SSLC ಪರೀಕ್ಷಾ ಕೇಂದ್ರದ ಮುಂದೆ ಜನಸಂದಣಿ- ಪೊಲೀಸರಿಂದ ಲಾಠಿಚಾರ್ಜ್

ರಾಯಚೂರು: ನಗರದ ಬಾಲಕಿಯರ ಪ್ರೌಢ ಶಾಲೆ ಮುಂದೆ ಜಮಾಯಿಸಿದ ಪೋಷಕರು ಹಾಗೂ ಸಾರ್ವಜನಿಕರನ್ನ ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.

ಸಾಮಾಜಿಕ ಅಂತರವನ್ನ ಮರೆತು ಮಾಸ್ಕ್ ಸಹ ಧರಿಸದೇ ಪರೀಕ್ಷಾ ಕೇಂದ್ರದ ಮುಂದೆ ಜನ ಗುಂಪು ಗುಂಪಾಗಿ ಜಮಾಯಿಸಿದ್ದರು. ಪೊಲೀಸರು ಸೂಚನೆ ನೀಡಿದ್ರೂ ಪರೀಕ್ಷಾ ಕೇಂದ್ರ ಬಿಟ್ಟು ಹೋಗಲು ಪೋಷಕರು ಹಿಂದೇಟು ಹಾಕಿದ್ದರು. ಹೀಗಾಗಿ ಪೋಷಕರನ್ನ ಚದುರಿಸಲು ಪೊಲೀಸರು ಲಾಠಿ ಬಿಸಿದರು.

ಪರೀಕ್ಷೆ ಹಿನ್ನೆಲೆ ಅಧಿಕಾರಿಗಳು ಸಿಬ್ಬಂದಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದರು ವಿದ್ಯಾರ್ಥಿಗಳು, ಪೋಷಕರು ಮಾತ್ರ ಮಾಸ್ಕ್ ಸಹ ಧರಿಸದೇ ಪರೀಕ್ಷಾ ಕೇಂದ್ರದ ಬಳಿ ಬಂದಿದ್ದರು. ಹೀಗಾಗಿ ಪರೀಕ್ಷಾ ಕೆಂದ್ರದಲ್ಲಿ ಮಾಸ್ಕ್ ಗಳನ್ನ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ರಾಯಚೂರಿನ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ವೇಳೆ ಕೆಟ್ಟು ಹೋದ ಥರ್ಮಲ್ ಸ್ಕ್ಯಾನರ್ ಕೆಲಕಾಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಗೊಂದಲಕ್ಕೀಡು ಮಾಡಿತ್ತು. ಎಂಟು ವಿದ್ಯಾರ್ಥಿಗಳನ್ನ ಪ್ರತ್ಯೇಕವಾಗಿ ನಿಲ್ಲಿಸಿದ ಆರೋಗ್ಯ ಸಿಬ್ಬಂದಿ ಪುನಃ ಹೊಸ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಿದರು.

Comments

Leave a Reply

Your email address will not be published. Required fields are marked *