಟೆಗಳಲ್ಲಿ 66 ಅಡಿ ಎತ್ತರ ಹಾಗೂ 33 ಅಡಿ ಅಗಲದ ‘ವಿಶ್ವದ ಅತಿ ದೊಡ್ಡ ಸೆಣಬಿನ ಚೀಲ’ವನ್ನು ಹೊಲಿಯುವ ಮೂಲಕ ಗಮನ ಸೆಳೆದಿದ್ದಾರೆ.

    ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ 9 ಅಂಧ ವಿದ್ಯಾರ್ಥಿಗಳು ಶುಕ್ರವಾರ ಈ ಚೀಲವನ್ನು ಹೊಲಿದಿದ್ದು, ಇವರಿಗೆ ತೃತೀಯಲಿಂಗಿಗಳ ಸಮುದಾಯದ ಸದಸ್ಯರು ಹಾಗೂ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ದಾಖಲೆ ನಿರ್ಮಿಸಲು ಸಹಾಯ ಮಾಡಿದ್ದಾರೆ.

    ಈ ಕಾರ್ಯವನ್ನು ಸಂಘಟಿಸಿದ ಯುವ ಪ್ರತಿಷ್ಠಾನದ ಅಧ್ಯಕ್ಷೆ ಶಶಿಕಲಾ ಈ ಕುರಿತು ಮಾಹಿತಿ ನೀಡಿ, ಯುವ ಪ್ರತಿಷ್ಠಾನದ 9 ಜನ ಅಂಧರು ಹ್ಯಾಂಡಲ್ ಇಲ್ಲದೆ, ಕೇವಲ ಕೈಗಳಿಂದ 5 ಗಂಟೆಗಳಲ್ಲಿ 66 ಅಡಿ ಎತ್ತರ ಹಾಗೂ 33 ಅಡಿ ಅಗಲದ ‘ವಿಶ್ವದ ಅತಿ ದೊಡ್ಡ ಸೆಣಬಿನ ಚೀಲವನ್ನು’ ಹೊಲಿಯುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಲ್ಲಿಸಲು ಹಾಗೂ ಇದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಹೀಗಾಗಿ ಸೆಣಬಿನ ಚೀಲವನ್ನು ಹೊಲಿಯಲಾಗಿದೆ ಎಂದು ತಿಳಿಸಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ ನಂತರ, ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದ ಭಾಷಣದ ಅಂಶವನ್ನು ಶಶಿಕಲಾ ಉಲ್ಲೇಖಿಸಿದ್ದಾರೆ. ಅಲ್ಲದೆ, ನಾವು ಪ್ಲಾಸ್ಟಿಕ್ ವಿರುದ್ಧ ಹೋರಾಟ ಪ್ರಾರಂಭಿಸಬೇಕಿದೆ. ಹೀಗಾಗಿ ಸೆಣಬಿನ ಚೀಲವನ್ನು ಈ ಅಂಧರು ಹೊಲಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ವಿಕಲಚೇತನರೂ ಸಹ ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರಿಗೆ ವಿಶ್ವಾಸ ಹಾಗೂ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂಬುದನ್ನು ಸಾಬೀತು ಪಡಿಸುವುದು ಸಹ ಈ ಪ್ರಯತ್ನದ ಉದ್ದೇಶವಾಗಿದೆ ಎಂದರು.