ನಮ್ಮ ಶಿಕ್ಷಕರ ವಿರುದ್ಧ ಮಾತ್ನಾಡಬೇಡಿ- ಎಸ್‍ಡಿಎಂಸಿ ಸದಸ್ಯರಿಗೆ ವಿದ್ಯಾರ್ಥಿಗಳು ಕ್ಲಾಸ್

– ಶಾಲೆಯ ಗೋಡೆ ಮೇಲೆ ಅಸಹ್ಯವಾಗಿ ಚಿತ್ರ ಬಿಡಿಸ್ತಾರೆ
– ಶಿಕ್ಷಕರ ಬೆಂಬಲಕ್ಕೆ ನಿಂತ ವಿದ್ಯಾರ್ಥಿಗಳು

ಯಾದಗಿರಿ: ಶಿಕ್ಷಕರ ವಿರುದ್ಧ ದೂರಿ, ಶಾಲೆಗೆ ಬೀಗ ಹಾಕಲು ಬಂದಿದ್ದ ಎಸ್‍ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರಿಗೆ ವಿದ್ಯಾರ್ಥಿಗಳೇ ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ಯಾದಗಿರಿ ತಾಲೂಕಿನ ಚಾಮನ ಹಳ್ಳಿ ಗ್ರಾಮದ ನಡೆದಿದೆ.

ಚಾಮನ ಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ತಡವಾಗಿ ಬರುತ್ತಾರೆ. ಮುಖ್ಯಶಿಕ್ಷಕ ಆಶಪ್ಪ ಇಂದು ಶಾಲೆಗೆ ಬಂದಿಲ್ಲ. ಹೀಗಾದರೆ ವಿದ್ಯಾರ್ಥಿಗಳಿಗೆ ಪಾಠ ಮಾಡುವವರು ಯಾರು ಎಂದು ಆರೋಪಿಸಿ ಎಸ್‍ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದ್ದರು.

ತರಗತಿಗಳಿಗೆ ಬೀಗ ಹಾಕಲು ಮುಂದಾದವರನ್ನು ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿಯೇ ತಡೆದರು. ನಮ್ಮ ಸಮಸ್ಯೆಯನ್ನು ಕೇಳದ ನೀವು ಸುಮ್ಮನೆ ಕುಂಟು ನೆಪ ಹೇಳಿಕೊಂಡು ನಮ್ಮ ಶಿಕ್ಷಕರನ್ನು ದೂರುತ್ತಿದ್ದೀರಿ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಎಸ್‍ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಶಾಲೆಯಿಂದ ಹೊರ ನಡೆದಿದ್ದಾರೆ.

ಈ ವೇಳೆ ವಿದ್ಯಾರ್ಥಿಯೊಬ್ಬಳು ಗರಂ ಆಗಿ, ಶಿಕ್ಷಕ ವಿರುದ್ಧ ಮಾತನಾಡಲು ಮಾತ್ರ ನೀವು ಶಾಲೆಗೆ ಬರುತ್ತೀರಿ. ಸಂಪೂರ್ಣವಾಗಿ ಹಾಳಾಗಿದ್ದ ತರಗತಿಯಲ್ಲಿ ನಾವು ಕುಳಿತು ಪಾಠ ಕೇಳುತ್ತಿದ್ದಾಗ ಇಲ್ಲಿಗೆ ಬರಲಿಲ್ಲ. ನಮ್ಮ ಶಿಕ್ಷಕರು ಕಷ್ಟಪಟ್ಟು, ಅಧಿಕಾರಿಗಳಿಗೆ ಬೇಡಿಕೊಂಡು ತರಗತಿಗಳನ್ನು ನಿರ್ಮಿಸಿದ್ದಾರೆ. ಆದರೆ ಕೆಲವರು ಶಾಲೆಯ ಗೊಡೆಗಳ ಮೇಲೆ ಅಸಹ್ಯವಾಗಿ ಹೆಸರು ಬರೆಯುತ್ತಾರೆ ಹಾಗೂ ಚಿತ್ರ ಬಿಡಿಸುತ್ತಾರೆ ಎಂದು ಗುಡುಗಿದಳು.

ನಮ್ಮ ಸಮಸ್ಯೆಗಳಿಗೆ ನೀವು ಯಾವತ್ತೂ ಸ್ಪಂದಿಸಲಿಲ್ಲ. ಶಾಲೆಯ ಕುರಿತು ಕಾಳಜಿ ವಹಿಸಲಿಲ್ಲ. ಸಂಜೆಯಾದರೆ ಸಾಕು ಶಾಲೆಯ ಆವರಣದಲ್ಲಿ ಕುಡಿದು ಇಲ್ಲಿಯೇ ಬೀಯರ್, ಮದ್ಯದ ಬಾಟಲ್ ಎಸೆದು ಹೋಗಿರುತ್ತಾರೆ. ನಾವು ಬೆಳಗ್ಗೆ ಬಂದು ಎಲ್ಲವನ್ನೂ ಸ್ವಚ್ಛ ಮಾಡುತ್ತೇವೆ ಎಂದು ವಿದ್ಯಾರ್ಥಿನಿ ಅಸಮಾಧಾನ ಹೊರಹಾಕಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *