ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ – 7 ಮಂದಿ ಅಮಾನತು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail)  ದರ್ಶನ್‌ಗೆ  (Darshan) ರಾಜಾತಿಥ್ಯ ನೀಡುತ್ತಿರುವ ಫೋಟೋ ವೈರಲ್‌ ಆದ ಬೆನ್ನಲ್ಲೇ ಸರ್ಕಾರ 7 ಮಂದಿಯನ್ನು ಅಮಾನತು ಮಾಡಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್‌, ಇದು ಹೇಗೆ ಆಯಿತು ಎಂದು ಈ ಪ್ರಕರಣದ ಬಗ್ಗೆ ವರದಿ ಕೇಳಿದ್ದೇನೆ. ಜೈಲಿನಲ್ಲಿ ಈ ರೀತಿ ನಡೆಯಬಾರದು. 7 ಜನ ಭಾಗಿಯಾಗಿದ್ದಾರೆ ಅಂತ ವರದಿ ಬಂದ ಮೇಲೆ ಕ್ರಮ ನಡೆದಿದೆ. ಎಲ್ಲಾ ಜೈಲುಗಳಲ್ಲಿ ಜಾಮರ್, ಕ್ಯಾಮೆರಾ ಹಾಕಿದರೂ ಹೀಗೆ ಆಗುವುದು ಸರಿಯಲ್ಲ ಎಂದು ತಿಳಿಸಿದರು.


ಜೈಲರ್ಸ್‌ಗಳಾದ ಶರಣ ಬಸವ ಅಮೀನ್‌ಗಡ್, ಪ್ರಭು ಎಸ್. ಖಂಡ್ರೆ, ಅಸಿಸ್ಟೆಂಟ್‌ ಜೈಲರ್ಸ್‌ ಎಲ್.ಎಸ್. ತಿಪ್ಪೇಸ್ವಾಮಿ, ಶ್ರೀಕಾಂತ್ ತಲವಾರ್, ಹೆಡ್‌ ವಾರ್ಡರ್ಸ್‌ ವೆಂಕಪ್ಪ ಕೊರ್ಟಿ, ಸಂಪತ್ ಕುಮಾರ್ ಕಡಪಟ್ಟಿ, ವಾರ್ಡರ್ ಬಸಪ್ಪ ತೇಲಿ ಅವರನ್ನು ಅಮಾತು ಮಾಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್‌ (Parameshwar) ತಿಳಿಸಿದರು.

ಎಲ್ಲರೂ ಒಳಗಡೆ ಹೋಗಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು ತಪ್ಪು ಮಾಡಿದರೂ ಅವರ ವಿರುದ್ಧ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ತನಿಖೆ ಬಳಿಕ ಫೋನ್ ಎಲ್ಲಿಂದ ಬಂತು, ಸಿಗರೇಟ್ ಬಂದಿದೆ ಹೇಗೆ ಎನ್ನುವುದರ ಬಗ್ಗೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.