ರಾಮುಲುರನ್ನು ಡಿಸಿಎಂ ಎಂದು ಶಾ ಘೋಷಿಸಿದ್ರು, ಯಾಕೆ ತಡೆಹಿಡಿದ್ರೋ ಗೊತ್ತಿಲ್ಲ: ಬಿಜೆಪಿ ಶಾಸಕ

ಬಳ್ಳಾರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದರು. ಆದರೆ ಯಾಕೆ ತಡೆಹಿಡಿಯಲಾಯ್ತು ಎಂಬುದು ಗೊತ್ತಿಲ್ಲ ಎನ್ನುವ ಮೂಲಕ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬಳ್ಳಾರಿಯಲ್ಲಿ ವಾಲ್ಮೀಕಿ ಜಯಂತಿ ಬಳಿಕ ಮಾತನಾಡಿದ ಅವರು, ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ಕೈತಪ್ಪಿರುವುದು ನಮಗೆ ತುಂಬಾ ಬೇಸರವಾಗಿದೆ. ಆದರೆ ಈ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು ಹೋಗಿ ಸಿಎಂ ಬಳಿ ಮನವಿ ಮಾಡುತ್ತೇವೆ. ಶ್ರೀರಾಮುಲು ಡಿಸಿಎಂ ಆಗಬೇಕು, ಅಲ್ಲದೆ ಜಿಲ್ಲೆಯ ಅಭಿವೃದ್ಧಿಯಾಗಲು ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ನೀಡಬೇಕು ಎಂದು ಒತ್ತಾಯಿಸಿದರು.

ದೂರದ ಬೆಳಗಾವಿಯ ಲಕ್ಷ್ಮಣ ಸವದಿ ಅವರಿಗೆ ಜಿಲ್ಲಾ ಉಸ್ತುವಾರಿ ಕೊಟ್ಟಿರುವುದು ಸರಿಯಲ್ಲ, ಹಾಗಂತ ನಮ್ಮ ವಿರೋಧವೂ ಇಲ್ಲ. ಆದರೆ ನಮ್ಮ ಜಿಲ್ಲೆಯವರಿಗೆ ಕೊಟ್ಟರೆ ಜಿಲ್ಲೆ ಹೆಚ್ಚಿನ ಅಭಿವೃದ್ಧಿ ಆಗಲಿದೆ. ಶ್ರೀರಾಮುಲು ಶ್ರಮದಿಂದ ವಾಲ್ಮೀಕಿ ಜನಾಂಗಕ್ಕೆ ಶೇ.7.5 ಮೀಸಲಾತಿ ಘೋಷಣೆ ಆಗುತ್ತದೆ. ನಾಗಮೋಹನದಾಸ್ ವರದಿ ಜಾರಿಯಾಗುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *