ಕಾಂಗ್ರೆಸ್ ಹಿರಿಯ ನಾಯಕರ ಚಿತ್ತ ಹೈಕಮಾಂಡ್ ನತ್ತ

ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಆರ್. ಪಾಟೀಲ್ ರಾಜೀನಾಮೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಎಸ್.ಆರ್. ಪಾಟೀಲ್ ರಾಜೀನಾಮೆ ಬಳಿಕ ಪಕ್ಷದ ಹಿರಿಯ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತೋ, ಇಲ್ಲವೋ ಎಂಬ ಚಿಂತೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯ ನಾಯಕರಿಗೆ ಬಹುತೇಕ ಸಚಿವ ಸ್ಥಾನ ಸಿಗೋದು ಅನುಮಾನ ಅಂತಾ ಹೇಳಲಾಗುತ್ತಿತ್ತು. ಇದೀಗ ರಾಮಲಿಂಗರೆಡ್ಡಿ, ಆರ್.ವಿ.ದೇಶಪಾಂಡೆ ಹಾಗೂ ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಅವರಿಗೆ ಈ ಬಾರಿ ಸಂಪುಟ ಸ್ಥಾನ ಕೈ ತಪ್ಪೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. 5 ವರ್ಷ ಸಚಿವರಾಗಿ ಕೆಲಸ ಮಾಡಿದ್ದ ನಾಯಕರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಬೇಡ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿ ಎಂದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆಯಂತೆ.

ಇತ್ತ ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ರೋಷನ್ ಬೇಗ್, ಯು.ಟಿ.ಖಾದರ್ ಕೂಡ ಸ್ವಲ್ಪಮಟ್ಟಿಗಿನ ಆತಂಕದಲ್ಲೇ ಹೈಕಮಾಂಡ್ ನತ್ತ ನೋಡುವಂತಾಗಿದೆ. ಯು.ಟಿ.ಖಾದರ್ ಸ್ಥಾನದಲ್ಲಿ ಜಮೀರ್ ಅಹಮದ್ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಒಂದು ಕಡೆ ರೋಷನ್ ಬೇಗ್ ಬದಲಾಗಿ ಶಾಂತಿ ನಗರದ ಶಾಸಕ ಎನ್.ಎ.ಹ್ಯಾರಿಸ್‍ಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಹೈಕಮಾಂಡ್ ಮಟ್ಟದಲ್ಲಿ ಲಾಬಿಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಒಂದು ವೇಳೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಗೆ ಸಚಿವ ಸ್ಥಾನ ಕೈ ತಪ್ಪಿದ್ರೆ, ಅದು ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ್ ಕೈ ವಶವಾಗುವ ಸಾಧ್ಯತೆಗಳಿವೆ. ಇತ್ತ ಈಶ್ವರ್ ಖಂಡ್ರೆ ಅವರಿಗೆ ಸಂಪುಟದಿಂದ ಹೊರ ಬಂದ್ರೆ, ರಾಜಶೇಖರ್ ಪಾಟೀಲ್ ಸಚಿವರಾಗುವ ಸಾಧ್ಯತೆಗಳಿವೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *