ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ – ಡಿಕೆಶಿಗೆ ಧೈರ್ಯ ತುಂಬಿದ ಸೋನಿಯಾ

ನವದೆಹಲಿ: ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಕೆ ಶಿವಕುಮರ್ ಅವರಿಗೆ ಧೈರ್ಯ ತುಂಬಿದ್ದಾರೆ.

ಇಂದು ಬೆಳಗ್ಗೆ ಡಿಕೆ ಶಿವಕುಕಮಾರ್ ಅವರನ್ನು ತಿಹಾರ್ ಜೈಲಿನಲ್ಲಿ ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೋನಿಯಾ ಜೊತೆ ಆಗಮಿಸಿದ್ದರು.

ಸೋನಿಯಾ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಡಿಕೆ ಸುರೇಶ್, ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ ಎಂದು ಅಣ್ಣನಲ್ಲಿ ಹೇಳಿ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಸೋನಿಯಾಗಾಂಧಿ ಭೇಟಿ ಹಾಗೂ ಸಾಂತ್ವನದಿಂದ ಶಿವಕುಮಾರ್ ಅವರಲ್ಲಿಯೂ ಧೈರ್ಯ ಬಂದಿದೆ ಎಂದು ತಿಳಿಸಿದರು.

ಇಂದು ದೆಹಲಿ ಹೈಕೋರ್ಟಿನಿಂದ ಜಾಮೀನು ಸಿಗುವ ವಿಶ್ವಾಸದಲ್ಲಿದ್ದೇವೆ. ಏನೇ ಅದರೂ ನ್ಯಾಯಾಲಯದ ಆದೇಶಕ್ಕೆ ನಾವು ತಲೆಬಾಗುತ್ತೇವೆ ಎಂದು ಸುರೇಶ್ ಪ್ರತಿಕ್ರಿಯಿಸಿದರು.

ಅಕ್ರಮ ಹಣ ವರ್ಗಾವಣೆ ಆರೋಪದ ಅಡಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಧ್ಯಾಹ್ನ 2.30ಕ್ಕೆ ದೆಹಲಿ ಹೈಕೋರ್ಟ್‍ನ ನ್ಯಾ.ಸುರೇಶ್ ಕುಮಾರ್ ಕೈಟ್ ಆದೇಶ ಪ್ರಕಟಿಸಲಿದ್ದಾರೆ.

ಡಿಕೆಶಿ ಪರ ವಾದ ಮಂಡಿಸಿದ್ದ ಅಭಿಷೇಕ್ ಮನುಸಿಂಘ್ವಿ ಅವರು, ಈಗಾಗಲೇ 45 ದಿನಗಳಿಂದ ಡಿಕೆ ಶಿವಕುಮಾರ್ ಅವರು ಬಂಧನದಲ್ಲಿದ್ದಾರೆ. ಬಹುತೇಕ ವಿಚಾರಣೆಯ ಮುಗಿದರೂ ಅನಾವಶ್ಯಕವಾಗಿ ವಶದಲ್ಲಿಟ್ಟುಕೊಳ್ಳಲಾಗಿದೆ. ಐಟಿ ದಾಖಲಿಸಿದ್ದ ಕೇಸ್ ನಲ್ಲಿ ಇಡಿ ವಿಚಾರಣೆ ನಡೆಸುತ್ತಿದ್ದು ಸ್ವಯಂ ಘೋಷಿತ ಆಸ್ತಿ ಮೇಲೆ ವಿಚಾರ ನಡೆಸುತ್ತಿದೆ ಹೊರತು ಯಾವುದೇ ಹೊಸ ಅಂಶಗಳನ್ನು ಬಯಲು ಮಾಡಿಲ್ಲ ಎಂದು ವಾದಿಸಿದ್ದರು. ಆದರೆ, ಪ್ರತಿವಾದ ಮಂಡಿಸಿದ್ದ ಇಡಿ ಪರ ವಕೀಲರು, 300ಕ್ಕೂ ಹೆಚ್ಚು ಆಸ್ತಿಗಳನ್ನು ಡಿಕೆಶಿ ಹೊಂದಿದ್ದು ಇದರ ಮೂಲ ನೀಡುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಬೇಲ್ ಕೊಡಬಾರದು, ಬೇಲ್ ನೀಡಿದರೆ ಸಾಕ್ಷಿನಾಶ ಆಗುತ್ತೆ ಎಂದು ವಾದ ಮಂಡಿಸಿದ್ದರು.

Comments

Leave a Reply

Your email address will not be published. Required fields are marked *