ಕುರಿಗಾಹಿ ಮೇಲೆ ಹಲ್ಲೆ ನಡೆಸಿ ಕುರಿ ಕದ್ದ ಖದೀಮರು

ಗದಗ: ರೋಣ ತಾಲೂಕಿನ ಅಸೂಟಿ ಹೊರ ವಲಯದಲ್ಲಿ ಕುರಿಗಾಹಿ ಮೇಲೆ ಹಲ್ಲೆ ನಡೆಸಿ ಕುರಿ ಕಳ್ಳತನ ಮಾಡಿರೋ ಘಟನೆ ನಡೆದಿದೆ.

ರೋಣದ ಬಸಪ್ಪ ಹುಡೇದ್ ಕುಟುಂಬಕ್ಕೆ ಸೇರಿದ 190 ಕ್ಕೂ ಹೆಚ್ಚು ಕುರಿಗಳನ್ನ ಅಸೂಟಿ ಗ್ರಾಮದ ಬಳಿ ಜಮೀನಲ್ಲಿ ನಿಲ್ಲಿಸಲಾಗಿತ್ತು. ಇದನ್ನ ಗಮನಿಸಿದ್ದ ಐವರು ದುಷ್ಕರ್ಮಿಗಳು ರಾತ್ರಿ ಕಳ್ಳತನಕ್ಕೆ ಹೊಂಚು ಹಾಕಿ ತಡರಾತ್ರಿ ವೇಳೆ ಮುಸುಕು ಧರಿಸಿ ಕುರಿ ದೊಡ್ಡಿಗೆ ನುಗ್ಗಿದ್ದಾರೆ. ಇದನ್ನೂ ಓದಿ: ನಾನೇ ಮುಖ್ಯಮಂತ್ರಿಯಾಗಿದ್ರೂ ಕಾಲಮಿತಿಯಲ್ಲಿ ಮೀಸಲಾತಿ ತರಲಾಗುವುದಿಲ್ಲ: ಸಿ.ಸಿ.ಪಾಟೀಲ್

ದೊಡ್ಡಿ ಬಳಿ ಮಲಗಿದ್ದ ಕುರಿಗಾಹಿ 14 ವರ್ಷದ ಮುತ್ತಪ್ಪ ಹುಡೇದ್ ಅನ್ನೋ ಬಾಲಕನ ಕೈ ಕಾಲು ಕಟ್ಟಿ ಹಾಕಿದ್ದಾರೆ. ಈ ವೇಳೆ ಬಾಲಕನ ಜೊತೆಗಿದ್ದ ಮಂಜಪ್ಪ, ಪರಪ್ಪ ಅನ್ನೋರನ್ನ ಸ್ಥಳದಿಂದ ಓಡಿಸಿದ್ದಾರೆ. ನಂತರ 50 ಕ್ಕೂ ಹೆಚ್ಚು ಕುರಿಗಳನ್ನ ತಾವು ತಂದಿದ್ದ ವಾಹನದಲ್ಲಿ ಲೋಡ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಭಾರತೀಯ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿ: ಬೊಮ್ಮಾಯಿ

ಕುರಿಗಾಹಿ ಬಾಲಕನ್ನ ಕೈ ಕಾಲು ಕಟ್ಟಿ, ಬಾಯಲ್ಲಿ ಮಣ್ಣು ತುಂಬಿ ವಿಕೃತಿ ಮೆರೆದಿದ್ದಾರೆ. ಸದ್ಯ ಗಾಯಾಳು ಬಾಲಕನನ್ನು ರೋಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿ ಕಳ್ಳತನ ಮಾಡಿರೋ ಖದೀಮರನ್ನ ಅರೆಸ್ಟ್ ಮಾಡಬೇಕು ಅಂತಾ ಕುರಿಗಾಹಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುರಿಗಳ ಖದೀಮರಿಗಾಗಿ ರೋಣ ಪೊಲೀಸರು ಬಲೆ ಬೀಸಿದ್ದಾರೆ.

 

Comments

Leave a Reply

Your email address will not be published. Required fields are marked *