ಬಾಗಲಕೋಟೆ ಆದರ್ಶ ಶಾಲೆಯ 35 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ

ಬೆಂಗಳೂರು: ಬಾಗಲಕೋಟೆ ಸರ್ಕಾರಿ ಆದರ್ಶ ಮಹಾವಿದ್ಯಾಲಯ 35 ವಿದ್ಯಾರ್ಥಿಗಳ ಫಲಿತಾಂಶ ಇಂದು ಪ್ರಕಟಿಸಿದ್ದೇವೆ ಎಂದು ಎಸ್‍ಎಸ್‍ಎಲ್‍ಸಿ ಬೋರ್ಡ್ ನಿರ್ದೇಶಕಿ ಸುಮಂಗಲ ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಬಾಗಲಕೋಟೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ಬಂದಿತ್ತು. ಹೀಗಾಗಿ ಅಲ್ಲಿನ 35 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿರಲಿಲ್ಲ. ಹೀಗಾಗಿ ಆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಬೋರ್ಡ್ ನಲ್ಲಿ ಮೌಲ್ಯ ಮಾಪನ ಮಾಡಲಾಗಿದ್ದು, ಫಲಿತಾಂಶವನ್ನು ತಡೆ ಹಿಡಿಯಲಾಗಿತ್ತು. ಈಗ ಗೊಂದಲ ನಿವಾರಣೆಯಾಗಿದ್ದು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿದ್ದೇವೆ ಎಂದು ತಿಳಿಸಿದ್ದಾರೆ.

ಬಾಗಲಕೋಟೆ ಸರ್ಕಾರಿ ಆದರ್ಶ ಮಹಾವಿದ್ಯಾಲಯ ಶಾಲೆಯ ಒಟ್ಟು 56 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳಿಗೆ ಫಲಿತಾಂಶ ಬಂದಿರಲಿಲ್ಲ. ಇತ್ತ ವೆಬ್‍ಸೈಟ್‍ನಲ್ಲಿಯೂ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಕ್ಕಿರಲಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಶಾಲೆಯ ಪ್ರಾಂಶುಪಾಲರನ್ನು ಕೇಳಿದ್ದಾಗ ಅವರು, ವೆಬ್‍ಸೈಟ್‍ನಲ್ಲಿ ಏನೋ ತೊಂದರೆ ಆಗಿದೆ. ನಾನು ಅವರ ಬಳಿ ಮಾತನಾಡಿದ್ದೇನೆ. ಶೀಘ್ರದಲ್ಲೇ ಫಲಿತಾಂಶ ಬರಲಿದೆ ಎಂದು ಹೇಳಿದ್ದರು.

ಮಾರ್ಚ್ 21 ರಿಂದ ಏಪ್ರಿಲ್ 24ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು. ರಾಜ್ಯಾದ್ಯಂತ 2,847 ಕೇಂದ್ರಗಳಲ್ಲಿ ಒಟ್ಟು 8.41 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ರಾಜ್ಯಾದ್ಯಂತ 2,857 ಪರೀಕ್ಷೆ ಕೇಂದ್ರಗಳಲ್ಲಿ, 46 ಸೂಕ್ಷ್ಮ ಕೇಂದ್ರಗಳು ಮತ್ತು 7 ಅತಿ ಸೂಕ್ಷ್ಮ ಕೇಂದ್ರಗಳ ಎಂದು ವಿಂಗಡಿಸಲಾಗಿತ್ತು.

Comments

Leave a Reply

Your email address will not be published. Required fields are marked *