ಮುಂಬೈ ರನ್ ವೇಯಲ್ಲಿ ಸ್ಕಿಡ್ ಆಗಿ ಅಪಘಾತಕ್ಕೀಡಾಯ್ತು ವಿಮಾನ

ಮುಂಬೈ: ಜೈಪುರದಿಂದ ಬರುತ್ತಿದ್ದ ಸ್ಪೈಸ್‍ಜೆಟ್ ವಿಮಾನವು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದೆ.

ಮುಂಬೈನಲ್ಲಿ ಮಳೆಯ ಆರ್ಭಟ ಕಳೆದ ಕೆಲವು ದಿನಗಳಿಂದ ಜೋರಾಗಿದ್ದು, ನಗರದ ರಸ್ತೆಗಳೆಲ್ಲಾ ನೀರು ತುಂಬಿ ಕೆರೆಗಳಂತಾಗಿದೆ. ಅಲ್ಲದೆ ವಿಮಾನ ಹಾರಾಟಕ್ಕೂ ತೊಂದರೆ ಉಂಟಾದ ಪರಿಣಾಮ ಜೈಪುರದಿಂದ ಬರುತ್ತಿದ್ದ ಎಸ್‍ಜಿ -6237 ಬೋಯಿಂಗ್ ವಿಮಾನವೊಂದು ರಾತ್ರಿ 11.51 ರ ಸುಮಾರಿಗೆ ಲ್ಯಾಡ್ ಆಗುತ್ತಿತ್ತು. ಈ ವೇಳೆ ರನ್ ವೇಯಲ್ಲಿ ನೀರು ನಿಂತಿದ್ದರಿಂದ ಸ್ಕಿಡ್ ಆಗಿ ಸಮೀಪದ ಮಣ್ಣಿನ ಮೇಲೆ ಹೋಗಿ ನಿಂತುಕೊಂಡಿದೆ.

ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಹಾಯ ಮಾಡಿದ್ದಾರೆ. ಅಲ್ಲದೆ ಎಂಜಿನಿಯರ್‍ಗಳ ತಂಡವು ವಿಮಾನದಿಂದ ಉಂಟಾದ ಹಾನಿಯ ಬಗ್ಗೆ ತನಿಖೆ ನಡೆಸುತ್ತಿದೆ. ಈ ಅಪಘಾತದಲ್ಲಿ ಯಾವುದೇ ಸಿಬ್ಬಂದಿ ಹಾಗೂ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.

ಅಪಘಾತದ ನಂತರ ವಿಮಾನ ನಿಲ್ದಾಣದ ಮುಖ್ಯ ರನ್ ವೇ ಮುಚ್ಚಲಾಗಿದ್ದು, ಎರಡನೇ ರನ್‍ವೇಯಿಂದ ವಿಮಾನ ಹಾರಾಟ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಮುಂಬೈ ಹವಾಮಾನ ಸೂಕ್ತವಿಲ್ಲದ ಹಿನ್ನೆಲೆಯಲ್ಲಿ ಕೆಲವು ಅಂತರಾಷ್ಟ್ರೀಯ ವಿಮಾನಗಳನ್ನು ಬೆಂಗಳೂರು ಮತ್ತು ಅಹಮದಾಬಾದ್‍ನಂತಹ ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ.

ಭಾನುವಾರ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್- ಐಎಕ್ಸ್ 384 ವಿಮಾನ ಸಂಜೆ ರನ್‍ವೇಯಲ್ಲಿ ಲ್ಯಾಂಡ್ ಆಗಿ ಟ್ಯಾಕ್ಸಿ ವೇ ಪ್ರವೇಶಿಸುವ ಸಂದರ್ಭದಲ್ಲಿ ಹೊರಹೋಗಿ ಚಕ್ರ ಮಣ್ಣಿನಲ್ಲಿ ಹೂತು ಹೋಗಿತ್ತು. ಈ ವೇಳೆ ಅಪಘಾತದಿಂದ ವಿಮಾನದ ಇಂಜಿನ್ ಭಾಗಕ್ಕೆ ಹಾನಿಯಾಗಿತ್ತು, ರಿಪೇರಿಗೆ ಮೂರು ತಿಂಗಳು ಸಮಯ ಬೇಕಾಗುತ್ತದೆ ತಜ್ಞರು ತಿಳಿಸಿದ್ದರು.

Comments

Leave a Reply

Your email address will not be published. Required fields are marked *