ಮಂಡ್ಯದಲ್ಲಿ ಮತಬಿತ್ತನೆಗೆ 100 ಕೋಟಿ ರೂ.!

ಮಂಡ್ಯ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಷ್ಟು ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ನಾಮಪತ್ರದ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈಗ ಮಂಡ್ಯ ರಣಕಣದಲ್ಲಿ ಮತಬಿತ್ತನೆಗೆ ಬರೋಬ್ಬರಿ ನೂರು ಕೋಟಿ ಸಿದ್ಧವಾಗಿದೆ ಎಂದು ಸುಮಲತಾ ಆರೋಪಿಸಿದ್ದಾರೆ.

ಈಗಾಗಲೇ ನೂರು ಕೋಟಿ ರೂಪಾಯಿ ಹಣ ಸಾಂಸ್ಕೃತಿಕ ನಗರಿ ತಲುಪಿದ್ದು, ಸಿಎಂ ಪುತ್ರ ನಿಖಿಲ್ ಗೆಲುವಿಗಾಗಿ ಮಂಡ್ಯದಲ್ಲಿ ನೂರು ಕೋಟಿ ಕಾಂಚಾಣ ಸದ್ದು ಮಾಡುತ್ತಿದೆ ಎಂದು ಚನಾವಣಾ ಆಯೋಗದ ಅಧಿಕಾರಿಗಳ ಬಳಿ ಸುಮಲತಾ ಅಂಬರೀಶ್ ಆತಂಕ ವ್ಯಕ್ತಪಡಿಸಿದ್ದಾರೆ.

ನೂರು ಕೋಟಿ ಹಣ ನೂರು ಅಡ್ಡದಾರಿಗಳ ಮೂಲಕ ಸಾಂಸ್ಕೃತಿಕ ನಗರಿ ತಲುಪಿದೆ. ದ್ರಾಕ್ಷಿ ಹಣ್ಣಿನ ಬುಟ್ಟಿಗಳಲ್ಲಿ ಮೈಸೂರಿಗೆ ಕೋಟಿ ಕೋಟಿ ಹಣ ಸಾಗಾಟ ಮಾಡಲಾಗಿದೆ. `ರೇಷ್ಮೆ’ ಗೂಡಿನ ಗಾಡಿಗಳ ಮೂಲಕ ರಾಮನಗರದ ಗಡಿ ದಾಟಿದೆ. ತುಮಕೂರು ಭಾಗಕ್ಕೆ ‘ಎಳನೀರು’ ಲಾರಿಗಳಲ್ಲಿ ಹಣವನ್ನು ಸಾಗಾಟ ಮಾಡಲಾಗಿದೆ. ಕೊನೆಯದಾಗಿ ಮಂಡ್ಯದಲ್ಲಿ ಕಬ್ಬಿನ ಲಾರಿ ಮತ್ತು ಬೆಲ್ಲದ ಲಾರಿಯಲ್ಲಿ ಹಣ ತಲುಪಿದೆ ಎಂದು ಸುಮಲತಾ ಬೆಂಬಲಿಗರು ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್ ಮತ್ತು ಸುಮಲತಾ ಬೆಂಬಲಿಗರ ಮಧ್ಯೆ ನಡೆದ ಮಾತುಕತೆಗಳು ಇದಕ್ಕೆ ಪೂರಕವಾಗಿದೆ. ಅಂದರೆ ಜೆಡಿಎಸ್ ಕಾರ್ಯಕರ್ತರು ಈ ಬಾರಿ 100 ಕೋಟಿ ಆದರೂ ಸಿಎಂ ಕುಮಾರಸ್ವಾಮಿ ಬಿಡಲ್ಲ ಎಂದು ಹೇಳಿದ್ದರು. ಹೀಗಾಗಿ ದ್ರಾಕ್ಷಿ ಹಣ್ಣಿನ ಬುಟ್ಟಿ, ಎಳನೀರು ಮೂಲಕ ಹಣ ಸಾಗಾಟ ಮಾಡುತ್ತಿದ್ದಾರೆ ಎಂಬ ಸುದ್ದಿ ಮಂಡ್ಯ ವಲಯದಲ್ಲಿ ಹರಿದಾಡುತ್ತಿದೆ.

Comments

Leave a Reply

Your email address will not be published. Required fields are marked *