ಮಾಜಿ ಸಚಿವ ಅಂಬರೀಶ್‍ಗೆ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ!

ಬೆಂಗಳೂರು: ಮಾಜಿ ಸಚಿವ ಅಂಬರೀಶ್ ಅವರ ವರ್ತನೆಗೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಾತಿಗೂ ಸಿಗದೆ, ತಮ್ಮ ಅಭಿಪ್ರಾಯವನ್ನು ತಿಳಿಸದೆ ಸತಾಯಿಸುತ್ತಿರುವ ಅಂಬರೀಶ್ ವರ್ತನೆಯಿಂದ ಬೇಸತ್ತ ಕೆಪಿಸಿಸಿ ನಾಯಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರನ್ನ ಸಂಪರ್ಕ ಮಾಡಿದ ಕೆ.ಸಿ.ವೇಣುಗೋಪಾಲ್ ಭಾನುವಾರ ಸಂಜೆ ಒಳಗೆ ತಮ್ಮ ನಿರ್ಧಾರ ತಿಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಗೆ ಕಗ್ಗಂಟಾದ ಅಂಬರೀಶ್ ಮೌನ- `ಕೈ’ ಬಿಡ್ತಾರಾ ಮಂಡ್ಯದ ಗಂಡು!

ಮಂಡ್ಯದಿಂದ ಸ್ಪರ್ಧೆ ಮಾಡುವುದಾದರೆ ಪಕ್ಷ ನಿಮಗೆ ಟಿಕೆಟ್ ನೀಡಲಿದೆ. ತಮಗೆ ಇಷ್ಟ ಇಲ್ಲದಿದ್ದರೆ ಬೇರೆ ಅಭ್ಯರ್ಥಿ ಆಯ್ಕೆಯನ್ನು ಪಕ್ಷ ಮಾಡಲಿದೆ. ಏಪ್ರಿಲ್ 9 ರಂದು ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿಯ ಕೊನೆಯ ಸಭೆ ನಡೆಯಲಿದೆ. ಅಷ್ಟರೊಳಗೆ ನಿಮ್ಮ ನಿರ್ಧಾರ ನಮಗೆ ತಿಳಿಸಿ. ನಿಮ್ಮ ಬದಲಿಗೆ ನೀವು ಸೂಚಿಸುವ ನಿಮ್ಮ ಆಪ್ತರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ. ನಿಮ್ಮನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್ ನೀಡುವುದಾದರು ಜಿಲ್ಲೆಯ ಪಕ್ಷದ ಮುಖಂಡರುಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತೆ. ಆದ್ದರಿಂದ ತಮ್ಮ ಅಭಿಪ್ರಾಯವನ್ನ ನೇರವಾಗಿ ನನ್ನ ಬಳಿಯೆ ಹಂಚಿಕೊಳ್ಳಿ ಅಂತ ವೇಣುಗೋಪಾಲ್ ತಿಳಿಸಿದ್ದಾರೆಂದು ಹೇಳಲಾಗಿದೆ.

ಭಾನುವಾರ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಅವರ ಬೃಹತ್ ಸಮಾವೇಶವಿದೆ. ಎರಡು ದಿನಗಳ ಕಾಲ ನಾನು ಬೆಂಗಳೂರಿನಲ್ಲಿ ಇರುತ್ತೇನೆ. ತಮ್ಮದು ಏನೇ ಅಭಿಪ್ರಾಯ ಇದ್ದರೂ, ಬಂದು ನನ್ನೊಂದಿಗೆ ಚರ್ಚಿಸಿ, ತೀರ್ಮಾನ ತಿಳಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದು, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರಿಗೂ ಮಂಡ್ಯ ಜಿಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *