ಕಾಶ್ಮೀರ ಎನ್‍ಕೌಂಟರ್: ಇಬ್ಬರು ಉಗ್ರರ ಹತ್ಯೆ, ಯೋಧ ಹುತಾತ್ಮ

ಶ್ರೀನಗರ: ಇಂದು ಬೆಳ್ಳಂಬೆಳಗ್ಗೆ ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಭದ್ರತಾ ಪಡೆ ನಡೆಸಿದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಮಾಡಲಾಗಿದ್ದು, ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಉಗ್ರರನ್ನು ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಸಂಘಟನೆಯವರೆಂದು ಶಂಕಿಸಲಾಗಿದೆ. ಓರ್ವ ಉಗ್ರ ಕಟ್ಟಡದೊಳಗೆ ಅವಿತುಕೊಂಡಿರಬಹುದೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಉಗ್ರರು ಸಮೀಪದಲ್ಲಿಯೇ ಅಡಗಿದ್ದಾರೆಂದು ಗುಪ್ತಚರ ಇಲಾಖೆಗೆ ಮಾಹಿತಿ ಸಿಗುತ್ತಿದ್ದಂತೆಯೇ ಭದ್ರತಾ ಪಡೆಯು ಕಾರ್ಯಚರಣೆಯನ್ನು ಆರಂಭಿಸಿದೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಹೀಗಾಗಿ ಕಾರ್ಯಾಚರಣೆಯನ್ನು ನಿಲ್ಲಿಸಿ ಯೋಧರು ಎನ್ ಕೌಂಟರ್ ಮಾಡಿದ್ದಾರೆ.

ಫೆಬ್ರವರಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಬೆಂಗಾವಲಿನಲ್ಲಿದ್ದ ಪುಲ್ವಾಮದ ಸೇನಾ ವಾಹನವನ್ನು ಜೆಇಎಂ ಉಗ್ರರು ಸುಧಾರಿತ ಸ್ಫೋಟಕಗಳಿಂದ ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದರು. ಸೋಮವಾರ ನಡೆದ ದಾಳಿಯಲ್ಲಿ ಆರು ಮಂದಿ ಯೋಧರು ಮತ್ತು ಇಬ್ಬರು ಸಿವಿಲಿಯನ್ಸ್ ಗಾಯಗೊಂಡಿದ್ದಾರೆ.

ಅನಂತ್‍ನಾಗ್‍ನಲ್ಲಿ ಸೋಮವಾರ ನಡೆದ ಮತ್ತೊಂದು ದಾಳಿಯಲ್ಲಿ ಒಬ್ಬ ಸೇನಾ ಪ್ರಮುಖ ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಮತ್ತು ಆರ್ಮಿ ಚೀಫ್ ಜನರಲ್ ಬಿಪಿನ್ ರಾವತ್ ಹುತಾತ್ಮರಾದ ಸೇನಾ ಪ್ರಮುಖ ಕೆತನ್ ಶರ್ಮರವರಿಗೆ ಗೌರವ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *