Tag: ಅಂತರ್ಜಾತಿ ವಿವಾಹ

  • ದಲಿತ ಅಂತರ್ಜಾತಿ ವಿವಾಹವಾದ್ರೆ ಕೇಂದ್ರದಿಂದ ಸಿಗುತ್ತೆ 2.5 ಲಕ್ಷ ರೂ.: ಷರತ್ತು ಏನು ಗೊತ್ತಾ?

    ದಲಿತ ಅಂತರ್ಜಾತಿ ವಿವಾಹವಾದ್ರೆ ಕೇಂದ್ರದಿಂದ ಸಿಗುತ್ತೆ 2.5 ಲಕ್ಷ ರೂ.: ಷರತ್ತು ಏನು ಗೊತ್ತಾ?

    ನವದೆಹಲಿ: ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

    ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿ ಸಮಾಜದಲ್ಲಿ ಏಕತೆ ಮೂಡಿಸುವ ಸಲುವಾಗಿ ಡಾ. ಬಿಆರ್. ಅಂಬೇಡ್ಕರ್ ಯೋಜನೆಯನ್ನು 2013ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿತ್ತು. ಈ ವೇಳೆ ಅಂತರ್ಜಾತಿ ವಿವಾಹವಾಗುವ ವಧು ಅಥವಾ ವರ ದಲಿತ ಸಮುದಾಯಕ್ಕೆ ಸೇರಿರಬೇಕು ಹಾಗೂ ಅವರ ಕುಟುಂಬದ ಆದಾಯ 5 ಲಕ್ಷ ರೂ. ಗಿಂತ ಜಾಸ್ತಿ ಇರಬಾರದು ಎನ್ನುವ ನಿಯಮವನ್ನು ವಿಧಿಸಲಾಗಿತ್ತು. ವಾರ್ಷಿಕವಾಗಿ 500 ಮಂದಿಗೆ ಈ ಆರ್ಥಿಕ ಸಹಾಯವನ್ನು ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು.

    ಆದರೆ ಈಗ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎಲ್ಲ ರಾಜ್ಯಗಳಿಗೆ ಆದೇಶ ಹೊರಡಿಸಿದ್ದು, ಈ ಆದೇಶದಲ್ಲಿ 5 ಲಕ್ಷ ರೂ. ಆದಾಯ ಇರಬೇಕೆಂಬ ನಿಯಮವನ್ನು ಕೈ ಬಿಟ್ಟಿದೆ. ಮದುವೆಯಾದ ಎಲ್ಲರಿಗೂ ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದು ತಿಳಿಸಿದೆ.

    ನಿಯಮ ಏನು ಹೇಳುತ್ತೆ?
    ಈ ಯೋಜನೆಯ ಫಲಾನುಭವಿಯಾಗಲು ದಂಪತಿಗೆ ಮೊದಲ ವಿವಾಹವಾಗಿರಬೇಕು. ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ವಿವಾಹ ನೋಂದಣಿಯಾಗಿರಬೇಕು. ಯೋಜನೆಗೆ ಬೇಕಾದ ಪೂರಕ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಿದರೆ ಸರ್ಕಾರವು 2.5 ಲಕ್ಷ ರೂ. ಹಣವನ್ನು ನೇರವಾಗಿ ನೀಡುತ್ತದೆ. ಈ ಹಣವನ್ನು ಪಡೆಯಲು ದಂಪತಿ ತಮ್ಮ ಆಧಾರ್ ಸಂಖ್ಯೆ ನೊಂದಣಿ ಮಾಡಿಸಿರುವ ಬ್ಯಾಂಕ್ ಖಾತೆಯ ಪೂರಕ ದಾಖಲೆಗಳನ್ನು ನೀಡಬೇಕಾಗುತ್ತದೆ.

    ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುವ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಅವುಗಳು ಯಾವುದೇ ಆದಾಯ ಮಿತಿ ವಿಧಿಸದ ಕಾರಣ ಸರ್ಕಾರ ಈಗ ಈ ನಿರ್ಧಾರ ಕೈಗೊಂಡಿದೆ ಎಂದು ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.

    ಯೋಜನೆ ಜಾರಿಗೆಯಾದ ನಂತರ 2014-15 ಸಾಲಿನಲ್ಲಿ 5 ದಂಪತಿಗಳಿಗೆ ಹಣ ಮಂಜೂರು ಆಗಿದ್ದರೆ, 2015-16 ಸಾಲಿನಲ್ಲಿ ಇಲಾಖೆಗೆ 522 ಅರ್ಜಿಗಳು ಸಲ್ಲಿಕೆಯಾಗಿದ್ದು, 72 ಅರ್ಜಿಗಳಿ ಹಣ ಸಿಕ್ಕಿದೆ. 2016-17 ಸಾಲಿನಲ್ಲಿ ಸಲ್ಲಿಕೆಯಾದ 736 ಅರ್ಜಿಗಳಲ್ಲಿ 45 ಅರ್ಜಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ ಇದುವರೆಗೂ 409 ಅರ್ಜಿಗಳು ಸಲ್ಲಿಕೆಯಾಗಿದ್ದು, 74 ದಂಪತಿಗಳ ಅರ್ಜಿಗಳನ್ನು ಅಂಗೀಕರಿಸಲಾಗಿದೆ.

    ಈ ನೆರವು ಪಡೆಯಲು ವಿಧಿಸಲಾಗಿರುವ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣ ಬಹಳಷ್ಟು ಅರ್ಜಿಗಳು ತಿರಸ್ಕೃತಗೊಂಡಿದೆ. ವಿಶೇಷವಾಗಿ ಹಿಂದೂ ಮದುವೆ ಕಾಯ್ದೆಯಡಿ ಈ ಮದುವೆ ನೊಂದಣಿ ಆಗಬೇಕೆಂಬ ನಿಯಮವಿದ್ದರೂ ಬಹಳಷ್ಟು ಮದುವೆಗಳು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ನೊಂದಣಿ ಆಗುತ್ತಿರುವ ಕಾರಣ ಅರ್ಜಿ ತಿರಸ್ಕೃತಗೊಳ್ಳುತ್ತಿವೆ. ಈ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಪೂರಕ ಅರಿವು ಕಡಿಮೆ ಇದ್ದು, ಯೋಜನೆ ಫಲಾನುಭವಿಯಾಗಲು ಸಂಸದ, ಶಾಸಕ ಅಥವಾ ಜಿಲ್ಲಾಧಿಕಾರಿಗಳ ಶಿಫಾರಸ್ಸು ಅಗತ್ಯವಿದೆ. ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದ ಮಾತ್ರ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾರತದಲ್ಲಿ ಎಷ್ಟು ಮಂದಿ ಅಂತರ್ಜಾತಿ ವಿವಾಹವಾಗಿದ್ದಾರೆ ಎನ್ನುವ ನಿಖರ ಮಾಹಿತಿ ಸಿಗುವುದು ಕಷ್ಟ. ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯ ನಂತರ ಸರ್ಕಾರ ಜಾತಿ ಡೇಟಾವನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿಲ್ಲ. ಆದರೆ ಕೆಲ ಸಂಶೋಧಕರು ಈ ವಿಚಾರದ ಬಗ್ಗೆ ಸಂಶೋಧನೆ ನಡೆಸಿ ವರದಿ ನೀಡಿದ್ದಾರೆ.

    ಜಮ್ಮು ಕಾಶ್ಮೀರ, ರಾಜಸ್ಥಾನ, ಮಧ್ಯಪ್ರದೇಶ, ಮೇಘಾಲಯ, ತಮಿಳುನಾಡು ರಾಜ್ಯಗಳಲ್ಲಿ ಶೇ.95 ರಷ್ಟು ವಿವಾಹಗಳು ತಮ್ಮ ಜಾತಿಯಲ್ಲೇ ನಡೆಯುತ್ತವೆ. ಇನ್ನು ಪಂಜಾಬ್, ಸಿಕ್ಕಿಂ, ಗೋವಾ, ಕೇರಳ ರಾಜ್ಯಗಳಲ್ಲಿ ಶೇ.80 ವಿವಾಹಗಳು ತಮ್ಮ ಜಾತಿ ಮಿತಿಯಲ್ಲೇ ನಡೆಯುತ್ತವೆ ಎಂದು ಕೆಲ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ.

     

  • ಮದ್ವೆಯಾಗಿ 12 ದಿನಕ್ಕೇ ದೂರವಾದ ಪತ್ನಿಗಾಗಿ ಕಣ್ಣೀರು ಹಾಕಿದ ಪತಿ

    ಮದ್ವೆಯಾಗಿ 12 ದಿನಕ್ಕೇ ದೂರವಾದ ಪತ್ನಿಗಾಗಿ ಕಣ್ಣೀರು ಹಾಕಿದ ಪತಿ

    ಹಾಸನ: ಹುಡುಗಿ ಮನೆಯವರ ತೀವ್ರ ವಿರೋಧದಿಂದಾಗಿ ಅಂತರ್ಜಾತಿ ವಿವಾಹವಾಗಿದ್ದ ನವ ಜೋಡಿಯೊಂದು 12 ದಿನಕ್ಕೇ ಬೇರೆ ಬೇರೆಯಾಗಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದಿದೆ.

    ಪಟ್ಟಣದ ಮಾರುತಿ ನಗರದ ಚಂದ್ರೇಗೌಡ ಎಂಬುವರ ಪುತ್ರಿ ಶೋಭಾ ಮತ್ತು ಹಾಸನ ರಸ್ತೆಯ ನಿವಾಸಿ ಶೇಖರಪ್ಪ ಎಂಬುವರ ಪುತ್ರ ಗುರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಗುರು ಮನೆಯವರ ನೆಂಟರಿಷ್ಠರ ಸಮ್ಮುಖದಲ್ಲಿ ಕಳೆದ ಜುಲೈ 27 ರಂದು ದೇವಾಲಯವೊಂದರಲ್ಲಿ ಲವ್ ಮ್ಯಾರೇಜ್ ಆಗಿದ್ದರು. ಈ ಸಂಬಂಧ ಅರಸೀಕೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜುಲೈ 31 ರಂದು ನೋಂದಣಿಯನ್ನೂ ಮಾಡಿಸಿಕೊಂಡಿದ್ದಾರೆ.

    ಗುರು ಎಲೆಕ್ಟ್ರಿಷಿಯನ್ ಆಗಿದ್ದರೆ, ಶೋಭಾ ಅಂತಿಮ ಬಿಎ ಓದುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಆದ ಸ್ನೇಹ ಪ್ರೇಮಕ್ಕೆ ತಿರುಗಿ ಮದುವೆ ಸಹ ಆಗಿದ್ದರು. ಆದ್ರೆ ನಮ್ಮ ಮದುವೆಗೆ ಶೋಭಾ ಮನೆಯವರ ವಿರೋಧವಿತ್ತು. ಇದೇ ಕಾರಣಕ್ಕೆ ಅರಸೀಕೆರೆ ನಗರ ಪೊಲೀಸರ ಸಹಾಯ ಪಡೆದು ನನ್ನ ಮೇಲೆ ಹಲ್ಲೆ ಮಾಡಿ, ಪತ್ನಿಯನ್ನು ಬಲವಂತವಾಗಿ ಅವರ ಮನೆಗೆ ಕಳಿಸಿಕೊಟ್ಟಿದ್ದಾರೆ ಎಂದು ಗುರು ಇದೀಗ ಕಣ್ಣೀರಿಡುತ್ತಿದ್ದಾರೆ.

    ಇದನ್ನೂ ಓದಿ:  ಪ್ಲೀಸ್ ಅಳ್ಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪ್ರತ್ಯಕ್ಷ!

    ನನಗೇನು ಬೇಡ ನನಗೆ ನನ್ನ ಹೆಂಡ್ತಿ ಬೇಕು: ಕಳೆದ ತಿಂಗಳು 27ರಂದು ದೇವಸ್ಥಾನದಲ್ಲಿ ಮದುವೆ ಆಗಿದ್ವಿ. ಆ ಬಳಿಕ ಅಲ್ಲಿಂದ ಬೆಂಗಳೂರಿನಲ್ಲಿರೋ ಪರಿಚಯಸ್ಥರ ಮನೆಗೆ ಹೋದ್ವಿ. ಅಲ್ಲಿಂದ ಭಾನುವಾರ ಸಂಜೆ ಬಂದು ಅರಸೀಕೆರೆಯಲ್ಲಿರೋ ಪರಿಚಯಸ್ಥರ ಮನೆಯಲ್ಲಿ ಉಳಿದುಕೊಂಡ್ವಿ. ಸೋಮವಾರ ಬೆಳಗ್ಗೆ ತಾಲೂಕು ಸಬ್ ರಿಜಿಸ್ಟಾರ್ ಆಫೀಸಿಗೆ ತೆರಳಿ ಕಾನೂನು ಪ್ರಕಾರ ಮದುವೆಯಾಗಿ ರಿಜಿಸ್ಟಾರ್ ಮಾಡಿಕೊಂಡ್ವಿ. ಮರುದಿನ ಅಂದ್ರೆ ಮಂಗಳವಾರ ಪೊಲೀಸ್ ಠಾಣೆಗೆ ಬರುವಂತೆ ನನಗೆ ಕರೆ ಬಂತು. ಅದರಲ್ಲಿ ಹುಡುಗಿ ಮನೆಯವರಿಗೆ ಮುಚ್ಚಳಿಕೆ ಬರೆದುಕೊಡಲು ಠಾಣೆಗೆ ಬರುವಂತೆ ಹೇಳಿದ್ದರು. ಹೀಗಾಗಿ ನಾನು ಠಾಣೆಗೆ ತೆರಳುತ್ತಿದ್ದಂತೆಯೇ ನನ್ನ ಕೈಯಿಂದ ಸರ್ಟಿಫಿಕೆಟ್ ಎಳೆದುಕೊಂಡು, ನನ್ನ ಪಕ್ಕಕ್ಕೆ ದೂಡಿ, ಹುಡುಗಿಯನ್ನು ಆಕೆಯ ತಾಯಿ ಬಳಿ ಕಳುಹಿಸಿದ್ರು. ನಂತ್ರ ಪೊಲೀಸರು ನನ್ನ ಮೇಲೆ ಸರ್ಕಲ್ ಇನ್ಸ್ ಪೆಕ್ಟರ್ ಕೆ ಪ್ರಭಾಕರ್ ಹಲ್ಲೆ ಮಾಡಿದ್ದರು. ಅಲ್ಲದೇ ಹುಡುಗಿಯತ್ರ ನಿನ್ನ ತಾಳಿ, ಕಾಲುಂಗುರ ಅವನಿಗೆ ಬಿಚ್ಚಿ ಕೊಡು, ಅವನಿಗೆ ಹೊಡೆತೀವಿ ಅಂತ ಬೆದರಿಸಿದ್ದಾರೆ. ಈಗ ನನಗೇನು ಬೇಡ ನನಗೆ ಹೆಂಡ್ತಿ ಬೇಕು. ಆಕೆ ಇಲ್ಲವೆಂದಲ್ಲಿ ನಾನು ಸಾಯ್ತೀನಿ. ಖಂಡಿತಾ ಬದುಕಲ್ಲ ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಗುರು ಕಣ್ಣೀರು ಹಾಕಿದ್ರು.

    ನಮಗೆ ನ್ಯಾಯಬೇಕು: ಮಗನ ಸಂಕಟಕ್ಕೆ ದನಿಯಾಗಿರುವ ಗುರು ತಾಯಿ ಚಂದ್ರಮ್ಮ, ನಮಗೆ ನನ್ನ ಸೊಸೆ ಬೇಕು. ಸ್ಟೇಷನ್ ನಲ್ಲಿ ನನ್ನ ಮಗನಿಗೆ ಸರಿಯಾಗಿ ಹೊಡೆದ್ರು. ಅವರು ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದರೂ ನಾನೇನು ಚಿಂತೆ ಮಾಡುತ್ತಿರಲಿಲ್ಲ. ನನ್ನ ಎದುರುಗಡೆನೇ ಮಗನಿಗೆ ಹೊಡೆದಿದ್ದಾರೆ. ನನ್ನ ಮಗನಿಂದ ಸೊಸೆ ದೂರವಾಗಲು ಪೊಲೀಸರೇ ಕಾರಣ. ನಮಗೆ ನ್ಯಾಯಬೇಕು ಎಂದು ಅವರೂ ಕೂಡ ಕಣ್ಣೀರು ಹಾಕಿದ್ರು.

    ಇದನ್ನೂ ಓದಿ: ನಿಮ್ಮನ್ನ ಬಿಟ್ಟು ಹೋಗ್ತಿದ್ದೀನಿ, Sorry ಪ್ಲೀಸ್ ಅಳ್ಬೇಡಿ: ಗಂಡನಿಗೆ ಪತ್ರ ಬರೆದು ಮಗುವಿನೊಂದಿಗೆ ಬೇರೊಬ್ಬನ ಜೊತೆ ಪರಾರಿ!