ವಿಭಿನ್ನವಾಗಿ ಹಸಿ ಮೇವು ಬೆಳೆಸಿ ಹೈನುಗಾರಿಕೆಯಲ್ಲಿ ಯಶಸ್ವಿಯಾದ್ರು ಚಿತ್ರದುರ್ಗದ ಸುರೇಶ್

ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಅನ್ನದಾತರ ದನ-ಕರುಗಳಿಗೆ ಒಣ ಮೇವು ಸಿಗೋದೇ ಕಷ್ಟ. ಇಂತಹ ಸಂದರ್ಭದಲ್ಲಿ ಪ್ರತಿ ನಿತ್ಯ ಜಾನುವಾರುಗಳಿಗೆ ವಿಭಿನ್ನ ರೀತಿಯಲ್ಲಿ ಹಸಿರು ಹುಲ್ಲು ನೀಡ್ತಾರೆ. ಅದೂ ಪೌಷ್ಠಿಕಾಂಶಯುಕ್ತ ಹುಲ್ಲು ಹಾಕ್ತಾರೆ ಚಿತ್ರದುರ್ಗದ ನಮ್ಮ ಪಬ್ಲಿಕ್ ಹೀರೋ.

ಹೌದು. ಜಾನುವಾರುಗಳನ್ನ ಮಾರಾಟ ಮಾಡ್ತಾ ಇರೋ ರೈತರ ನಡುವೆ ಸ್ವಯಂ ಆವಿಸ್ಕರಿಸಿದ ಮೇವಿನಿಂದ ಹೈನು ಕೃಷಿಯಲ್ಲಿ ಗುರುತಿಸಿಕೊಂಡಿದ್ದಾರೆ ಚಿತ್ರದುರ್ಗದ ಸುರೇಶ್. ಜಿಲ್ಲೆ ಇದೀಗ ರಣಮಳೆಗೆ ಸಾಕ್ಷಿಯಾಗಿದೆ. ಮೊದಲೇ ಬರದ ನಾಡು. ಬೇಸಿಗೆಯಲ್ಲಿ ಇಲ್ಲಿ ಜಾನುವಾರುಗಳಿಗೆ ಹಸಿಮೇವು ಸಿಗೋದು ಕಷ್ಟ. ಹೀಗಾಗಿ ಚಳ್ಳಕೆರೆ ತಾಲೂಕಿನ ಗೊರ್ಲಕಟ್ಟೆಯ ಸುರೇಶ್ ಹೊಸ ದಾರಿ ಕಂಡ್ಕೊಂಡಿದ್ದಾರೆ.

ಇವರು ಟ್ರೇಗಳಲ್ಲಿ ಮೇವು ಬೆಳೆಯುತ್ತಿದ್ದಾರೆ. ಮೊಳಕೆಯೊಡೆಸಿದ ಮೆಕ್ಕೆಜೋಳವನ್ನು ಟ್ರೇನಲ್ಲಿಟ್ಟು ಹೈಡ್ರೋಪೋನಿಕ್ಸ್ ಘಟಕದಲ್ಲಿ ಪೋಷಣೆ ಮಾಡಲಾಗುತ್ತದೆ. ಈ ವಿಧಾನದಲ್ಲಿ ನೀರು ಕಡಿಮೆ ಬೇಕಾಗುತ್ತದೆ. ಕೇವಲ 10 ದಿನಗಳಲ್ಲಿ ಹಸಿ ಮೇವು ಕೈಗೆ ಸಿಗುತ್ತದೆ. ಒಂದು ಟ್ರೇಯಿಂದ ಐದಾರು ಕೇಜಿ ಮೇವು ಉತ್ಪತ್ತಿಯಾಗುತ್ತದೆ. ಇದನ್ನ ಬೇರು ಸಮೇತ ಜಾನುವಾರುಗಳಿಗೆ ಹಾಕುತ್ತಾರೆ.

ಸುಮಾರು ನಾಲ್ಕೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ 16 ಯೂನಿಟ್ ಮಾಡಿ 1075 ಟ್ರೇಗಳಲ್ಲಿ ಹಸಿ ಮೇವು ಬೆಳೆಯುತ್ತಿರುವ ಸುರೇಶ್, ನೂರಕ್ಕೂ ಹೆಚ್ಚು ಹಸುಗಳಿಗೆ ಇದೇ ಮೇವನ್ನು ನೀಡ್ತಿದ್ದಾರೆ. ಹೈನುಗಾರಿಕೆಯಲ್ಲಿ ಯಶೋಮಾರ್ಗ ಹಿಡಿದಿದ್ದಾರೆ.

ಒಟ್ಟಿನಲ್ಲಿ ಸುರೇಶ್ ಕೇವಲ ಕೃಷಿಯಲ್ಲದೆ ಹೈನುಗಾರಿಕೆಯಿಂದಲೂ ಬರದ ನಾಡಿನಲ್ಲಿ ಉತ್ತಮ ಆದಾಯ ಪಡೀಬಹುದು ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ. ಇವರ ಮೇವು ಕೃಷಿ ಮೆಚ್ಚಲೆಬೇಕು ಎಂದು ಸ್ಥಳೀಯರು ಆಶೀಸುತ್ತಿದ್ದಾರೆ.

https://www.youtube.com/watch?v=2xfB8A-_3Q0

Comments

Leave a Reply

Your email address will not be published. Required fields are marked *