ಮಂಡ್ಯದಲ್ಲಿ ಎಂಪಿ ಆಫೀಸ್ ಓಪನ್- ಇನ್ಮುಂದೆ ಕಚೇರಿಯಲ್ಲೇ ಸುಮಲತಾ ಅಹವಾಲು ಸ್ವೀಕಾರ

ಮಂಡ್ಯ: ಜಿಲ್ಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಕಚೇರಿಯನ್ನು ಇಂದು ಉದ್ಘಾಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಗೆ ಮೊದಲು ಪೂಜೆ ಮಾಡಿ ನಂತರ ಕಚೇರಿಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಇನ್ನು ಮುಂದೆ ಸುಮಲತಾ ಅವರು ತಮ್ಮ ಅಧಿಕೃತ ಕಚೇರಿಯಲ್ಲೇ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಒಳ್ಳೆಯ ದಿನ ಹೀಗಾಗಿ ನಾನು ಇಂದು ಕಚೇರಿ ಉದ್ಘಾಟನೆ ಮಾಡಿದ್ದೇನೆ. ಇದು ಅಂಬರೀಶ್ ಅವರು ಇದ್ದ ಕಚೇರಿಯಾಗಿದೆ. ಹೀಗಾಗಿ ಅಂಬರೀಶ್ ಅವರ ಆಫೀಸ್‍ನಲ್ಲಿ ಕೂರುವುದು ನನ್ನ ಭಾಗ್ಯವಾಗಿದೆ ಎಂದರು.

ಇದೇ ವೇಳೆ ಫೇಸ್ ಬುಕ್ ಫೇಕ್ ಅಕೌಂಟ್ ವಿಚಾರ ಪ್ರತಿಕ್ರಿಯಿಸಿ, ಇದು ಬೇಕು ಅಂತಾನೇ ಮಾಡುತ್ತಿದ್ದಾರೆ. ಒಂದಷ್ಟು ಫೇಸ್‍ಬುಕ್ ಖಾತೆಗಳನ್ನು ತೆಗೆಸಿದ್ದಾರೆ. ಆದರೆ ಒಂದನ್ನು ಮಾತ್ರ ತೆಗೆಸಲು ಸಾಧ್ಯವಾಗುತ್ತಿಲ್ಲ. ಇದು ಯಾರೋ ಪ್ರಭಾವಿಗಳು ಮಾಡಿಸುತ್ತಿದ್ದು, ರಾಜಕೀಯ ಡ್ಯಾಮೇಜ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಡಿಕೆ ಶಿವಕುಮಾರ್ ಅವರ ಪರ ಒಕ್ಕಲಿಗರು ಪ್ರತಿಭಟನೆ ಮಾಡುವ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದ ಸಂಸದೆ, ಉತ್ತರ ಕರ್ನಾಟಕಕ್ಕೆ ಕೇಂದ್ರದ ನೆರವು ವಿಚಾರ ಬಗ್ಗೆ ಗೊತ್ತಿಲ್ಲ. ಕೇಂದ್ರ ಏನೋ ಪ್ಯಾಕೇಜ್ ಮಾಡಿಕೊಂಡಿದೆ ಅಂತಿದ್ದರು. ಸರ್ಕಾರಿ ಪ್ರಕ್ರಿಯೆಗಳು ತಡವಾಗುತ್ತವೆ. ಹೀಗಾಗಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಜನರಿಗೆ ಪರಿಹಾರ ಸಿಗುತ್ತದೆ ಎಂದರು.

ಬೇರೆ ರಾಜ್ಯಕ್ಕೆ ಬೇಗ ನೆರವು ಕೊಡುವ ವಿಚಾರ ನನಗೆ ಗೊತ್ತಿಲ್ಲ. ಇದು ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಅದರ ಬಗ್ಗೆ ನನಗೆ ಐಡಿಯಾ ಇಲ್ಲ. ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಹುಮತ ಬಂದರೆ ಆದಷ್ಟು ಬೇಗ ರಾಜ್ಯದಲ್ಲಿ ಉಸ್ತುವಾರಿ ಸಚಿವರ ನೇಮಕ ಮಾಡುತ್ತಾರೆ. ಈಗ ಸ್ಪಲ್ಪ ತಡ ಆಗಿದೆ. ಬೇಗ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *