ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

-ಸಂದರ್ಶನದಲ್ಲಿ ಅನುಶ್ರೀ ಮದುವೆ ಗುಟ್ಟು ರಟ್ಟು
-ಹೇಗಿರಬೇಕು ಅನುಶ್ರೀ ಮದುವೆ ಆಗೋ ಹುಡುಗ..?

ಬೆಂಗಳೂರು: ಮಾತಿನ ಮಲ್ಲಿ ಎಂದೇ ಪ್ರಖ್ಯಾತರಾಗಿರೋ ಖ್ಯಾತ ನಿರೂಪಕಿ ಅನುಶ್ರೀ ಅವರು ಗಣೇಶ ಹಬ್ಬ ಆಚರಣೆ, ಕುಟುಂಬ ಹಾಗೂ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಗೌರಿ-ಗಣೇಶ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಗೆ ಸಂದರ್ಶನ ನೀಡಿದ್ದ ಅವರು, ಈ ವರ್ಷ ಹಬ್ಬ ತುಂಬಾ ಸರಳವಾಗಿ ಆಚರಿಸುತ್ತಿದ್ದೇವೆ. ಪ್ರತಿ ವರ್ಷ ಹಬ್ಬವನ್ನು ಮಂಗಳೂರಿನಲ್ಲಿ ಆಚರಿಸುತ್ತಿದ್ದೇವೆ. ಆರು ತಿಂಗಳಿನಿಂದ ಅಮ್ಮ ನಮ್ಮ ಜೊತೆ ಬೆಂಗಳೂರಿನಲ್ಲಿಯೇ ಇದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ಅಮ್ಮ, ತಮ್ಮ ಮತ್ತು ನನ್ನ ಎರಡು ಮುದ್ದು ಮಕ್ಕಳು( ಸಾಕು ನಾಯಿ ಮತ್ತು ಮೊಲ) ಜೊತೆ ಹಬ್ಬ ಮಾಡ್ತೀವಿ ಅಂದ್ರು.

ಮದುವೆ ಗುಟ್ಟು..?
ಇದೂವರೆಗೂ ನನ್ನ ಒಬ್ಬರೂ ಪ್ರಪೋಸ್ ಮಾಡಿಲ್ಲ. ಒಂದು ಸಲ ನನ್ನ ಫ್ರೆಂಡ್ಸ್ ಹತ್ತರ ಯಾಕೆ ಯಾರು ನನಗೆ ಪ್ರಪೋಸ್ ಮಾಡಲ್ಲ? ನಾನು ನೋಡೊದಕ್ಕೆ ಚೆನ್ನಾಗಿ ಇಲ್ವಾ? ಅಂತಾ ಕೇಳಿದ್ದಕ್ಕೆ ಸೋಶಿಯಲ್ ಆಗಿ ಎಲ್ಲರ ಜೊತೆ ಬೆರೆಯಬೇಕು ಅಂತಾ ಹೇಳಿದ್ರು. ಒಂದು ಸಾರಿ ಎಲ್ಲರ ಜೊತೆ ಪಬ್ ಗೆ ಹೋಗಿದ್ದಾಗ ಅಲ್ಲಿ ಫುಲ್ ಕತ್ತಲು. ಇದರಿಂದ ಗಾಬರಿಗೊಂಡ ನಾನು ಬಳಿಕ ಅಲ್ಲಿಗೆ ಹೋಗಲೇ ಇಲ್ಲ. ಹೀಗಾಗಿ ಶೂಟಿಂಗ್ ಮುಗಿದ ಕೂಡಲೇ ಮನೆಗೆ ಬಂದು ಬಿಡುತ್ತೇನೆ ಅಷ್ಟೇ ನನ್ನ ಜೀವನ ಅಂದ್ರು.

ಒಮ್ಮೆ ಒಬ್ಬ ಮಹಿಳೆ ತನ್ನ ಮಗನ ಫೋಟೋ, ಜಾತಕ, ಉದ್ಯೋಗ ಮಾಹಿತಿ ಬರೆದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಪತ್ರ ಬರೆದಿದ್ದರು. ಇದನ್ನು ಅನುಶ್ರೀ ಅವರಿಗೆ ತಲುಪಿಸಬೇಕೆಂದು ಪತ್ರದಲ್ಲಿ ಬರೆದಿದ್ದರು. ಅರ್ಜುನ್ ಸರ್ ಬಂದು, ಮೇಡಂ ಪತ್ರ ನೋಡಿ ಅಂತಾ ಕೊಟ್ಟರು. ಒಂದು ಕ್ಷಣ ತುಂಬಾ ನಗು ಬಂತು. ಎಲ್ಲೋ ದೂರದಲ್ಲಿರುವ ತಾಯಿ ನನ್ನಲ್ಲಿ ಅವರ ಸೊಸೆ ಆಗುವ ಗುಣಲಕ್ಷಣ ನೋಡಿದ್ದಾರೆ ಅಂದ್ರೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ಕಾರ್ಯಕ್ರಮಗಳ ಮೂಲಕ ನಾನು ಜನರಿಗೆ ಎಷ್ಟು ಹತ್ತಿರ ಅಗಿದ್ದೀನಿ ಎಂಬುದು ಪತ್ರದ ಮೂಲಕ ತಿಳಿಯಿತು ಅಂತ ಹೇಳಿದ್ರು.

ಸ್ಕೂಲ್ ಟೈಮಲ್ಲಿ ತುಂಬಾನೇ ಪ್ರಪೋಸ್ ಬರುತ್ತಿತ್ತು. ಆದ್ರೆ ನಿರೂಪಕಿ ಆದ್ಮೇಲೆ ಒಂದು ಲೆಟರ್ ಸಹ ಬಂದಿಲ್ಲ. ಪರಿಚಯದಲ್ಲಿ ಗಂಡು ನೋಡಲಾ ಅಂತಾ ಅಮ್ಮ ಹೇಳ್ತಾ ಇರ್ತಾರೆ. ಆದ್ರೆ ಆಗಬೇಕಾದ ಸಮಯದಲ್ಲಿ ಎಲ್ಲವೂ ನಡೆಯುತ್ತದೆ ಅಂತಾ ಹೇಳಿದ್ದೀನಿ ಅಂದ್ರು.

ಕೈ ಹಿಡಿಯೋ ಹುಡ್ಗ ಹೇಗಿರಬೇಕು..?
ನನಗೆ ತುಂಬಾ ಬೆಳ್ಳಗಿರುವ ಹುಡಗರು ಇಷ್ಟ ಆಗಲ್ಲ. ಯಾಕೆಂದ್ರೆ ನಾನು ತುಂಬಾ ಬೆಳ್ಳಗಿಲ್ಲ. ತುಂಬಾನೇ ಚಲ್ ಚಲ್ ಆಗಿ ಹುಡಗರು ಇಷ್ಟ ಆಗಲ್ಲ. ನನ್ನ ಮದುವೆ ಆಗೋ ಹುಡಗ ನನ್ನನ್ನು ಇಗ್ನೋರ್ ಮಾಡಬೇಕು. ಅಂತಹ ಹುಡಗ ನನಗಿಷ್ಟ. ಪಬ್ಲಿಕ್ ಟಿವಿ ಕಾರ್ಯಕ್ರಮ ನೋಡಿದ ಮೇಲೆ ಪ್ರಪೋಸ್ ಬಂದರೂ ಬರಬಹುದು ಅಂತ ಹೇಳುವ ಮೂಲಕ ನಕ್ಕುಬಿಟ್ಟರು.

ಹವ್ಯಾಸ ಏನು..?
ಶೂಟಿಂಗ್ ಬಳಿಕ ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯುತ್ತೇನೆ. ನಾನು ಮನೆಯಲ್ಲಿ ಹೆಚ್ಚು ಸಿನಿಮಾಗಳನ್ನು ನೋಡುತ್ತೇನೆ. ಮನೆಯಲ್ಲಿ 800 ಸಿಡಿಗಳನ್ನು ಸಂಗ್ರಹ ಮಾಡಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತೇನೆ. ಬೆಳಗ್ಗೆ 4 ಗಂಟೆಗೆ ಎದ್ದು ರನ್ನಿಂಗ್ ಮಾಡ್ತೀನಿ. ನಂತ್ರ ಮನೆಗೆ ಬಂದು ಟೀ ಕುಡಿದು ಫ್ರೆಶ್ ಆಗ್ತೀನಿ. ಮನೆಯ ಪಕ್ಕದಲ್ಲಿಯ ಮಕ್ಕಳೊಂದಿಗೆ ಆಟ ಆಡ್ತೀನಿ. ಅಮ್ಮನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ.

ಹಬ್ಬದ ಸ್ಪೆಷಲ್ ಏನು..?
ಹಬ್ಬಕ್ಕೆ ಸಿಹಿ ಮಾಡುತ್ತೇವೆ. ಮನೆಗೆ ಕಬ್ಬುಗಳನ್ನು ಕಟ್ಟಿ, ಬಳಿಕ ಎಲ್ಲರೂ ತಿನ್ನುತ್ತೇವೆ. ವಿಶೇಷವಾಗಿ ಮನೆಯಲ್ಲಿ ಪೂಜೆ ಮಾಡುತ್ತೇವೆ. ಅಣ್ಣಂದಿರು ಗೌರಿ ಹಬ್ಬಕ್ಕೆ ಕಪ್ಪು ಬಳೆಗಳನ್ನು ಕೊಟ್ಟು, ಒಂದಿಷ್ಟು ಹಣ ಸಹ ಕೊಡುತ್ತಾರೆ. ಗೌರಿ ಹಬ್ಬಕ್ಕೆ ಅಣ್ಣಂದಿರು ಕೊಟ್ಟಿದ್ದ ಕಪ್ಪು ಬಳೆಗಳನ್ನು ತೊಟ್ಟು ಸಂಭ್ರಮಿಸುತ್ತೇವೆ.

ಕಳೆದ ವರ್ಷ ನಾನು ಏನೂ ಬಯಸಿರಲಿಲ್ಲ. ಈ ಬಾರಿ ಸರ್ಕಾರ ನನಗೆ `ನಾಡಪ್ರಭು ಕೆಂಪೇಗೌಡ’ ಪ್ರಶಸ್ತಿ ನೀಡಿ ಗೌರವಿಸಿದೆ. ಕೆಂಪೇಗೌಡರ ಕಟ್ಟಿದ ಊರಲ್ಲಿ ಇಂದು ನಾವು ನೆಮ್ಮದಿಯಿಂದ ಇದ್ದೇವೆ. ನಮಗೆ ಊಟ, ಮನೆ ಎಲ್ಲವೂ ಬೆಂಗಳೂರು ನೀಡಿದೆ. ಅದಕ್ಕಿಂತ ಖುಷಿ ನನಗೆ ಮತ್ತೊಂದಿಲ್ಲ. ಕೊಡಗು ಪುನರ್ ನಿರ್ಮಾಣಕ್ಕೆ ಎಲ್ಲರೂ ಒಂದಾಗೋಣ ಅಂತಾ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=tjMufAL6i9U

Comments

Leave a Reply

Your email address will not be published. Required fields are marked *