ವೈದ್ಯರ ಎಡವಟ್ಟಿನಿಂದ ಸಾವನ್ನಪ್ಪಿದ ಬೀದಿ ನಾಯಿ? – ಎಫ್‍ಐಆರ್ ದಾಖಲು

ಬೆಂಗಳೂರು: ಸಂತಾನಹರಣ ಶಸ್ತ್ರ ಚಿಕಿತ್ಸೆ ಬಳಿಕ ನಾಯಿಯೊಂದು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ಎನ್‍ಜಿಓ ವಿರುದ್ಧ ದೂರು ದಾಖಲಿಸಿರುವ ಘಟನೆ ನಗರದ ಬೈಯ್ಯಪ್ಪನಹಳ್ಳಿಯಲ್ಲಿ ನಡೆದಿದೆ.

ಬೈಯಪ್ಪನಹಳ್ಳಿಯ ವ್ಯಾಪ್ತಿಯ ರಸ್ತೆಯಲ್ಲಿದ್ದ ಜೂಲಿ ಹೆಸರಿನ ಬೀದಿ ನಾಯಿಯನ್ನು ಸಂತಾನಹರಣಕ್ಕಾಗಿ ಕರೆದುಕೊಂಡು ಹೋಗಲಾಗಿತ್ತು. ಆದರೆ ವೈದ್ಯರ ಚಿಕಿತ್ಸೆ ಬಳಿಕ 7 ತಿಂಗಳ ನಾಯಿ ಸಾವನ್ನಪ್ಪಿದ್ದು, ನಾಯಿ ವೈದ್ಯರ ಎಡವಟ್ಟಿನಿಂದ ಸಾವನ್ನಪ್ಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಈ ಸಂಬಂಧ ದೂರು ನೀಡಿದ್ದಾರೆ.

ಚಿಕಿತ್ಸೆಗೆಂದು ನಾಯಿಯನ್ನ ಕರೆದುಕೊಂಡು ಹೋಗಿದ್ದ ಸುಷ್ಮಾ ಎಂಟರ್ ಪ್ರೈಸಸ್ ಎನ್‍ಜಿಓದ ಅರುಣಾ ರೆಡ್ಡಿ ಮತ್ತು ಶಸ್ತ್ರ ಚಿಕಿತ್ಸೆ ನಡೆಸಿದ್ದ ಡಾಕ್ಟರ್ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿ ನವೀನ್ ಕಾಮತ್ ಎಂಬವರು ದೂರು ನೀಡಿದ್ದಾರೆ.

ನಾಯಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕ ಅದನ್ನು ತೆಗೆದುಕೊಂಡು ಹೋಗಿದ್ದ ಸ್ಥಳದಲ್ಲೇ ಬಿಡಲಾಗಿತ್ತು. ಆದರೆ ಶಸ್ತ್ರ ಚಿಕಿತ್ಸೆ ಆದ ಜಾಗದಲ್ಲಿ ನಾಯಿಯ ದೇಹದಿಂದ ದ್ರವರೂಪದಲ್ಲಿ ಸ್ರಾವ ಆರಂಭವಾಗಿತ್ತು. ಅಂತಿಮವಾಗಿ ನಾಯಿ ಸಾವನ್ನಪ್ಪಿದ್ದು, ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪ್ರಾಣಿ ಹಿಂಸೆ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *