ಮಗನ 20ರ ಪ್ರೇಯಸಿಯನ್ನ ಮನೆಗೆ ಕರೆದು ತಾಳಿ ಕಟ್ಟಿ ಅತ್ಯಾಚಾರಗೈದ

– ಪುತ್ರನ ಜೊತೆ ಮದ್ವೆ ಬಗ್ಗೆ ಮಾತನಾಡಲು ಕರೆದಿದ್ದ
– 2 ದಿನ ಮನೆಯಲ್ಲಿರಿಸಿಕೊಂಡು ಲೈಂಗಿಕ ದೌರ್ಜನ್ಯ

ಚೆನ್ನೈ: ಪಾಪಿ ತಂದೆಯೊಬ್ಬ ಮದುವೆ ಬಗ್ಗೆ ಮಾತಾಡಬೇಕೆಂದು ಮನೆಗೆ ಕರೆಸಿಕೊಂಡ ತನ್ನ ಮಗನ ಪ್ರೇಯಸಿಯ ಮೇಲೆಯೇ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತಮಿಳುನಾಡಿನ ನಾಗಪಟ್ಟಣಂನಲ್ಲಿ ನಡೆದಿದೆ.

ನಿತ್ಯಾನಂದಂ ಬಂಧಿತ ಆರೋಪಿ. 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ನಿತ್ಯಾನಂದಂ ವೇದರಣ್ಯಂನಲ್ಲಿ ಗಾರ್ಮೆಂಟ್ ಶಾಪ್ ಮಾಲೀಕನಾಗಿದ್ದಾನೆ. ನಿತ್ಯಾನಂದಂ ತನ್ನ ಮಗನ ಗೆಳತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಯ ಮಗ ಎನ್.ಮುಖೇಶ್ ಕಣ್ಣನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಈ ವಿಚಾರ ಆರೋಪಿ ನಿತ್ಯಾನಂದಂಗೆ ಗೊತ್ತಾಗಿದ್ದು, ತನ್ನ ಮಗ ಮತ್ತು ಗೆಳತಿಯ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಪ್ಲಾನ್ ಮಾಡಿಕೊಂಡಿದ್ದನು. ಯಾಕೆಂದರೆ ಅವರಿಬ್ಬರ ಸಂಬಂಧಕ್ಕೆ ನಿತ್ಯಾನಂದಂ ವಿರೋಧವಿತ್ತು. ಅದರಂತೆಯೇ ಆರೋಪಿ ನಿತ್ಯಾನಂದಂ ತನ್ನ ಮಗನ ಗೆಳತಿಗೆ ಫೋನ್ ಮಾಡಿ ತನ್ನನ್ನು ಭೇಟಿಯಾಗಲು ಹೇಳಿದ್ದಾನೆ.

ನಿಮ್ಮಿಬ್ಬರ ಮದುವೆಯ ಬಗ್ಗೆ ಮಾತನಾಡಬೇಕು ಎಂದು ಸೆಂಬೊಡೈ ಗ್ರಾಮಕ್ಕೆ ಬರುವಂತೆ ಹೇಳಿದ್ದ. ಯುವತಿ ನಿತ್ಯಾನಂದಂ ಮನೆಗೆ ಹೋಗಿದ್ದಾಳೆ. ಯುವತಿ ಮನೆಗೆ ಬಂದ ತಕ್ಷಣ ಆರೋಪಿ ಆಕೆಯ ಮೊಬೈಲ್ ಫೋನ್ ಕಿತ್ತುಕೊಂಡಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಕುತ್ತಿಗೆಗೆ ಬಲವಂತವಾಗಿ ಮಂಗಳಸೂತ್ರ ಕಟ್ಟಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ.

ಅಲ್ಲದೇ ಆರೋಪಿ ಯುವತಿಯನ್ನು ಎರಡು ದಿನಗಳವರೆಗೆ ತನ್ನ ಮನೆಯಲ್ಲಿಯೇ ಇಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲಿಂದ ಆರೋಪಿ ಯುವತಿಯನ್ನು ತನ್ನ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಈ ವಿಚಾರ ಆರೋಪಿಯ ಮಗ ಕಣ್ಣನ್‍ಗೆ ಗೊತ್ತಾಗಿದೆ. ತಕ್ಷಣ ಕಣ್ಣನ್ ಯುವತಿಯನ್ನು ರಕ್ಷಿಸಿದ್ದಾನೆ. ಜೊತೆಗೆ ಈ ಘಟನೆಯ ಬಗ್ಗೆ ವೇದರಣ್ಯಂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *