ಪಾದಪೂಜೆ ವೇಳೆ ಲವ್ – 20ರ ಯುವತಿ ಜೊತೆ 45ರ ಸ್ವಾಮೀಜಿ ಪರಾರಿ?

ಕೋಲಾರ: ಮಧ್ಯಮ ವಯಸ್ಕ ಸ್ವಾಮೀಜಿ ತನ್ನ ಪಾದ ಪೂಜೆ ಮಾಡುತ್ತಿದ್ದ 20 ವರ್ಷದ ಯುವತಿಯೊಂದಿಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಕೋಲಾರ ತಾಲೂಕಿನ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ ಕಳೆದ 2 ತಿಂಗಳ ಹಿಂದೆ ಗ್ರಾಮಕ್ಕೆ ಆಗಮಿಸಿ, ಯುವತಿ ಶ್ಯಾಮಲ(20) ಜೊತೆ ಸೋಮವಾರ ಪರಾರಿಯಾಗಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಸ್ವಾಮೀಜಿ ಮೂಲತಃ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದವರು ಎನ್ನಲಾಗಿದ್ದು, ಯುವತಿ ನಾಪತ್ತೆಯಾಗಿರುವ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಗೆ ಯುವತಿಯ ಸೋದರ ಮಾವ ಶಂಕರ್ ದೂರು ನೀಡಿದ್ದಾರೆ.

ಜನವರಿ 15 ರಂದು ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಬಂದಿರುವ ಸ್ವಾಮೀಜಿ, ನಾನು ಇಲ್ಲಿಯೇ ಇದ್ದು ದೇವಾಲಯದ ಅಭಿವೃದ್ಧಿ ಜೊತೆಗೆ ಸೇವಾಶ್ರಮ ಮಾಡಿ ಪೀಠಾಧಿಪತಿಯಾಗಿ ಅಭಿವೃದ್ಧಿ ಮಾಡುತ್ತೇನೆ ಎಂಬುದಾಗಿ ನೀಡಿದ್ದ ಭರವಸೆಯನ್ನು ಗ್ರಾಮಸ್ಥರು ಒಪ್ಪಿಕೊಂಡಿದ್ದರು.

ನಂತರ ದೇವಾಲಯವನ್ನು ಗ್ರಾಮಸ್ಥರು ಅಭಿವೃದ್ಧಿ ಮಾಡಿ ಗಣ್ಯರೆಲ್ಲರನ್ನು ಕರೆಸಿ ಅದ್ಧೂರಿಯಾಗಿ ಜಾತ್ರೆ ಮಾಡಲಾಗಿತ್ತು. ನಂತರ ಫೆ.21 ರಂದು ಶಿವರಾತ್ರಿ ಹಬ್ಬವನ್ನೂ ಸಂಭ್ರಮದಿಂದ ಆಚರಿಸಲಾಗಿತ್ತು. ಇದಾದ ಬಳಿಕ ಕಳೆದ ಎರಡು ದಿನಗಳಿಂದ ಸ್ವಾಮೀಜಿ ಹಾಗೂ ಯುವತಿ ಕಣ್ಮರೆಯಾಗಿದ್ದಾರೆ.

ಯುವತಿ ನಾಪತ್ತೆಯಾಗಿರುವುದಕ್ಕೂ ಸ್ವಾಮೀಜಿ ಕಾಣೆಯಾಗಿರುವುದಕ್ಕೂ ಸಂಬಂಧ ಇದೆ ಎನ್ನಲಾಗಿದೆ. ಮಾತ್ರವಲ್ಲದೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಯುವತಿ ಸಂಬಂಧಿಕರು ದೂರು ದಾಖಲು ಮಾಡಿದ ನಂತರ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ಈ ವೇಳೆ ಸ್ವಾಮೀಜಿ ಯುವತಿಯನ್ನು ಮದುವೆಯಾಗಿರಬಹುದು ಎಂದು ಶಂಕಿಸಿದ್ದಾರೆ.

ಈ ಸಂಬಂಧ ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದು, 24 ಗಂಟೆಗಳಲ್ಲಿ ಪತ್ತೆ ಮಾಡುವ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *