ಇದು ನಿಜವಾಗ್ಲೂ ಶಾಕಿಂಗ್ ಸುದ್ದಿ -ಫೋನ್ ಕದ್ದಾಲಿಕೆಯ ಬಗ್ಗೆ ಸುಮಲತಾ ಪ್ರತಿಕ್ರಿಯೆ

ಮಂಡ್ಯ: ಫೋನ್ ಕದ್ದಾಲಿಕೆ ಮಾಡುವುದು ಕ್ರಿಮಿನಲ್ ಎಂದು ಗೊತ್ತಿದ್ದರೂ ಮಾಡಿದ್ದಾರೆ. ಇದು ನಿಜವಾಗಲೂ ಶಾಕಿಂಗ್ ಸುದ್ದಿ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮಂಡ್ಯದ ಪಣಕನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅವರು, ಚುನಾವಣೆ ವೇಳೆ ನಾನು ಏನೇನು ದೂರು ಕೊಟ್ಟಿದ್ದೆನೋ ಅದರಲ್ಲಿ ಒಂದೊಂದೆ ಸತ್ಯ ಬೆಳಕಿಗೆ ಬರುತ್ತಿದೆ. ನಮಗೆ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಅನುಮಾನ ಇತ್ತು. ಆದರೆ ಯಾರು ಮಾಡಿದ್ದಾರೆ, ಏನು ಎಂದು ಗೊತ್ತಿಲ್ಲ. ಈಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ ಎಂದು ತಿಳಿದಿದೆ. ಸಿಬಿಐಗೆ ನೀಡಿರುವುದು ಒಳ್ಳೆಯ ಕೆಲಸ. ತನಿಖೆಯಿಂದ ಏನೇನು ವಿಚಾರ ಹೊರ ಬರುತ್ತದೆ ಎಂದು ನೋಡಬೇಕಿದೆ ಎಂದರು.

ಅವರು ಫೋನ್ ಕದ್ದಾಲಿಕೆ ಮಾಡಿದ್ದರೆ ಅದು ಅಪರಾಧವಾಗುತ್ತದೆ. ತಪ್ಪು ನಡೆದಿದೆ ಎಂದರೆ ನ್ಯಾಯ ಸಿಗಲೇಬೇಕು. ಇದು ನಿಜವಾಗಲೂ ಶಾಕಿಂಗ್ ಸುದ್ದಿ. ಈ ರೀತಿ ಫೋನ್ ಕದ್ದಾಲಿಕೆ ಮಾಡುವುದು ಕ್ರಿಮಿನಲ್ ಎಂದು ಗೊತ್ತಿದ್ದರೂ ಮಾಡಿದ್ದಾರೆ, ಇದು ನಿಜಕ್ಕೂ ತಪ್ಪು. ಈ ಸರ್ಕಾರ ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾನು ನೋಡಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

Comments

Leave a Reply

Your email address will not be published. Required fields are marked *