ಕಚ್ಚಿದ ಹೆಬ್ಬಾವಿನೊಂದಿಗೇ ಆಸ್ಪತ್ರೆಗೆ ಬಂದ ಸ್ನೇಕ್ ಮಾಸ್ಟರ್!

ಉಡುಪಿ: ಹೆಬ್ಬಾವಿನಿಂದ ಕಚ್ಚಿಸಿಕೊಂಡು ಹೆಬ್ಬಾವಿನ ಜೊತೆಗೇ ವ್ಯಕ್ತಿ ಆಸ್ಪತ್ರೆಗೆ ಬಂದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನ ಕೋಟೆಬಾಗಿಲು ಪಾರ್ತಿಕಟ್ಟೆಯ ಬಳಿಯ ಮನೆಯೊಂದರಲ್ಲಿ ಬೃಹತ್ ಗಾತ್ರದ ಹಾವನ್ನು ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಹಿಡಿಯಲು ಯತ್ನಿಸಿದ್ದರು. ಈ ಸಂದರ್ಭ ಅವರ ಬಲಗೈಗೆ ಹಾವು ಕಚ್ಚಿದ್ದು, ಅದೇ ಹಾವಿನ ಸಮೇತ ಜೋಸೆಫ್ ಆಸ್ಪತ್ರೆಗೆ ತೆರಳಿ ವೈದ್ಯರ ಮುಂದೆ ನಿಂತಿದ್ದಾರೆ.

ಪಾರ್ತಿಕಟ್ಟೆಯ ನಿವಾಸಿಯೋರ್ವರ ಮನೆಯ ಹಿತ್ತಲಲ್ಲಿ ಕೊಳಕು ಮಂಡಲ ಇದೆಯೆಂದು ಫೋನ್ ಮಾಡಿದ್ದರು. ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಸ್ಥಳಕ್ಕೆ ತೆರಳಿ ಹಾವು ಹಿಡಿಯಲು ಮುಂದಾಗಿದ್ದಾರೆ. ಸಂಪೂರ್ಣ ಹಾವು ಪೊದೆಯೊಳಗಿದ್ದು, ಪೊದೆಗಳನ್ನು ಬಿಡಿಸುತ್ತಿರುವಾಗ ಬೆದರಿದ ಹಾವು ಸ್ನೇಕ್ ಮಾಸ್ಟರ್ ಜೋಸೆಫ್ ಅವರ ಬಲಗೈಗೆ ಕಚ್ಚಿದೆ.

ಕಚ್ಚಿದ ತಕ್ಷಣ ಶಾಕ್ ಆಗಿ ಜೋಸೆಫ್ ಹಾವನ್ನು ಬಿಟ್ಟಿದ್ದರು. ಬಳಿಕ ತಡಮಾಡದೆ ಕೈಗೊಂದು ಬಟ್ಟೆ ಕಟ್ಟಿಕೊಂಡು ಹಾವನ್ನು ಹಿಡಿದಿದ್ದಾರೆ. ಹಾವಿನೊಂದಿಗೆ ಸ್ಥಳೀಯರ ಸಹಕಾರದಿಂದ ಕುಂದಾಪುರ ಆಸ್ಪತ್ರೆಗೆ ಧಾವಿಸಿದ್ರು. ವೈದ್ಯರು ಚಿಕಿತ್ಸೆ ನೀಡಿದ ನಂತರ ಜೋಸೆಫ್ ಮನೆಗೆ ವಾಪಾಸ್ಸಾಗಿದ್ದಾರೆ.

ಕೆಲವು ವರ್ಷಗಳಿಂದ ಹೆಮ್ಮಾಡಿಯಲ್ಲಿ ರಿಕ್ಷಾ ಚಾಲನೆ ವೃತ್ತಿಯ ಜೊತೆಗೆ ಹಾವು ಹಿಡಿಯುವ ಕಲೆ ಕರಗತ ಮಾಡಿಕೊಂಡಿದ್ದ ಜೋಸೆಫ್, ತಾಲೂಕಿನಲ್ಲಿ 2 ಸಾವಿರಕ್ಕೂ ಮಿಕ್ಕಿ ವಿಷಪೂರಿತ ಹಾವುಗಳನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *