ವಿದ್ಯಾರ್ಥಿಯಾಗಿದ್ದಾಗ ಪ್ರತಿಭಟನೆ – 10 ದಿನ ತಿಹಾರ್ ಜೈಲು ಸೇರಿದ್ದ ಅಭಿಜಿತ್ ಬ್ಯಾನರ್ಜಿ

ನವದೆಹಲಿ: ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ಅಭಿಜಿತ್ ಬ್ಯಾನರ್ಜಿ ಅ ವಿದ್ಯಾರ್ಥಿಯಾಗಿದ್ದಾಗ ತಿಹಾರ್ ಜೈಲಿನಲ್ಲಿ 10 ದಿನ ಕಳೆದಿದ್ದರು.

ಹೌದು. ದೆಹಲಿಯ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪ್ರತಿಭಟನೆ ನಡೆಸಿದ್ದಕ್ಕೆ ಅಭಿಜಿತ್ ಬ್ಯಾನರ್ಜಿ ತಿಹಾರ್ ಜೈಲ್ ಸೇರಿದ್ದರು.

ಈ ಸಂಬಂಧ ಪತ್ರಿಕೆಗೆ ಲೇಖನ ಬರೆದಿದ್ದ ಅವರು, 1983 ರಲ್ಲಿ ವಿದ್ಯಾರ್ಥಿ ಸಂಘದ ನಾಯಕನನ್ನು ಡಿಬಾರ್ ಮಾಡಿದ್ದನ್ನು ಖಂಡಿಸಿ ವಿಶ್ವವಿದ್ಯಾಲಯದ ಉಪಕುಲಪತಿಗಳ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದೆವು. ಈ ವೇಳೆ ನಮ್ಮ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿರಲಿಲ್ಲ. ಕೊಲೆ ಯತ್ನ ಮತ್ತು ದೊಂಬಿ ಪ್ರಕರಣವನ್ನು ದಾಖಲಿಸಿ ಪೊಲೀಸರು ತಿಹಾರ್ ಜೈಲಿಗೆ ಕಳುಹಿಸಿದ್ದರು ಎಂದು ಬರೆದುಕೊಂಡಿದ್ದರು.

ಕೇಂದ್ರದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ್ತು ಎಡಪಂಥಿಯ ಒಲವಿನ ಪ್ರಾಧ್ಯಾಪಕರಿಂದಾಗಿ ನಮ್ಮ ಮೇಲೆ ಪೊಲೀಸರು ಕ್ರಮವನ್ನು ಕೈಗೊಂಡಿದ್ದರು. ಈ ವೇಳೆ ಪೊಲೀಸರು ನಮ್ಮ ಮೇಲೆ ಹೊಡೆದಿದ್ದರು. 10 ದಿನಗಳ ನಂತರ ನಮ್ಮನ್ನು ಬಿಡುಗಡೆ ಮಾಡಲಾಯಿತು. ಆದರೆ ನಮ್ಮ ವಿರುದ್ಧ ದಾಖಲಾದ ಪ್ರಕರಣಗಳು ಯಾವುದು ಸಾಬೀತಾಗಲಿಲ್ಲ ಎಂದು ಉಲ್ಲೇಖಿಸಿದ್ದರು.

ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡುಫ್ಲೋ ಅವರಿಬ್ಬರಿಗೆ ಈ ಬಾರಿಯ ಅರ್ಥಶಾಸ್ತ್ರ ವಿಭಾಗದಲ್ಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ. ಈ ದಂಪತಿ ಜೊತೆ ಮೈಕೆಲ್ ಕ್ರೇಮರ್ ಅವರೂ ಸಹ ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಪತಿ ಪತ್ನಿಯರಿಬ್ಬರೂ ಪಡೆದುಕೊಳ್ಳುವುದು ಒಂದು ವಿಶೇಷ. ಅದರಲ್ಲೂ ನೊಬೆಲ್ ನಂತಹ ಮಹೋನ್ನತ ಪ್ರಶಸ್ತಿಯನ್ನು ಒಂದೇ ವಿಷಯದ ಮೇಲೆ ಒಂದೇ ಬಾರಿಗೆಅಭಿಜಿತ್ ದಂಪತಿ ಪಡೆದುಕೊಂಡಿರುವುದು ವಿಶೇಷ ಎನಿಸಿಕೊಂಡಿದೆ.

‘ಜಾಗತಿಕ ಬಡತನವನ್ನು ಹೋಗಲಾಡಿಸುವ ಕುರಿತ ಪ್ರಾಯೋಗಿಕ ವಿಧಾನ’ಕ್ಕಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. 58 ವರ್ಷದ ಬ್ಯಾನರ್ಜಿ ಕೋಲ್ಕತಾ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *