ಶೃತಿ ಹರಿಹರನ್ ಹೇಳಿಕೆಗೆ ನಿರ್ಬಂಧ ಕೋರಿ ಸರ್ಜಾ ಅರ್ಜಿ-ಇಂದು ಕೋರ್ಟ್ ನಲ್ಲಿ ವಿಚಾರಣೆ

ಬೆಂಗಳೂರು: ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಈಗ ತಿಕ್ಕಾಟಕ್ಕೆ ಶುರು ಮಾಡಿಕೊಟ್ಟಿದೆ. ಶೃತಿ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದು, ಇಂದು ವಿಚಾರಣೆ ನಡೆದು ಮಧ್ಯಂತರ ಆದೇಶ ಪ್ರಕಟವಾಗಲಿದೆ. ಇತ್ತ ಸೋಮವಾರ ಗೈರಾಗಿದ್ದ ನಾಲ್ವರು ಇಂದು ಸಾಕ್ಷಿ ನುಡಿಯಲಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಲೈಂಗಿಕ ದೌರ್ಜನ್ಯ ದೂರು ನೀಡಿ ಮೂರು ದಿನಗಳೆ ಕಳೆದು ಹೋಗಿದೆ. ಕಬ್ಬನ್ ಪಾರ್ಕ್ ಪೊಲೀಸರು ಕೂಡಾ ಜೋರಾಗಿಯೇ ತನಿಖೆ ಆರಂಭಿಸಿದ್ದು, 2 ವರ್ಷದ ಹಳೆಯ ಪ್ರಕರಣವಾಗಿರೋದ್ರಿಂದ ಸಾಕ್ಷ್ಯ ಕಲೆಹಾಕೋಕೆ ಯತ್ನಿಸುತ್ತಿದ್ದಾರೆ. ಇದೇ ವಿಚಾರವಾಗಿ ಮೆಯೋಹಾಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಶೃತಿ ಶೂಟಿಂಗ್‍ಗಾಗಿ ಚೆನ್ನೈಗೆ ತೆರಳಿದ್ದು, ಹೇಳಿಕೆ ದಾಖಲಿಸಲು ಸಮಯಾವಕಾಶ ಕೋರಿದ್ದಾರೆ. ಹಾಗಾಗಿ ಮತ್ತೆ ವಿಚಾರಣೆ ಇಂದು ನಡೆಯಲಿದೆ. ಶೃತಿ ಹರಿಹರನ್ ಸಲ್ಲಿಸಿರುವ ಲಿಖಿತ ಆಕ್ಷೇಪಣೆ ಮೇಲೆ ಇವತ್ತು ಮೆಯೋಹಾಲ್ ನಂಬರ್ 22ರಲ್ಲಿ ವಿಚಾರಣೆ ನಡೆಯಲಿದೆ.

 

ಅರ್ಜುನ್ ಸರ್ಜಾ ದೊಡ್ಡ ತಪ್ಪು ಮಾಡಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಆರೋಪಗಳೆಲ್ಲ ನಿಜ. ಇಷ್ಟು ದಿನ ಸಹಿಸಿಕೊಂಡಿದ್ದೆ. ಈಗ ಸಿಡಿದೇಳುವ ಕಾಲ ಬಂದಿದೆ, ಹಾಗಾಗಿ ಸಿಡಿದಿದ್ದೇನೆ. ನನ್ನ ವಾಕ್ ಸ್ವಾತಂತ್ರ್ಯವನ್ನ ಹತ್ತಿಕ್ಕಬೇಡಿ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಹೀಗಾಗಿ ಅರ್ಜುನ್ ಸರ್ಜಾ ಅರ್ಜಿಯನ್ನು ವಜಾಗೊಳಿಸಿ ಅಂತಾ ಶೃತಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಇತ್ತ ನಾಲ್ವರು ಸಾಕ್ಷಿಗಳಿಗೆ ನೋಟಿಸ್ ನೀಡಿದ್ದು, ಯಾರೊಬ್ಬರೂ ಕೂಡ ವಿಚಾರಣೆಗೆ ಬಂದಿಲ್ಲ. ಪ್ರಮುಖ ಸಾಕ್ಷಿ ಬೋರೇಗೌಡ ತನ್ನ ಸಹೋದರನ ಮದುವೆ ಇರೋದ್ರಿಂದ 3 ದಿನ ಸಮಯಾವಕಾಶ ಕೇಳಿದ್ರೆ, ಮೇಕಪ್‍ಮನ್ ಕಿರಣ್ ಚೆನ್ನೈನಲ್ಲಿದ್ದಾರೆ. ಮೋನಿಕಾ ಕೂಡ ತಾಯಿಗೆ ಹುಷಾರಿಲ್ಲ ಅಂತ ಹೇಳಿ ತಪ್ಪಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಈಗ ಹಾವು ಏಣಿ ಆಟ ಶುರುವಾಗಿದ್ದು, ಆರೋಪ ಪ್ರತ್ಯಾರೋಪಗಳು ಮುಂದುವರೆದಿದೆ. ಅರ್ಜುನ್ ಸರ್ಜಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಬದಲಾಗಿ ಎಫ್‍ಐಆರ್ ರದ್ದಿಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *