ಸಂಬಂಧಿಕರ ನಡುವೆಯೇ ಅಸಮಾಧಾನಕ್ಕೆ ಕಾರಣವಾಯ್ತು ಮಂಡ್ಯ ರಾಜಕೀಯ..!

ಮಂಡ್ಯ: ಮನೆಗೆ ಬಂದವರಿಗೆ ಸುಮಲತಾ ಒಂದು ಲೋಟ ನೀರು ಕೊಟ್ಟಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಹೇಳಿಕೆಗೆ ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯ ರಾಜಕೀಯ ಸಂಬಂಧಿಕರ ನಡುವೆ ಅಸಮಾಧಾನಕ್ಕೆ ಕಾರಣವಾಗಿದೆ.

ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಮತ್ತು ಅಂಬರೀಶ್ ಇಬ್ಬರು ಸಂಬಂಧಿಕರಾಗಬೇಕು. ಇಬ್ಬರೂ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದವರಾಗಿದ್ದಾರೆ. ಈಗ ತಮ್ಮಣ್ಣ ಹೇಳಿಕೆಗೆ ಡೊಡ್ಡರಸಿನಕೆರೆ ಗ್ರಾಮದ ಅಂಬಿ ಸಂಬಂಧಿಕರು ನಾವು ನೀವು ಎಲ್ಲ ಸಂಬಂಧಿಕರು ಎಂದು ಹೇಳಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಅಂಬರೀಶ್ ಮನೆಗೆ ಹೋದಾಗ ನಿಮಗೆ ನೀರು ಕೊಡದೆ ಊಟ ಕೊಡದೆ ಕಳುಹಿಸಿದ್ದಾರ..? ನಾವೆಲ್ಲ ಸಂಬಂಧಿಕರು, ಸಂಬಂಧವನ್ನು ಉಳಿಸಿಕೊಂಡು ಹೋಗಬೇಕು. ವಯಸ್ಸಾಯ್ತ ತಾಳ್ಮೆಯಿಂದ ಮಾತನಾಡಬೇಕು. ಗೆಲ್ಲೋದು ಸೋಲೋದು ಮುಖ್ಯವಲ್ಲ. ನಮ್ಮ ಅತ್ತಿಗೆ ಬಳಿ ಜನ ಬೆಂಬಲ ಇದೆ. ನೇರವಾಗಿ ಫೇಸ್ ಮಾಡಿ. ಚಿತ್ರರಂಗದವರನ್ನು ಕೆಟ್ಟದಾಗಿ ಮಾತನಾಡಬೇಕಾಗಿಲ್ಲ. ಯಾಕೆಂದರೆ ನಿಖಿಲ್, ಕುಮಾರಸ್ವಾಮಿ ಇಬ್ಬರು ಚಿತ್ರರಂಗದಿಂದ ಬಂದವರಾಗಿದ್ದಾರೆ. ನಮ್ಮ ಸಂಬಂಧಿಕರು ಎಂದು ನಾವು ನಿಮ್ಮ ಪರವಾಗಿ ಓಡಾಡಿದ್ದು ಎಂದು ಅಂಬರೀಶ್ ಚಿಕ್ಕಪ್ಪನ ಮಗ ಅಮರ್ ಕಿಡಿಕಾರಿದ್ದಾರೆ.

ತಂದೆ ಸಮಾನರಾದ ಡಿ.ಸಿ.ತಮಣ್ಣ ನೀವು ಸುಮಕ್ಕನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುತ್ತೀರಿ ಎಂದು ಅಂದುಕೊಂಡಿರಲಿಲ್ಲ. ಸುಮಕ್ಕ ನಿಮ್ಮ ಮಗಳ ಸಮಾನ. ತಪ್ಪು ಮಾಡಿದ್ದರೆ ತಿದ್ದಿ ಹೇಳಬೇಕಿತ್ತು. ನಮ್ಮ ಮನೆ ಸೇರಿದಂತೆ, ಎಷ್ಟು ಜನ ಸಚಿವರ ಮನೆಯಲ್ಲಿ ಅವರ ಹೆಂಡತಿಯರು ನೀರು, ಊಟ ಕೊಡುತ್ತಾರೆ. ಆಂಟಿ ಗೊತ್ತಿಲ್ಲದವರನ್ನು ಮಾತನಾಡಿಸುತ್ತಾರ..?. ಸಂಬಂಧದಲ್ಲಿ ನಾನು ನಿಮ್ಮ ಮಗಳಾಗಬೇಕು. ಸುಮಕ್ಕನೂ ನಿಮ್ಮ ಮಗಳಾಗಬೇಕು. ಅಪ್ಪನೇ ಮಗಳ ಬಗ್ಗೆ ಮಾತಾಡಿದರೆ ನೋವಾಗುತ್ತದೆ. ಕ್ಷಮೆ ಕೇಳಿದರೂ ನೋವನ್ನು ಮರೆಯಲು ಆಗಲ್ಲ. ಸಂಬಂಧ ಬೇರೆ, ಪಕ್ಷ ಬೇರೆ ಅದನ್ನು ತಿಳಿಯಿರಿ ಎಂದು ಅಂಬರೀಶ್ ಸಂಬಂಧಿ ವಸಂತ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *