ಮುಸ್ಲಿಂ- ಬೌದ್ಧರ ನಡುವೆ ಹಿಂಸಾಚಾರ – ಶ್ರೀಲಂಕಾದಲ್ಲಿ 10 ದಿನ ತುರ್ತು ಪರಿಸ್ಥಿತಿ ಘೋಷಣೆ

ಕೊಲೊಂಬೊ: ಕ್ಯಾಂಡಿ ಜಿಲ್ಲೆಯಲ್ಲಿ ಬೌದ್ಧರು ಮತ್ತು ಮುಸ್ಲಿಂ ಸಮುದಾಯದ ನಡುವೆ ಭಾರೀ ಪ್ರಮಾಣ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ 10 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಸರ್ಕಾರ ಘೋಷಿಸಿದೆ.

ಮುಸ್ಲಿಮರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಹಾಗೂ ಬೌದ್ಧರ ಪವಿತ್ರ ಸ್ಥಳಗಳನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಕೆಲ ಬೌದ್ಧ ಸಂಘಟನೆಗಳು ಈ ಹಿಂದೆ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಒಂದು ಕಳೆದ ಒಂದು ವರ್ಷದಿಂದ ಎರಡು ಸಮುದಾಯಗಳ ನಡುವೆ ಘರ್ಷಣೆಗಳು ನಡೆಯುತಿತ್ತು.

ಈ ನಡುವೆ ಮ್ಯಾನ್ಮಾರ್ ನ ರೋಹಿಂಗ್ಯಾ ಮುಸ್ಲಿಮರಿಗೆ ಶ್ರೀಲಂಕಾದಲ್ಲಿ ಆಶ್ರಯ ನೀಡಬಾರದು ಎಂದು ಬೌದ್ಧ ಧರ್ಮದವರು ಪ್ರತಿಭಟಿಸುತ್ತಿದ್ದರು. ಈ ವಿಚಾರದ ಬಗ್ಗೆ ನಡೆಯುತ್ತಿದ್ದ ಜಗಳ ಈಗ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿದೆ.

ಹಿಸಾಂಚಾರದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಇಂದು ವಿಶೇಷ ಸಂಪುಟ ಸಭೆ ನಡೆಸಿ, ಕೋಮುಗಲಭೆ ತಡೆಯುವ ನಿಟ್ಟಿನಲ್ಲಿ 10 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಅಷ್ಟೇ ಅಲ್ಲದೇ ಫೇಸ್‍ಬುಕ್ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ.

ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

 

Comments

Leave a Reply

Your email address will not be published. Required fields are marked *