ಇಂದು ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ – 144 ಸೆಕ್ಷನ್ ಜಾರಿ

ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಅಲ್ಲ, ಹನುಮಾನ್ ಮಂದಿರ ಅಂತ ಪಟ್ಟು ಹಿಡಿದಿರುವ ಹಿಂದೂ ಸಂಘಟನೆಗಳು ಇಂದು `ಶ್ರೀರಂಗಪಟ್ಟಣ ಚಲೋ’ ಹಮ್ಮಿಕೊಂಡಿವೆ.

ಬೆಳಗ್ಗೆ 10:30ಕ್ಕೆ ಶ್ರೀರಂಗಪಟ್ಟಣದ ಕುವೆಂಪು ಪ್ರತಿಮೆಯಿಂದ ಜಾಮಿಯಾ ಮಸೀದಿವರಗೆ ಶಾಂತಿಯುತವಾಗಿ ಮೆರವಣಿಗೆ ನಡೆಸ್ತೇವೆ. ಮಸೀದಿಯ ಒಳಭಾಗಕ್ಕೆ ಹನುಮ ಭಕ್ತರು ಹೋಗಿ ಆಂಜನೇಯಸ್ವಾಮಿಯ ಪೂಜೆ ಮಾಡ್ತೇವೆ ಎಂದು ಹಿಂದೂ ಸಂಘಟನೆ ನಾಯಕರು ಹೇಳ್ತಿದ್ದಾರೆ. ಒಂದೊಮ್ಮೆ, ಮೆರವಣಿಗೆ ಮಾಡಲು ಪೊಲೀಸರು ಅವಕಾಶ ನೀಡದಿದ್ದಲ್ಲಿ ಕುವೆಂಪು ಪ್ರತಿಮೆಯ ಬಳಿ ಕೂತು ಹನುಮಾನ್ ಚಾಲಿಸ್ ಪಠಣೆ ಮಾಡುವುದಾಗಿಯೂ ನಿರ್ಧಾರ ಮಾಡಿವೆ.

ಈ ಹೋರಾಟದಲ್ಲಿ ಮಂಡ್ಯ, ಮೈಸೂರು ಭಾಗದಿಂದ ಸಾವಿರಾರು ಹನುಮ ಭಕ್ತರು ಮಾಲೆ ಧರಿಸಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದೆಂದು ಜಿಲ್ಲಾಡಳಿತ ಶ್ರೀರಂಗಪಟ್ಟಣದಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ. ಭಾರೀ ಪ್ರಮಾಣದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವರ್ ತಡರಾತ್ರಿ ಶ್ರೀರಂಗಪಟ್ಟಣಕ್ಕೆ ಭೇಟಿ ಕೊಟ್ಟು, ಎಸ್‍ಪಿ ಯತೀಶ್‍ರಿಂದ ಭದ್ರತಾ ವ್ಯವಸ್ಥೆಯ ಮಾಹಿತಿ ಪಡೆದರು. ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಹೈ ಅಲರ್ಟ್ – ಜಾಮೀಯಾ ಮಸೀದಿ ಸುತ್ತ 144 ನಿಷೇಧಾಜ್ಞೆ ಜಾರಿ

ಸದ್ಯ ಶ್ರೀರಂಗಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ವಿಎಚ್‍ಪಿಯಿಂದ ಪ್ರತಿಭಟನಾ ಮೆರವಣಿಗೆ ವಿಫಲಗೊಳಿಸಲು ಪೊಲೀಸರ ಸನ್ನದ್ದ ಮಾಡಿಕೊಂಡಿದ್ದಾರೆ. ಎಸ್‍ಪಿ, ಇಬ್ಬರು ಡಿವೈಎಸ್‍ಪಿ, 5 ಸಿಪಿಐ, 10 ಪಿಎಸ್‍ಐ ಸೇರಿದಂತೆ 300 ಮಂದಿ ಪೊಲೀಸ್ ಪೇದೆ, 2 ಕೆಎಸ್‍ಆರ್‍ಪಿ, 4 ಡಿಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ನಿಷೇದಾಜ್ಞೆ ನಡುವೆಯು ಶ್ರೀರಂಗಪಟ್ಟಣ ಚಲೋ ಮಾಡೇ ಮಾಡ್ತೀವಿ ಎಂದು ಹೇಳ್ತಿರುವ ವಿಎಚ್‍ಪಿ ಮುಖಂಡರು ಪಟ್ಟುಹಿಡಿದಿದ್ದಾರೆ.

ಹಿಂದೂ ಕಾರ್ಯಕರ್ತರು ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಕರ ಪತ್ರ ಹಂಚಿದ್ದಾರೆ. 144 ಸೆಕ್ಷನ್ ಜಾರಿ ಹಿನ್ನೆಲೆ, ಒಂದೆಡೆ ಹಿಂದೂ ಕಾರ್ಯಕರ್ತರು ಸೇರಿದರೆ ಬಂಧಿಸುವ ಸಾಧ್ಯತೆ ಇದೆ. ಪ್ರತಿಭಟನೆಗೆ ಮುಂದಾದ್ರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಮಂಡ್ಯ ಎಸ್‍ಪಿ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *