ಸರ್ಕಾರಿ ಕಚೇರಿಯಲ್ಲಿ ಸಿಬ್ಬಂದಿ ಗುಂಡು-ತುಂಡಿನ ಭರ್ಜರಿ ಪಾರ್ಟಿ

– ಪೊಲೀಸ್ ಬರುತ್ತಿದ್ದಂತೆ ಕಚೇರಿಗೆ ಬೀಗ ಹಾಕಿ ಪರಾರಿ

ಗದಗ: ಗದಗ ನಗರದ ಎಪಿಎಂಸಿ ಯಾರ್ಡ್ ನಲ್ಲಿರುವ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ “ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿ”ಯ ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಏಜೆಂಟ್ ಇಬ್ಬರು ಸೇರಿಕೊಂಡು ಭರ್ಜರಿ ಎಣ್ಣೆ ಪಾರ್ಟಿ ನಡೆಸಿದ್ದಾರೆ.

ಈ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಸಿಬ್ಬಂದಿಗಳಾದ ಅಶೋಕ್ ಮತ್ತು ಏಜೆಂಟರಾದ ವಿಶ್ವನಾಥ್ ಗುಂಡು-ತುಂಡಿನ ಜೊತೆಯಲ್ಲಿ ತಲ್ಲೀನರಾಗಿದ್ದರು. ಸರ್ಕಾರಿ ಕೆಲಸ ಅಂದರೆ ದೇವರ ಕೆಲಸ ಅಂತಾರೆ. ಆದರೆ ಈ ಸಿಬ್ಬಂದಿ ಅನ್ನ ಕೊಡುವ ಕಚೇರಿಯನ್ನ ಬಾರ್ ಮಾಡಿಕೊಂಡಿದ್ದಾರೆ. ಈ ಇಬ್ಬರು ಸಿಬ್ಬಂದಿ, ಎಜೆಂಟ್ ಅನೇಕ ದಿನಗಳಿಂದ ಇದೇ ರೀತಿ ಪಾರ್ಟಿ ಮಾಡಿಕೊಂಡು ಬಂದಿದ್ದಾರೆ ಎನ್ನುವ ವಿಚಾರ ಕೂಡ ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೆ ಕೆಲವು ಬಾರಿ ಹಾಡಹಗಲೇ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡುವ ಮೂಲಕ ಮೋಜು ಮಸ್ತಿಗೆ ಮುಳುಗುತ್ತಿದ್ದರು ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಕಚೇರಿಯಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಗೆ ಗದಗದ ಬಡಾವಣೆ ಠಾಣೆ ಪೋಲಿಸರು ಬಂದಾಗ ಇವರಿಬ್ಬರು ಕಂಗಾಲಾದರು. ಈ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿಯುವ ವೇಳೆ ಈ ಸಿಬ್ಬಂದಿ, ಎಜೆಂಟ್ ಅಡ್ಡಿಪಡಿಸಿದರು. ಅಲ್ಲದೆ ಕಚೇರಿಗೆ ಬೀಗ ಹಾಕಿ ಇಬ್ಬರೂ ಸ್ಥಳದಿಂದಲೇ ಪರಾರಿಯಾದರು. ಆದ್ದರಿಂದ ಗದಗ ಬೆಟಗೇರಿ ಬಡಾವಣೆ ಪೊಲೀಸರು ಇವರಿಬ್ಬರ ಮೇಲೆ ಈಗ ಹದ್ದಿನ ಕಣ್ಣಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *