ಬಿಜೆಪಿಗೆ ಜೆಡಿಎಸ್‌ ಜೊತೆ ಮೈತ್ರಿ ಅಗತ್ಯವಿಲ್ಲ: ಶ್ರೀನಿವಾಸ್‌ ಪ್ರಸಾದ್‌

ಮೈಸೂರು: ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯ ಅಲ್ಲ. ಯಾರ ಮೈತ್ರಿಯೂ ಬೇಕಾಗಿಲ್ಲ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್‌ ಬೆಂಬಲ ಕೋರಿರುವ ಕುರಿತು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಗೆದ್ದಿದ್ದು ಎಷ್ಟು ಸ್ಥಾನ ಎಂಬುದು ಗೊತ್ತಿದೆ. ಯಾರ ಮೈತ್ರಿಯೂ ಬಿಜೆಪಿಗೆ ಅಗತ್ಯವಿಲ್ಲ. ಅತಿ ಹೆಚ್ಚು ಸ್ಥಾನ ಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ದೊಡ್ಡ ಪಕ್ಷ ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಬೇಕಾಗಿಲ್ಲ ಎಂದರು. ಇದನ್ನೂ ಓದಿ: ಚುನಾವಣೆ ಬಂದಾಗಲೆಲ್ಲ ಪಂಚಾಯ್ತಿ ಸದಸ್ಯರ ಬಗ್ಗೆ ಬಿಜೆಪಿಗೆ ಪ್ರೀತಿ ಉಕ್ಕಿಬರುತ್ತೆ: ಪ್ರಿಯಾಂಕ್ ಖರ್ಗೆ

ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಬಗ್ಗೆ ಟೀಕೆ ಮಾಡುವುದು ಸರಿ. ತಮ್ಮ ಟೀಕೆಗೆ ಆರ್‌ಎಸ್‌ಎಸ್‌ ಅನ್ನು ಬಳಸಿಕೊಳ್ಳುವುದು ಸರಿಯಲ್ಲ. ಆರ್‌ಎಸ್‌ಎಸ್‌ ಒಂದು ರಾಜಕೀಯ ಪಕ್ಷವಲ್ಲ. ಹೀಗಾಗಿ ಅದರ ಮೇಲೆ ರಾಜಕೀಯವಾಗಿ ಟೀಕೆ ಸಲ್ಲದು ಎಂದು ತಿಳಿಸಿದರು.

ಸಿದ್ದು ಮತ್ತು ಜಿಟಿಡಿ ಮೈತ್ರಿ ಕುರಿತು ಮಾತನಾಡಿ, ಸಿದ್ದರಾಮಯ್ಯ ಬದಾಮಿಗೆ ಹೋಗಿ ಚುನಾವಣೆಗೆ ನಿಂತಿದ್ದೆ ಅವರ ಅಸಹಾಯಕತೆಯನ್ನು ತೋರಿಸುತ್ತದೆ. ಒಂದು ಚುನಾವಣೆಯಲ್ಲಿ ಸೋತ ತಕ್ಷಣ ಕ್ಷೇತ್ರದಿಂದ ಓಡಿ ಹೋಗುವ ಮಾತಾಡುತ್ತಿದ್ದಾರೆ. ಇದು ಮೈಸೂರೇ ತಲೆ ತಗ್ಗಿಸುವ ವಿಚಾರ ಎಂದು ಕುಟುಕಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಗೌರವವಿತ್ತು, ಆದ್ರೆ ಇತ್ತೀಚಿನ ಹೇಳಿಕೆ ನಿರಾಸೆ ತಂದಿದೆ: ಬೊಮ್ಮಾಯಿ

ಜಿ.ಟಿ.ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪರ್ವ ಮಾಡಿದ್ದರು. ಜನತಾ ಪರಿವಾರ ಕಟ್ಟುತ್ತೇನೆ ಅಂತ ಓಡಾಡಿದ್ದರು. ಆಗ ಇದೇ ಸಿದ್ದರಾಮಯ್ಯ ರಾತ್ರೋರಾತ್ರಿ ಊರು ಬಿಟ್ಟು ಬದಾಮಿಗೆ ಹೋಗಿ ನಿಂತರು. 35 ಸಾವಿರ ಮತಗಳಿಂದ ಸೋತಿದ್ದರೂ ಸಿದ್ದರಾಮಯ್ಯಗೆ ಬುದ್ದಿ ಬಂದಿಲ್ಲ. ಸಿಎಂ ಆಗಿ ನೀವೆ ಹೆದರಿಕೊಂಡು ಓಡಿಹೋದರೆ ಹೇಗೆ? ವೀರಾವೇಷದ ಮಾತುಗಳನ್ನು ಆಡುತ್ತೀರಾ. ಆದರೆ ಹೆದರಿ ಬದಾಮಿಗೆ ಹೋದಿರಿ. ಏನೋ ಚುನಾವಣೆಯಲ್ಲಿ ಗೆದ್ದು ಬಂದಿದ್ದೀರಾ. ಮೊದಲು ಅದನ್ನು ಉಳಿಸಿಕೊಳ್ಳಿ ಸಿದ್ದರಾಮಯ್ಯನವರೇ. ಚಿಮ್ಮನಕಟ್ಟಿ ಆಗಲೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *