ಎಸ್‍ಐಟಿಗೆ ಶಾಕ್ ನೀಡಿದ ಗೌರಿ ಲಂಕೇಶ್ ಹತ್ಯೆಯ ಶಂಕಿತ ಆರೋಪಿ ಹೊಟ್ಟೆ ಮಂಜ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್‍ನ ಶಂಕಿತ ಆರೋಪಿಯಾಗಿರುವ ನವೀನ್ ಅಲಿಯಾಸ್ ಹೊಟ್ಟೆ ಮಂಜ, ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದಾನೆ. ಹಾಗಾಗಿ ಅಹಮದಬಾದ್‍ಗೆ ಹೋಗಿದ್ದ ಪೊಲೀಸರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಆಗಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಈಗ ಯೂಟರ್ನ್ ಹೊಡೆದಿದ್ದಾನೆ. ವಿಚಾರಣೆ ವೇಳೆ ನವೀನ್, ನಾನು ಯಾವುದೇ ಮಂಪರು ಪರೀಕ್ಷೆಗೂ ಸಿದ್ಧ ಅಂತಾ ಕೋರ್ಟ್ ಮುಂದೆ ಒಪ್ಪಿಗೆ ನೀಡಿದ್ದನು. ಈ ಹಿನ್ನೆಲೆ ಎಸ್‍ಐಟಿ ಪೊಲೀಸರು ಮಂಪರು ಪರೀಕ್ಷೆಗೆ ಎಲ್ಲ ಸಿದ್ಧತೆ ಕೂಡ ನಡೆಸಿ, ಕಳೆದ 16 ರಂದು ಗುಜರಾತ್‍ನ ಅಹಮದಬಾದ್‍ಗೆ ಕರೆದುಕೊಂಡು ಹೋಗಿದ್ದರು.

ಅಹಮದಬಾದ್ ತಲುಪಿದ ಹೊಟ್ಟೆ ಮಂಜ, ಎಸ್‍ಐಟಿ ಪೊಲೀಸರ ಮುಂದೆ ಮತ್ತೆ ಹೈಡ್ರಾಮಾ ಶುರುಮಾಡಿದ್ದು, ಪೊಲೀಸರ ಒತ್ತಾಯಕ್ಕೆ ಮಣಿದು ನಾನು ಮಂಪರು ಪರೀಕ್ಷೆಗೆ ಒಪ್ಪಿದೆ ಹೊರತು ಸ್ವಇಚ್ಛೆಯಿಂದ ಒಪ್ಪಿಗೆ ನೀಡಿರಲಿಲ್ಲ ಅಂತಾ ಕ್ಯಾತೆ ತೆಗೆದಿದ್ದಾನೆ. ಬಳಿಕ ನವೀನ್‍ನನ್ನು ಒಪ್ಪಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜವಾಗದ ಹಿನ್ನೆಲೆ ಬಂದ ದಾರಿಗೆ ಸುಂಕವಿಲ್ಲ ಅಂತಾ ಆತನನ್ನು ಬೆಂಗಳೂರಿಗೆ ವಾಪಸ್ಸು ಕರೆದುಕೊಂಡು ಬಂದಿದ್ದಾರೆ.

ಪ್ರಕರಣ ಇನ್ನೇನು ಒಂದು ಹಂತಕ್ಕೆ ಬಂದು ತಲುಪಿದೆ ಅಂತಾ ನಿಟ್ಟಿಸಿರು ಬಿಟ್ಟಿದ್ದ ಎಸ್‍ಐಟಿ ಪೊಲೀಸರು ಮತ್ತೆ ತಲೆಬಿಸಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *