ರಾಹುಲ್ ಗಾಂಧಿಗೆ ಧನ್ಯವಾದ ಅಂದ್ರು ಸ್ಮೃತಿ ಇರಾನಿ!

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ವ್ಯಂಗ್ಯವಾಗಿ ಧನ್ಯವಾದ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಟ್ವಿಟ್ಟರ್‍ನಲ್ಲಿ ರೋಹಿತ್ ವೇಮುಲಾ ಪ್ರಕರಣ ಹಾಗೂ ನೋಟ್‍ಬ್ಯಾನ್ ವಿಷಯವನ್ನ ಇಟ್ಟುಕೊಂಡು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಶುಕ್ರವಾರದಂದು ರಾಹುಲ್ ಗಾಂಧಿ ಡಾ. ಬಿ ಆರ್ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ವೇಳೆ ರೋಹಿತ್ ವೇಮುಲಾ ಪ್ರಕರಣವನ್ನ ಪ್ರಸ್ತಾಪಿಸಿ, ಆತ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ದಲಿತ ಎಂಬ ಕಾರಣಕ್ಕೆ ಆತನನ್ನ ಕೊಲೆ ಮಾಡಲಾಯ್ತು ಅಂದ್ರು.

ಹಿಟ್ಲರ್ ಒಮ್ಮೆ ಬರೆದಿದ್ದರು: ವಾಸ್ತವದ ಮೇಲೆ ಬಿಗಿಯಾದ ಹಿಡಿತ ಇಟ್ಟುಕೊಳ್ಳಿ, ಆಗ ಯಾವಾಗ ಬೇಕಾದ್ರೂ ನೀವು ಅದರ ಕತ್ತು ಹಿಸುಕಬಹುದು ಎಂದು. ಈಗ ನಡೆಯುತ್ತಿರುವುದೂ ಕೂಡ ಅದೇ. ವಾಸ್ತವದ ಕತ್ತು ಹಿಸುಕುವಿಕೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ನೋಟ್‍ಬ್ಯಾನ್‍ನಿಂದ ಸಾವಿರಾರು ಉದ್ಯಮಗಳು ನಾಶವಾಗಿವೆ. ನೂರಾರು ಜನ ಸಾಯ್ತಿದ್ದಾರೆ. ಆದ್ರೆ ಅದರ ಬಗ್ಗೆ ಮೋದಿ ಸಂಸತ್ತಿನಲ್ಲಿ ಮಾತನಾಡಲೇ ಇಲ್ಲ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದ್ದರು.

ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, “ಏನೇ ಆದ್ರೂ, ನೀವು ಮಾಡೋ ಎಲ್ಲದಕ್ಕೂ ಧನ್ಯವಾದ ರಾಹುಲ್ ಗಾಂಧಿ. ವಿಶ್ವಾಸದೊಂದಿಗೆ, ಬಿಜೆಪಿಯಿಂದ” ಎಂದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *