ಅಕ್ಕ, ನೀವು ಭರವಸೆ ಈಡೇರಿಸದೇ ನಮ್ಮನ್ನು ಬಿಟ್ಟು ಹೋಗಿದ್ದೀರಿ: ಸ್ಮೃತಿ ಇರಾನಿ ಕಂಬನಿ

ನವದೆಹಲಿ: ಅಕ್ಕ, ನೀವು ಭರವಸೆ ಈಡೇರಿಸದೇ ನಮ್ಮನ್ನು ಬಿಟ್ಟು ಹೋಗಿದ್ದೀರಿ ಎಂದು ಟ್ವೀಟ್ ಮಾಡುವ ಮೂಲಕ ಸಚಿವೆ ಸ್ಮೃತಿ ಇರಾನಿ ಕಂಬನಿ ಮಿಡಿದಿದ್ದಾರೆ.

ಸ್ಮೃತಿ ಇರಾನಿ ಅವರು ತಮ್ಮ ಟ್ವಿಟ್ಟರಿನಲ್ಲಿ, “ಸುಷ್ಮಾ ಅಕ್ಕ, ನನಗೆ ನಿಮ್ಮ ಬಗ್ಗೆ ಒಂದು ದೂರು ಇದೆ. ನೀವು ನನ್ನನ್ನು ರೆಸ್ಟೋರೆಂಟ್‍ಗೆ ಊಟಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದೀರಿ. ಅಲ್ಲದೆ ನಿಮ್ಮ ಮಗಳು ಬನ್ಸೂರಿಗೂ ಹೇಳಿದ್ದೀರಿ. ಆದರೆ ಈಗ ನೀವು ಭರವಸೆಯನ್ನು ಈಡೇರಿಸದೇ ನಮ್ಮನ್ನು ಬಿಟ್ಟು ಹೋಗಿದ್ದೀರಿ” ಎಂದು ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.

ಸುಷ್ಮಾ ಸ್ವರಾಜ್ ಅವರ ಆರೋಗ್ಯದಲ್ಲಿ ಮಂಗಳವಾರ ರಾತ್ರಿ ಏರುಪೇರು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣವೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸ್ವರಾಜ್ ಅವರ ಪಾರ್ಥಿವ ಶರೀರವನ್ನು ಜನಪತ್ ರಸ್ತೆಯ ಧವನ್ ದೀಪ್ ಕಟ್ಟಡದ ನಿವಾಸದಲ್ಲಿ ಇರಿಸಲಾಗಿದೆ. ಇಂದು ಬೆಳಗ್ಗೆ 8ರಿಂದ 11 ಗಂಟೆವರೆಗೆ ಜಂತರ್ ಮಂತರ್‍ನಲ್ಲಿ ನಂತರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2:30ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ಆ ಬಳಿಕ 3 ಗಂಟೆಗೆ ಲೋಧಿ ರಸ್ತೆಯ ಶವಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

Comments

Leave a Reply

Your email address will not be published. Required fields are marked *