ವಿಜಯನಗರ ಪ್ರತ್ಯೇಕ ಜಿಲ್ಲೆ- ಸಿಎಂ ಬಿಎಸ್‍ವೈ, ಪಕ್ಷದ ನಿರ್ಧಾರಕ್ಕೆ ಬದ್ಧ ಎಂದ ಶ್ರೀರಾಮುಲು

ಬಳ್ಳಾರಿ: ವಿಜಯನಗರ ಜಿಲ್ಲೆ ಸ್ಥಾಪನೆ ವಿಚಾರದ ಬಗ್ಗೆ ಉಪಚುನಾವಣೆಯ ಬಳಿಕ ನಿರ್ಧಾರ ಮಾಡಲು ತೀರ್ಮಾನ ಮಾಡಲಾಗಿದ್ದು, ನಾನು ಪಕ್ಷ ಹಾಗೂ ಸಿಎಂ ಬಿಎಸ್‍ವೈ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಪಕ್ಷದ ಪರ ಯಾರೇ ಅಭ್ಯರ್ಥಿಗಳಾದರೂ ನಾನು ಅವರ ಪರವಾಗಿ ಕೆಲಸ ಮಾಡುವೆ. ಸಚಿವನಾಗಿ ಸರ್ಕಾರದ ಭಾಗವಾಗಿರುವುದರಿಂದ ಸಿಎಂ ಹೇಳಿದಂತೆ ಕೆಲಸ ಮಾಡುವೆ. ಜಿಲ್ಲೆಯ ವಿಭಜನೆಯ ಬಗ್ಗೆಯೂ ಈಗಾಗಲೇ ಸಿಎಂ ಅವರೊಂದಿಗೆ ಚರ್ಚೆ ನಡೆಸಿ ನನ್ನ ಅಭಿಪ್ರಾಯವನ್ನು ಅವರಿಗೆ ಸ್ಪಷ್ಟಪಡಿಸಿದ್ದೇನೆ. ಆದ್ದರಿಂದ ಉಪಚುನಾವಣೆಯ ಬಳಿಕ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

ಇದೇ ವೇಳೆ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಕೇಂದ್ರದಿಂದ ತಾತ್ಕಾಲಿಕ ಪರಿಹಾರ ಬಿಡುಗಡೆಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿ, ಪರಿಹಾರ ಘೋಷಣೆ ತಡವಾದ ಕಾರಣ ನಾನು ಕ್ಷಮೆಯಾಚಿಸಿದ್ದೆ. ಆದರೆ ಇದಾದ ಕೆಲ ಗಂಟೆಗಳಲ್ಲೇ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಿತು. ಇದೀಗ 1,200 ಕೋಟಿ ರೂ. ತಾತ್ಕಾಲಿಕ ಪರಿಹಾರ ಬಿಡುಗಡೆಯಾಗಿದೆ. ಹೆಚ್ಚಿನ ಪರಿಹಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುತ್ತೇವೆ ಎಂದರು. ಇದನ್ನು ಓದಿ:  ವಿಜಯನಗರ ಜಿಲ್ಲೆ ರಚನೆಗೆ ಸರ್ಕಾರದಿಂದ ಮ್ಯಾಪ್ ಸಿದ್ಧ

ಕೇಂದ್ರದ ಪರಿಹಾರ ವಿತರಣೆಯಾದ ನಂತರ ವಿರೋಧ ಪಕ್ಷದವರ ಬಾಯಿಗೆ ಬೀಗ ಹಾಕಿದಂತಾಗಿದೆ. ನೆರೆ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ. ನಾವೆಲ್ಲರೂ ಇನ್ನೊಮ್ಮೆ ಹೋಗಿ ಪರಿಹಾರಕ್ಕೆ ಮನವಿ ಸಲ್ಲಿಕೆ ಮಾಡೋಣ. ಕಾಂಗ್ರೆಸ್ ಪಕ್ಷದ ನಾಯಕರು ಅಧಿಕಾರ ಕಳೆದುಕೊಂಡ ನಂತರ ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ಇಂದು ಬಳ್ಳಾರಿಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಶ್ರೀರಾಮುಲು ನೆರವೇರಿಸಿದರು.

Comments

Leave a Reply

Your email address will not be published. Required fields are marked *