ಬಿಲ್ ಪಾಸಾಗಿಲ್ಲ ಅಂದ್ರೆ ಒಂದು ನಯಾ ಪೈಸೆ ಡ್ರಾ ಆಗಲ್ಲ: ಸ್ಪೀಕರ್ ಗರಂ

– ತಲೆಯೊಳಗೆ ಪ್ರಜ್ಞೆ, ಜವಾಬ್ದಾರಿ ಇಲ್ಲವಾ

ಬೆಂಗಳೂರು: ಜುಲೈ 31 ರಂದು ಫೈನಾನ್ಸ್ ಬಿಲ್ ಪಾಸಾಗದಿದ್ದರೆ ಒಂದು ನಯಾ ಪೈಸೆ ಡ್ರಾ ಮಾಡುವುದಕ್ಕೆ ಆಗುವುದಿಲ್ಲ. ಇಡೀ ರಾಜ್ಯ ಮಣ್ಣು ತಿನ್ನಬೇಕಾಗುತ್ತದೆ. ಇವರ ತಲೆಯೊಳಗೆ ಪ್ರಜ್ಞೆ, ಜವಾಬ್ದಾರಿ ಇಲ್ಲವಾ ಎಂದು ಸ್ಪೀಕರ್ ರಮೇಶ್ ಕುಮಾರ್ ಭಾನುವಾರ ಸುದ್ದಿಗೋಷ್ಠಿ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ.

ದೂರವಾಣಿ ಮೂಲಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ಪೀಕರ್, ನನ್ನ ಜೀವನದಲ್ಲಿ ನಾನು ಯಾರಿಗೂ ಒತ್ತಡ ಹಾಕೋನು ಅಲ್ಲ, ಯಾರ ಒತ್ತಡಕ್ಕೂ ಬಗ್ಗೋನು ಅಲ್ಲ. ಈ ಮಾತನ್ನು ಹೇಳಿದರು ಸ್ವಂತ ಅನುಭವನ್ನು ಹೊಂದಿರಬಹುದು. ಆದರೆ ನಾನು ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಮಾನ್ಯ ಯಡಿಯೂರಪ್ಪ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹೀಗಾಗಿ ಜುಲೈ 31ರಂದು ಹಣಕಾಸಿನ ಬಿಲ್ ಪಾಸ್ ಮಾಡಬೇಕಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಸೋಮವಾರ ಸಭೆ ಕರೆಯಬೇಕೆಂದು ಮನವಿ ಮಾಡಿಕೊಂಡಿದ್ದರು ಎಂದರು.

ಸೋಮವಾರ ಅಂದರೆ 29 ರಂದು ಸಭೆ ಕರೆದರೆ, ಇದರಿಂದ ನಮಗೆ ಉಳಿದಿರುವುದು ಒಂದೇ ದಿನ. ಹಣಕಾಸಿನ ಬಿಲ್ ಪಾಸಾಗಿಲ್ಲ ಎಂದರೆ ಇಡೀ ರಾಜ್ಯಕ್ಕೆ ಸಮಸ್ಯೆಯಾಗುತ್ತದೆ. ನಮಗೆ ಇರುವುದು ಶನಿವಾರ, ಭಾನುವಾರ ಮಾತ್ರ, ನಾನು ಹೊಸ ದಿನ ಸೃಷ್ಟಿ ಮಾಡಲು ಬ್ರಹ್ಮನಾ ಎಂದು ಪ್ರಶ್ನೆ ಮಾಡಿದರು. ಇರುವ ರಜಾ ದಿನದಲ್ಲೇ ಕೆಲಸ ಮಾಡಿದ್ದೇವೆ. ಅದು ಬಿಟ್ಟು ತಲೆಯೊಳಗೆ ಪ್ರಜ್ಞೆ, ಜವಾಬ್ದಾರಿ ಇಲ್ಲದೆ ತಮ್ಮ ತಮ್ಮದು ಏನೇನೋ ಇಟ್ಟುಕೊಂಡು ಬಾಯಿಗೆ ಬಂದಾಗೆ ಮಾತನಾಡುವುದು ಬೇಡ ಲೈವಲ್ಲಿ ಎಲ್ಲವನ್ನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಆಕ್ರೋಶಗೊಂಡು ಪ್ರತಿಕ್ರಿಯಿಸಿದರು.

ಜುಲೈ 31ರ ಒಳಗಡೆ ಬಿಲ್ ಪಾಸಾಗಲಿಲ್ಲ ಅಂದರೆ ಒಂದು ನಯಾ ಪೈಸೆ ಡ್ರಾ ಮಾಡುವುದಕ್ಕೆ ಆಗಲ್ಲ. ಆಗ ಇಡೀ ರಾಜ್ಯ ಮಣ್ಣು ತಿನ್ನಬೇಕಾಗುತ್ತದೆ. ವಿನಿಯೋಗ ಮಸೂದೆ ಎಂದರೆ ಇವರಿಗೆ ಪ್ರಜ್ಞೆ ಇಲ್ಲವಾ, ಬಿಲ್ ಪಾಸ್ ಮಾಡಿ ರಾಜ್ಯಪಾಲರಿಗೆ ಕಳುಹಿಸಬಾರದಾ? ಶುಕ್ರವಾರ ಸಂಜೆ ಮುಖ್ಯಮಂತ್ರಿಗಳು 6.30ಗೆ ಪ್ರಮಾಣ ವಚನ ಸ್ವೀಕಾರ ಮಾಡಿ ಸಂಜೆ 7.30ಕ್ಕೆ ನಮಗೆ ಸೋಮವಾರ ಸಭೆ ಕರೆಯಿರಿ ಎಂದು ಹೇಳಿದ್ದರು. ಸೋಮವಾರ ಸಭೆ ಕರೆಯಿರಿ ಎಂದು ಹೇಳಿ ಶನಿವಾರ ಭಾನುವಾರ ರಜೆ ಕೊಟ್ಟರೆ, ಅಸೆಂಬ್ಲಿಯನ್ನು ಹೇಗೆ ಕರೆಯಲಿ, ಹೇಗೆ ನಿಭಾಯಿಸಲಿ. ಬಿಲ್ ಪಾಸ್ ಮಾಡುವುದು ಬೇಡವಾ, ಜವಾಬ್ದಾರಿ ಬೇಡವೇ? ವಿಶ್ವಾಸ ಮತಯಾಚನೆ ತೆಗೆದುಕೊಳ್ಳುವುದು ಬೇಡವಾ, ವಿಶ್ವಾಸ ಮತ ಇಲ್ಲದೇ ಹೋದರೆ ಹಣಕಾಸು ಮಸೂದೆ ಅಂಗೀಕಾರವಾಗುತ್ತದಾ? ಏನಾಗಿದೆ ಇವರ ಬುದ್ಧಿಗೆ ಯಾರು ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿರುವುದು ಅವರಾ, ನಾನಾ ಎಂದು ಸ್ಪೀಕರ್ ಗರಂ ಆದರು.

Comments

Leave a Reply

Your email address will not be published. Required fields are marked *